Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Wednesday 28 December 2011

ನೂತನ ವರ್ಷಾಚರಣೆಯ ಅರ್ಥ, ಐತಿಹ್ಯ


        ಭೂತಕಾಲದ ನೋವು-ನಲಿವುಗಳು, ಭವಿಷ್ಯದ ಸುಂದರ ಕನಸುಗಳನ್ನು ವರ್ತಮಾನದಲ್ಲಿ ಸಮೀಕರಿಸುವ ಸಂಭ್ರಮವೇ ನೂತನ ವರ್ಷಾಚರಣೆ.
        ಕ್ರಿ.ಶ.ಪೂರ್ವ ೨೦೦೦ರಲ್ಲಿ ಬೆಬಲೋನಿಯನ್ನರು ಪ್ರಥಮ ಚಂದ್ರದರ್ಶನದೊಂದಿಗೆ ಚಳಿಗಾಲದಲ್ಲಿ ಈ ಆಚರಣೆ ಜಾರಿಗೆ ತಂದಿದ್ದರೆಂದು ನಂಬಲಾಗಿದೆ. ಆದರೆ, ವಿಶ್ವದ ನಾನಾ ಕಡೆ ಹಲವಾರು ದಿನಗಳಂದು ನೂತನ ವರ್ಷಾಚರಣೆಯನ್ನು ಆಚರಿಸಲಾಗುತ್ತದೆ. ಆದರೂ ವಿಶ್ವದ ಬಹುತೇಕ ದೇಶಗಳು ಜನವರಿ ೧ನ್ನು ನೂತನ ವರ್ಷಾಚರಣೆಯನ್ನಾಗಿ ತುಂಬ ವೈಶಿಷ್ಟ್ಯದಿಂದ ಸಂಭ್ರಮದಿಂದ ಸ್ವಾಗತಿಸುತ್ತವೆ.

              ಪಾಶ್ಚಿಮಾತ್ಯ ದೇಶಗಳಲ್ಲಿ ಜನವರಿ ೧ನ್ನು ನೂತನ ವರ್ಷವಾದರೆ ಭಾರತದಲ್ಲಿ ಚಂದ್ರಮಾನ ಪ್ರಕಾರ ಹಿರಿಯರು ಯುಗಾದಿಯನ್ನು ನೂತನ ವರ್ಷವೆಂದು ಪರಿಗಣಿಸುತ್ತಾರೆ. ಹೊಸ ಸಂವತ್ಸರದ ಪ್ರಾರಂಭವೇ ಯುಗಾದಿ. ಹೊಸ ಸಂವತ್ಸರದಲ್ಲಿ ನಡೆಯುವ ಸಿಹಿ-ಕಹಿ ಘಟನೆಗಳನ್ನು ಬೇವು-ಬೆಲ್ಲದಂತೆ ಸಮವಾಗಿ ಸ್ವೀಕರಿಸಬೇಕೆಂಬುದೇ ಈ ಹಬ್ಬದ ಸಾರ.
                     ಕೆಲವು ದೇಶಗಲಲ್ಲಿ ಹೊಸ ವರ್ಷದ ದಿನದಂದು ಸಂಭವಿಸುವ ಕಹಿ ಘಟನೆಗಳು ವರ್ಷದುದ್ದಕ್ಕೂ ಸಂಭವಿಸುತ್ತದೆ ಎಂಬ ಮೂಢ ನಂಬಿಕೆ (?) ಆಳವಾಗಿ ಬೇರುಬಿಟ್ಟಿದ್ದು ಆ ದಿನದಂದು ಹೊಸ ಕಾರ್ಯ ಮಾಡಲು ಅನೇಕರು ಹಿಂಜರಿಯುತ್ತಾರೆ.

         ಕುಟುಂಬದ ಸ್ನೇಹಿತರು, ಆತ್ಮೀಯರು, ಪರಮಾಪ್ತರು ಈ ನೂತನ ವರ್ಷಾಚರಣೆಯ ಕೇಂದ್ರ ಬಿಂದುವಾಗಿರುತ್ತಾರೆ. ಈ ದಿನದಂದು ಪರಸ್ಪರ ಕೈ ಕುಲುಕಿ, ಸಿಹಿ ಹಂಚಿ ಸಂಭ್ರಮದಿಂದ ಹೊಸ ವರ್ಷ ಆಚರಿಸುತ್ತಾರೆ. ಸ್ನೇಹಿತರು ಮನರಂಜನೆ, ಭೋಜನ ಕೂಟ ಏರ್ಪಡಿಸುವ ಮೂಲಕ ಪರಸ್ಪರ ಸ್ನೇಹ-ಪ್ರೀತಿ-ವಿಶ್ವಾಸ ನಿರಂತರವಾಗಿರಲಿ ಎಂದು ಆಶಿಸುತ್ತಾರೆ.

ಜನವರಿ ತಿಂಗಳ ಶಬ್ದದ ಉತ್ಪತ್ತಿ :


             ಜನವರಿ ತಿಂಗಳಲ್ಲಿ ೩೧ ದಿನಗಳಿರುತ್ತವೆ. `ಜನವರಿ ಎಂಬ ಶಬ್ದ ಲ್ಯಾಟಿನ್ ಭಾಷೆಯ `ಜಾನಸ್' ಎಂಬ ಶಬ್ದದಿಂದ ಬಂದಿದೆ. `ಜಾನಸ್' ಎಂದರೆ ಹೆಬ್ಬಾಗಿಲು ಎಂದರ್ಥ. ಈ ತಿಂಗಳು ವರ್ಷದ ಹೆಬ್ಬಾಗಿಲಿನಂತಿರುವುದರಿಂದ ಇದನ್ನು `ಜನವರಿ' ಎಂದು ಕರೆಯಲಾಗುತ್ತದೆ.


 ಹೊಸ ವರ್ಷದಲ್ಲಿ ಕೈಗೊಳ್ಳಬಹುದಾದ ಸಪ್ತ ಸಂಕಲ್ಪಗಳು:

೧. ಈ ವರ್ಷ ಮತ್ತಷ್ಟು ಆರೋಗ್ಯವಾಗಿರುತ್ತೇನೆ ಅಂತ ನಿರ್ಧರಿಸಿ. ಬೆಳಿಗ್ಗೆ ಐದು ಗಂಟೆಗೆ ಎದ್ದು ಜಾಗಿಂಗ್ ಹೋಗುತ್ತೇನೆನ್ನುವ ರೆಸೆಲ್ಯೂಷನ್ ಹಾಕಿಕೊಳ್ಳಿ. ನೆನಪಿರಲಿ : ಪ್ರತಿದಿನದ ಬೆಳಗಿನ ಒಂದು ಜಾಗಿಂಗ್ ನಿಮ್ಮ ಇಡೀ ಬದುಕನ್ನು ಉಲ್ಲಾಸದಿಂದಿರಿಸುತ್ತದೆ.

೨. ಬಹಳ ಜನ ಉದ್ಯೋಗಸ್ಥರು ಉದ್ಯೋಗ, ವ್ಯವಹಾರದಲ್ಲಿ ಮುಳುಗಿ ಮನೆ, ಕುಟುಂಬದ ಕಡೆಗೆ ಗಮನವೇ ನೀಡಿರುವುದಿಲ್ಲ. ಈ ವರ್ಷ ಹಾಗಾಗದಿರಲಿ. ವಾರಕ್ಕೆ ಒಂದು ದಿನವಾದರೂ ಬಿಡುವು ಮಾಡಿಕೊಂಡು ಕುಟುಂಬದ ಸದಸ್ಯರೊಡನೆ ಸಂತೋಷದಿಂದ ಕಾಲ ಕಳೆಯಿರಿ. ಇದರಿಂದ ಪರಸ್ಪರ ಬಾಂಧವ್ಯ ಹೆಚ್ಚುತ್ತದೆ.

೩. ಈ ವರ್ಷದಿಂದ ಕುಡಿತ, ಸಿಗರೇಟ್, ಗುಟಖಾ ಬಿಟ್ಟೆ ಬಿಡುತ್ತೇನೆ ಎಂಬ ದೃಢ ಸಂಕಲ್ಪವಿರಲಿ.

೪. ಮದುವೆ ಆಗಬೇಕೆಂದು ಬಯಸಿರುತ್ತೀರಿ ಅದಕ್ಕಾಗಿ ಹಲವಾರು ಹುಡುಗಿಯರನ್ನು ನೋಡೀ ಬಂದು ಯಾವುದೋ ಕಾರಣಗಳಿಗೆ ಒಪ್ಪದೇ ಮದುವೆ ಮುಂದೂಡಿರುತ್ತೀರಿ. ಈ ವರ್ಷ ಹಾಗಾಗುವುದು ಬೇಡ. ಈ ವರ್ಷ ಮದುವೆ ಆಗಿಯೇ ತೀರುತ್ತೇನೆ ಎಂದು ನಿರ್ಧರಿಸಿ. ನಿಮ್ಮ ಕನಸು, ಮೌಲ್ಯಗಳು, ಅಭಿರುಚಿಗೆ ಹೊಂದುವ ಸಂಗಾತಿಯನ್ನು ಆರಿಸಿಕೊಳ್ಳಿ. ನೆನಪಿರಲಿ. ಇದು ನಿಮ್ಮದೇ ಆಯ್ಕೆ. ನಿಮ್ಮದೇ ಜೀವನ. ಎರಡನ್ನೂ ಈ ವರ್ಷವೇ ಚೆನ್ನಾಗಿ ರೂಪಿಸಿಕೊಳ್ಳಿ.

೫. ಈ ವರ್ಷ ಏನಾದರೊಂದು ಒಳ್ಳೆಯದು ಸಮಾಜಕ್ಕೆ ಉಪಯೋಗವಾಗುವುದನ್ನು ಕಲಿತು ಜೀವನದಲ್ಲಿ ಮುಂದಕ್ಕೆ ಬರುತ್ತೇನೆಂಬ ದೃಢ ನಿರ್ಧಾರ ಕೈಗೊಳ್ಳಿ ಮತ್ತು ಅದರಂತೆ ನಡೆಯಿರಿ.

೬. ಇಷ್ಟು ವರ್ಷ ನೀವು ಖರ್ಚು ಮಾಡಿರುವ ಹಣ ನಿಮಗೆ ಗೊತ್ತಿಲ್ಲದಂತೆಯೇ ಸೋರಿ ಹೋಗಿರುತ್ತದೆ. ಅದಕ್ಕಾಗಿ ಈ ವರ್ಷದಿಂದ ನೀವು ಖರ್ಚು ವೆಚ್ಚದ ಲೆಕ್ಕವನ್ನು ಒಂದು ಡೈರಿಯಲ್ಲಿ ಬರೆದಿಡಿ. ಇದರಿಂದ ನೀವು ಮಾಡುವ ಅನಾವಶ್ಯಕ ಖರ್ಚುಗಳು ನಿಮಗೆ ಗೋಚರಿಸುತ್ತವೆ.

೭. ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎಂಬುದು ಮುಖ್ಯ. ಅಲ್ಲಿ ಇಲ್ಲಿ ಹಣ ಪೋಲು ಮಾಡುವುದಕ್ಕಿಂತ ಬಡವರು, ನೊಂದವರು, ವೃದ್ಧರಿಗೆ ನೀಡಿ. ಒಂದು ಸಣ್ಣ ಮಟ್ಟದ ಹಣ ಒಂದು ಹಸಿದ ಹೊಟ್ಟೆಗೆ ಅನ್ನ ನೀಡಿತು.  ಈ ಮೂಲಕ ಸಮಾಜದ ಋಣ ತೀರಿಸಲು ಪ್ರಯತ್ನಿಸಿ.


             ಲೇಖನಕ್ಕೆ ಪೂರಕವಾಗಿ ಒಂದು ಕವನ

         ಬಂದಿದೆ ಹೊಸ ವರುಷ
          ತರಲಿ ನಮಗೆ ಹರುಷ
           ಭವಿಷ್ಯದಲ್ಲಿ ಮೂಡಿ ಬರಲಿ
          ಸಂತಸದ ರಸ ನಿಮಿಷ
           ತುಂಬಿರಲಿ ಜೀವನದಲಿ
         ಪರರೊಂದಿಗೆ ಸಮರಸ
          ಹೊಸ ವರ್ಷವನ್ನು ಹೊತ್ತು
          ಮೂಡಿ ಬರುತ್ತಿರುವ 
          ಓ ಹೊಂಬೆಳಕೆ....!
           ನೀಡು ನೀ ಎಲ್ಲರಿಗೂ
          ಸಿಹಿ-ಕಹಿಯ ರಸ
         ಎಲ್ಲೆಡೆ ಚಾಚಿರುವ
         ಭಯೋತ್ಪಾದನೆಯ ಕಬಂಧ
          ಬಾಹುಗಳು ನಿರ್ನಾಮವಾಗಲಿ
        ಭಾರತೀಯರ ಶೌರ್ಯ
         ಎದೆಗಾರಿಕೆ ಇಡೀ ಜಗತ್ತಿಗೆ ತಿಳಿಯಲಿ
         ಅಳಿಯಲಿ ಭ್ರಷ್ಟಾಚಾರ
         ಕೋಮುವಾದದ ಸಂಘರ್ಷ
         ಬೆಳೆಯಲಿ ಎಲ್ಲರಲಿ
          ಸ್ನೇಹ-ಪ್ರೀತಿ ವಿಶ್ವಾಸ



   ಲೇಖನ ಬರೆದವರು :
 ಗುರುಪ್ರಸಾದ್ .ಎಸ್. ಹತ್ತಿಗೌಡರ


 ಇದು ಈ ವರ್ಷದ ಕೊನೆಯ ಲೇಖನ. ಈ ಮೂಲಕ ನಿಮಗೆಲ್ಲ ಹೊಸ ವರ್ಷದ ಶುಭಾಶಯಗಳು. 

Thursday 22 December 2011

ಮಳೆಗಾಗಿ ಯೋಗಿಯ ವ್ಯರ್ಥ ಪ್ರಾರ್ಥನೆ

ಲೇಖಕರು- ಡಾ. ಹೆಚ್. ನರಸಿಂಹಯ್ಯ
ಹಕ್ಕುಗಳು: ಲೇಖಕರವು
ಬೆಂಗಳೂರು, ಸುಮಾರು ಮೂವತ್ತು ಲಕ್ಷ ಜನರು ವಾಸಿಸುವ ನಗರ. ಈ ನಗರಕ್ಕೆ ನೀರನ್ನು ಒದಗಿಸುವ ಮುಖ್ಯ ಆಕರಗಳಲ್ಲಿ, ಇಲ್ಲಿಂದ ಇಪ್ಪತ್ತು ಮೈಲಿಗಳ ದೂರದಲ್ಲಿರುವ ತಿಪ್ಪಗೊಂಡನಹಳ್ಳಿ ಜಲಾಶಯವೂ ಒಂದು. ಈ ಜಲಾಶಯಕ್ಕೆ ನೀರು ಸರಬರಾಜು ಮಾಡುವ ಜಲಾನಯನ ಪ್ರದೇಶಗಳಲ್ಲಿ ಸಾಕಷ್ಟು ಮಳೆ ಬೀಳದ ಕಾರಣ, ಕೆರೆಯ ನೀರಿನ ಮಟ್ಟ ಒಂದೇ ಸಮನೆ ಕುಸಿಯತೊಡಗಿ, ಸರ್ಕಾರ ಮತ್ತು ಸಾರ್ವಜನಕರಿಗೆ ಅಪಾರ ಆಂತಕವಾಗಿತ್ತು..
೧೮-೦೪-೮೫ ರಂದು ಕರ್ನಾಟಕದಲ್ಲಿ ಅತ್ಯಧಿಕ ಪ್ರಸಾರವಿರುವ ಜನಪ್ರಿಯ ಇಂಗ್ಲಿಷ್ ದಿನ ಪತ್ರಿಕೆಯಾದ ಡೆಕ್ಕನ್ ಹೆರಾಲ್ಡ್‌ನಲ್ಲಿ ಈ ಕೆಳಗಿನ ಸುದ್ದಿಯು ಪ್ರಕಟವಾಯಿತು.
'ಇನ್ನೂ ಮಳೆಯ ದೇವತೆಯು ಕರುಣೆ ತೋರದಿರುವ ಕಾರಣ, ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು, ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಆಶೀರ್ವದಿಸಲು ಯೋಗಿಯೊಬ್ಬರನ್ನು ಆಹ್ವಾನಿಸುವ ಯೋಜನೆ ಹಾಕಿಕೊಂಡಿದೆ.
ಬರುವ ತಿಂಗಳ ಮೊದಲ ವಾರದಲ್ಲಿ, ಜಲಾಶಯದ ಬಳಿ, ಶ್ರೀ ಶಿವಬಾಲಯೋಗಿಯವರು ಮಳೆಗಾಗಿ ಪ್ರಾರ್ಥನೆ ಮಾಡಲಿರುವರೆಂದು ನಗರಾಭಿವೃದ್ಧಿ ಸಚಿವರಾದ ಶ್ರೀ ಎ. ಲಕ್ಷೀಸಾಗರ್ ಅವರು ಈ ದಿನ ವರದಿಗಾರರಿಗೆ ತಿಳಿಸಿದರು. ಸಂಪೂರ್ಣವಾಗಿ ಬತ್ತಿಹೋಗಿರುವ ಹೆಸರಘಟ್ಟ ಕೆರೆ, ಹಾಗೂ ಜಲಮಟ್ಟ ೭೪ ಅಡಿಗಳಿರಬೇಕಾಗಿದ್ದು, ಈಗ ೨೩ ಅಡಿಗಳಿಗೆ ಇಳಿದಿರುವ ತಿಪ್ಪಗೊಂಡನಹಳ್ಳಿ ಕೆರೆಗಳ ಭೇಟಿಗೆಂದು ಕರೆದೊಯ್ದಾಗ ಈ ಮಾಹಿತಿಯನ್ನು ನೀಡಲಾಯಿತು.'
ನಾನು ಅದೇ ದಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವಾಚಕರವಾಣಿ ವಿಭಾಗಕ್ಕೆ ಪತ್ರವೊಂದನ್ನು ಬರೆದೆ. ೧೯-೦೪-೮೫ ರಂದು ಪ್ರಕಟವಾದ ಆ ಪತ್ರದ ಒಕ್ಕಣೆ ಈ ರೀತಿ ಇತ್ತು.
ಮಳೆ ಬರಲೆಂದು ಮಾಡುವ ಪ್ರಾರ್ಥನೆಯು ನಮ್ಮ ರಾಜ್ಯಾಂಗದ ಮೂಲತತ್ವವನ್ನು ಭಂಗಿಸುತ್ತದೆ.
ಇಂದು ಬೆಳಿಗ್ಗೆ ಪತ್ರಿಕೆಗಳನ್ನು ಓದುವಾಗ ಶ್ರೀ ಶಿವಬಾಲಯೋಗಿಯವರ ಸಹಾಯದಿಂದ ಮಳೆ ತರಿಸುವುದಾಗಿ ನಗರಾಭಿವೃದ್ಧಿ ಸಚಿವರಾದ ಶ್ರೀ ಎ. ಲಕ್ಷ್ಮೀಸಾಗರ್ ಅವರು ನೀಡಿರುವ ಹೇಳಿಕೆಯನ್ನು ಓದಿ ನನಗೆ ದಿಗ್ಭ್ರಮೆಯಾಯಿತು.
'ಸ್ವಾಮಿ ಶ್ರೀ ಶಿವಬಾಲಯೋಗಿಯವರು ಬರುವ ತಿಂಗಳ ಮೊದಲ ವಾರ ಜಲಾಶಯದ ಬಳಿ ಪ್ರಾರ್ಥನೆ ಸಲ್ಲಿಸಲಿದ್ದಾರೆ' ಎಂದು ಸಚಿವರು ಹೇಳಿದ್ದಾರೆ. ಈ ಮಾತು ಬಹಳ ಅವೈಜ್ಞಾನಿಕವಾಗಿರುವುದಷ್ಟೇ ಅಲ್ಲದೆ, ಒಟ್ಟು ಭಾರತೀಯ ರಾಜ್ಯಾಂಗಕ್ಕೆ ಧಕ್ಕೆ ತರುವಂತಹುದಾಗಿದೆ. ನಮ್ಮದು ಕಾನೂನಿನಂತೆ ಜಾತ್ಯತಿತ ರಾಷ್ಟ್ರವೆನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆಕ್ಸ್‌ಫರ್ಡ್ ಇಂಗ್ಸಿಷ್ ನಿಘಂಟಿನ ಪ್ರಕಾರ ಸೆಕ್ಯುಲರ್ (ಜಾತ್ಯತೀತ) ಎಂಬ ಪದದ ಅರ್ಥ ಈ ರೀತಿ ಇದೆ.
ಈ ಜಗತ್ತಿನ ಲೌಕಿಕ ವ್ಯವವಹಾರಗಳಿಗೆ ಸಂಬಂಧಪಟ್ಟಿದ್ದು, ಚರ್ಚ್ ಮತ್ತು ಧರ್ಮದ ವಲಯದಿಂದ ಪ್ರತ್ಯೇಕವಾಗಿ ಇರುವಂತಹದು. ನಾಗರೀಕವೂ, ಜನಸಾಮಾನ್ಯರಿಗೆ ಸಂಬಂಧಿಸಿದ್ದೂ, ತತ್ಕಾಲೀನವೂ ಆದ ವಿಷಯ. ಮುಖ್ಯವಾಗಿ ಇದನ್ನು ಅ-ಧಾರ್ಮಿಕ, ಅ-ಪವಿತ್ರ ಎಂಬ ಅರ್ಥದಲ್ಲಿ ಉಪಯೋಗಿಸಲಾಗುತ್ತದೆ.
ಎನ್ಸೈಕ್ಲೋಪೀಡಿಯಾ ಬ್ರಿಟಾನಿಕ ಪ್ರಕಾರ,
'ಸೈಕ್ಯುಲರ್ ಎಂದರೆ ಧಾರ್ಮಿಕವಲ್ಲದ್ದು. ಆಧ್ಯಾತ್ಮಿಕವಾದ ಮತ್ತು ಧಾರ್ಮಿಕವಾದ ವಿಚಾರಗಳ ಬಗೆಗೆ ಯಾವುದೇ ಆಸಕ್ತಿಯನ್ನು ತೋರಿಸದೆ ಇರುವಂತಹುದು '
ಇವೆಲ್ಲದರ ಪ್ರಕಾರ ರಾಜ್ಯವ್ಯವಸ್ಥೆಯು ಧರ್ಮದ ವಿಷಯದಲ್ಲಿ ಸಂಪೂರ್ಣವಾಗಿ ತಟಸ್ಥವಾಗಿರಬೇಕು. ಧರ್ಮವು ಖಾಸಗೀ ವಿಷಯವಾದ್ದರಿಂದ, ಸರ್ಕಾರವು ಧಾರ್ಮಿಕ ಆಚರಣೆಗಳನ್ನು ಪ್ರೋತ್ಸಾಹಿಸೂಬಾರದು. ತಡೆಗಟ್ಟಲೂಬಾರದು.
ಮಳೆಯನ್ನು ತರಿಸಲೆಂದು ಸ್ವಾಮೀಜಿಯೊಬ್ಬರ ನೆರವನ್ನು ಪಡೆದುಕೊಳ್ಳಲೆತ್ನಿಸುವ ಸರ್ಕಾರದ ಕ್ರಮವು, ನಮ್ಮ ರಾಜ್ಯಾಂಗದ ಮತ್ತೊಂದು ಕಲಮನ್ನು ಕೂಡ, ಅತ್ಯಂತ ಸ್ಪಷ್ಟವಾಗಿ ಉಲ್ಗಂಘಿಸುತ್ತಿದೆ. ರಾಜ್ಯಾಂಗದ ಪ್ರಕಾರ ನಮ್ಮೆಲ್ಲರ ಮೂಲಭೂತ ಕರ್ತ್ಯವಗಳಲ್ಲಿ ಒಂದೆದರೆ ವೈಜ್ಞಾನಿಕ ಮನೋಧರ್ಮ, ಮಾನವೀಯತಾವಾದ, ಪ್ರಶ್ನೆ ಕೇಳುವ ಪ್ರವೃತ್ತಿ ಹಾಗೂ ಸುಧಾರಣ ಪರತೆಗಳನ್ನು ಬೆಳೆಸುವುದು. ಈ ದೃಷ್ಟಿಯಲ್ಲಿ ಕಾನೂನು ಸಚಿವರು ರಾಜ್ಯಾಂಗದ ಪ್ರಕಾರ ಅಪರಾಧಿಗಳಾಗುತ್ತಾರೆ. ಅವರು ತಮ್ಮ ಇಡೀ ಸರ್ಕಾರವನ್ನೇ, ಅಸ್ಪಷ್ಟವಾದ ಸಿದ್ಧಾಂತಗಳ ಪ್ರಸಾರಕ್ಕೆಂದು ನಿಸ್ಸಂಕೋಚವಾಗಿ ಬಳಸಿಕೊಂಡಿದ್ದಾರೆ.
ಯಾವ ಪವಿತ್ರ ವ್ಯಕ್ತಿಯೂ ಮಳೆಯನ್ನೂ ತರಿಸಲಾರ. ಪ್ರಾಕೃತಿಕ ನಿಯಮಗಳು ಸಾರ್ವತ್ರಿಕವೂ, ಸರ್ವಶಕ್ತವೂ ಆಗಿದೆ. ಈ ನಿಯಮಗಳನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದೆ ಮದ್ರಾಸು ಮತ್ತು ಅದರ ಪರಿಸರದಲ್ಲಿ, ಸತತವಾಗಿ ಮಳೆಬರದೆ ಜನರು ಪಟ್ಟಪಾಟು ಅಷ್ಟಿಷ್ಟಲ್ಲ. ಅಲ್ಲಿನ ಜನರು ಮಳೆಬರಿಸಲು ಭಗೀರಥ ಪ್ರಯತ್ನ ನಡೆಸಿದರು. ಅದಕ್ಕಾಗಿ ಎಲ್ಲ ಬಗೆಯ ಹತಾಶ ಪ್ರಯತ್ನಗಳನ್ನೂ ನಡೆಸಿದರು. ಪ್ರತಿದಿನದ ಪೂಜೆಗಳು, ಸಾಮೂಹಿಕ ಪ್ರಾರ್ಥನೆಗಳು ಎಲ್ಲ ಅರಣ್ಯರೋಧನಗಳಾದವು. 'ಪರ್ಜನ್ಯ ಜಪ' ವು ಒಂದೇ ಒಂದು ಹನಿ ಮಳೆ ತರಿಸಲು ಸಮರ್ಥವಾಗಲಿಲ್ಲ. ಖ್ಯಾತ ಪೀಟಿಲು ವಾದಕರಾದ ಕುನ್ನಕುಡಿ ವೈದ್ಯನಾಥನ್ ಅವರು ನುಡಿಸಿದ ಅಮೃತವರ್ಷಿಣಿ ರಾಗವು ವ್ಯರ್ಥವಾಯಿತು. ಇಂಥ ಹಲವು ಅವೈಜ್ಞಾನಿಕ ಪ್ರಯತ್ನಗಳನ್ನು ಮಾಡಿದರೂ ಮಳೆ ಬರುವ ಕುರುಹು ಕಾಣಲಿಲ್ಲ. ಅಲ್ಲಿನ ಜನರ ಯಾತನೆಯು ಮನಮಿಡಿಯುವಂಥದಾಗಿತ್ತು. ಕೊನೆಗೆ ಅವರು ನೀರಿಗಾಗಿ ಹಾತೊರೆಯುತ್ತಾ ರಾಜ್ಯದ ಬೇರೆ ಭಾಗಗಳಿಗೆ ವಲಸೆ ಹೋದರು.
ಸನ್ಯಾಸಿಗಳು ಹಾಗೂ ಪೂಜೆಗಳಿಂದ ಮಳೆ ತರಿಸಲು ಸಾಧ್ಯವಿದ್ದರೆ, ನಮ್ಮಲ್ಲಿ ತೀರ ಕಡಿಮೆ ಮಳೆ ಬೀಳುವ ಭೂ ಪ್ರದೇಶಗಳು ಇರುತ್ತಲೇ ಇರಲಿಲ್ಲ. ಮಳೆಯ ಅಭಾವವನ್ನು ಇಂಥ ವಿಧಾನಗಳಿಂದ ಬಹಳ ಸುಲಭವಾಗಿ ಹೊಗಲಾಡಿಸಿಕೊಳ್ಳಬಹುದಿತ್ತು. ಇದೇ ಉಪಾಯವನ್ನು ಅತಿವೃಷ್ಟಿಯನ್ನು ತಡೆಯಲೆಂದೂ ಬಳಸಬಹುದಿತ್ತು. ಒಂದು ಮಾತಿನಲ್ಲಿ ಹೇಳುವುದಾದರೆ ಆಗ ಈ ಜಗತ್ತಿನಲ್ಲಿ ಸಹರಾ ಆಗಲೀ ಚಿರಾಪುಂಜಿಯಾಗಲೀ ಇರುತ್ತಿರಲಿಲ್ಲ.
ಸನ್ಯಾಸಿಗಳು, ಭಗವಾನರು, ಬಾಬಾಗಳು ಹಾಗೂ ಇನ್ನಿತರ ದೈವೀಪುರುಷರಿಂದ ನಮ್ಮ ದೇಶವು ಕಕ್ಕಿರಿದು ಹೋಗಿದೆಯೆಂದು ನಮಗೆಲ್ಲರಿಗೂ ಗೊತ್ತು. ನಮ್ಮ ಸಮಯದ ಒಂದು ಭಾಗ ಜಪ-ತಪ, ಪೂಜೆ ಪುನಸ್ಕಾರಗಳಲ್ಲಿ ಕಳೆದುಹೋಗುತ್ತದೆ. ಆದರೂ `ಧರ್ಮಭೂಮಿ`, 'ಪುಣ್ಯಭೂಮಿ' ಎಂದು ಕರೆಸಿಕೊಳ್ಳುವ ನಮ್ಮ ದೇಶವು ಬಹುಪಾಲು ಜನರಿಗೆ ನರಕವಾಗಿಯೇ ಉಳಿದಿದೆ.
ಅವಿದ್ಯಾವಂತನಾದ ಮೂಢನಂಬಿಕಸ್ಥನಿಗಿಂತ ಅವನ ವಿದ್ಯಾವಂತ ಗೆಳೆಯನು ದೇಶಕ್ಕೆ ಹೆಚ್ಚು ಅಪಾಯಕಾರಿಯೆಂಬ ಸತ್ಯವು ಕಾನೂನು ಸಚಿವರ ಹೇಳಿಕೆಗಳಿಂದ ಸ್ಪಷ್ಟವಾಗುತ್ತದೆ. ರಾಜ್ಯಾಂಗದ ಮೂಲತತ್ವಗಳ ಉಲ್ಲಂಘನೆಗಾಗಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾನು ತಿಳಿದಿದ್ದೇನೆ.
ಈ ಪತ್ರವು ಬಹಳ ವಾದ-ವಿವಾದಗಳಿಗೆ ಕಾರಣವಾಯಿತು. ಡೆಕ್ಕನ್ ಹೆರಾಲ್ಡ್‌ನಲ್ಲಿ ಅನೇಕ ಪ್ರತಿಕ್ರೆಯೆಗಳು ಪ್ರಕಟವಾದವು. ಬೇರೆ ಪತ್ರಿಕೆಗಳಲ್ಲೂ ಈ ವಿಷಯದ ಬಗ್ಗೆ ಚರ್ಚೆ ನಡೆಯಿತು. ಬಹುಪಾಲು ಪತ್ರಗಳು ನನ್ನ ನಿಲುವನ್ನು ವಿರೋಧಿಸಿ, ಕಾನೂನು ಸಚಿವರ ಹೇಳಿಕೆಯನ್ನು ಸಮರ್ಥಿಸಿದವು. ಎಲ್ಲೊ ಕೆಲವು ನನಗೆ ಬೆಂಬಲ ನೀಡಿದವು. ಬೇರೆ ಪತ್ರಿಕೆಗಳ ವರದಿಗಾರರು ಈ ಬಗ್ಗೆ ನನ್ನ ಸಂದರ್ಶನ ನಡೆಸಿದರು.
ರಾಜ್ಯ ಸರ್ಕಾರ ಹಾಗೂ ಬೆಂಗಳೂರು ನಗರ ಜಲಮಂಡಲಿಯು ಈ ಎಲ್ಲ ವಾದವಿವಾದಗಳಿಂದ ಕೊಂಚ ವಿಚಲಿತವಾದವು. ಯೋಗಿಗಳನ್ನು ಆಹ್ವಾನಿಸುವುದನ್ನು ಮುಂದೂಡಲಾಯಿತು.
ಭಾರತದಲ್ಲಿಯೇ ಅತಿ ಹೆಚ್ಚಿನ ಪ್ರಸಾರ ಸಂಖ್ಯೆಯಿರುವ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ೬-೫-೮೫ ರಂದು ಈ ಕೆಳಗಿನ ಸುದ್ದಿಯು ಪ್ರಕಟವಾಯಿತು.
ಜಲಮಂಡಳಿಯು ಮಳೆಗಾಗಿ ತಪಸ್ಸನ್ನು ಮುಂದೂಡಿದೆ.
ಬೆಂಗಳೂರು, ಮೇ ೫ (ಪಿ ಟಿ ಐ):
'ವಿಚಾರವಾದಿ ಮತ್ತು ಆಧ್ಯಾತ್ಮವಾದಿಗಳ ನಡುವೆ ಎದ್ದಿರುವ ವಾಗ್ವಾದ ಫಲವಾಗಿ ಜನರೆಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಶ್ರೀ ಶಿವಬಾಲಯೋಗಿಗಳ ತಪಸ್ಸನ್ನು ಮುಂದೆ ಹಾಕಲಾಗಿದೆ. ಈ ಕಾರ್ಯಕ್ರಮವು ಇದೇ ತಿಂಗಳ ಮೊದಲ ವಾರದಲ್ಲಿ ನಡೆಯಬೇಕಾಗಿತ್ತು. ಕಾನೂನು ಮತ್ತು ನಗರಾಭಿವೃದ್ಧಿ ಸಚಿವರಾದ ಶ್ರೀ ಲಕ್ಷ್ಮೀಸಾಗರ್ ಅವರ ಹೇಳಿಕೆಯಂತೆ, ಸರ್ಕಾರವು ಶ್ರೀ ಶಿವಬಾಲಯೋಗಿಗಳ ನೆರವಿನಿಂದ ಒಣಗುತ್ತಿರುವ ನಗರಕ್ಕೆ ಜಲಸೇಚನೆ ಮಾಡುವ ಯೋಜನೆಯನ್ನು ಹಾಕಿಕೊಂಡಿತ್ತು.'
ಈ ಸುದ್ಧಿಯು ಪ್ರಕಟವಾದ ಕೂಡಲೇ ವಿಚಾರವಾದಿಯಾದ ಡಾ. ಹೆಚ್. ನರಸಿಂಹಯ್ಯನವರು ಶಿವಬಾಲಯೋಗಿಗಳ ಆಧ್ಯಾತ್ಮಿಕ ಸಾಮರ್ಥ್ಯವನ್ನು ಪ್ರಶ್ನಿಸಿದರು. ಈ ನಿರ್ಣಯವನ್ನು ಪ್ರತಿಭಟಿಸುತ್ತಾ ಅದು ಸಮಸ್ತ ಜನರಿಗೂ ಅವಮಾನಕರವಾದುದೆಂದು ಹೇಳಿ ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆದಿದ್ದಾರೆ.
ನಾನು ಮತ್ತೊಮ್ಮೆ ಇದನ್ನು ಬಲವಾಗಿ ವಿರೋಧಿಸಿದೆ. ನಮ್ಮ ರಾಜ್ಯದಲ್ಲಿ ಯಾವುದೇ ಕಾರಣದಿಂದ ಇಂಥ ಅತಿನಿಗೂಢ ಚಟುವಟಿಕೆಗಳಿಗೆ ಎಡೆಮಾಡಿಕೊಡಬಾರದೆಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆದೆ. ಅದರ ಪ್ರತಿಗಳನ್ನು ಎಲ್ಲ ಮಂತ್ರಿಗಳಿಗೂ ಕಳಿಸಿಕೊಟ್ಟೆ. ಏನೂ ಪ್ರಯೋಜನವಾಗಲಿಲ್ಲ.
ಈ ಮಧ್ಯೆ ಇಂಡಿಯನ್ ಎಕ್ಸ್‌ಪ್ರೆಸ್‌ನ ಪ್ರತಿನಿಧಿಗಳು ಶ್ರೀ ಶಿವಬಾಲಯೋಗಿಗಳು ಮತ್ತು ನನ್ನ ಸಂದರ್ಶನ ನಡೆಸಿ, ಅದರ ಭಾಗಗಳನ್ನು ಅನುಕ್ರಮವಾಗಿ ೨೨-೦೪-೮೫ ಮತ್ತು ೨೩-೦೪-೮೫ರ ಪತ್ರಿಕೆಯಲ್ಲಿ ಪ್ರಕಟಿಸಿದರು.
ಮಳೆತರಿಸಲು ಸಿದ್ಧವಾಗಿರುವ ಬಾಲಯೋಗಿ ಮತ್ತು ಡಾ ಎಚ್.ಎನ್.
ಬೆಂಗಳೂರು, ಏಪ್ರಿಲ್,೨೨: ಕರ್ನಾಟಕ ಸರ್ಕಾರವು ಬತ್ತಿಹೋಗಿರುವ ಬೆಂಗಳೂರು ನಗರಕ್ಕೆ ಮಳೆ ಬರಿಸಲೆಂದು ಆಹ್ವಾನಿಸಿರುವ ವ್ಯಕ್ತಿಯು ಸನ್ನದ್ಧರಾಗಿದ್ದಾರೆ. ಶ್ರೀ ಶ್ರೀ ಶ್ರೀ ಶಿವಬಾಲಯೋಗಿಯವರು ತಮ್ಮ ಯೋಗಶಕ್ತಿಯಿಂದ, ಆಕಾಶವನ್ನೇ ಬಿರಿಸಿ ಸಮೃದ್ಧ ಮಳೆ ಸುರಿಸುವುದಲ್ಲದೆ, ಈ ವಿಷಯದಲ್ಲಿ ವಿಚಾರವಾದಿಯಾದ ಡಾ. ಹೆಚ್. ಎನ್. ಅವರೊಂದಿಗೆ ಮುಕ್ತವಾದ ಚರ್ಚೆಯನ್ನು ನಡೆಸಲು ತಯಾರಾಗಿದ್ದಾರೆ. ವಿಚಾರವಾದಿ ಮತ್ತು ಆಧ್ಯಾತ್ಮವಾದಿಗಳ ನಡುವೆ ಎದ್ದಿರುವ ಎಲ್ಲ ವಾದವಿವಾಗಳಿಗೂ ಅಂತಿಮ ಉತ್ತರಗಳನ್ನು ನೀಡಿ ಮಂಗಳ ಹಾಡಬೇಕೆಂದು ಅವರ ಹಂಬಲ.
ಸುಮಾರು ೫೦ ವರ್ಷ ವಯಸ್ಸಿನ ಸ್ವಾಮೀಜಿಯವರು ಜೆ.ಪಿ ನಗರದ ತಮ್ಮ ಆಶ್ರಮದಲ್ಲಿ ನಡೆದ ಸಂದರ್ಶನವೊಂದರಲ್ಲಿ ಪತ್ರಕರ್ತರ ಬಿರುಸಾದ ಪ್ರಶ್ನೆಗಳನ್ನು ಎದುರಿಸಿದರು. ಅವರು ಹೀಗೆ ಹೇಳಿದರು :
"ನಾನು ನರಸಿಂಹಯ್ಯನವರಿಗೆ ಸವಾಲು ಹಾಕುತ್ತೇನೆ ಬೇಕಾದರೆ ಅವರು ಎಲ್ಲಾ ವಿಜ್ಞಾನಿಗಳನ್ನೂ ಕರೆತರಲಿ. ಈ ಹುಚ್ಚಾಟವನ್ನು ನಾನು ಇಂದು ಕೊನೆ ಮುಟ್ಟಿಸುತ್ತೇನೆ. ಯಾರದು ಸತ್ಯ ಮತ್ತು ಯಾರದು ಸುಳ್ಳು ಎನ್ನುವುದು ಇಡೀ ದೇಶಕ್ಕೆ ತಿಳಿಯಲಿ."
ಶಿವಬಾಲಯೋಗಿಯವರಿಂದ ಮಳೆ ತರಿಸುವ ಪ್ರಯತ್ನವನ್ನು, ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳೂ, ವಿಚಾರವಾದಿಯೂ ಆದ ಡಾ. ಹೆಚ್.ಎನ್. ವಿರೋಧ ವ್ಯಕ್ತಪಡಿಸಿದ್ದರು. ಅದನ್ನು ಕೇಳಿದ ಶಿವಬಾಲಯೋಗಿಗಳು ಈ ರೀತಿ ಸಿಡಿದೆದ್ದಿದ್ದಾರೆ. ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯರೂ ಆಗಿರುವ ಶ್ರೀ ನರಸಿಂಹಯ್ಯನವರು ಸರ್ಕಾರದ ಈ ಕ್ರಮವನ್ನು ಅಸಂಗತ ಹಾಗೂ ಚಾತಿಪರ ಎಂದು ಕರೆದು, ಇದು ರಾಜ್ಯಾಂಗಬಾಹಿರವೆಂದು ಟೀಕಿಸಿದ್ದಾರೆ.
ಇದರಿಂದ ಯೋಗಿಗಳು ಇನ್ನಷ್ಟು ಕೆರಳಿದರು. ಅವರು ಹೀಗೆ ಹೇಳಿದರು.
"ಜಾಗ ಬಿಟ್ಟು ಓಡಿಹೋಗಲು ನಾನು ಸತ್ಯಸಾಯಿಬಾಬಾ ಅಲ್ಲ. ಅವರು ಇಲ್ಲಿಗೆ ಬರಲಿ. ನಾನು ಸರಿಯಾದ ಉತ್ತರ ಕೊಡುತ್ತೇನೆ. ಇನ್ನು ಮುಂದೆ ಅವರು ಈ ದೇಶದ ಸನ್ಯಾಸಿಗಳ ತಂಟೆಗೆ ಬರದಂತೆ ಪಾಠ ಕಲಿಸುತ್ತೇನೆ."
ಮೊದಲು ಮಳೆತರಿಸಿ: ಬಾಲಯೋಗಿಗಳಿಗೆ ಡಾ ಹೆಚ್. ಎನ್. ಉತ್ತರ
ಬೆಂಗಳೂರು, ಏಪ್ರಿಲ್, ೨೩: ಬೆಂಗಳೂರಿನ ಪ್ರಸಿದ್ಧ ವಿಚಾರವಾದಿಗಳಾದ ಎಚ್ ನರಸಿಂಹಯ್ಯನವರು, ಇದೇ ನಗರದ ಪ್ರಸಿದ್ಧ ಮಳೆಯೋಗಿಗಳಾದ ಶ್ರೀ ಶ್ರೀ ಶ್ರೀ ಶಿವಬಾಲಯೋಗಿಗಳಿಗೆ ತಾನು ನಿಗದಿ ಪಡಿಸಿದ ಸ್ಥಳ ಮತ್ತು ಕಾಲದಲ್ಲಿ ಮಳೆ ತರಿಸಿಕೊಡಬೇಕೆಂದು ಸವಾಲು ಹಾಕಿದ್ದಾರೆ.
ನಿನ್ನೆ ಇದೇ ಅಂಕಣದಲ್ಲಿ ಪ್ರಕಟವಾದ ಶಿವಬಾಲಯೋಗಿಗಳ ಸವಾಲಿಗೆ ನರಸಿಂಹಯ್ಯನವರ ಪ್ರತ್ಯುತ್ತರ ಇದು.
ಮಳೆ ತರಿಸಲೆಂದು ಯೋಗಿಗಳನ್ನು ಆಹ್ವಾನಿಸಿರುವ ಶ್ರೀ ಲಕ್ಷ್ಮೀಸಾಗರ್ ಅವರು ನಮ್ಮ ರಾಜ್ಯಾಂಗದ ಮೂಲತತ್ವಗಳಿಗೆ ಅಪಚಾರ ಮಾಡಿದ್ದಾರೆಂದು ಡಾ. ಹೆಚ್.ಎನ್ ಹೇಳಿದರು.
"ಶಿವಬಾಲಯೋಗಿಗಳು ಬೇಕಾದರೆ ಎಂಟು ತಿಂಗಳುಗಳ ತಯಾರಿ ನಡೆಸಲಿ. ಆದರೆ ನಾನು ಹೇಳಿದ ಕಾಲದಲ್ಲಿ, ಹೇಳಿದ ಸ್ಥಳದಲ್ಲಿ ಮಳೆ ತರಿಸ ಬೇಕು. ಅವರು ಹೀಗೆ ಮಾಡಬಲ್ಲರೇ? ಮಾಡುತ್ತಾರೆಯೇ?"
ಶಿವಬಾಲಯೋಗಿಗಳು ಸರ್ಕಾರದ ಆಮಂತ್ರಣವನ್ನು ಒಪ್ಪಿಕೊಂಡರು. ೩೦-೫-೮೫ರಂದು ತಿಪ್ಪಗೊಂಡನಹಳ್ಳಿ ಜಲಾಶಯದ ಅಂಚಿನಲ್ಲಿ ಮಳೆಗಾಗಿ ಪ್ರಾರ್ಥನೆ ನಡೆಸುವೆನೆಂದು ಬಹಿರಂಗವಾಗಿ ಘೋಷಿಸಿದರು. ಅದನ್ನು ನಿರೀಕ್ಷಿಸಲು ಪತ್ರಕರ್ತರು, ಆಕಾಶವಾಣಿಯವರು ಹಾಗೂ ದೂರದರ್ಶನದವರಿಗೆ ಕರೆ ನೀಡಿದರು. ಹೀಗೆ ದೊಡ್ಡ ಪರಿವಾರ ಮತ್ತು ಪರಿಕರದೊಂದಿಗೆ ಶಿವಬಾಲಯೋಗಿಗಳು ಪ್ರಾರ್ಥನೆ ನಡೆಸಲೆಂದು ತಿಪ್ಪಗೊಂಡನಹಳ್ಳಿಗೆ ಹೋದರು.
ಅದರ ಮಾರನೆಯ ದಿನ, ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಇನ್ನಷ್ಟು ವಿವರಗಳೊಂದಿಗೆ ಈ ಕೆಳಗಿನ ವರದಿಯು ಪ್ರಕಟವಾಯಿತು.
ಒಂದು ತಿಂಗಳಲ್ಲಿ ಕೆರೆ ತುಂಬುತ್ತದೆ: ಪ್ರಾರ್ಥನೆ ಮುಗಿಸಿದ ಯೋಗಿಯ ಆಶ್ವಾಸನೆ
ಬೆಂಗಳೂರು, ಮೇ ೩೦: ಬಿಸಿಲಿನಿಂದ ಸುಟ್ಟು ಬಿರಿದ ತಿಪ್ಪಗೊಂಡನಹಳ್ಳಿ ಕೆರೆಯ ಅಂಗಳವು ಈ ದಿನ ಶ್ರೀ ಶಿವಬಾಲಯೋಗಿಗಳು ನಡೆಸಿದ ವರುಣ ಜಪದ ವೇದಿಕೆಯಾಯಿತು. ಅಂದು ಗುರುವಾರ ಯೋಗಿಗಳು ಕುಳಿತು ಜಪ ಮತ್ತು ಧ್ಯಾನ ಮಾಡಿದರು. ಅನಂತರ ಒಂದು ತಿಂಗಳಿನೊಳೆಗೆ ಕೆರೆಯು ತುಂಬುವುದೆಂದು ಜನರಿಗೆ ಭರವಸೆ ನೀಡಿದರು.
ಭಕ್ತರು ಉನ್ಮತ್ತ ಕುಣಿತ, ಶಂಖನಾದ, ಎತ್ತರದ ಧ್ವನಿಯ ಭಜನೆ, ಉದ್ರಿಕ್ತ ಅನುಯಾಯಿಗಳ ಕೀರುದನಿಯ ಕೇಕೆಗಳಿಂದ ತಿಪ್ಪಗೊಂಡನಹಳ್ಳಿಯ ಮೌನಮುದ್ರಿತ ವಾತಾವಾರಣವು ಕಲಕಿಹೋಯಿತು. ಈ ನಿಗೂಢ, ವಿಚಿತ್ರ ಸನ್ನಿವೇಶವನ್ನು ನಗರದ ಜಲಮಂಡಳಿಯು ನಿರ್ಮಿಸಿತ್ತು.
ಈ ದಿನದ ನಾಯಕಮಣಿಯೆಂದರೆ ಶ್ರೀ ಶಿವಬಾಲಯೋಗಿಗಳು, ಅವರು ಬಿಳಿಯುಡಿಗೆ ಧರಿಸಿದ ಸ್ಥೂಲಕಾಯರು. ಸುಮಾರು ಮಧ್ಯಾಹ್ನದ ವೇಳೆಗೆ ತಮ್ಮ ಲಿಮೋಸಿನ್ ಕಾರಿನಲ್ಲಿ ಬಂದಿಳಿದರು. ಅವರು ಕೆರೆಯಂಗಳಕ್ಕೆ ಆಗಮಿಸುವಷ್ಟರಲ್ಲಿ ಒಂದು ಘಂಟೆ ತಡವಾಗಿತ್ತು. ಅವರ ಶಿಷ್ಯರಿಂದ ಸಂಭ್ರಮದ ಸ್ವಾಗತ ದೊರಕಿತು.
ಯೋಗಿಗಳನ್ನು ಕಾರಿನಿಂದ ಇಳಿಸಿ, ಒಣಗಿಹೋಗುತ್ತಿದ್ದ ಕೆರೆಯಂಗಳದಲ್ಲಿ ನಿರ್ಮಿಸಲಾಗಿದ್ದ ಚಪ್ಪರವೊಂದಕ್ಕೆ ಕರೆತರಲಾಯಿತು. ಅವರು ನಿರ್ದಿಷ್ಟ ಪಡಿಸಿದ ಜಾಗದಲ್ಲಿ ಪದ್ಮಾಸನದಲ್ಲಿ ಕುಳಿತುಕೊಂಡರು. ಕಣ್ಣುಗಳನ್ನು ಮುಚ್ಚಿದರು. ಒಂದೆರಡು ನಿಮಿಷಗಳಲ್ಲಿಯೇ ಗಾಢವಾದ ಧ್ಯಾನದಲ್ಲಿ ಲೀನವಾದರು.
ಕುತೂಹಲ ತುಂಬಿದ ಹಳ್ಳಿಗರು, ಚಿಕ್ಕಮಕ್ಕಳು, ಸಂಭ್ರಮದ ಉಡುಗೆ ಧರಿಸಿದ ಮಹಿಳೆಯರು ಹಾಗೂ ಜಲಮಂಡಳಿಯ ಕೆಲವು ಅಧಿಕಾರಿಗಳು ಅವರ ಹಿಂದೆ ಕುಳಿತಿದ್ದರು. ತನ್ನ ಸುತ್ತಲೂ ನಡೆಯುತ್ತಿದ್ದ ಈ ಆಟಾಟೋಪಗಳಿಂದ ಯೋಗಿಗಳು ವಿಚಲಿತರಾಗಲಿಲ್ಲ. ಅವರು ಧ್ಯಾನದಲ್ಲಿ ಮುಳುಗಿ ಈ ಜಗತ್ತನ್ನು ಮರೆತಿದ್ದರು. ಉಸಿರಾಟಕ್ಕೆ ಅಲ್ಪ ಸ್ವಲ್ಪ ಚಲಿಸುತ್ತಿದ್ದ ಉದರ ಭಾಗವನ್ನು ಬಿಟ್ಟರೆ ಬಂಡೆಯಂತೆ ಕುಳಿತಿದ್ದರು. ಆಗೊಮ್ಮೆ ಈಗೊಮ್ಮೆ ಭಕ್ತನೊಬ್ಬನು ಅವರ ಮೈಮೇಲೆ ಸಂಗ್ರಹವಾಗುತ್ತಿದ್ದ ಬೆವರ ಹನಿಗಳನ್ನು ಒರೆಸಿ ನೊಣಗಳನ್ನು ಓಡಿಸುತ್ತಿದ್ದನು.
ಭಜನೆ ಮತ್ತು ಶಂಖನಾದಗಳು ತಮ್ಮ ಶಿಖರವನ್ನು ಮುಟ್ಟಿದಂತೆ ಭಕ್ತರು ಮೇಲೆದ್ದು ಉನ್ಮತ್ತ ಕುಣಿತದಲ್ಲಿ ತೊಡಗಿದರು.ತಮ್ಮ ಶರೀರವನ್ನು ಆಕಡೆ ಈಕಡೆ ಓಲಾಡಿಸುತ್ತ ವೀರಾವೇಶದಿಂದ ಕುಣಿಕುಣಿದು ಶಾಮಿಯಾನವನ್ನು ಸುತ್ತತೊಡಗಿದರು.
ಭಕ್ತಳೊಬ್ಬಳು ಮೈಮೇಲೆ ಬಂದಂತೆ ಕಿರುಚಿ ಕಿರುಚಿ, ಚಪ್ಪರಕ್ಕೆ ಕಟ್ಟಿದ್ದ ಹಸಿರು ಎಲೆಗಳನ್ನು ಕಚಪಚ ಅಗಿಯತೊಡಗಿದಳು. ತಾನೂ ಅಲ್ಲಾಡದೆ ಕುಳಿತು, ಕಣ್ಣು ಗುಡ್ಡೆಗಳನ್ನು ಉರುಳಿಸುತ್ತಾ ಶೂನ್ಯದ ಕಡೆ ನಿಟ್ಟಿಸಿ ನೋಡತೊಡಗಿದಳು.
ಹಳ್ಳಿಯ ಜನರು ಈ ದೃಶ್ಯವನ್ನೂ ಶಾಂತವಾಗಿ ನೋಡಿದರು. ಸಮಾಧಿ ಸ್ಥಿತಿಯಲ್ಲಿದ್ದ ಭಕ್ತರ ಆಶೀರ್ವಾದಗಳನ್ನು ಪಡೆದರು. ಆ ಭಕ್ಕರಾದರೋ ಪ್ರೇಕ್ಷಕರ ಹಣೆಗಳನ್ನು ತಮ್ಮ ಹೆಬ್ಬೆರಳಿನಿಂದ ಉಜ್ಜುವ ಮೂಲಕ ತಮ್ಮ ಆನಂದವನ್ನು ಅವರಿಗೆ ತಲುಪಿಸಿದರು. ಬೇರೆ ಕೆಲವು ನರ್ತಕರು ತಮ್ಮ ನಾಲಿಗೆಗಳನ್ನು ಮುಂದೆ ಚಾಚಿ ಅದರ ಮೇಲೆ ಉರಿಯುವ ಕರ್ಪೂರದ ಬಿಲ್ಲೆಗಳನ್ನು ಇಡಿಸಿಕೊಂಡರು.
ಎಲ್ಲವೂ ಶಾಂತವಾಗಿ ನಡೆಯುತ್ತಿತ್ತು. ಇದ್ದಕ್ಕಿಂದತೆ ಯುವಕರ ತಂಡವೊಂದು ವೇಗವಾಗಿ ನಡೆಯುತ್ತಾ ಕಪ್ಪುಬಾವುಟಗಳನ್ನು ಬೀಸುತ್ತಾ, ಜಲಮಂಡಳಿ ಹಾಗೂ ಮೂಢನಂಬಿಕೆಗಳ ವಿರುದ್ಧ ಘೋಷಣೆ ಕೂಗುತ್ತಾ ನುಗ್ಗಿ ಬಂದಿತು. ಅವರು ಯೋಗಿಗಳು ಜಪ ಮಾಡುತ್ತಿದ್ದ ಸ್ಥಳವನ್ನು ತಲುಪುವುದಕ್ಕೆ ಮೊದಲೇ ಪೋಲೀಸರು ಅವರನ್ನು ಕರೆದುಕೊಂಡು ಹೋದರು.
ಈ ಯುವಕರು ಹೆಬ್ಬಾಳಿನ ಕೃಷಿ ವಿಶ್ವವಿದ್ಯಾಲಯದ ಸಮಾಜವಾದಿ ಅಧ್ಯಯನ ಕೇಂದ್ರಕ್ಕೆ ಸೇರಿದವರು. ಅವರು ತಮ್ಮನ್ನು ನೀರಿಕ್ಷಿಸುತ್ತಿದ್ದ ಪೋಲೀಸರ ಕಣ್ಣು ತಪ್ಪಿಸಿ ಒಳಗೆ ಬಂದಿದ್ದರು. ತಾವು ಪತ್ರಿಕೋದ್ಯೋಗಿಗಳಂತೆ ನಟಿಸುವುದರ ಮೂಲಕ ಅವರು ಒಳಗೆ ಬಂದಿದ್ದರು.
ಸಮಯ ಸಾಗುತ್ತಿತ್ತು. ಕೆಲವು ಸಲ ಆಕಾಶ ಧಗಧಗ ಉರಿಯುತ್ತಿದ್ದರೆ ಮತ್ತೆ ಕೆಲವು ಸಲ ಮೋಡಗಳು ಅದಕ್ಕೆ ಮಸುಕು ಬಣ್ಣ ಕೊಡುತ್ತಿದ್ದವು. ಹೊಟ್ಟೆ ಹಸಿದ ಹಾಗೂ ಬೇಜಾರಾದ ಹಳ್ಳಿಗರ ತಂಡ ನಿಧಾನವಾಗಿ ದೂರ ನಡೆಯತೊಡಗಿತು. ಆಸ್ಟೇಲಿಯಾದ ನಾಗರೀಕರ ತಂಡವೊಂದು, ಭಾರತದ ಮತ್ತು ಅದರ ಪವಿತ್ರ ಯೋಗಿಗಳನ್ನು ಕುರಿತು ಹರಟೆ ಹೊಡೆಯತೊಡಗಿದರು. ಅವರೆಲ್ಲರೂ ಬೆಂಗಳೂರಿನಲ್ಲಿ ನೆಲಸಿ, ಸತ್ಯ ಮತ್ತು ಜೀವನ ಅರ್ಥಕ್ಕಾಗಿ ಹುಡುಕುತ್ತಿದ್ದವರು.
ಪತ್ರಕರ್ತರು ತಮ್ಮ ಕಾವಲು ಕೆಲಸವನ್ನು ನಿಲ್ಲಿಸಿ ಐದು ನಿಮಿಷಗಳಿಗೊಮ್ಮೆ ತಮ್ಮ ಕೈಗಡಿಯಾರಗಳ ಕಡೆ ನೋಡತೊಡಗಿದರು. ಇದ್ದಕ್ಕಿದ್ದಂತೆ ಚಪ್ಪರದಲ್ಲಿ ಕೋಲಾಹಲ ಪ್ರಾರಂಭವಾಯ್ತು. ಪತ್ರಕರ್ತರು, ಯೋಗಿ ಇದ್ದಕಡೆಗೆ ಓಡಿದರು. ಛಾಯಾಗ್ರಾಹಕರು ತಮ್ಮ ಕ್ಯಾಮರಾವನ್ನು ಸರಿಪಡಿಸಿಕೊಂಡರು. ಆಗ ಸುಮಾರು ೨ ಘಂಟೆ ೪೦ ನಿಮಿಷಗಳು. ಸ್ವಾಮಿಗಳು ತಮ್ಮ ಕಣ್ಣು ತೆಗೆದು ಜಪವನ್ನು ನಿಲ್ಲಿಸಿದರು.
ಆಮೇಲೆ ನಡೆದದ್ದು ಸಂಕ್ಷಿಪ್ತವಾದ ಆಚರಣೆ. ಯೋಗಿಗಳು ವಿಭೂತಿಯನ್ನು ಅನುಗ್ರಹಿಸಿದರು. ಅಗರ ಬತ್ತಿಗಳನ್ನು ಹಚ್ಚಿದರು. ಅವರಿಗೆಂದು ಐದು ತೆಂಗಿನಕಾಯಿಗಳನ್ನು ಅರ್ಪಿಸಲಾಯಿತು. ಅವರು ಅವುಗಳನ್ನು ಅನುಗ್ರಹಿಸಿ ಜಲಮಂಡಳಿಯ ಅಧಿಕಾರಿಗಳಿಗೆ ಹಿಂದುರಿಗಿಸಿದರು. ಅವರಾದರೋ ಅವುಗಳನ್ನು ಕೆರೆಗೆ ಸಮರ್ಪಿಸಿದರು. ಕೆರೆಯ ಕೆಸರು ಬಣ್ಣದ ನೀರು ಕ್ಷಣಕಾಲ ಕುಂಕುಮ ರಾಶಿ ಕರಗಿ ಕೆಂಪು ಬಣ್ಣ ತಳೆಯಿತು. ಕ್ರಮೇಣ ಕೆರೆಯ ಅಲೆಗಳು ಅವನ್ನೂ ನುಂಗಿದವು.
ಇದಾದ ಮೇಲೆ ಯೋಗಿಗಳ ಘನ ಆಶೀರ್ವಚನ ಸಮಯ ಬಂತು. ಪತ್ರಕರ್ತರಿಗೆ ಮೊಸರನ್ನದ ಸೇವೆ ನಡೆಯಿತು. ಅದನ್ನು ಜಲಮಂಡಳಿಯ ನೌಕರರ ಕಾಣಿಕೆಗಳಿಂದ ತಯಾರಿಸಲಾಗಿತ್ತು. ಎಲ್ಲರೂ ಅತಿಥಿ ಗೃಹಕ್ಕೆ ಹೋದರು. ಭಕ್ತಾದಿಗಳು ರತ್ನಗಂಬಳಿಯ ಮೇಲೆ ಕುಳಿತರು.
ಪತ್ರಕರ್ತರು ಪ್ರಶ್ನೆಗಳ ಸುರಿಮಳೆಯನ್ನು ಪ್ರಾರಂಭಿಸಿದರು
"ಹೇಳಿ, ಈ ಮೂರು ಘಂಟೆಗಳ ಕಾಲ ನಾನು ಯಾರಿಗಾದರೂ ತೊಂದರೆ ಕೊಟ್ಟೆನೆ? ನಾನು ಜನರನ್ನು ಮೋಸ ಮಾಡುತ್ತಿದ್ದೇನೆಯೇ? ನಾನು ಜನರ ಸೇವಕ" ಡಾ. ನರಸಿಂಹಯ್ಯನವರ ಮಾತು ಬಂದಾಗ ಅವರು ಹೀಗೆ ಹೇಳಿದರು.
"ನೂರಾರು ಸಾವಿರಾರು ಮಂತ್ರಿಗಳು, ಉಪಕುಲಪತಿಗಳು ಇರಬಹುದು. ಆದರೆ ಯೋಗಿ ಒಬ್ಬನೇ. ಅವರು ಪ್ರಜ್ಞೆ ಸರಿಮಾಡಿಕೊಳ್ಳಲಿ. ನನ್ನ ಅನುಭವಗಳನ್ನು ಮೊದಲು ಅರ್ಥ ಮಡಿಕೊಂಡು ನಂತರ ಸವಾಲು ಹಾಕಲಿ. ನಾನು ತಯಾರಿದ್ದೇನೆ. ಅವರು ತಮ್ಮ ಪ್ರಶ್ನೆಗಳನ್ನು ಬರವಣಿಗೆಯಲ್ಲಿ ಕಳಿಸಲಿ ನಮ್ಮ ಸಮ್ಮುಖದಲ್ಲಿ ಅದನ್ನು ಬಗೆಹರಿಸೋಣ." ಎಂದು ಅವರು ಪತ್ರಕರ್ತರಿಗೆ ಹೇಳಿದರು. ವಿಚಾರವಾದಿಯು ಆರಿಸಿದ ಸ್ಥಳ, ಸಮಯದಲ್ಲಿ ಮಳೆ ತರಿಸಲಾದೀತೆ ಎಂಬ ಸವಾಲನ್ನು ಜ್ಞಾಪಿಸಿದಾಗ ಯೋಗಿ ಉರಿದೆದ್ದು "ನರಸಿಂಹಯ್ಯ ನನ್ನ ದೊರೆಯಲ್ಲ. ಅವರು ಸೌಮ್ಯರಾಗಿ ಮಾತನಾಡುವುದನ್ನು ಕಲಿಯಲಿ. ಇಂಥ ಹುಚ್ಚು ಪ್ರಶ್ನೆಗಳಿಗೆ ನಾನು ಉತ್ತರಿಸಬೇಕಾದ್ದು ಅವಶ್ಯವಿಲ್ಲವೆಂದುಕೊಂಡಿದ್ದೇನೆ."
೩೦ ದಿನಗಳ ಅವಧಿ ಮುಗಿದು ಹೋಯಿತು. ಇಂಡಿಯನ್ನ್ ಎಕ್ಸ್‌ಪ್ರೆಸ್ ವಿವರಿಸಿದ ಪರಿಸ್ಥಿತಿ ಈ ರೀತಿ ಇದೆ:
ಯೋಗಿ ಹೊಸ ಸಬೂಬುಗಳನ್ನು ಹೇಳುತ್ತಿರುವಂತೆ ಜಲಾಗಾರ ಇನ್ನೂ ಬತ್ತಿಕೊಂಡೇ ಇದೆ.
ಬೆಂಗಳೂರು ಜೂನ್, ೨೯: ಯೋಗಿ ನಿರ್ದಿಷ್ಟವಾಗಿ ಹೇಳಿದ್ದ ೩೦ನೇ ದಿನದ ಕೊನೆಯಾಗಿದೆ. ತಿಪ್ಪಗೊಂಡನಹಳ್ಳಿ ಜಲಾಗಾರದಲ್ಲಿ ಮಳೆ ತರಿಸಲು ಸರ್ಕಾರ ಶಿವಬಾಲಯೋಗಿಯನ್ನು ನೇಮಿಸಿದ್ದರೂ ನೀರು ೧೪.೫ ಅಡಿಯಿಂದ ೭.೫ ಅಡಿಗೆ ಇಳಿದರೂ ಯೋಗಿಗೆ ಅವಮಾನವಾದಂತೆ ಕಾಣುವುದಿಲ್ಲ.
ಈಗ ಹೊಸ ವಿಚಾರವನ್ನು ಹುಟ್ಟಿಸಿಕೊಂಡಿದ್ದಾರೆ. "ಈ ೩೦ ದಿನಗಳೂ ಕೇವಲ ತಿಪ್ಪಗೊಂಡನಹಳ್ಳಿಗಾಗಿಯೇ ನಾನು ಪ್ರಾರ್ಥಿಸುತ್ತಿದ್ದನೆಂದು ನಿಮಗೆ ಹೇಳಿದವರಾರು?" ಎಂದು ಪತ್ರಕರ್ತರಿಗೆ ಕೇಳಿದರು. "ನಾನು ಇಡೀ ರಾಜ್ಯಕ್ಕಾಗಿ ಪ್ರಾರ್ಥಿಸುತ್ತಿದ್ದೆ. ಇಡೀ ರಾಜ್ಯದಲ್ಲಿ ಈಗ ಮಳೆ ಸುರಿಯುತ್ತಿಲ್ಲವೇ?" "ತಿಪ್ಪನಗೊಂಡನಹಳ್ಳಿಯಲ್ಲೂ ಮಳೆ ಸುರಿಯುತ್ತದೆ." ತಮ್ಮ ಬಲೆಯಲ್ಲೇ ತಾವು ಬೀಳುತ್ತಾ "ಇನ್ನೇನು ಒಂದು ವಾರದಲ್ಲೋ, ಹದಿನೈದು ದಿನದಲ್ಲೋ ಮಳೆ ಬೀಳುತ್ತದೆ. ಆ ಎಲ್ಲ ಜಾಗಗಳ ಮಳೆ ನಿಲ್ಲಿಸಿ ಇಲ್ಲಿ ಮಾತ್ರ ಮಳೆ ತರಿಸುವುದು ನ್ಯಾಯವೇ? ಇಡೀ ರಾಜ್ಯದ ನೀರನ್ನು ತಡೆದು ತಿಪ್ಪಗೊಂಡನಹಳ್ಳಿಗೆ ಮಾತ್ರ ನೀರು ಬರುವಂತೆ ಮಾಡುವುದು ಸರಿಯೇ?"
ಅವರೇ ಅಲ್ಲವೇ ಒಂದು ತಿಂಗಳಲ್ಲಿ ತಿಪ್ಪಗೊಂಡನಹಳ್ಳಿ ಕಂಠಪೂರ್ತಿ ತುಂಬುವುದೆಂದು ಹೇಳಿದ್ದವರು? ಈ ಪ್ರಶ್ನೆಗೂ ಯೋಗಿಯಲ್ಲಿ ಉತ್ತರ ತಯಾರಾಗಿತ್ತು. "ನೋಡಿ, ತಿಪ್ಪಗೊಂಡನಹಳ್ಳಿಯ ಸುತ್ತ ಬರಡು ನೆಲದ್ದೆ ತೊಂದರೆ. ಏನಂದರೆ ಜಲಾಗಾರಕ್ಕೆ ನೀರಿಳಿಯುವ ಮುನ್ನವೇ ಈ ಬಂಜರು ಭೂಮಿ ನೀರು ಕುಡಿದು ಬಿಡುತ್ತದೆ."
ಯಾರಾದರೂ ತಾವು ಕೇವಲ ತಿಪ್ಪಗೊಂಡನಹಳ್ಳಿಗಾಗಿ ಪ್ರಾರ್ಥಿಸಿತ್ತಿದ್ದುದಾಗಿ ತಿಳಿದಿದ್ದರೆ ಅದು ತಪ್ಪೆಂದು ಅವರು ಹೇಳಿದರು.
"ನಾನು ಇನ್ನೂ ಹೆಚ್ಚಿನ ಕಾಲಾವಕಾಶ ಗೊತ್ತು ಪಡಿಸಬೇಕಿತ್ತು. ಆಗ ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಈ ಗೊಂದಲಗಳು ಹುಟ್ಟುತ್ತಿರಲಿಲ್ಲವೇನೋ" ಎಂದು "ಎಂದೂ ಸೋಲದ" ಯೋಗಿ ಹೇಳಿದರು.
"ನಾನೆಂದೂ ಸೋಲುವುದಿಲ್ಲ" ತನ್ನ ಸಣ್ಣ ಧ್ವನಿಯಲ್ಲಿ ಯೋಗಿ ಹೇಳಿದರು. "ಈ ಬರಡು ರಾಜ್ಯಕ್ಕೆ ಮಳೆ ತರಿಸಲು ನಾನು ನನ್ನ ಅರೋಗ್ಯವನ್ನೇ ಹಾಳುಮಾಡಿಕೊಂಡಿದ್ದೇನೆ. ಪ್ರತಿದಿನ ಮುಂಜಾನೆ ಮೂರು ಘಂಟೆ ಕಾಲ ನಾನು `ಧ್ಯಾನ ` ಮಾಡುತ್ತೇನೆ. ತಿಪ್ಪಗೊಂಡನಹಳ್ಳಿಗಾಗಿಯೇ ವಿಶೇಷವಾಗಿ ಚಿಂತಿಸಬೇಡಿ. ಇಷ್ಟರಲ್ಲೇ ಮಳೆ ಸುರಿಯುತ್ತದೆ."
ಯಾವುದಾದರೂ ಅಪಶಕುನವು ದುಷ್ಟಶಕ್ತಿಗಳು ಅಡ್ಡ ಬಂದಿದೆಯೇ? ಎಂಬ ಪ್ರಶ್ನೆಗೆ "ಇಲ್ಲ, ಇಲಾಖೆಯವರು ನನಗೆ ಇದೇ ಪ್ರಶ್ನೆ ಕೇಳಿದರು. ವಿಚಾರವಾದಿಗಳು ಕಪ್ಪುಬಾವುಟ ಬೀಸಿದರು. ಗಲಾಟೆ ಮಾಡಿದರು. ಇಂಥವಕ್ಕೆಲ್ಲ ನಾನು ಚಿಂತಿಸುವುದಿಲ್ಲ. ನಾನು ನಿಜವಾದ ವಿಚಾರವಾದಿ. ಅವರಲ್ಲ. ನಾನು ಜನಪರ, ಅವರ ಕಪ್ಪು ಬಾವುಟಗಳು ಮಳೆ ತರಿಸಬಹುದೇ?"
"ಈ ದಿನ ಯೋಗಿ ಅತ್ಯಂತ ಕರುಣಾಜನಕವಾದ, ತನ್ನ ಮೇಲೆ ತಾನೇ ಗೂಬೆ ಕೂರಿಸಿಕೊಂಡ ವ್ಯಕ್ತಿ" ಎಂದು ಡಾ. ನರಸಿಂಹಯ್ಯನವರು ಹೇಳತೊಡಗಿದರು. ದೇವಪುರುಷರು ಮತ್ತು ಪವಾಡ ಪುರುಷರನ್ನು ಕುರಿತು ಮಾತನಾಡತೊಡಗಿದರೆ ಅವರಿಗೆ ಎಲ್ಲಿಲ್ಲದ ಉತ್ಸಾಹ.
"ಇವರು ಕೂಡ ರಾಜಕಾರಣಿಗಳಂತೆ ಜನರಿಗೆ ಬಾಯಿಗೆ ಬಂದಂತೆ ಭರವಸೆ ನೀಡಿದರು. ಈಗ ಅದರ ಪ್ರತಿಫಲವನ್ನು ಅನುಭವಿಸುತ್ತಿದ್ದಾರೆ." ಆದರೆ ನರಸಿಂಹಯ್ಯನವರು ಶಿವಬಾಲಯೋಗಿ ಜಾಣನೆಂದು ಒಪ್ಪಿಕೊಂಡರು. ಏಕೆಂದರೆ ಅವರು ಬೇಕೆಂದೇ ಮೂವತ್ತು ದಿನಗಳ ಗಡಿಗೆರೆಯನ್ನು ಹಾಕಿದ್ದರು. ಅಷ್ಟರಲ್ಲಿ ಮಳೆಗಾಲ ಯಾವಾಗ ಬೇಕಾದರೂ ಪ್ರಾರಂಭವಾಗಬಹುದಿತ್ತು. ಆದರೆ ಮಳೆ ಕೂಡ ಬಡಪಾಯಿಯೊಡನೆ ಸಹಕರಿಸಲಿಲ್ಲ. ಅವರು ಜನಗಳ ಎದುರು ನಗೆಪಾಟಲಾದರು.
ಈ ಯೋಗಿ ಕೊನೆಯ ದಿನವನ್ನು ಮುಂದೆ ಹಾಕುತ್ತಲೇ ಹೋಗುತ್ತಾರೆ. ಒಂದಲ್ಲ ಒಂದು ದಿನ ಕೆರೆ ಸಹಜವಾದ ಕಾರಣದಿಂದಲೇ ತುಂಬುತ್ತದೆ. ಪಾಪ, ಹೇಗಾದರೂ ಮಾಡಿ ಅವರು ತಮ್ಮ ಮರ್ಯಾದೆ ಉಳಿಸಿಕೊಳ್ಳಬೇಕಲ್ಲ. ಆದರೆ ಸಾಯಿಬಾಬಾ ಇವರಿಗಿಂತ ಜಾಣ. ಅವರು ನನ್ನ ಸವಾಲನ್ನು ಒಪ್ಪಿಕೊಳ್ಳಲೇ ಇಲ್ಲ. ಇವರು ಒಪ್ಪಿಕೊಂಡರು ಮತ್ತು ಹೆಸರು ಕೆಡಿಸಿಕೊಂಡರು.
ಆದರೆ ರಾಜ್ಯದ ಲಿಂಗನಮಕ್ಕಿ ಮತ್ತು ಇತರ ದೊಡ್ಡ ಜಲಾಶಯಗಳು ಸ್ವಾಮಿಗಳ ಯಾವ ಸಹಾಯವೂ ಇಲ್ಲದೆ ಮಳೆಯಿಂದಲೇ ತುಂಬುತ್ತಿರವ ಸಂಗತಿಯ ಕಡೆ ಅವರ ಗಮನ ಸೆಳೆದರು. ಇನ್ನು ಮೇಲಾದರೂ ಶಿವಬಾಲಯೋಗಿಗಳು ಇಂತಹ ಹುಚ್ಚುಸಾಹಸಗಳನ್ನು ನಿಲ್ಲಿಸಿ ತಮ್ಮ ಜೀವಿತದ ಉಳಿದ ಭಾಗವನ್ನು ನಿರಪಾಯಕಾರಿಯಾದ ಭಜನೆಗಳಲ್ಲಿ ಕಳೆಯಬೇಕೆಂದು ಅವರು ಸಲಹೆ ಕೊಟ್ಟರು.
ಇನ್ನು ಮೇಲಾದರೂ ಕರ್ನಾಟಕ ಸರ್ಕಾರವು ತನ್ನ ತಪ್ಪನ್ನು ತಿಳಿದುಕೊಳ್ಳುವುದೆಂದು ಅವರು ಆಶಿಸಿದರು. ಜಲಮಂಡಳಿ ಕೂಡಾ ಈ ರೀತಿಯ ವ್ಯರ್ಥಪ್ರಯತ್ನಗಳನ್ನು ನಿಲ್ಲಿಸಬಹುದೆಂದು ನಿರೀಕ್ಷಿಸಿದರು.
ಹೀಗೆ ಶಿವಬಾಲ ಯೋಗಿಯವರು ಸಾರ್ವಜನಿಕರ ದೃಷ್ಟಿಯಲ್ಲಿ ನಗೆಪಾಟಲಿಗೆ ಗುರಿಯಾದರು. ಅವರು ಈ ಐತಿಹಾಸಿಕ ಪರಾಭವದಿಂದ ಕಹಿಯಾದ ಪಾಠವೊಂದನ್ನು ಕಲಿತಿರುವರೆಂಬ ಆಸೆ ನನ್ನದು. ಅವರು ಇನ್ನು ಮೇಲೆ ದೇವರು, ಧರ್ಮ ಮತ್ತು ಪ್ರಾರ್ಥನೆಗಳ ಹೆಸರಿನಲ್ಲಿ ಜನರನ್ನು ವಂಚಿಸುವುದನ್ನು ನಿಲ್ಲಿಸಬೇಕು. ನಿಜವಾಗಲೂ ಆಧ್ಯಾತ್ಮಿಕ ಶಕ್ತಿಯುಳ್ಳ ಮಹಾನುಭಾವರು ಈ ರೀತಿ ಅಗ್ಗದ ಸಾರ್ವಜನಿಕ ಪ್ರದರ್ಶನಗಳಲ್ಲಿ ತೊಡುಗುವುದಿಲ್ಲ.

ಜ್ಯೋತಿಷ್ಯಕ್ಕೆ ತಲೆಬುಡ ಇದೆಯೇ..?

ಲೇಖಕರು- ಡಾ. ಹೆಚ್. ನರಸಿಂಹಯ್ಯ
ಹಕ್ಕುಗಳು: ಲೇಖಕರವು
ನಮಗೆಲ್ಲ ತಿಳಿದಿರುವಂತೆ ಜ್ಯೋತಿಷ್ಯದ ಪ್ರಕಾರ ಮನುಷ್ಯನ ನಡವಳಿಕೆಗಳ ಮೇಲೆ ಗ್ರಹಗಳ ಪ್ರಭಾವ ವ್ಯಾಪಕವಾದದ್ದು. ಶತಮಾನಗಳಿಂದ ಜನಪ್ರಿಯವಾಗಿರುವ ಈ ನಂಬಿಕೆ ಎಲ್ಲ ದೇಶದ ಜನರ ಮನಸ್ಸಿನಲ್ಲಿ ಗಾಢವಾಗಿ ಬೇರೂರಿದೆ. ಪ್ರಕೃತಿಯ ಘಟನೆಗಳು ಆದಿಮಾನವನಿಗೆ ಭಯ ಭಕ್ತಿಯನ್ನುಂಟು ಮಾಡಿದ್ದು, ಅವನ ಬಹುಪಾಲು ನಂಬಿಕೆಗಳು ಈ ಹಿನ್ನೆಲೆಯಲ್ಲಿಯೇ ರೂಪುಗೊಂಡವು. ಮಿಂಚು ಗುಡುಗುಗಳು ಅವನಿಗೆ ಸಾಕಷ್ಟು ಭಯವನ್ನುಂಟು ಮಾಡಿರಬೇಕು. ಮಧ್ಯಾನದಲ್ಲಿ ಗ್ರಹಣ ನಡೆದಾಗ ಕತ್ತಲು ಮುಸುಕಿದ್ದು ಎಂತಹ ದೈರ್ಯಶಾಲಿಯಾದ ಆದಿಮಾನವನಿಗೂ ನಡುಕವನ್ನುಂಟು ಮಾಡಿರ ಬೇಕು. ಭೂಕಂಪವು ಅವನಿಗೆ ಹೆಚ್ಚಿನ ದಿಗಿಲನ್ನು ತಂದಿರಬೇಕು. ಕನಸು, ರೋಗಗಳು, ಸಾವು- ಇವೆಲ್ಲಾ ಅವನಿಗೆ ರಹಸ್ಯಗಳಾಗಿರ ಬೇಕು.
ಪ್ರಾಚೀನ ಜೋತಿಷ್ಯದ ಉಗಮವು ಖಗೋಳಶಾಸ್ತ್ರದಲ್ಲಿ ಕಂಡುಬರುತ್ತದೆ. ಖಗೋಳಶಾಸ್ತ್ರವು ವಿಜ್ಞಾನವಾದ್ದರಿಂದ ಅದು ಬೆಳೆಯುತ್ತಾ ಬಂದಿದೆ. ವಿಜ್ಞಾನದ ಎಲ್ಲ ಪ್ರಯೋಗಗಳು, ತಾತ್ಕಾಲಿಕವಾಗಿದ್ದು, ಅಧಿಕಾರಮುಕ್ತವಾಗಿ ಕುರುಡಾಗಿ ಅದು ಮಾತನಾಡುವುದಿಲ್ಲ. ವಿಜ್ಞಾನದ ಎಲ್ಲ ಪ್ರಯೋಗಗಳು, ತಾತ್ಕಾಲಿಕವಾಗಿದ್ದು, ಅಧಿಕಾರಮುಕ್ತವಾಗಿ ಕುರುಡಾಗಿ ಅದು ಮಾತನಾಡುವುದಿಲ್ಲ. ವಿಜ್ಞಾನದ ಎಲ್ಲ ಸಿದ್ಧಾತಂಗಳು, ನಿಯಮಗಳು ಹೊಸ ಸಂಶೋಧನೆಯ ಬೆಳಕಿನಲ್ಲಿ ಪುನರ್ ರಚಿತವಾಗುತ್ತವೆ. ಯಾವುದೇ ಒಂದು ವಿಷಯ ವಿಜ್ಞಾನವೆನಿಸಿಕೊಳ್ಳಬೇಕಾದರೆ ಅದು ವಸ್ತುನಿಷ್ಠತೆ, ಪುನಾರವೃತ್ತಿ ಸಾಮರ್ಥ್ಯ, ದೃಡತೆ, ವಿಶ್ವಮಾನ್ಯತೆ- ಈ ಎಲ್ಲ ರೀತಿಯ ಅಂಶಗಳನ್ನು ತೃಪ್ತಿಪಡಿಸ ಬೇಕಾಗುತ್ತದೆ. ವಿಜ್ಞಾನದ ಎಲ್ಲ ಶಾಖೆಗಳು ಅಪೂರ್ಣತೆಯಲ್ಲಿಯೇ ಆರಂಭವಾಗುತ್ತವೆ. ಇದಕ್ಕೆ ಕಾರಣ ಜ್ಞಾನದ ಮಿತಿ ಮತ್ತು ಆ ಕಾಲದಲ್ಲಿ ಬಳಕೆಯಲ್ಲಿದ್ದ ಒರಟಾದ ಉಪಕರಣಗಳು, ಕೆಲವು ಸಂದರ್ಭಗಳಲ್ಲಿ ತಪ್ಪು ಗ್ರಹಿಕೆಗೆಳು ಕೂಡ ಈ ಬಗೆಯ ಅಪೂರ್ಣತೆಗೆ ಕಾರಣವಾಗುತ್ತವೆ. ಆದರೆ ನಿರಂತರ ಸತ್ಯಶೋಧನೆಯ ಹಂಬಲ ವಿಜ್ಞಾನದ ಮಹೋನ್ನತಿಯಾಗಿದೆ.
ವಿಜ್ಞಾನದ ಇತರ ಶಾಖೆಗಳಂತೆ ಪ್ರಾಚೀನ ಖಗೋಳಶಾಸ್ತ್ರ ಸಹ ಹಲವಾರು ತಪ್ಪುಗ್ರಹಿಕೆಗಳನ್ನು ಪಡೆದುಕೊಂಡಿತ್ತು. ನಕ್ಷತ್ರ ಖಚಿತವಾದ ಆಕಾಶ ಮತ್ತು ಚಂದ್ರ ಮೊದಲಿನಿಂದಲೂ ಮನುಷ್ಯನನ್ನು ಆಕರ್ಷಿಸಿದ್ದವು ಕುತೂಹಲ ಮತ್ತು ಸೂಕ್ಷ್ಮ ನಿರೀಕ್ಷಣಾ ಶಕ್ತಿಯಿರುವ ಜನರು ಅವುಗಳ ಬಗ್ಗೆ ಮತ್ತಷ್ಟು ತಿಳಿಯಲು ಪ್ರಯತ್ನಿಸಿದರು. ಆಗ ವಿಷಯವನ್ನು ತಿಳಿಯಲು ಅವರಿಗೆ ಕಣ್ಣು ಮಾತ್ರ ಏಕೈಕ ಸಾಧನೆಯಾಗಿತ್ತು. ಪ್ರಾಚೀನ ಖಗೋಳಶಾಸ್ತ್ರ ಹಾಗೂ ಜ್ಯೋತಿಷ್ಯದ ಪ್ರಕಾರ ಒಂಬತ್ತು ಗ್ರಹಗಳಿವೆ. ಅವು ಸೂರ್ಯ, ಚಂದ್ರ, ರಾಹು, ಕೇತು, ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ. ಆದರೆ ಸೂರ್ಯ-ಚಂದ್ರರು ಗ್ರಹಗಳಲ್ಲ, ಸೂರ್ಯ ನಕ್ಷತ್ರವಾದರೆ ಚಂದ್ರ ಉಪಗ್ರಹ. ಇದರ ಜೊತೆಗೆ ರಾಹು ಕೇತುಗಳು ಆಸ್ತಿತ್ವದಲ್ಲಿ ಇಲ್ಲದೆ ಇರುವವು. ಅವು ಅವರ ಕಲ್ಪನೆಯ ಕೃತಕ ಬಿಂದುಗಳು. ಜ್ಯೋತಿಷ್ಯದ ಆಧಾರವಾಗಿರುವ ಒಂಬತ್ತು ಗ್ರಹಗಳಲ್ಲಿ ಎರಡು ಗ್ರಹಗಳೇ ಅಲ್ಲ, ಮತ್ತೆರಡು ಇಲ್ಲವೇ ಇಲ್ಲ. ಇದಲ್ಲದೆ ಜ್ಯೋತಿಷಿಗಳಿಗೆ ನಿಖರವಾದ ಕಾಲದ ಪರಿಕಲ್ಪನೆ ಇರಲಿಲ್ಲವಾದರೂ, ಅದರ ಪ್ರಾಮುಖ್ಯ ಜ್ಯೋತಿಷ್ಯದಲ್ಲಿ ಹೆಚ್ಚಾಗಿದೆ. ಈ ಎಲ್ಲ ಕಾರಣಗಳು ಜ್ಯೋತಿಷ್ಯಕ್ಕೆ ತಪ್ಪಾದ ದುರ್ಬಲ ಅಡಿಪಾಯವನ್ನು ಒದಗಿಸಿವೆ. ಈ ರೀತಿಯ ತಪ್ಪು ಗ್ರಹಿಕೆಗಳ ಆಧಾರದಿಂದ ರಚಿತವಾಗಿರುವ ಜ್ಯೋತಿಷ್ಯವನ್ನು ವಿಜ್ಞಾನವೆಂದು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.
ವಿಜ್ಞಾನದ ಪ್ರಕಾರ ಗ್ರಹಗಳು ಸೂರ್ಯನ ಭಾಗಗಳು. ಆದ್ದರಿಂದ ಅವುಗಳು ಸೂರ್ಯನ ರೀತಿಯ ಭೌತಿಕ ಸ್ವರೂಪವನ್ನೇ ಪಡೆದುಕೊಂಡಿವೆ. ಭೂತವಸ್ತುವಿನ ದೊಡ್ಡ ರಾಶಿಗಳಾಗಿರುವ ಗ್ರಹಗಳು ಭೂಮಿಯಿಂದ ಮಿಲಿಯನ್‌ಗಟ್ಟಲೆ ಮೈಲಿಗಳ ದೂರದಲ್ಲಿವೆ. ಇವು ಮನುಷ್ಯನ ಜೀವನದ ಘಟನೆಗಳ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ಗ್ರಹಿಸಲು ಅಸಾಧ್ಯ. ಮನುಷ್ಯನ ಎಲ್ಲ ಗುಣಗಳನ್ನು ಗ್ರಹಗಳಿಗೆ ಆರೋಪಿಸವುದು ಹಾಸ್ಯಾಸ್ಪದ. ಗ್ರಹಗಳ ಸ್ಥಾನಗಳು, ಶುಭ, ಅಶುಭ, ಸ್ನೇಹಪರ, ಶತ್ರುಗಳು, ಸೇಡಿನ ಭಾವನೆಯನ್ನು ಹೊಂದುವವು ಆಗುತ್ತವೆ ಎಂಬ ನಂಬಿಕೆ ಪ್ರಚಲಿತವಾಗಿದೆ. ನಮ್ಮ ಪ್ರಾಚೀನ ಜನಾಂಗದಲ್ಲಿ ತಪ್ಪಾಗಿ, ಒರಟು ಒರಟಾಗಿ ರೂಪಗೊಂಡ ವಿಚಾರಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಈ ಯುಗದಲ್ಲೂ ಹೆಚ್ಚಿನ ಪ್ರಭಾವವನ್ನು ಬೀರುತ್ತಿರುವುದು ದುರದೃಷ್ಟಕರ. ಸತ್ಯದ ಶೋಧನೆಗೆ ವಿಜ್ಞಾನದ ಮಾರ್ಗಗಳು ಪ್ರಬಲವಾದ ಸಾಧನಗಳು. ಈ ವಿಧಾನಗಳನ್ನು ಜ್ಯೋತಿಷ್ಯದ ಸತ್ಯಸಂಧತೆ ಅಥವಾ ಅಸತ್ಯವನ್ನು ನಿರ್ಧರಿಸಲು ಸಮರ್ಪಕವಾಗಿ ಉಪಯೋಗಿಸಿಕೊಳ್ಳ ಬಹುದು.
ಜ್ಯೋತಿಷ್ಯವು ರಾಹುಕಾಲ, ಗುಳಿಕಾಲ ಮತ್ತು ಯಮಗಂಡಕಾಲ ಈ ಮೂರು ಅಂಶಗಳನ್ನು ಅಡಿಪಾಯವಾಗಿ ಹೊಂದಿದೆ. ರಾಹು, ಕೇತು ಆಸ್ತಿತ್ವದಲ್ಲಿಯೇ ಇಲ್ಲದಿರುವಾಗ ರಾಹುಕಾಲ, ಗುಳಿಕಾಲಗಳಿಗೆ ಸಹಜವಾಗಿಯೇ ಯಾವ ಅರ್ಥವೂ ಇಲ್ಲ. ಜ್ಯೋತಿಷ್ಯದ ಪ್ರಕಾರ ರಾಹುಕಾಲದಲ್ಲಿ ಪ್ರಯಾಣ, ಮದುವೆ, ಧಾರ್ಮಿಕ ಕಾರ್ಯ ಈ ಬಗೆಯ ಶುಭಕಾರ್ಯಗಳನ್ನು ನಡೆಸ ಬಾರದು. ಈ ನಂಬಿಕೆ ನಿಜವಾದ ಪಕ್ಷದಲ್ಲಿ ರಾಹುಕಾಲದಲ್ಲಿ ಹೊರಟ ವಿಮಾನಗಳು, ರೈಲುಗಳು, ಬಸ್ಸುಗಳು ಅಪಘಾತಕ್ಕೆ ಒಳಗಾಗಬೇಕು. ಅಪಘಾತಕ್ಕೆ ಒಳಗಾಗ ಬೇಕು. ಅಪಘಾತಗಳ ಸ್ವರೂಪವನ್ನು ಸ್ಥೂಲವಾಗಿ ಪರೀಕ್ಷಿಸಿ ನೋಡಿದರೂ ಕೂಡ, ಅಪಘಾತಗಳಿಗೂ ವಾಹನಗಳು ಹೊರಟಕಾಲಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸಂಶಯವಿಲ್ಲದೆ ಗೊತ್ತಾಗುತ್ತದೆ. ನ್ಯೂಯಾರ್ಕ, ಚಿಕಾಗೋ, ಲಂಡನ್ ಅಂತಹ ವಿಮಾನ ನಿಲ್ದಾಣಗಳಲ್ಲಿ ಯಾವಾಗಲೂ ವಿಮಾನಗಳು ಬಂದು ಹೋಗುತ್ತಿರುತ್ತವೆ. ಅವುಗಳು ರಾಹುಕಾಲವನ್ನು ತಪ್ಪಿಸಲು ಕಾಯುವುದಿಲ್ಲ. ರೈಲು ಹೊರಡಲು ಹೊರಡಲು ಜ್ಯೋತಿಷ್ಯದ ಅನುಮತಿಯನ್ನು ಯಾರೂ ಕೇಳುವುದಿಲ್ಲ. ಆದರೆ ಎಲ್ಲ ದಿನಗಳು ಅಶುಭವಾದವು ಅಥವಾ ಶುಭವಾದವು ಎಂದು ತೋರಿಸಲು ಕಷ್ಟಪಡಬೇಕಾಗಿಲ್ಲ.
ಜಾತಕಗಳು ಕೂಡ ಜ್ಯೋತಿಷ್ಯದ ಆಧಾರಗಳ ಮೇಲೆ ರಚಿತವಾಗಿತ್ತವೆ. ವ್ಯಕ್ತಿಯು ಹುಟ್ಟಿದಾಗ ಕಂಡುಬರುವ ಗ್ರಹಗತಿಗಳ ಆಧಾರದಿಂದ ಜಾತಕಗಳನ್ನು ಬರೆಯಲಾಗುತ್ತದೆ. ವ್ಯಕ್ತಿಯ ಜೀವನದ ಎಲ್ಲ ಪ್ರಮುಖ ಘಟ್ಟಗಳು ಅದರಲ್ಲಿ ಸುರಕ್ಷಿತವಾಗಿ ಅಡಕವಾಗಿರುತ್ತದೆ ಎಂದು ನಂಬಿಕೆ ಇದೆ. ಗ್ರಹಗಳ ಸ್ಥಾನವು ವಿದ್ಯಾಭ್ಯಾಸ, ಮದುವೆ, ವಿದೇಶ ಪ್ರಯಾಣ, ಅಪಘಾತ, ಸಾವು ಇವುಗಳನ್ನೆಲ್ಲಾ ನಿರ್ಧರಿಸುತ್ತದೆ ಎಂದು ನಂಬುವುದು ಅರ್ಥರಹಿತ. ವಧು-ವರರಿಗಿಂತ ಗ್ರಹಗಳ ಪಾತ್ರ ಮದುವೆಯ ವ್ಯವಹಾರಗಳಲ್ಲಿ ಪ್ರಮುಖವಾಗಿ ಕಂಡುಬರುತ್ತದೆ. ಕೆಲವು ಜಾತಕಗಳು, ತಮ್ಮ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು, ಅವು ಭಾವಿ ಅತ್ತೆ ಅಥವಾ ಮಾವನ ಮೇಲೆ ದೃಷ್ಪರಿಣಾಮ ಬೀರುತ್ತವೆ ಎಂದು ತಿಳಿಸುತ್ತದೆ. ಆ ಗ್ರಹಗಳ ದುಷ್ಪರಿಣಾಮವನ್ನು ತಪ್ಪಿಸುವುದಕ್ಕಾಗಿ ತಂದೆ ಅಥವಾ ತಾಯಿ ಬದುಕಿಲ್ಲದೆ ಇರುವ ವಧು-ವರರನ್ನು ಹುಡುಕಲಾಗುತ್ತದೆ.
ವಧು-ವರರ ಜಾತಕಗಳು ಅತ್ಯಂತ ಸಮರ್ಪಕವಾಗಿ ಕೂಡಿ ಬಂದಿದ್ದನ್ನು ಗಮನಿಸಿಯೇ ಆದ ಎಷ್ಟೋ ಮದುವೆಗಳು ಯಶಸ್ವಿಯಾಗಿ ಇಲ್ಲದೆ ಇರುವುದಕ್ಕೆ ನಿದರ್ಶನಗಳಿವೆ. ಈ ಗುಂಪಿನಲ್ಲಿ ಜಾತಕ ಸೂಚಿಸುವುದಕ್ಕಿಂತ ಮುಂಚೆಯೇ ಕಂಡುಬರುವ ವಿಧವೆ-ವಿಧುರರು ದೊರೆಯುತ್ತಾರೆ. ಸಾಮಾನ್ಯವಾಗಿ ಪ್ರಸಿದ್ಧ ಜ್ಯೋತಿಷಿಗಳು ಬಹಳ ಮಟ್ಟಿನ 'ನಂಬಿಕೆ' ಗೆ ಅರ್ಹರೆಂದು ಭಾವಿಸಲಾಗುತ್ತಿದೆ. ಆದರೆ ಇವರ ಲೆಕ್ಕಾಚಾರಗಳು ಸುಳ್ಳಾಗುವುದು ಬೇಕಾದಷ್ಟು ಸಾರಿ ಕಂಡುಬರುತ್ತದೆ. ಪ್ರಸಿದ್ಧ ಜ್ಯೋತಿಷಿಗಳು ಒಪ್ಪಿದ ಜಾತಕಗಳ ಪ್ರಕಾರ ನಡೆದ ಮದುವೆಗಳಲ್ಲೂ ಅನಿರೀಕ್ಷಿತ ದುರಂತಗಳು, ಸಂಸಾರ ವಿರಸ, ತಪ್ಪು ತಿಳುವಳಿಕೆ, ಅಸುಖವು ಕಂಡಬುವುದರಿಂದ ಅವರನ್ನು ನಂಬಿಕೆಗೆ ಅನರ್ಹರಾದ ಜ್ಯೋತಿಷಿಗಳ ಸಾಲಿನಲ್ಲಿಯೇ ಸೇರಿಸಬೇಕಾಗುತ್ತದೆ. ಜಗತ್ತಿನಲ್ಲಿಯೇ ಶೇ ೯೦ಕ್ಕೆ ಹೆಚ್ಚು ಜನರ ಮದುವೆಗಳು ಯಾವುದೇ ಜಾತಕವಿಲ್ಲದೆ ನಡೆಯುತ್ತವೆ. ಅವರ ವಿವಾಹಗಳು ಉಳಿದವರಂತೆ ಸುಖವೋ ಅಥವಾ ಅಸುಖವೋ ಆಗಿರುತ್ತದೆ. ಹೀಗೆ ವಿಶ್ವಮಾನ್ಯತೆ ಇಲ್ಲದೆ ಇರುವ ಜ್ಯೋತಿಷ್ಯ ಎಂದಿಗೂ ವಿಜ್ಞಾನ ಆಗಲಾರದು.
ಪ್ರಕೃತಿಯ ವಿಕೋಪದ ಸಂದರ್ಭದಲ್ಲಿ ಕಾಣುವ ಸಾವಿನ ಸನ್ನಿವೇಶಗಳು ವಿಶ್ಲೇಷಿಸಿದಾಗ ಕೂಡ ಈಗಾಗಲೇ ದುರ್ಬಲರಾಗಿರುವ, ತಪ್ಪುದಾರಿಯಲ್ಲಿ ಹೋಗುತ್ತಿರುವ ಜ್ಯೋತಿಷ್ಯದ ಮೇಲೆ ಮಾರಕ ಪರಿಣಾಮಗಳನ್ನುಂಟು ಮಾಡುತ್ತದೆ. ವಿಮಾನ ಅಪಘಾತದಲ್ಲಿ ಸತ್ತ ಎಲ್ಲ ದುರದೃಷ್ಟಶಾಲಿಗಳ ಜಾತವಕವೂ ಒಂದೇ ಸೂಚನೆಯನ್ನು ಕೊಡುತ್ತದೆ ಎಂದು ಅಭಿಪ್ರಾಯಪಡುವುದು ತೀರ ಅಸಂಗತ. ಇದೇ ರೀತಿ ಚಂಡಮಾರುತ ಅಥವಾ ಭೂಕಂಪಕ್ಕೆ ಬಲಿಯಾದ ಎಲ್ಲ ವ್ಯಕ್ತಿಗಳ ಜಾತಕದಲ್ಲೂ ಅವನ ಸಾವಿನ ದಿನ ಒಂದೇ ರೀತಿಯಲ್ಲಿ ಸೂಚಿತವಾಗಿರುತ್ತದೆ ಎಂದು ಹೇಳುವುದು ಅಷ್ಟೆ ಅಸಂಬದ್ಧವಾದುದು.
ಜ್ಯೋತಿಷ್ಯದ ಪ್ರಕಾರ ಚಂಡಮಾರುತ್ತಕ್ಕೆ ಅಥವಾ ಭೂಕಂಪಕ್ಕೆ ಬುದ್ಧಿವಂತಿಕೆ ಹಾಗೂ ಸಮಯೋಚಿತ ಬುದ್ಧಿ ಇರಬೇಕು. ಅವು ಯಾವ ಜಾತಕಗಳಲ್ಲಿ ಒಂದೇ ದಿನ ಸಾವಿನ ಭವಿಷ್ಯ ಬರೆದಿದೆಯೊ ಅಂತಹವರನ್ನು ಮಾತ್ರ ಹುಡಿಕಿಕೊಂಡು ಮರಣಕ್ಕೆ ಕಾರಣವಾಗಬೇಕು. ಚಂಡಮಾರುತ ಬೀಸಿದ ಪ್ರದೇಶಗಳಲ್ಲಿ ಸುರಕ್ಷಿತವಾದ ಮನೆಗಳಲ್ಲಿ ವಾಸಮಾಡುವ ಶ್ರೀಮಂತರ ಅಥವಾ ಭೂಕಂಪಗಳಿಂದ ರಕ್ಷಿಸಲ್ಪಡುವ ಪ್ರದೇಶಗಳಲ್ಲಿ ಇರುವ ಪ್ರದೇಶದ ಜನರ ಜಾತಕಗಳು ಸಾವಿಗೀಡಾದ ಬಡವರಿಗಿಂತ ಉತ್ತಮ ಅದೃಷ್ಟವನ್ನು ಹೊಂದಬೇಕು. ಅವಳಿ ಮಕ್ಕಳ ಜಾತಕಗಳು ಒಂದೇ ರೀತಿಯಲ್ಲಿ ಇರುತ್ತದೆಂಬುದು ತರ್ಕ ಒಪ್ಪುವ ಮಾತು. ಆದರೆ ಅನೇಕ ಸಂದರ್ಭಗಳಲ್ಲಿ ಇಬ್ಬರ ಅವಳಿ ಮಕ್ಕಳ ಮನೋಭಾವದಲ್ಲಿ ಆಸಕ್ತಿಗಳಲ್ಲಿ ಹಾಗೂ ಸಾಧನೆಗಳಲ್ಲಿ ಅಜಗಜಾಂತರವಿರುತ್ತದೆ. ಈ ಅಂಶ ಕೂಡ ಜ್ಯೋತಿಷ್ಯದ ಟೊಳ್ಳುತನವನ್ನು ವ್ಯಕ್ತಪಡಿಸ ಬಲ್ಲದು.
ಜ್ಯೋತಿಷಿಗಳ ಭವಿಷ್ಯವಾಣಿಯು ಓದಲು ತಮಾಷೆಯಾಗಿರುತ್ತದೆ. ಅವು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಇದ್ದು, ಒಂದಕ್ಕಿಂತ ಹೆಚ್ಚು ಅರ್ಥವನ್ನು ಕೊಡುತ್ತಿರುತ್ತವೆ. ದಿನ ಪತ್ರಿಕೆಗಳಲ್ಲಿ ಮತ್ತು ವಾರಪತ್ರಿಕೆಗಳಲ್ಲಿ ಕಂಡುಬರುವ ಭವಿಷ್ಯದ ಸ್ವರೂಪ ಎಲ್ಲ ವಾರಗಳಲ್ಲೂ ಒಂದೇ ರೀತಿಯ ಸ್ಥೂಲವಿವರಣೆಯನ್ನು ಹೊಂದಿರುತ್ತದೆ. ಚುನಾವಣೆಯ ಮೊದಲ ಸಮೀಕ್ಷೆಯಷ್ಟೇ ಊಹೆಗೆ ಒಳಪಟ್ಟಿರುತ್ತದೆ. ಆದರೆ ಜ್ಯೋತಿಷಿ ತನ್ನ ಭವಿಷ್ಯದಲ್ಲಿ ಅಲ್ಲಲ್ಲಿ ಬುಧ, ಶನಿ, ರಾಹು, ಇತ್ಯಾದಿಗಳ ಪ್ರಭಾವವನ್ನು ಸೂಚಿಸಿರುತ್ತಾನೆ ಅಷ್ಟೆ.
ಇಬ್ಬರು ಜ್ಯೋತಿಷಿಗಳ ಅಭಿಪ್ರಾಯಗಳಲ್ಲಿ ಸಾಮಾನ್ಯವಾಗಿ ಯಾವ ಹೊಂದಿಕೆಯೂ ಇರುವುದಿಲ್ಲ. ಇಬ್ಬರಿಗೂ ತಮ್ಮದೆ ಆದ ಜ್ಯೋತಿಶಾಸ್ತ್ರವಿರಬೇಕೆಂದು ತೋರುತ್ತದೆ. ಹೀಗಿದ್ದರೂ ಜ್ಯೋತಿಷ್ಯ ವಿಜ್ಞಾನದ ಪಟ್ಟ ಪಡೆದುಕೊಳ್ಳಬೇಕು.
ಇಬ್ಬರು ಜ್ಯೋತಿಷಿಗಳ ಭವಿಷ್ಯದಲ್ಲಿ ಭಿನ್ನಾಭಿಪ್ರಾಯ ಇರುವುದು ಇರಲಿ, ಒಬ್ಬನೇ ಜ್ಯೋತಿಷಿಯ ಭವಿಷ್ಯವು ಕೂಡ ಗೊಂದಲದಿಂದ ಕೂಡಿದ್ದು ಸತ್ಯಕ್ಕೆ ಬಹಳ ದೂರದಲ್ಲಿ ಇರುತ್ತದೆ. ಎಲ್ಲ ರೀತಿಯ ಸಾಧ್ಯತೆಗಳ ಬಗ್ಗೆಯೂ ಹಲವಾರು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾಗ ಯಾರಾದರೂ ಒಬ್ಬರ ಮಾತು ನಿಜವಾಗಿ ನಡೆಯುವ ಸಂಗತಿಗಳೊಂದಿಗೆ ಸರಿಹೊಂದುವುದು ಆಶ್ಚರ್ಯವೇನೂ ಅಲ್ಲ. ಇದು ಜ್ಯೋತಿಷ್ಯದ ಅದಿಕೃತತೆಯನ್ನು ಸೂಚಿಸುವುದಿಲ್ಲ. ಕೆಟ್ಟುಹೋದ ಗಡಿಯಾರ ಕೂಡ ದಿನದಲ್ಲಿ ಎರಡು ಸಾರಿ ಸರಿಯಾದ ವೇಳೆ ಸೂಚಿಸುತ್ತದೆ. ಕೋತಿಯೊಂದು ಟೈಪ್‌ರೈಟರ್‌ನ ಅಚ್ಚಿನ ಮೊಳೆಯನ್ನು ಒತ್ತುವಂತೆ ಮಾಡಿದಾಗ ಅದು ಅಕಸ್ಮಿಕವಾಗಿ ಯಾವುದೋ ಒಂದು ಪದ ಅಥವಾ ಷೇಕ್ಸ್‌ಪಿಯರ್‌ನ ದ್ವಿಪದಿಯೇ ಆಗಿರಬಿಡಬಹುದು. ಹೀಗೆಂದ ಮಾತ್ರಕ್ಕೆ ಕೋತಿಗೆ ಟೈಪಿಂಗ್ ಕಲೆ ಅಥವಾ ಷೇಕ್ಸ್‌ಪಿಯರ್‌ನ ಪರಿಜ್ಞಾನ ಇದೆಯೆಂದು ಅರ್ಥವಲ್ಲ.
ಕೆಲವು ಸಂದರ್ಭಗಳಲ್ಲಿ ಮುಂದಿನ ವರ್ಷದಲ್ಲಿ ಇಬ್ಬರು ಮಹಾನ್ ವ್ಯಕ್ತಿಗಳ ಸಾವಿನ ಸೂಚನೆಯಿಂದ ಎಂಬಂತಹ ಭವಿಷ್ಯವಾಣಿಯನ್ನು ನೋಡುತ್ತೇವೆ. ಒಂದು ವರ್ಷದಲ್ಲಿ ಇಬ್ಬರು ಸಾಯುವುದು ಖಚಿತ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ದೊಡ್ಡ ವ್ಯಕ್ತಿಗಳಾದ್ದರಿಂದ ಜ್ಯೋತಿಷಿಯ ಭವಿಷ್ಯ ನಿಜವಾಲೇಬೇಕು. ಹೆಣ್ಣುಮಕ್ಕಳಿಗೆ ಜನ್ಮವಿತ್ತ ತಾಯಿಯೊಬ್ಬಳಿಗೆ ಜ್ಯೋತಿಷಿಯೊಬ್ಬರು ಈ ಸಾರಿ ಗಂಡುಮಗುವಿನ ಜನನವಾಗುತ್ತದೆ ಎಂಬ ಭವಿಷ್ಯ ನುಡಿದಿದ್ದರು. ಸಂಭ್ರಮದಲ್ಲಿದ್ದ ಆಕೆ ಮತ್ತೆ ಹೆಣ್ಣುಮಗುವಿನ ತಾಯಿಯಾದಳು. ಬೇಜಾರಿನಿಂದ ಅವಳು ಜ್ಯೋತಿಷ್ಯದ ಬಗ್ಗೆ ಕೋಪ ವ್ಯಕ್ತಪಡಿಸಿದಾಗ ಅವನು ಗೋಡೆಯ ಮೇಲೆ 'ಹೆಣ್ಣುಮಗು' ಎಂದು ಬರೆದಿದ್ದನ್ನು ತೋರಿಸಿ, ಪ್ರಸವದ ಸಂದರ್ಭದಲ್ಲಿ ಸಂತೋಷವಾಗಿರಲೆಂದು ಉದ್ದೇಶಪೂರ್ವಕವಾಗಿಯೇ ತಾನು ಹೀಗೆ ಹೇಳಿದ್ದೆನೆಂದು ಉತ್ತರ ಕೊಟ್ಟನಂತೆ. ಜ್ಯೋತಿಷಿ ಮತ್ತು ಭವಿಷ್ಯ ಕೇಳಿದ ವ್ಯಕ್ತಿಗಳಲ್ಲಿಯೇ ಸಮಸ್ಯೆ ಇದ್ದಾಗ ಇಂತಹ ಜಾಣತನದ ತಂತ್ರಗಳು ಸಾಮಾನ್ಯವಾಗಿ ಉಪಯೋಗವಾಗುತ್ತವೆ. 'ಇಲ್ಲಸ್ಟ್ರೇಟಡ್ ವೀಕ್ಲಿ' ಪತ್ರಿಕೆಯ ಸಂಪಾದಕೀಯವೊಂದರಲ್ಲಿ ೧೯೭೭ರ ಚುನಾವಣೆಯ ನಂತರ ಕೇಳಿ ಬಂದ ವರದಿಯ ಪ್ರಸ್ತಾಪದ ಬಗ್ಗೆ ನೆನಪಿನಿಂದ ಹೇಳುತ್ತಿದ್ದೇನೆ. ಪತ್ರಿಕೆಗೆ, ಮುಂದಿನ ಪ್ರಧಾನಿ ಯಾರೆಂಬುದರ ಬಗ್ಗೆ ವಿಭಿನ್ನವಾದ ಹಲವಾರು ಸೂಚನೆಗಳು ಜ್ಯೋತಿಷಿಗಳಿದ ಬಂದಿತ್ತು. ಅವಗಳಲ್ಲಿ ಸಂಪಾದಕರು ಗುಜರಾತ್ ರಾಜ್ಯದವರು ಪ್ರಧಾನಮಂತ್ರಿ ಆಗಬಹುದು ಎಂಬ ಸೂಚನೆಯನ್ನು ಆರಿಸಿಕೊಂಡಿದ್ದರು. ಅದರ ಪ್ರಕಾರ ಅವರು ಹೆಚ್ಚು ದಿನಗಳು ಅಧಿಕಾರದಲ್ಲಿ ಇರುವುದಿಲ್ಲ, ಗುಜರಾತ್ ಅಥವಾ ಉತ್ತರ ಪ್ರದಶದವರು ಪ್ರಧಾನಮಂತ್ರಿ ಆಗುತ್ತಾರೆ ಎಂದು ಚುನಾವಣೆಯ ನಂತರ ಹೇಳುವುದು ಸಾಮಾನ್ಯ ತಿಳುವಳಿಕೆ. ಇದಕ್ಕೆ ಜ್ಯೋತಿಷ್ಯದ ಜ್ಞಾನ ಬೇಕಾಗುವುದಿಲ್ಲ. ಪ್ರಧಾನಮಂತ್ರಿಯ ಅಧಿಕಾರದ ಅವಧಿಯ ಬಗ್ಗೆ ಹೇಳಿದ ಭವಿಷ್ಯ ಯಾವ ರೀತಿ ಸುಳ್ಳಾಯಿತು ಎಂಬುದು, ಜ್ಯೋತಿಷ್ಯದ ಅಸಮರ್ಥತೆಗೆ ಮತ್ತೊಂದು ನಿದರ್ಶನ. ಜ್ಯೋತಿಷ್ಯ, ಪ್ರದೇಶಗಳನ್ನು, ರಾಜಕೀಯ ಪಕ್ಷಗಳನ್ನು ಗುರುತಿಸಿಕೊಳ್ಳುವುದು ಗಮನಾರ್ಹ.
ತಪ್ಪು ಭವಿಷ್ಯ ಹೇಳುವರು ನಕಲಿ ಜ್ಯೋತಿಷಿಗಳೆಂದು, ಜ್ಯೋತಿಷಿಗಳು ಹೇಳುವದು ಉಂಟು. ನಿಖರವಾಗಿ ಯಾರೇ ಒಬ್ಬ ಜ್ಯೋತಿಷಿ ಭವಿಷ್ಯ ನುಡಿದು, ಭವಿಷ್ಯ ಸುಳ್ಳಾಗುವುದಕ್ಕೆ ತರ್ಕಬದ್ಧವಾಗಿ ಕಾರಣ ಕೊಟ್ಟರೆ ಸ್ವಲ್ಪ ಮಟ್ಟಗೆ ಜ್ಯೋತಿಷ್ಯಕ್ಕೆ ಬೆಲೆ ಕೊಡಬಹುದು. ವಿಜ್ಞಾನಕ್ಕೆ ಸಂಬಂಧಿಸಿದಂತೆ ಏನೇ ತಪ್ಪಾದರೂ, ಅದರ ಬಗ್ಗೆ ಆಳವಾದ ಪರಿಶೀಲನೆ ನಡೆದು ಸೋಲಿಗೆ ಕಾರಣವನ್ನು ವಿಶ್ಲೇಷಿಸಿ ತಿದ್ದಕೊಳ್ಳಲು ಸಾಧ್ಯವಾಗುತದೆ. ನಮಗೆಲ್ಲಾ ತಿಳಿದುವಂತೆ ವಿಮಾನ ಅಪಘಾತದ ವಿವರವಾದ ತಪಾಸಣೆ ಅದರ ಮುಂದಿನ ಪ್ರಯಾಣದ ಬಗ್ಗೆ ಮತ್ತಷ್ಟು ಎಚ್ಚರಿಕೆ ತೆಗೆದುಕೊಳ್ಳುವಂತೆ ಸಹಾಯ ಆಗುತ್ತದೆ.
ಜೀವನದಲ್ಲಿ ಎಲ್ಲವೂ ಪೂರ್ವ ನಿರ್ಧಾರಿತವಾಗುತ್ತದೆಂಬ ವಿಧಿವಾದವನ್ನು ಜ್ಯೋತಿಷ್ಯ ತಿಳಿಸುತ್ತದೆ. ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದಂತೆ ಈ ನಿಯಮ ಅಷ್ಟೊಂದು ಕರಾರುವಕ್ಕಾಗಿ ಇರುವುದಿಲ್ಲ. ಆಗ ಬುದ್ಧಿವಂತ ಜ್ಯೋತಿಷಿಗಳು ಗ್ರಹಗಳ ಪ್ರಭಾವವನ್ನು ತರುತ್ತಾರೆ. ಈ ಅಂಶವನ್ನು ಜನರ ಶೋಷಣೆಗೆ ಜ್ಯೋತಿಷಿಗಳು ಉಪಯೋಗಿಸಿಕೊಳ್ಳುತ್ತಾರೆ. ಜನರು ನಿರಾಶೆಯಲ್ಲಿದ್ದಾಗ, ಸಮಸ್ಯೆಗಳಲ್ಲಿ ಇದ್ದಾಗ ಜ್ಯೋತಿಷಿಗಳ ಮೊರೆಹೋಗುತ್ತಾರೆ. ಗ್ರಹಗಳ ಅನಿಷ್ಟ ಗತಿಯಿಂದ ಉಟಾಂಗುವ ಘೋರ ಪರಿಣಾಮಗಳನ್ನು ಜ್ಯೋತಿಷಿಗಳು ಅವರಿಗ ತಿಳಿಸುತ್ತಾರೆ. ಆ ಅಮಂಗಳ ನಿವಾರಣೆಯು ಶಾಂತಿ, ಪೂಜೆಗಳಿಂದ ಪರಿಹಾರವಾಗುತ್ತದೆಂಬ ಸ್ವಾಂತನವನ್ನು ಕೊಡುತ್ತಾರೆ. ಅದಕ್ಕಾಗಿ ಖರ್ಚಾಗುವ ಹೆಚ್ಚಿನ ಹಣದ ಬಗ್ಗೆ ಹೇಳಲು ಮರೆಯುವುದಿಲ್ಲ. ಅವರ ಮಾರ್ಗದರ್ಶನವನ್ನು ಬಯಸುವ ಯಾರೂ ಅವರ ಅಭಿಪ್ರಾಯಗಳನ್ನು ತಿರಸ್ಕರಿಸುವುದಿಲ್ಲ. ಜ್ಯೋತಿಷಿಗಳ ಮಧ್ಯಸ್ಥಿಕೆಗಾರರು 'ಅಲೌಕಿಕ' ಗ್ರಹಗಳ ಪರಿಣಾಮಗಳನ್ನು ಲೌಕಿಕ ಪ್ರಯೋಜನಗಳಿಗಾಗಿ ಹೆಚ್ಚು ಕಡಿಮೆ ಮಾಡಲು ಸಮರ್ಥರಾಗಿರುತ್ತಾರೆ. ಬಹಳ ಮುಖ್ಯವಾಗಿ ಜ್ಯೋತಿಷ್ಯ ಮುಗ್ಧ ಜನರನ್ನು ಭಯದಲ್ಲಿರಿಸಿ ಅವರ ಸುಲಿಗೆಗೆ ಕಾರuವಾಗುತ್ತದೆ. ಜ್ಯೋತಿಷ್ಯ ಒಂದು ವಾಣಿಜ್ಯವಾಗಿದೆ.
ಜ್ಯೋತಿಷಿಗಳು ಹೇಳದೇ ಇದ್ದ ಹಲವಾರು ಮುಖ್ಯ ಘಟನೆಗಳು ಸಂಭವಿಸಿದ್ದು, ಗಮನಿಸಬೇಕಾದ್ದು. ಜೂನ್ ೧೯೭೫ರಲ್ಲಿ ತುರ್ತುಪರಿಸ್ಥಿತಿ ಘೋಷಣೆ ಆಗುತ್ತದೆಂದು ಯಾವು ಜ್ಯೋತಿಷಿಯೂ ಭವಿಷ್ಯ ನುಡಿಯಲಿಲ್ಲ. ಚರಿತ್ರಾಹವಾದ ೧೯೭೭ರ ಚುನಾವಣೆಯ ಬಗ್ಗೆಯೂ ಯಾವುದೇ ಭವಿಷ್ಯ ಕೇಳಿಬರಲಿಲ್ಲ. ದೇಶದ ಇತಿಹಾಸದ ದೃಷ್ಟಿಯಿಂದ ಮಹತ್ತರ ಪರಿಣಾಮ ಬೀರಿದ ಈ ಎರಡು ಘಟನೆಗಳ ಬಗ್ಗೆ ಏನೂ ತಿಳಿಸದೆ ಇದ್ದುದಕ್ಕೆ ಜ್ಯೋತಿಷಿಗಳು ಯಾವ ನೆಪ ಹೇಳುವರೊ ನನಗೆ ಗೊತ್ತಿಲ್ಲ. ೧೯೭೭ರ ಚುನಾವಣೆ ಫಲಿತಾಂಶದ ಬಗ್ಗೆ ಕೂಡ ಯಾರೂ ಮುನ್ಸೂಚನೆ ಕೊಟ್ಟಿರಲಿಲ್ಲ. ಸಾವಿರಾರು ಜನರಿಗೆ ಸಾವು ನೋವುಗಳನ್ನು ಉಂಟುಮಾಡಿದ ಇತ್ತೀಚಿನ ಚಂಡಮಾರುತದ ಬಗ್ಗೆ ಜ್ಯೋತಿಷಿಗಳು ಜನರಿಗೆ ಏನೂ ಸೂಚಿಸಿರಲಿಲ್ಲ.
ದಿನನಿತ್ಯದ ಘಟನೆಗಳನ್ನು ವಿಶ್ಲೇಷಿಸಿದಾಗ ಜ್ಯೋತಿಷ್ಯದ ಅಧಿಕೃತತೆ ನಿರಾಕರಣೆ ಆಗುವುದನ್ನು ಮೇಲಿನ ಎಲ್ಲ ಉದಾಹರಣೆಗಳು ತಿಳಿಸಬಲ್ಲವು. ಅನೇಕ ಜನ ಸಿಕ್ಷಣವನ್ನು ಪಡೆದವರು, ವಿಜ್ಞಾನಿಗಳು, ಜ್ಯೋತಿಷ್ಯವನ್ನು ನಂಬುವುದು ಶೋಚನೀಯ ವಿಚಾರ. ಪ್ರಯೋಗಶಾಲೆಯಲ್ಲಿ ವಿಚಾರವಾದಿಯಾದ ವಿಜ್ಞಾನಿ ಜೀವನದ ಸಮಸ್ಯೆಗಳನ್ನು ಎದುರಿಸುವಾಗ ವಿಚಾರಕ್ಕೆ ಮಂಗಳ ಹಾಡುವುದು ಕಂಡುಬರುತ್ತದೆ. ಜ್ಯೋತಿಷ್ಯವೂ ಉಳಿದ ಮೂಢನಂಬಿಕೆಗಳಂತೆ ಸ್ವತಂತ್ರ ಆಲೋಚನೆ ಮತ್ತು ಆತ್ಮವಿಶ್ವಾಸಕ್ಕೆ ಧಕ್ಕೆಯನ್ನು ತರುತ್ತದೆ. ಈ ರೀತಿಯ ಮೂಢನಂಬಿಕೆಗಳಿಂದ ಉಂಟಾಗುವ ಪರಿಸರ ಮಾಲಿನ್ಯವು ವಾಯು, ಜಲ, ಮಾಲಿನ್ಯಗಳಿಗಿಂತ ಹೆಚ್ಚು ಅಪಾಯಕಾರಿ.
ಖಗೋಳಸ್ತ್ರವು ವಿಜ್ಞಾನವಾಗಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ. ಜ್ಯೋತಿಷ್ಯ ಮಾತ್ರ ತನ್ನ ಪುರಾತನ ನಂಬಿಕೆ ಹಾಗೂ ತಪ್ಪುಗ್ರಹಿಕೆಗಳನ್ನೇ ಹೊಂದಿದೆ. ಈಗಲೂ ನವಗ್ರಹಗಳು ಜ್ಯೋತಿಷ್ಯದ ದಾರಿಯನ್ನು ತೋರಿಸುತ್ತವೆ. ಇವುಗಳಲ್ಲಿ ನಾಲ್ಕು ಗ್ರಹಗಳೇ ಅಲ್ಲ. ಆದರೆ ಯುರೆನೆಸ್, ನೆಪ್ಚೂನ್, ಪ್ಲೇಟೋ ಅಂತಹ ಹೊಸ ಗ್ರಹಗಳನ್ನು ವಿಜ್ಞಾನಿಗಳು ಕಂಡಹಿಡಿದರು. ಆದರೆ ಅವು ಇನ್ನೂ ತಮ್ಮನ್ನು ಗುರುತಿಸಲು ಜ್ಯೋತಿಷ್ಯಿಗಳನ್ನೇ ಕೇಳಿಕೊಳ್ಳುತ್ತಿವೆ. ಬಹುಮಂದಿ ಜ್ಯೋತಿಷ್ಯಿಗಳಿಗೆ ಇವುಗಳ ಆಸ್ತಿತ್ವದ ವಿಚಾರವೇ ತಿಳಿದಿಲ್ಲ.
ನಮ್ಮ ದೇಶದಲ್ಲಿ ಸಾಮಾಜಿಕ ಕೆಳಸ್ತರದಿಂದ ಬಂದ ಜನರು ಶಿಕ್ಷಣವನ್ನು ಮೊದಲ ಬಾರಿಗೆ ಪಡೆದುಕೊಂಡಾಗ ಅವರಲ್ಲಿ ರೂಪಗೊಳ್ಳುತ್ತಿರುವ ಮನೋಭಾವ ಕೂಡ ಅಪಾಯಕಾರಿ. ಕೀಳರಿಮೆಯಿಂದ ಬಳಲುತ್ತಿರುವ ಅವರ ತರ್ಕಹೀನವಾದ 'ಮುಂದುವರಿದ' ಶಿಕ್ಷಣ ಪಡೆದ ಜನರ ಮನೋಭಾವವನ್ನು ಅನುಕರಿಸುತ್ತಾರೆ. ಜ್ಯೋತಿಷ್ಯದಂತಹ ಪ್ರಗತಿ ವಿರೋಧಿ ನಂಬಿಕೆಗಳನ್ನು ಹೊಂದುವುದು ಸಾಮಾಜಿಕ ಅಂತಸ್ತಿನ ಗುರುತಾಗಿದೆ. ವ್ಯಕ್ತಿಯ ಒಳಿತಿಗಾಗಿ ಅಥವಾ ಸಮಾಜದ ಒಳಿತಿಗಾಗಿ ಈ ರೀತಿ ಮನೋಧರ್ಮ ಹೆಚ್ಚಿನ ಹಾನಿಯನ್ನುಂಟುಮಾಡುವ ಅವಿವೇವಕವಾಗಿದೆ. ಈ ರೀತಿ ಹೊಸದಾಗಿ ಪರಿವರ್ತಿತರಾದವರು ಅಲ್ಲಿಯೇ ಶತಮಾನಗಳಿಂದ ಇದ್ದವರಿಗಿಂತ ಹೆಚ್ಚಿನ ಅಭಿಮಾನವನ್ನು ಹೊಂದಿರುತ್ತಾರೆ.
ಜ್ಯೋತಿಷ್ಯದ ಬಗ್ಗೆ ಹಲವಾರು ಜನ ಮಹಾನ್ ವ್ಯಕ್ತಿಗಳು ತಿಳಿಸಿರುವ ಅಭಿಪ್ರಾಯಗಳು ಮಹತ್ವಪೂರ್ಣವಾಗಿವೆ. ಬುದ್ಧರು ತನ್ನ ವಿನಯ ಪೀಟಿಕಾ ಗ್ರಂಥದಲ್ಲಿ ನಕ್ಷತ್ರಗಳ ಲೆಕ್ಕಾಚಾರದಂತಹ ತಂತ್ರಗಳಿಂದ ಜೀವನ ನಡೆಸುತ್ತಾರೊ ಇವರಿಂದ ದೂರವಿರಬೇಕು ಎಂದು ಎಚ್ಚರಿಸುತ್ತಾನೆ.
ನಕ್ಷತ್ರ ವೀಕ್ಷಣೆ ಮತ್ತು ಜ್ಯೋತಿಷ್ಯ, ಶಕುನಗಳ ಆಧಾರದಿಂದ ಶುಭ ಅಥವಾ ಅಶುಭವನ್ನು ತಿಳಿಸುವುದು, ಒಳಿತು, ಕೆಡುಕುಗಳ ಬಗ್ಗೆ ಭವಿಷ್ಯ ನುಡಿಯುವುದು ಇಂತಹವುಗಳನ್ನೆಲ್ಲಾ ತ್ಯಜಿಸಬೇಕು ಎಂಬ ಅಭಿಪ್ರಾಯ ಬುದ್ಧನ ಉಪದೇಶಗಳಲ್ಲಿ ಕಂಡುಬರುತ್ತದೆ. ಮನುಷ್ಯನ ಭವಿಷ್ಯದ ನಿರ್ಣಯಕ್ಕೆ ಅವನೆ ಕಾರಣ ಎಂದು ದೃಢವಾಗಿ ನಂಬಿದ್ದ ಸ್ವಾಮಿ ವಿವೇಕಾನಂದ ಅವರು ಜ್ಯೋತಿಷ್ಯದ ಬಗ್ಗೆ ಕಟುವಾದ ಅಭಿಪ್ರಾಯ ಪಡುತ್ತಾರೆ. 'ನಕ್ಷತ್ರಗಳ ಪ್ರಭಾವ ನನ್ನ ಮೇಲೆ ಆಗುವುದಾದರೆ ಆಗಲಿ, ಅದು ನನ್ನ ಜೀವನದ ಮೇಲೆ ಪ್ರಭಾವ ಬೀರದರೆ ಅದಕ್ಕೆ ಯಾವ ಬೆಲೆಯೂ ಇಲ್ಲ. ಜ್ಯೋತಿಷ್ಯ ಮತ್ತಿತರ ಸಂಗತಿಗಳು ಸಾಮಾನ್ಯವಾಗಿ ದುರ್ಬಲ ಮನಸ್ಸಿನ ಗುರುತುಗಳು. ಇಂತಹವುಗಳು ಬದುಕಿನಲ್ಲಿ ಪ್ರಾಮುಖ್ಯ ಪಡೆದುಕೊಂಡ ಕೂಡಲೆ ವೈದ್ಯರನ್ನು ಕಂಡು ಉತ್ತಮ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳುವುದು ಒಳ್ಳೆಯದು' ಎಂಬುದು ವಿವೇಕಾನಂದರ ಅಭಿಪ್ರಾಯ.
ಅಧ್ಯಾಪಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು, ಯಾವುದೇ ಶಿಕ್ಷಣ ಕ್ರಮದ ಉದ್ದೇಶವಾಗಬೇಕು. ಪ್ರಶ್ನಿಸದೆ, ಪರಿಶೀಲಿಸದೆ ಯಾವುದನ್ನೂ ಒಪ್ಪಿಕೊಳ್ಳಬಾರದು. ಅದು ಭಗವದ್ಗೀತೆ, ಬೈಬಲ್ ಅಥವಾ ಕುರಾನ್ ಆಗಿರಲಿ, ವೈಜ್ಞಾನಿಕವಾದ ಆಲೋಚನೆಗಳಿಗೆ ತೃಪ್ತಿಯನ್ನುಂಟು ಮಾಡಬೇಕು. ಸಮಾಜದ ಸುಧಾರಣೆ ಶಿಕ್ಷಣದ ಒಂದು ಉದ್ದೇಶ. ನಮ್ಮ ಶಿಕ್ಷಣ ಪದ್ಧತಿ ಅವಿದ್ಯಾವಂತ ಮೂಢನಂಬಿಕೆಯುಳ್ಳವನನ್ನು ವಿದ್ಯಾವಂತ ಮೂಢನಂಬಿಕೆಯುಳ್ಳವನನ್ನಾಗಿ ಪರಿವರ್ತಿಸುತ್ತದೆ. ಇವರಿಬ್ಬರಲ್ಲಿ ಯಾರು ಹೆಚ್ಚು ಅಪಾಯಕಾರಿ ಎಂಬುದು ನಮಗೆಲ್ಲ ಗೊತ್ತು.
ವಿಶ್ವವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಕೊಡುತ್ತಿರುವ ಸಂಸ್ಥೆಗಳು ಜ್ಯೋತಿಷ್ಯ, ಹಸ್ತ ಸಾಮುದ್ರಿಕ, ಪವಾಡದಂತಹ ಪ್ರಗತಿವಿರೋಧೀ ಅಂಶಗಳ ವೈಜ್ಞಾನಿಕ ತಪಾಸಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು.
ದೊರೆತಿರುವ ಆಧಾರಗಳ ಸಹಾಯದಿಂದ ನಾನು ಜ್ಯೋತಿಷ್ಯವನ್ನು ಕುರಿತು ವಿಶ್ಲೇಷಿಸಿದ್ದೇನೆ. ಇದರಿಂದ ಜ್ಯೋತಿಷ್ಯವು ಸಂಪೂರ್ಣವಾಗಿ ಅವೈಜ್ಞಾನಿಕ ಎಂಬ ತೀರ್ಮಾನಕ್ಕೆ ಬರಬಹುದು. ವಿಜ್ಞಾನದ ವಿದ್ಯಾರ್ಥಿಯಾದ ನಾನು ಹೊಸ ಸಂಗತಿಗಳ ಸಹಾಯದಿಂದ ನನ್ನ ಅಭಿಪ್ರಾಯವನ್ನು ಬದಲಿಸಿಕೊಳ್ಳಲು ಸಿದ್ಧನಿದ್ದೇನೆ. ತೆರೆದ ಮನಸ್ಸು ನಮ್ಮದು. ಪ್ಯಾರಚೂಟ್‌ನಂತೆ ತೆರೆದಾಗ ಮಾತ್ರ ಅದು ಕಾರ್ಯನಿರ್ವಹಿಸುವುದು ಎಂದು ನಾನು ಬಲ್ಲೆ. ಆದರೆ ಇಲ್ಲಿ ತೆರೆದ ಮನಸ್ಸು ಎಂದರೆ ಖಾ

Sunday 18 December 2011

F.I.R.ಬಗ್ಗೆ ನಿಮಗೆಷ್ಟು ಗೊತ್ತು?


ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶ್ರೀ ಡಾ|| ಡಿ.ವಿ. ಗುರುಪ್ರಸಾದ್ ಅವರ `ಕ್ರಿಮಿನಲ್ ಕಾನೂನುಗಳು ಮತ್ತು ಪೊಲೀಸ್ ವ್ಯವಸ್ಥೆ' ಎಂಬ ಪುಸ್ತಕದಿಂದ ಆಯ್ದ ಭಾಗ.

          ಎಫ್ ಐ ಆರ್ ಅಂದರೆ ಪ್ರಥಮ ವರ್ತಮಾನ ವರದಿ. ವರ್ತಮಾನ ಎಂದರೆ ಯಾವುದಾದರೂ ಕಾಗ್ನಿಸಬಲ್ ಅಪರಾಧ ನಡೆದ ಬಗೆಗಿನ ಮಾಹಿತಿ. ಈ ಮಾಹಿತಿ ಮೊಟ್ಟಮೊದಲ ಬಾರಿಗೆ ಪೊಲೀಸ್ ಠಾಣೆ ತಲುಪಿದಾಗ ಪೊಲೀಸರು ಅದನ್ನು ದಾಖಲಿಸಿಕೊಳ್ಳಬೇಕು. ದಾಖಲಾದಂತಹ ವರ್ತಮಾನದ ವರದಿಯನ್ನು ಆ ಅಪರಾಧದ ಮೊಕದ್ದಮೆ ನಡೆಸುವಂತಹ ನ್ಯಾಯಾಧೀಶರಿಗೆ ಸಲ್ಲಿಸಬೇಕು. ಅಂದರೆ ನ್ಯಾಯಾಲಯದ ವ್ಯಾಪ್ತಿಯಲ್ಲಿ ಜರುಗಿದ ಕಾಗ್ನಿಸಬಲ್ ಅಪರಾಧದ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ಕೊಡುವ ವರದಿಯೇ ಎಫ್.ಐ.ಆರ್.


           ಕ್ರಿಮಿನಲ್ ಪ್ರಕರಣಗಳಲ್ಲಿ ಎಫ್ ಐ ಆರ್‌ಗೇ ಅಗ್ರಸ್ಥಾನ. ಏಕೆಂದರೆ ಎಫ್.ಐ.ಆರ್. ದರ್ಜೆಯಾಗುವುದರಿಂದಲೇ ತನಿಖೆಯು ಪ್ರಾರಂಭವಾಗುತ್ತದೆ. ಮತ್ತು ಎಫ್.ಐ.ಆರ್.ದರ್ಜೆಯಾದರೆ ಪೊಲೀಸರು ಆ ಪ್ರಕರಣಗಳ ಬಗ್ಗೆ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ಕೋರ್ಟಿನಲ್ಲಿ ಪ್ರಕರಣ ನಡೆಸುವಾಗಲೂ ಪದೇ ಪದೇ ಎಫ್ ಐ ಆರ್ ನಲ್ಲಿರುವ ಸಂಗತಿಗಳ ಬಗ್ಗೆ ವಾದ ವಿವಾದ ನಡದೇ ನಡೆಯುತ್ತದೆ.
    ಪೊಲೀಸ್ ಠಾಣೆಗೆ ನೀವು ನಿಮ್ಮ ದೂರನ್ನು ಒಯ್ದಾಗ ಹಾಗೂ ಆ ದೂರು ಕಾಗ್ನಿಸಬಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇಸನ್ನು ದಾಖಲಿಸಬೇಕು. ಈಗಾಗಲೇ ಹೇಳಿದಂತೆ ಕಾಗ್ನಿಸಬಲ್ ಪ್ರಕರಣ ಎಂದರೆ ನ್ಯಾಯಾಲಯದ ವಿಶೇಷ ಆದೇಶವಿಲ್ಲದೇ ಪೊಲೀಸರು ದಾಖಲಿಸಿ ತನಿಖೆ ನಡೆಸಬಹುದಾದ ಪ್ರಕರಣ. ಅದೂ ಅಲ್ಲದೆ ಕಾಗ್ನಿಸಬಲ್ ಪ್ರಕರಣ ಎಂದರೆ ಆ ಪ್ರಕರಣದ ಆರೋಪಿಯನ್ನು ಪೊಲೀಸಲು ವಾರಂಟಿಲ್ಲದೇ ಬಂಧಿಸಲು ಅಧಿಕಾರವಿರುವ ಪ್ರಕರಣ.

    ಒಂದು ಅಪರಾಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮೇರೆಗೆ ಕಾಗ್ನಿಸಬಲ್ ಹೌದೇ ಅಲ್ಲವೇ ಎಂದು ತಿಳಿಯಲು ದಂದ ಪ್ರಕ್ರಿಯೆ ಸಂಹಿತೆ (ಕ್ರಿಮಿನಲ್ ಪ್ರೊಸೀಜರ್ ಕೋಡ್-ಸಿಆರ್.ಪಿ.ಸಿ.)ಯ ಅನುಚ್ಛೇದ ನೋಡಿದರೆ ಸಾಕು. ಇತರ ಕಾನೂನುಗಳ ವ್ಯಾಪ್ತಿಯಲ್ಲಿ ಒಂದು ಅಪರಾಧ ಕಾಗ್ನಿಸಬಲ್ ಆಗಬೇಕಾದರೆ ಆ ಅಪರಾಧಕ್ಕೆ ಕನಿಷ್ಟ ೩ವರ್ಷ ಕಾರಾಗೃಹವಾಸ ಶಿಕ್ಷೆ ಎಂದು ನಮೂದಿಸಿದ್ದಾಗಿರಬೇಕು ಎನ್ನುವುದು ಇನ್ನೊಂದು ರೀತಿಯಿಂದ್ ಅರಿಯಬಹುದಾದ ವಿಷಯ.

         ಸಾಮಾನ್ಯವಾಗಿ ಕಾಗ್ನಿಸಬಲ್ ಅಪರಾಧಗಳೆಮ್ದರೆ ಅವು ಗುರುತರ ಅಪರಾಧಗಳೆಂದೇ ಪರಿಗಣಿಸಬೇಕು. ಉದಾಹರಣೆಗೆ ಕೊಲೆ, ಕೊಲೆಯ ಯತ್ನ, ಭಾರೀ ಗಾಯ ಮಾಡುವುದು, ಆಯುಧ ಉಪಯೋಗಿಸಿ ಗಾಯ ಮಾಡುವುದು, ಐದು ಅಥವಾ ಅದಕ್ಕಿಂತ ಹೆಚ್ಚು ಜನ ಮಾಡುವ ಅಪರಾಧ, ರೇಪ್, ಕಿಡ್ನಾಪಿಂಗ್, ಮಾನವ ವಧೆ, ವಾಹನ ಅಪಘಾತ ಮಾಡಿ ಸಾವು ನೋವಿನ ಕಾರಣ ಮಾಡುವುದು ಇತ್ಯಾದಿ ದೇಹಕ್ಕೆ ಸಂಬಂಧಿಸಿದ ಅಪರಾಧಗಳು ಕಾಗ್ನಿಸಿಬಲ್ ಅಪರಾಧಗಳು.

        ದರೋಡೆ, ಜಬರಿ ಕಳವು, ಬ್ಲಾಕ್‍ಮೇಲ್, ಮನೆಗಳ್ಳತನ, ಕನ್ನಾ ಕಳ್ಳತನ, ಬೀದಿ ಕಳ್ಳತನ, ಸುಲಿಗೆ, ಪಿಕ್‍ಪಾಕೆಟ್, ವಂಚನೆ, ನಂಬಿಕೆ ದ್ರೋಹ ಇತ್ಯಾದಿ ಅಪರಾಧಗಳು ಆಸ್ತಿಗೆ ಸಂಬಂಧಿಸಿದಂತಹ ಕಾಗ್ನಿಸಬಲ್ ಅಪರಾಧಗಳು ಗಲಭೆ, ದೊಂಬಿ, ಕಲಹ ಇತ್ಯಾದಿಗಳು ಸಾರ್ವಜನಿಕ ಶಾಂತಿ ಭಂಗಕ್ಕೆ ಸಂಬಂಧಿಸಿದ ಕಾಗ್ನಿಸಿಬಲ್ ಅಪರಾಧಗಳಾದರೆ, ಖೋಟಾ ನೋಟ್ ಚಲಾವಣೆ, ಪಿತೂರಿ, ದೇಶದ್ರ್‍ಓಹ, ವಿದ್ರೋಹ ಕೃತ್ಯ ಇಂತಹವೂ ವಾರೆಂಟ್ ಇಲ್ಲದೆ ಬಂಧಿಸಬಹುದಾದಂಥ ಅಪರಾಧಗಳು.

        ಕಾಗ್ನಿಸಬಲ್ ಅಪರಾಧ ಸಂಭವಿಸಿದಾಗ ಈ ಅಪರಾಧದ ಬಗ್ಗೆ ಮೊದಲು ಪೊಲೀಸರಿಗೆ ಸುದ್ಧಿ ಮುಟ್ಟಿಸಬೇಕು. ಸುದ್ದಿಯನ್ನು ಫೋನ್ ಮೂಲಕ ನೀಡಬಹುದು. ಇಲ್ಲವೇ ಪೊಲೀಸ್ ಠಾಣೆಗೆ ಹೋಗಿ ಮುಖತಃ ತಿಳಿಸಬಹುದು. ಅಥವ ಪೊಲೀಸ್ ಠಾಣೆಗೆ ಹೋಗಿ ಲಿಖಿತ ದೂರನ್ನು ಸಲ್ಲಿಸಬಹುದು. ಯಾರೂ ಬೇಕಾದರೂ ಸುದ್ದಿ ಮುಟ್ಟಿಸಬಹುದು. ಅಂದರೆ ಅಪರಾಧಕ್ಕೆ ಈಡಾದ ವ್ಯಕ್ತಿಯಾಗಿರಬಹುದ್ ಇಲ್ಲವೇ ಅಪರಾಧ ಆಗುವುದನ್ನು ನೋಡಿದವನಾಗಿರಬಹುದು ಅಥವಾ ಬೇರಾವುದೇ ವ್ಯಕ್ತಿಯಾಗಿರಬಹುದು. ಕಾಗ್ನಿಸಬಲ್ ಗುನ್ನೆ ಸುದ್ದಿ ಮುಟ್ಟಿದ ಕೂಡಲೆ ಪೊಲೀಸರು ಎಫ್ ಐ ಆರ್ ಬರೆಯಬೇಕು. ಅಲ್ಲದೇ ಎಫ್ ಐ ಆರ್‌ನ ಮೇಲೆ ಸುದ್ದಿ ನೀಡಿದವನ ಸಹಿ ಪಡೆಯಬೇಕು. ಅಲ್ಲದೇ ಎಫ್ ಐ ಆರ್‌ನ ಪ್ರತಿಯೊಂದನ್ನು ಶುಲ್ಕವಿಲ್ಲದೆ ಸುದ್ದಿ ತಿಳಿಸಿದವನಿಗೆ ನೀಡಬೇಕು. ನೀವು ಪೊಲೀಸ್ ಠಾಣೆಯಲ್ಲಿ ಕಾಗ್ನಿಸಿಬಲ್ ಅಪರಾಧ ಸುದ್ದಿ ನೀಡಿದರೆ ಆ ಅಪರಾಧ ದಾಖಲಾಗಿದೆ ಹಾಗೂ ತನಿಖೆಯಾಗುತ್ತದೆ ಎಂದು ತಿಳಿಯಬೇಕಾದರೆ ಎಫ್ ಐ ಆರ್‍ ವರದಿ ತಯಾರಾದಾಗ ಮಾತ್ರ ಖಾತರಿಯಾಗುತ್ತದೆ.

        ಒಂದು ವೇಳೆ ಕಾಗ್ನಿಸಬಲ್ ಅಪರಾಧದ ಬಗ್ಗೆ ಸುದ್ದಿ ಮುಟ್ಟಿಸಿದರೂ ಹಲವಾರು ಸಬೂಬು ಹೇಳಿ ಪೊಲೀಸರು ಎಫ್ ಐ ಆರ್ ಬರೆಯದೇ ಇರಬಹುದು. ಸಾಮಾನ್ಯವಾಗಿ ತಮ್ಮ ಠಾಣೆಯಲ್ಲಿ ದಾಖಲಾದ ಅಪರಾಧಗಳ ಸಂಖ್ಯೆ ಏರಿದೆ ಎಂದು ಮೇಲಧಿಕಾರಿಗಲು ತಮ್ಮ ಬಗ್ಗೆ ಕೆಟ್ಟ ಭಾವನೆ ಮೂಡಿಸಿಕೊಳ್ಳಬಹುದು ಎನ್ನುವ ಭೀತಿಯಿಂದ ಹಲವಾರು ಪೊಲೀಸ್ ಠಾಣೆಯಲ್ಲಿ ಕಾಗ್ನಿಸಬಲ್ ಅಪರಾಧಗಳ ಬಗ್ಗೆ ಮಾಹಿತಿ ಬಂದರೂ ಕೇಸನ್ನು ದಾಖಲಿಸುವುದಿಲ್ಲ. ಇದಕ್ಕೆ ಪೊಲೀಸ್ ಭಾಷೆಯಲ್ಲಿ ಬರ್ಕಿಂಗ್ ಎನ್ನುತ್ತಾರೆ.

  ಇನ್ನು ಕೆಲವು ಠಾಣೆಗಳಲ್ಲಿ ಕಾಗ್ನಿಸಿಬಲ್ ಅಪರಾಧದ ಬಗ್ಗೆ ಸುದ್ದಿ ಬಂದಾಗ ಅಪರಾಧ ಆದ ಸ್ಥಳ ನಮ್ಮ ಠಾಣೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಎನ್ನುವ ಸಬೂಬು ಹೇಳಿ ಫಿರ್ಯಾದಿಗಳನ್ನು ಅಟ್ಟಿಬಿಡುತ್ತಾರೆ. ಕಾನೂನು ರೀತ್ಯಾ ಇದೂ ತಪ್ಪು. ಅಪರಾಧವು ಎಲ್ಲೇ ಜರುಗಿರಲಿ, ಪೊಲೀಸ್ ಠಾಣೆಗೆ ಕಾಗ್ನಿಸಬಲ್ ಅಪರಾಧದ ಸುದ್ದಿ ಬಂದಾಗ ಕೇಸು ದಾಖಲಿಸಬೇಕು. ಅನಂತರ ಅದನ್ನು ಸಂಬಂಧಿಸಿದ ಬೇರೆ ಠಾಣೆಗೆ ವರ್ಗಾಯಿಸಬಹುದು. ಒಂದು ವೇಳೆ ನಾವು ಠಾಣೆಗೆ ಕಾಗ್ನಿಸಬಲ್ ಅಪರಾಧದ ದೂರು ನೀಡಿದಾಗ ಅವರು ಕೇಸು ದಾಖಲಿಸಿ ಎಫ್ ಐ ಆರ್ ಪ್ರತಿ ನಮಗೆ ಕೊಡದೇ ಹೋದರೆ ನಮಗೆ ಎರಡು ರೀತಿಯ ಪರಿಹಾರ ಉಂಟು. ನಾವು ಆ ಠಾಣೆಯ ಮೇಲುಸ್ತುವಾರಿ ಹೊತ್ತಿರುವ ಪೊಲೀಸ್ ಸೂಪರಿಂಟೆಂಡೆಂಟ್ ಇವರಿಗೆ ನಮ್ಮ ದೂರು ಸಲ್ಲಿಸಬಹುದು. ನಗರಗಳಲ್ಲಿ ಸಂಬಂಧಿಸಿದ ಡಿಸಿಪಿ ಇವರಿಗೆ ಲಿಖಿತ ದೂರನ್ನು ಅಂಚೆ ಮೂಲಕವೋ ಅಥವಾ ವೈಯುಕ್ತಿಕವಾಗಿಯೋ ನೀಡಬಹುದು. ಆ ಮೇಲಧಿಕಾರಿ ನಮ್ಮ ದೂರನ್ನು ಖುದ್ದಾಗಿ ತನಿಖೆ ಮಾಡಬಹುದು. ಇಲ್ಲವೆ ತಮ್ಮ ಕೆಳಗಿನ ಯಾವುದೇ ಅಧಿಕಾರಿಯ ಮೂಲಕ ತನಿಖೆ ಮಾಡಿಸಬಹುದು.

               ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸುವಾಗ ನಾವು ಏನು ಹೇಳಿದ್ದೆವೋ ಅದನ್ನೇ ಸರಿಯಾಗಿ ದಾಖಲಿಸಿದ್ದಾರೆಯೇ ಎಂದು ಪರಿಶೀಲಿಸಬೇಕು. ಎಷ್ಟೋ ಬಾರಿ ಠಾಣಾಧಿಕಾರಿಗಳು ನಾವು ಕೊಟ್ಟ ದೂರ್‍ಅನ್ನು ತಿಳಿಯಾಗಿ ಮಾಡಿಬಿಡುವ ನಿದರ್ಶನಗಳಿವೆ. ಉದಾಹರಣೆಗೆ ನಮ್ಮ ಮನೆಗೆ ೫ ಜನ ನುಗ್ಗಿ ನಮಗೆ ಹೊಡೆದು ನಮ್ಮ ಆಸ್ತಿ ಕಸಿದುಕೊಂಡರೆ ಅದು ಡಕಾಯಿತಿ ಅಥವಾ ದರೋಡೆ ಕೇಸ್ ಆಗುತ್ತದೆ. ಆದರೆ ಎಷ್ಟೋ ಜನ ೫ ಜನರ ಸಂಖ್ಯೆಯನ್ನು ೩ ಅಥವಾ ೪ ಎಂದು ನಮೂದಿಸಿ ಆ ಕೇಸನ್ನು ಜಬರಿ ಕಳವು (ರಾಬರಿ) ಎಂದು ತಿಳಿಗೊಳಿಸುತ್ತಾರೆ. ಆದ್ದರಿಂದ ದೂರು ನೀಡಿ ಎಫ್ ಐ ಆರ್‌ಗೆ ಸಹಿ ಹಾಕುವ ಮೊದಲು ನಾವು ಕೊಟ್ಟ ದೂರನ್ನು ಸರಿಯಾಗಿ ದಾಖಲು ಮಾಡಿಕೊಳ್ಳಲಾಗಿದೆಯೇ ಇಲ್ಲವೇ ಎಂದು ಕೂಲಂಕುಷವಾಗಿ ಪರಿಶೀಲಿಸಬೇಕಾದ್ದು ಫಿರ್ಯಾದುದಾರರ ಕರ್ತವ್ಯ.

     ಒಂದು ಕೇಸಿನ ತನಿಖೆಯಲ್ಲಿ ಎಫ್ ಐ ಆರ್ ಅತ್ಯಂತ ಮಹತ್ವದ ದಾಖಲೆ. ಈ ದಾಖಲೆ ಸರಿಯಾಗಿರುವಂತೆ ನಾವು ನೋಡಿಕೊಳ್ಳಬೇಕು. ಇಲ್ಲದಿದ್ದರೆ ಕೇಸು ನ್ಯಾಯಾಲಯದಲ್ಲಿ ಬಿದ್ದು ಹೋಗುವ ಸಾಧ್ಯತೆ ಜಾಸ್ತಿ.

ಓಶೋ ಕಂಡಂತೆ ಗಾಂಧಿ!


gandhi1.jpg 19.jpg
ಓಶೋ ರಜನೀಶ್ ಜಗತ್ತು ಕಂಡ ಅತ್ಯಂತ ವಿವಾದಾಸ್ಪದ ವ್ಯಕ್ತಿ. ಮಧ್ಯಪ್ರದೇಶದ ಜೈನ ಕುಟುಂಬವೊಂದರಲ್ಲಿ ಹುಟ್ಟಿದ ರಜನೀಶ್ ಬಾಲ್ಯದಿಂದಲೇ ಸ್ವತಂತ್ರ ಚಿಂತನೆಯೆಡೆಗೆ ಒಲವು ಹೊಂದಿದ್ದ. ತನ್ನ ಇಪ್ಪತ್ಮೂರನೆಯ ವಯಸ್ಸಿನಲ್ಲಿ ತನಗೆ ಜ್ಞಾನೋದಯವಾಯಿತು ಎಂದು ಹೇಳಿಕೊಳ್ಳುವ ಈತ ಜಗತ್ತಿನ ಎಲ್ಲಾ ಧರ್ಮಗಳ ಬಗ್ಗೆ ಅತ್ಯಂತ ವಸ್ತುನಿಷ್ಠವಾದ, ಹಿಂದೆ ಯಾರೂ ಹೇಳಿರದಿದ್ದ ಸಂಗತಿಗಳನ್ನು ಹೇಳಿದ. ನಂಬಿಕೆಗಳನ್ನು ಬಿತ್ತುವ, ಆ ಮೂಲಕ ಸ್ವತಂತ್ರ ಚಿಂತನೆಯನ್ನು ನಾಶ ಮಾಡುವ ಎಲ್ಲಾ ವ್ಯವಸ್ಥೆಗಳನ್ನೂ ಖಂಡಿಸಿದ. ಮನುಷ್ಯ ತತ್‌ಕ್ಷಣಕ್ಕೆ ಮಾತ್ರ ಸ್ಪಂದಿಸಬೇಕು. ಯಾವ ಪೂರ್ವಾಗ್ರಹವಿಲ್ಲದೆ, ಭವಿಷ್ಯತ್ತಿನ ಬಗ್ಗೆ ಯೋಜನೆಯಿಲ್ಲದೆ ಈ ಕ್ಷಣದಲ್ಲಿ ಬದುಕಬೇಕು ಎಂದು ಹೇಳಿದ. ಜಗತ್ತಿನ ಯಾವ ವ್ಯಕ್ತಿಯನ್ನೂ, ನಂಬಿಕೆಗಳನ್ನೂ ಬಿಡದೆ ಜಾಲಾಡಿದವ ಈತ. ೧೯೯೦ರಂದು ಹೃದಯಾಘಾತದಿಂದ ನಿಧನನಾದ.
ಇಡೀ ಜಗತ್ತೇ ಮಹಾತ್ಮಾ ಗಾಂಧಿಯನ್ನು ಅಹಿಂಸಾ ಮಾರ್ಗದ ಅನ್ವೇಷಕ ಎಂದು ಕೊಂಡಾಡಿದರೆ ಈತ ಗಾಂಧಿಯನ್ನು ಕುಟಿಲ ರಾಜಕಾರಣಿ ಎಂದು ಕರೆದ. ಗಾಂಧೀಜಿ ಪ್ರತಿಪಾದಿಸಿದ ಅಹಿಂಸೆ, ಸತ್ಯಾಗ್ರಹವೆಲ್ಲವೂ ಕೇವಲ ರಾಜಕೀಯ ತಂತ್ರಗಳು ಎಂದು ವಾದಿಸಿದ. ಗಾಂಧೀಜಿಯ ಸರಳತೆ ಢೋಂಗಿಯದು ಎಂದು ಜರೆದ. ಅವರ ಆಧ್ಯಾತ್ಮ, ಶಿಸ್ತು, ಬ್ರಹ್ಮಚರ್ಯ, ದೇವರ ಕಲ್ಪನೆ ಎಲ್ಲವನ್ನೂ ಲೇವಡಿ ಮಾಡಿದ.
ನಿಜವಾದ ಚಿನ್ನವನ್ನು ಯಾವ ಒರಗೆ ಹಚ್ಚಿದರೂ ತನ್ನ ಹೊಳಪನ್ನು ಹೆಚ್ಚಿಸಿಕೊಳ್ಳುತ್ತದೆಯೇ ಹೊರತು ಕಳೆಗುಂದುವುದಿಲ್ಲ. ಹೀಗಾಗಿ ಗಾಂಧಿಜಯಂತಿಯನ್ನು ಆಚರಿಸಿರುವ ಈ ತಿಂಗಳಿನಲ್ಲಿ ಓಶೋ ರಜನೀಶ್ ಗಾಂಧಿಯ ಬಗ್ಗೆ ಮಾತಾಡಿರುವ ಬಗ್ಗೆ ಸ್ವಲ್ಪ ತಿಳಿಯೋಣ. ಇದರಲ್ಲಿ ನಮಗೆ ಗಾಂಧೀಜಿಯ ವ್ಯಕ್ತಿತ್ವದ ಬಗ್ಗೆ, ಘನತೆಯ ಬಗ್ಗೆ ಹೊಸತೊಂದು ಆಯಾಮ ಸಿಕ್ಕಬಹುದು. ಯಾರನ್ನೂ ಕಣ್ಣು ಮುಚ್ಚಿ ಒಪ್ಪಬಾರದು ಎಂಬ ಎಚ್ಚರಿಕೆಯಿದ್ದರೆ ನಮ್ಮ ಪ್ರಯತ್ನ ಹೆಚ್ಚು ಪ್ರಯೋಜನಕಾರಿಯಾಗಬಲ್ಲದು.
***
… ನನ್ನ ಪ್ರಕಾರ ಮಹಾತ್ಮ ಗಾಂಧಿ ಒಬ್ಬ ಕಪಟ ರಾಜಕಾರಣಿ. ಅಹಿಂಸೆಯನ್ನು ಅಳವಡಿಸಿಕೊಳ್ಳುವ ಮೂಲಕ ಆತ ಎಷ್ಟೋ ಸಂಗತಿಗಳನ್ನು ತನಗೆ ಹಿತವಾಗುವಂತೆ ನಿರ್ವಹಿಸಿದ. ಎಲ್ಲಾ ಜೈನರು ಆತನ ಅನುಯಾಯಿಗಳಾದರು. ತಾವು ನಂಬಿದ ಅಂಹಿಸೆಯ ತತ್ವವನ್ನು ಬೆಂಬಲಿಸುವ ಒಬ್ಬ ವ್ಯಕ್ತಿಯನ್ನು ಅವರು ಆತನಲ್ಲಿ ಕಂಡಿದ್ದರು. ಗಾಂಧಿ ಜೈನನಾಗಿರಲಿಲ್ಲ. ಆತ ಕೇವಲ ಶೇ ೯ರಷ್ಟು ಜೈನನಾಗಿದ್ದ. ನಾನು ಗಾಂಧಿಯನ್ನು ಹೀಗೆ ವರ್ಣಿಸಲು ಇಚ್ಚಿಸುತ್ತೇನೆ: ಆತ ಹುಟ್ಟಿನಿಂದ ಹಿಂದು ಆದರೆ ಆತ ಕೇವಲ ಶೇ ೧ರಷ್ಟು ಹಿಂದು. ಆತ ಹುಟ್ಟಿದ್ದು ಜೈನರು ಹೆಚ್ಚು ಸಂಖ್ಯೆಯಲ್ಲಿದ್ದ ಗುಜರಾತಿನಲ್ಲಿ ಹೀಗಾಗಿ ಆತ ಶೇ ೯ರಷ್ಟು ಜೈನ. ಉಳಿದ ಶೇ ೯೦ರಷ್ಟು ಆತ ಕ್ರಿಶ್ಚಿಯನ್ ಆಗಿದ್ದ. ಮೂರು ಬಾರಿ ಆತ ಕ್ರೈಸ್ತನಾಗಿ ಮತಾಂತರವಾಗುವ ಹಂತದಲ್ಲಿದ್ದ.
ಅಹಿಂಸೆಯ ಮೂಲಕ ಆತ ಜೈನರ ಬೆಂಬಲ ಪಡೆದ, ಹಿಂಸೆಯ ಅಭ್ಯಾಸವಿಲ್ಲದ ಮೇಲ್ವರ್ಗದ ಹಿಂದುಗಳ ಬೆಂಬಲವೂ ಗಾಂಧಿಗೆ ಸಿಕ್ಕಿತು. ಕ್ರಿಸ್ತ ಪ್ರತಿಪಾದಿಸಿದ ಅಹಿಂಸೆ ಹಾಗೂ ಶಾಂತಿಯ ಬಗ್ಗೆ ಮಾತಾಡಿದ್ದಕ್ಕಾಗಿ ಕ್ರಿಶ್ಚಿಯನ್ ಮಿಶಿನರಿಗಳನ್ನು ಪ್ರಭಾವಿಸುವಲ್ಲಿ ಆತ ಯಶಸ್ವಿಯಾದ. ಇವೆಲ್ಲವಕ್ಕಿಂತಲೂ ಮುಖ್ಯವಾದ ಸಂಗತಿಯೊಂದಿದೆ. ಭಾರತ ಎರಡು ಸಾವಿರ ವರ್ಷಗಳಿಂದ ಒಂದು ಗುಲಾಮ ರಾಷ್ಟ್ರವಾಗಿತ್ತು. ಸ್ವಾತಂತ್ರ್ಯ ಎಂದರೇನು ಎಂಬುದನ್ನೇ ಅದು ಮರೆತುಹೋಗಿತ್ತು. ಈಗಲೂ ಈ ದೇಶ ಸ್ವತಂತ್ರವಾಗಿಲ್ಲ, ಇದರ ಮನಸ್ಸು ಇನ್ನೂ ಗುಲಾಮಗಿರಿಯಲ್ಲೇ ಉಳಿದಿದೆ…
ಭಾರತೀಯರು ಹೋರಾಡಲು ಭಯ ಪಡುತ್ತಾರೆ. ಹಿಂದೆಯೂ ಅವರೆಂದೂ ಹೋರಾಡಿದವರಲ್ಲ. ಸಣ್ಣ ಗುಂಪೊಂದು ಇಡೀ ದೇಶವನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳಲು ಸಾಧ್ಯವಿತ್ತು. ಈ ದೇಶದ ಯಾಜಮಾನ್ಯ ಒಂದು ಗುಂಪಿನಿಂದ ಮತ್ತೊಂದಕ್ಕೆ ವರ್ಗಾವಣೆಯಾಗುತ್ತಾ ಬಂದಿತೇ ವಿನಾ ಭಾರತ ಗುಲಾಮಗಿರಿಯಿಂದ ಹೊರಬರಲಿಲ್ಲ.
ಎರಡನೆಯದಾಗಿ, ಭಾರತೀಯರು ಹೋರಾಡುವುದಕ್ಕೆ ಸಿದ್ಧರಿಲ್ಲ ಹಾಗೂ ಹೋರಾಟಕ್ಕೆ ಅಗತ್ಯವಾದ ಶಸ್ತ್ರಾಸ್ತ್ರ ಭಾರತೀಯರಲ್ಲಿ ಇಲ್ಲ ಎಂಬುದನ್ನು ಬುದ್ಧಿವಂತ ಗಾಂಧಿ ಅರಿತಿದ್ದ.
ಮೂರನೆಯದಾಗಿ, ಬ್ರಿಟನ್ ವಿಶ್ವದ ಶಕ್ತಿಶಾಲಿ ಸಾಮ್ರಾಜ್ಯ ಎಂಬುದರ ಅರಿವು ಗಾಂಧಿಗಿತ್ತು. ಅವರೊಂದಿಗೆ ಶಸ್ತ್ರ ಸಜ್ಜಿತವಾಗಿ ಸೆಣಸಿ ಗೆಲ್ಲುವುದು ಅಸಾಧ್ಯದ ಮಾತಾಗಿತ್ತು. ಭಾರತೀಯರ ಬಳಿ ಶಸ್ತ್ರಾಸ್ತ್ರಗಳಿರಲಿಲ್ಲ, ಯುದ್ಧ ಪರಿಣಿತಿ ಪಡೆದ ಯೋಧರಿರಲಿಲ್ಲ, ಯುದ್ಧದ ಬಗ್ಗೆ ಏನೂ ತಿಳಿದಿರಲಿಲ್ಲ.
ಈ ಸಂದರ್ಭದಲ್ಲಿ ಅಹಿಂಸೆಯೆಂಬುದು ಗಾಂಧಿ ಬಳಸಿದ ಅತ್ಯಂತ ಯಶಸ್ವಿ ರಾಜಕೀಯ ತಂತ್ರಗಾರಿಕೆಯಾಗಿತ್ತು…
ಹೀಗಾಗಿ ಗಾಂಧೀಜಿಯ ಅಹಿಂಸೆ ಆಧ್ಯಾತ್ಮಿಕ ತತ್ವವಲ್ಲ. ಇದು ಅನೇಕ ತಥ್ಯಗಳಿಂದ ಸಾಬೀತೂ ಆಗಿದೆ. ‘ಭಾರತ ಸ್ವತಂತ್ರವಾದ ತಕ್ಷಣ ಸೈನ್ಯವನ್ನು ವಿಸರ್ಜಿಸಲಾಗುವುದು, ಶಸ್ತ್ರಾಸ್ತ್ರಗಳನ್ನೆಲ್ಲಾ ಸಮುದ್ರಕ್ಕೆ ಎಸೆಯಲಾಗುವುದು’ ಎಂದು ಗಾಂಧಿ ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಮಾಣ ಮಾಡಿದ್ದರು. ‘ನೀವು ಹೀಗೆ ಮಾಡಿದರೆ ಬೇರೆಯವರು ಆಕ್ರಮಣ ಮಾಡುತ್ತಾರೆ. ಆಗ ಏನು ಮಾಡುವಿರಿ?’ ಎಂದು ಕೇಳಿದಾಗ, “ನಾವು ಅವರನ್ನು ನಮ್ಮ ಅತಿಥಿಗಳೆಂದು ಭಾವಿಸಿ ನಮ್ಮ ದೇಶಕ್ಕೆ ಸ್ವಾಗತಿಸುತ್ತೇವೆ. ‘ನಾವು ಇಲ್ಲಿ ವಾಸವಿದ್ದೇವೆ, ನೀವೂ ನಮ್ಮ ಜೊತೆ ವಾಸಿಸಬಹುದು’ ಎಂದು ಅವರಿಗೆ ಹೇಳುತ್ತೇವೆ” ಎಂದಿದ್ದರು.
ಸ್ವಾತಂತ್ರ್ಯ ಬಂದ ನಂತರ ಇದೆಲ್ಲವೂ ಮರೆತುಹೋಯ್ತು. ಸೈನ್ಯವನ್ನು ವಿಸರ್ಜಿಸಲಿಲ್ಲ, ಶಸ್ತ್ರಾಸ್ತ್ರಗಳನ್ನು ಸಮುದ್ರಕ್ಕೆ ಎಸೆಯಲೂ ಇಲ್ಲ. ವಿಪರ್ಯಾಸವೆಂದರೆ ಸ್ವತಃ ಗಾಂಧಿಯೇ ಪಾಕಿಸ್ತಾನದ ಮೇಲಿನ ಮೊದಲ ಯುದ್ಧವನ್ನು ಆಶೀರ್ವದಿಸಿದ್ದರು. ಭಾರತೀಯ ವಾಯು ಸೇನೆಯ ಮೂರು ಯುದ್ಧ ವಿಮಾನಗಳು ಅವರ ಆಶೀರ್ವಾದ ಪಡೆಯಲು ಧಾವಿಸಿದ್ದವು. ಗಾಂಧೀಜಿ ತಮ್ಮ ಮನೆಯಿಂದ ಹೊರಬಂದು ವಿಮಾನಗಳನ್ನು ಹರಸಿದ್ದರು. ತನ್ನ ಬದುಕಿಡೀ ಮಾತಾಡಿದ ಅಹಿಂಸೆಯನ್ನು ಆತ ಸಂಪೂರ್ಣವಾಗಿ ಮರೆತಿದ್ದ…
***
ಹಿಂದೂ ಮುಸ್ಲೀಮರು ಬೇರೆಯಲ್ಲ. ಇಬ್ಬರೂ ಒಂದೇ, ಇಬ್ಬರ ನಡುವೆ ವ್ಯತ್ಯಾಸವಿಲ್ಲ ಎಂಬ ಗಾಂಧಿಯ ಹಾಡು ಶುದ್ಧ ಸುಳ್ಳು ಎಂಬುದು ಸಾಬೀತಾಗಿದೆ. ಇದಕ್ಕೆ ಗಾಂಧಿಯ ಮಗ ಹರಿದಾಸ್‌ನ ಉದಾಹರಣೆ ಸಾಕು. ಆತ ಹುಟ್ಟಿನಿಂದಲೇ ಬಂಡಾಯಗಾರನಾಗಿದ್ದ. ಆತನನ್ನು ನಾನು ತುಂಬಾ ಇಷ್ಟ ಪಡುತ್ತೇನೆ, ತನ್ನ ತಂದೆಗಿಂತ ಆತ ಎಷ್ಟೋ ಮೇಲು.
ಹರಿದಾಸ್ ಶಾಲೆಗೆ ಹೋಗಬಯಸಿದ್ದ. ಆದರೆ ಗಾಂಧಿ ಆತನಿಗೆ ಅನುಮತಿ ಕೊಡಲಿಲ್ಲ. ಶಾಲೆಯ ಶಿಕ್ಷಣ ಜನರನ್ನು ಕಲುಷಿತಗೊಳಿಸುತ್ತದೆ ಎಂಬುದು ಗಾಂಧಿಯ ನಂಬಿಕೆಯಾಗಿತ್ತು. ಹೀಗಾಗಿ ತನ್ನ ಮಕ್ಕಳಿಗೆ ಶಾಲೆಯ ಶಿಕ್ಷಣ ಬೇಡ ಎಂಬುದು ಆತನ ನಿಲುವಾಗಿತ್ತು. ತನ್ನ ಮಕ್ಕಳು ಧಾರ್ಮಿಕ ಗ್ರಂಥಗಳನ್ನು ಓದಲು ಶಕ್ಯವಾಗುವಂತೆ ತಾನೇ ಅವರಿಗೆ ಬೋಧಿಸುತ್ತೇನೆ ಎಂದು ಗಾಂಧಿ ಹೇಳುತ್ತಿದ್ದ. ಆದರೆ ಹರಿದಾಸ್ ಹಠಮಾರಿಯಾಗಿದ್ದ. ತನ್ನ ಓರಗೆಯ ಹುಡುಗರು ಕಲಿಯುವುದನ್ನು ತಾನೂ ಕಲಿಯಬೇಕು ಎಂದು ಹಠಹಿಡಿದಿದ್ದ. ‘ಒಂದು ವೇಳೆ ನೀನು ಶಾಲೆಗೆ ಹೋದರೆ ನನ್ನ ಮನೆಯಲ್ಲಿ ನಿನಗೆ ಸ್ಥಾನವಿಲ್ಲ’ ಎಂದು ಗಾಂಧಿ ಬೆದರಿಕೆ ಹಾಕಿದ.
ಅಹಿಂಸಾತ್ಮಕ ವ್ಯಕ್ತಿಯ ವರ್ತನೆ ಹೀಗಿರುತ್ತದೆ ಎಂದು ನಿಮಗನ್ನಿಸುತ್ತದೆಯೇ, ಅದರಲ್ಲೂ ಅಬೋಧನಾದ ತನ್ನ ಮಗನ ಬಗೆಗೆ? ಆತನ ಬೇಡಿಕೆಯೇನು ಅಪರಾಧವಾಗಿರಲಿಲ್ಲ. ತಾನು ವೇಶ್ಯೆಯ ಬಳಿಗೆ ಹೋಗಬೇಕು ಎಂದೇನು ಆತ ಕೇಳಿರಲಿಲ್ಲ. ತಾನು ಶಾಲೆಗೆ ಹೋಗಬೇಕು ಹಾಗೂ ಉಳಿದೆಲ್ಲಾ ಹುಡುಗರ ಹಾಗೆ ಕಲಿಯಬೇಕು ಎಂಬುದಷ್ಟೇ ಆತನ ಬೇಡಿಕೆಯಾಗಿತ್ತು. ಹರಿದಾಸನ ವಾದ ಸರಿಯಾಗಿತ್ತು. ಆತ ಹೇಳಿದ, “ನೀವೂ ಶಾಲೆಯ ಶಿಕ್ಷಣವನ್ನು ಪಡೆದಿದ್ದೀರಿ ಆದರೆ ಕಲುಷಿತಗೊಂಡಿಲ್ಲ. ಹೀಗಿರುವಾಗ ನಿಮಗೆ ಭಯ ಏಕೆ? ನಾನು ನಿಮ್ಮ ಮಗ. ನೀವು ಪಾಶ್ಚಾತ್ಯ ಶಿಕ್ಷಣ ಪಡೆಯಬಹುದಾದರೆ, ಬ್ಯಾರಿಸ್ಟರ್ ಪದವಿಯನ್ನು ಪಡೆಯಬಹುದಾದರೆ ನಾನೇಕೆ ಪಡೆಯಕೂಡದು? ನಿಮಗೇಕೆ ಇಷ್ಟು ಅಪನಂಬಿಕೆ?”
ಗಾಂಧಿ ಹೇಳಿದರು, “ನನ್ನ ಕೊನೆಯ ಮಾತನ್ನು ನಾನು ಹೇಳಿದ್ದೇನೆ. ನನ್ನ ಜೊತೆ ಈ ಮನೆಯಲ್ಲಿ ಇರಬೇಕೆಂದರೆ ಶಾಲೆಗೆ ಹೋಗಕೂಡದು. ಒಂದು ವೇಳೆ ಶಾಲೆಗೆ ಹೋಗಬೇಕೆಂಬುದೇ ನಿನ್ನ ನಿರ್ಧಾರವಾದರೆ ಈ ಮನೆಯಲ್ಲಿ ನಿನಗೆ ಜಾಗವಿಲ್ಲ.”
ಆ ಹುಡುಗ ನನಗೆ ಇಷ್ಟವಾಗುತ್ತಾನೆ. ಆತ ಮನೆಯನ್ನು ಬಿಡಲು ನಿರ್ಧರಿಸುತ್ತಾನೆ. ತಂದೆಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಬೇಡುತ್ತಾನೆ. ಗಾಂಧಿ ಆಶಿರ್ವಾದ ನೀಡಲು ಅಶಕ್ತರಾಗಿರುತ್ತಾರೆ.
ನನಗೆ ಗಾಂಧಿಯ ವರ್ತನೆಯಲ್ಲಿ ಅಹಿಂಸೆಯಾಗಲೀ, ಪ್ರೀತಿಯಾಗಲೀ ಕಾಣುವುದಿಲ್ಲ. ಇಂಥ ಸಣ್ಣ ಸಣ್ಣ ಘಟನೆಗಳಲ್ಲಿ ನೀವು ನಿಜವಾದ ಮನುಷ್ಯನನ್ನು ಕಾಣಲು ಸಾಧ್ಯವೇ ಹೊರತು ಭಾಷಣಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಅಲ್ಲ.
ಮನೆ ತೊರೆದ ಹರಿದಾಸ ತನ್ನ ಚಿಕ್ಕಪ್ಪನ ಮನೆಯಲ್ಲಿ ಉಳಿದುಕೊಂಡು ಶಾಲೆಗೆ ಹೋಗುತ್ತಾನೆ. ಎಷ್ಟೋ ವೇಳೆ ತನ್ನ ತಾಯಿಯನ್ನು ನೋಡುವುದಕ್ಕೆ ಪ್ರಯತ್ನಿಸಿ ಮನೆಗೆ ಹೋಗುತ್ತಾನೆ ಆದರೆ ಅವನಿಗೆ ಆಕೆಯನ್ನು ನೋಡಲಾಗುವುದಿಲ್ಲ. ಆತ ಪದವಿಯನ್ನು ಪಡೆದ ನಂತರ ಗಾಂಧಿ ಹಿಂದೂ ಮುಸ್ಲಿಂ ಐಕ್ಯತೆಯ ಬಗ್ಗೆ ಎಷ್ಟು ಸತ್ಯ ನಿಷ್ಠರಾಗಿದ್ದಾರೆ ಎಂದು ಪರೀಕ್ಷಿಸಲು ಮಹಮ್ಮದೀಯನಾಗುತ್ತಾನೆ. ಆತ ನಿಜಕ್ಕೂ ವರ್ಣರಂಜಿತ ವ್ಯಕ್ತಿತ್ವದವನು.
ಆತ ಮಹಮ್ಮದೀಯನಾದ ನಂತರ ‘ಹರಿದಾಸ’ ಎಂಬ ಅರ್ಥವನ್ನೇ ಕೊಡುವ ಅರೇಬಿಕ್ ಹೆಸರನ್ನು ಇಟ್ಟುಕೊಳ್ಳುತ್ತಾನೆ. ಅಬ್ದ್ ಎಂದರೆ ಅರೇಬಿಕ್ ಭಾಷೆಯಲ್ಲಿ ದೇವರು. ಅಬ್ದುಲ್ಲಾ ಎಂದರೆ ದೇವರ ಸೇವಕ. ಹೀಗೆ ಹರಿದಾಸ್ ಗಾಂಧಿ ಅಬ್ದುಲ್ಲಾ ಗಾಂಧಿಯಾಗುತ್ತಾನೆ.
ಈ ಸಂಗತಿಯನ್ನು ತಿಳಿದ ಗಾಂಧಿ ತೀವ್ರವಾದ ಆಘಾತಕ್ಕೊಳಗಾಗುತ್ತಾರೆ. ಕುಪಿತರಾಗುತ್ತಾರೆ. ಕಸ್ತೂರ ಬಾ, “ಏಕಿಷ್ಟು ಕೋಪಗೊಳ್ಳುತ್ತೀರಿ? ಪ್ರತಿ ಮುಂಜಾವು, ಪ್ರತಿ ಸಾಯಂಕಾಲಗಳಲ್ಲಿ ನೀವು ಹಿಂದೂ ಮುಸಲ್ಮಾನರು ಇಬ್ಬರೂ ಒಂದೇ ಎಂದು ಹೇಳುತ್ತೀರಿ. ನೀವು ಹೇಳಿದ್ದನ್ನೇ ಆತ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿರಬಹುದು. ‘ಹಿಂದೂ ಮುಸಲ್ಮಾನರಿಬ್ಬರೂ ಒಂದೇ ಎನ್ನುವುದಾದರೆ, ಇಷ್ಟು ದಿನ ಹಿಂದೂ ಆಗಿ ಬಾಳಿದ್ದೇನೆ. ಇನ್ನು ಮುಂದೆ ಮುಸಲ್ಮಾನನಾಗಿ ಬದುಕಿ ನೋಡೋಣ’ ಎಂದು ತೀರ್ಮಾನಿಸಿರಬಹುದು” ಎನ್ನುತ್ತಾರೆ ನಗುತ್ತಾ.
ಗಾಂಧೀಜಿ ವ್ಯಗ್ರರಾಗಿ, “ಇದು ನಗುವಂತಹ ಸಂಗತಿಯಲ್ಲ. ಈ ಕ್ಷಣದಿಂದ ಆತನಿಗೆ ನನ್ನ ಆಸ್ತಿಯ ಮೇಲೆ ಯಾವ ಒಡೆತನವೂ ಇಲ್ಲ. ಆತ ನನ್ನ ಮಗನೇ ಅಲ್ಲ. ಇನ್ನೆಂದೂ ಆತನನ್ನು ನಾನು ನೋಡಲು ಇಚ್ಚಿಸುವುದಿಲ್ಲ.” ಎನ್ನುತ್ತಾರೆ. ಭಾರತದಲ್ಲಿ ಒಬ್ಬ ವ್ಯಕ್ತಿ ಸತ್ತಾಗ ಆತನ ಚಿತೆಗೆ ಬೆಂಕಿ ಕೊಡುವ ಕರ್ತವ್ಯ ಆ ವ್ಯಕ್ತಿಯ ಹಿರಿಯ ಮಗನದ್ದು. ಗಾಂಧೀಜಿ ತಮ್ಮ ವಿಲ್‌ನಲ್ಲಿ ಹೀಗೆ ಬರೆಸುತ್ತಾರೆ: “ಹರಿದಾಸ ನನ್ನ ಮಗನಲ್ಲ. ನಾನು ಸತ್ತ ನಂತರ ಆತ ನನ್ನ ಚಿತೆಗೆ ಬೆಂಕಿ ಇಡಬಾರದು ಎಂಬುದು ನನ್ನ ಇಚ್ಛೆ.”
ಎಂಥಾ ಕೋಪ! ಎಂಥಾ ಹಿಂಸೆ!
ಹರಿದಾಸನನ್ನು ನಾನು ವೈಯಕ್ತಿಕವಾಗಿ ಬಲ್ಲೆ. ಆತ ಹೇಳಿದ, “ನನ್ನ ತಂದೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವುದಕ್ಕಾಗಿಯೇ ನಾನು ಮಹಮ್ಮದೀಯನಾದದ್ದು. ನಾನು ಎಣಿಸಿದಂತೆಯೇ ಅವರು ವರ್ತಿಸಿದರು. ಅವರು ಹೇಳಿದ ಧರ್ಮಗಳ ಸಮಾನತೆ – ಹಿಂದು, ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ ಧರ್ಮಗಳೆಲ್ಲಾ ಸಮಾನ- ಎಂಬುದು ಅರ್ಥಹೀನ. ಇದೆಲ್ಲ ಕೇವಲ ರಾಜಕೀಯ. ಅದನ್ನೇ ನಾನು ಸಾಬೀತು ಪಡಿಸಬೇಕಿತ್ತು, ಸಾಬೀತು ಪಡಿಸಿದೆ.”

ಮೂಲ : ಕಲರವ ಪತ್ರಿಕೆ

Thursday 15 December 2011

SSLC Examination 2012 - Languages Handbook of QPs



SSLC Examination 2012 - Languages Handbook of QPs
Published by - Sneha Balaga Prakashana, Teachers' Colony, Chitradurga - 577 501
Compilers:
Sri Hurali M. Basavaraj - Kannada - 9902752457
Sri T. Ramesh - English - 9964229680
Smt. S. Manjula - Hindi - 9448656638

Manorama Yearbook 2012 with Free CD India and the World


Manorama Yearbook 2012 (Free CD)

Manorama Yearbook 2012 (Free CD)( Paperback )
By Mammen Mathew





Publisher : Malayalam Manorama

Price : Rs. 170





Summary of Manorama Yearbook 2012 (Free CD)


 Manorama yearbook is a best seller with a history of success of nearly half a century. It is India's best General knowledge update covering almost everything that a student needs in competitive examinations and a teacher and researcher can use effectively in his pursuit of Knowledge. lt is undoubtedly the most popular reference book in India and the World, dealing with topics ranging from science, education and History to sports, literature and entertainment. English yearbook this year has 1040 pages encompassing sections such as World, India, Science, IT, General Knowledge, Sports Arena, Current affairs and Culture present a fabulous world of facts, statistics and new information.

The latest edition of this highly affordable source book is coming out shortly with several new features of Knowledge adventure. lt will excite and enrich you

ENGLISH YEAR BOOK: Highlights

  • Cover story: The Arab uprising
  • A special article on youth power by Dr. APJ Abdul Kalam
  • Calendar of events across the world
  • Science scan 2012
  • Gene Revolution
  • Cosmos
  • Environmental efforts, the various International conventions
  • Health and medicine, Knowing human diseases
  • Information technology, Unravelling 2G and 3G
  • World Panorama: Countries listed by continents
  • Education and Career: Courses to Watch, Group discussion
  • India: Ready reckoner of states
  • Indian economy
  • General Knowledge: Quiz show 2012
  • World's 50 classics
  • Sports diary 2011

List of competitive exams that we covered.
Examinations Conducted by UPSC:-

* Civil Services (Preliminary) Examination (In May)
* Civil Services (Main) Examination (In Oct/Nov)
* Indian Forest Service Examination (In July)
* Engineering Services Examination (In June)
* Geologist Examination (in December)
* Special Class Railway Apprentices Examination (In July)
* National Defence Academy & Naval Academy Examination (In April & September)
* Combined Defence Services Examination (In February & August)
* Combined Medical Services Examination (In January)
* Indian Economic Service/Indian Statistical Service Examination (In November)
* Section Officers/Stenographers (Grade-B/Grade-I) Limited Departmental Competetive Examination (In December)
* Central Police Forces (Assistant Commandants) Examination (In October)

SSC Competitive Exams

* Assistants Grade Exam
* Accountants and Auditors Recruitment Exam
* Clerks Grade Exam
* Combined Graduate Preliminary Exam
* Combined Matric Preliminary Exam
* Divisional Accountants /Auditors/UDC Exam
* Income Tax/ Excise Inspectors, etc.. Exam
* Central Police Organisation SI Exam
* Stenographers’ Grade ‘C’ Exam

Defence Competitive Exams

* Combined Defence Services (C.D.S.) Exam (UPSC)
* National Defence Academy (N.D.A.) Exam (UPSC)
* I.A.F. Airman (Technical Trades) Exam
* I.A.F. Airman (Non-Technical Trades) Exam
* I.A.F. Airman (Educational Instructors Trade) Exam
* Indian Navy Sailors Direct Entry Recruitment Exam
* Indian Army Soldiers General Duty (NER) Exam

L.I.C/ G.I.C Competitive Exams

* L.I.C Officers’ Exam
* G.I.C Officers’ Exam
* L.I.C Development Officers’ Exam
* G.I.C. Assistants Exam

Tamil Nadu Public Service Commission (TNPSC) Exams

* Group 1 Exam
* Group 2 Exam
* Group 4 Exam
* All exams conducted by Tnpsc

Tamil Nadu Uniformed Services Recruitment Board (TNUSRB) Exams

* Sub Inspector Exam
* Sub Inspector(Technical) Exam
* All exams conducted by Tnusrb

Details of Book : Manorama Yearbook 2012 (Free CD)



Book:Manorama Yearbook 2012 (Free CD)
Author:Mammen Mathew
ISBN:0542577803
ISBN-13:9770542577803
Publisher:Malayalam Manorama
Binding:Paperback
Publishing Date:2012
Number of Pages:1040
Language:English

Purchase Books Similar To Manorama Yearbook 2012 (Free CD)

 

 Thanks to Mr.Manjunath Bedre 

               www.bedrefoundation.blogspot.com

Monday 12 December 2011

ಐ.ಎ.ಎಸ್. ಕನಸಿಗೆ ರೆಕ್ಕೆ


                                                    

ನಿಷ್ಠಾವಂತ ಪೊಲೀಸ್ ಅಧಿಕಾರಿ ಲೋಕೇಶ್ವರ


              ಪೊಲೀಸ್ ಇಲಾಖೆ ಕೇವಲ ಕ್ರೈಂ ನ್ಯೂಸ್‍ಗಳಿಗೆ ಮಾತ್ರ ಸೀಮಿತವಲ್ಲ. ಅಲ್ಲಿಯೂ ನಿಜವಾದ ಬದುಕಿನ ವರ್ಣ ರಂಜಿತ ಚಿತ್ತಾರ ಕಾಣಬಹುದು. ಅಲ್ಲಿಯೂ ಭಾವನೆಗಳು ಜೀವಂತವಾಗಿವೆ. ಕಲ್ಪನೆಗಳ ಗರಿಗೆದರುತ್ತವೆ. ಈ ಅಪರೂಪದ ಅನುಭವವನ್ನು ನಿಷ್ಠಾವಂತ ಪೊಲೀಸ್ ಅಧಿಕಾರಿಯಾದ ಲೋಕೇಶ್ವರ ಅವರ ಮಾತುಗಳಿಂದ ನೀವು ಪರಿಚಯಿಸಿಕೊಳ್ಳಬಹುದು. ಈ ಲೇಖನ ಓದಿ -

" ನಮ್ಮ ತಂದೆ ರೈತಾಪಿ ಕುಟುಂಬದಿಂದ ಬಂದವರು. ಕಾರಣಾಂತರಗಳಿಂದ ಮನೆಯಲ್ಲಿ ಜಗಳ ಮಾಡಿಕೊಂಡು, ಚಿಕ್ಕವಯಸ್ಸಿನಲ್ಲಿಯೇ ಸ್ವಾಭಿಮಾನದಿಂದ ಹೊರಗೆ ಬಂದು, ತಮ್ಮ ಸ್ವಂತ ಬಾಳ್ವೆಯನ್ನು ಆರಂಭಿಸಿದ್ದರು. ತಿಪಟೂರಿನಲ್ಲಿ ಸಣ್ಣ ಮಟ್ಟದಲ್ಲಿ ಜೀವನ ಪ್ರಾರಂಭವಾಗಿತ್ತು. ಬಡತನದ ವಾತಾವರಣದಲ್ಲೇ ನಾವು ಬೆಳೆದದ್ದು, ಆ ದಿನಗಳಲ್ಲಿ ನಮ್ಮ ಜೀವನ ತುಂಬಾ ಕಠಿಣವಾಗಿತ್ತು. ತಿಪಟೂರಿನ ಗಾಂಧಿನಗರ ಹಿಂದುಳಿದ ಪ್ರದೇಶವಾಗಿತ್ತು. ಅಲ್ಲಿ ಹರಿಜನ, ಮುಸಲ್ಮಾನರೇ ಹೆಚ್ಚಾಗಿದ್ದರು. ಅದರ ಮಧ್ಯೆ ನಮ್ಮದೊಂದು ಲಿಂಗಾಯತ ಕುಟುಂಬ. ಅಲ್ಲಿ ಹರಿಜನ, ಮುಸಲ್ಮಾನರೇ ಹೆಚ್ಚಾಗಿದ್ದರು. ಅದರ ಮಧ್ಯೆ ನಮ್ಮದೊಂದು ಲಿಂಗಾಯತ ಕುಟುಂಬ. ಆ ಮಕ್ಕಳು, ಆ ಜನರ ಜೊತೆ ಬೆಳೆದವನು ನಾನು. ನಮಗೆ ಜೀವನದಲ್ಲಿ ಮನುಷ್ಯನಿಗೆ ಏನೆಲ್ಲಾ ಕಷ್ಟಗಳು ಬರಬಹುದೋ ಅದೆಲ್ಲವನ್ನೂ ಚಿಕ್ಕವಯಸ್ಸಿನಲ್ಲಿಯೇ ಬಹಳ ಹತ್ತಿರದಿಂದ ನೋಡುವಂತಾಯಿತು. ಅದರಿಂದಾಗಿ, ಹಣದ ಮೂಲಕ ಅಥವಾ ಯಾವುದೋ ಪ್ರಭಾವದಿಂದ ಮುಂದೆ ನಾನು ಬೆಳೆಯಬಹುದು ಅನ್ನೋ ಯೋಚನೆ ಇರಲಿಲ್ಲ. ನಾನು ಸ್ವಂತ ಪ್ರತಿಭೆಯಿಂದಲೇ ಬೆಳೆಯಲೇಬೇಕು ಅನ್ನೋ ಛಲ ಹುಟ್ಟುವುದಕ್ಕೂ ಅದೇ ಕಾರಣವಾಗಿತ್ತು. ಬೇರೆ ದಾರಿಯೇ ಇರಲಿಲ್ಲ. ವ್ಯಾಪಾರ ಅಥವಾ ಬೇರೆ ಕೆಲಸಗಳು ನನ್ನ ಗಮನವನ್ನು ಅಷ್ಟಾಗಿ ಓಲೈಸಿರಲಿಲ್ಲ. ನನಗೆ ಕೃಷಿಯಲ್ಲಿ ಆಸಕ್ತಿಯಿದ್ದಾದರೂ ಕಷ್ಟಪಟ್ಟು ಓದಿ ಏನಾದರೂ ಸಾಧಿಸಲೇಬೇಕೆಂಬ ಹುಚ್ಚಿತ್ತು. ತುಂಬಾ ಚೆನ್ನಾಗಿ ಓದುತ್ತಿದ್ದೆ. ೬ನೇ ತರಗತಿಯಲ್ಲಿದ್ದಾಗ ಸಾಮಾನ್ಯ ಜನರ ಅಭಿಪ್ರಾಯದಂತೆ ಅವರಿವರ ಮಾತುಗಲ ಪ್ರಕಾರ, ಹಣ ಅಥವಾಅ ಯಾರದೇಅ ಪ್ರಭವ ಇಲದೆ ಮಿಲಿಟಾರಿ ಸೇರಬಹುದು. ಅಲ್ಲಿ ಪ್ರತಿಭೆಗೆ ಮಾತ್ರ ಆದ್ಯತೆ ಅನ್ನುವ ಮಾತು ಕೇಳಿದ್ದೆ. ವಿದ್ಯಾರ್ಥಿ ವೇತನ ಸಿಗುತ್ತೆ, ನಿವೃತ್ತಿ ಆದ ಮೇಲೆ ಜಮೀನು ಕೊಡುತ್ತಾರೆ ಅನ್ನೋ ವಿಚಾರಗಳೆಲ್ಲಾ ಚರ್ಚೆಯಾಗುತ್ತಿದ್ದವು. ಹೀಗಾಗಿ, ಆ ಸಮಯದಲ್ಲಿ ಅದೇ ನನಗೆ ಸೂಕ್ತವಾದ ಕೆಲಸ ಅನಿಸಿತ್ತು. ಮಿಲಿಟರಿಗೆ ಹೋದರೆ ಕಷ್ಟಪಟ್ಟು ದುಡಿಯಬಹುದು, ದೇಶಸೇವೆಯನ್ನು ಮಾಡಬಹುದು ಅನ್ನೋ ಮನಸ್ಸಾಗಿತ್ತು. ಆಗಿನ ಕಷ್ಟದ ಅನುಭವವೇ ನನ್ನನ್ನು ಆ ರೀತಿ ಯೋಚನೆ ಮಾಡುವಂತೆ ಮಾಡಿತ್ತು. ನಮ್ಮ ತಂದೆಯವರಿಗೆ ಆರು ಜನ ಮಕಳು. ನಾಲ್ಕು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ಸಣ್ಣದೊಂದು ಹೊಟೇಲಿನಿಂದ ಜೀವನ ನಡೆಸುವುದು ಅಷ್ಟೊಂದು ಸುಲಭ ಇರಲಿಲ್ಲ. ತಿಪಟೂರಿನ ಗಾಂಧಿನಗರದಲ್ಲಿ ೭ನೇ ತರಗತಿ ಪಾಸಾಗಿ, ಅನಂತರ ೧೯೭೨ರಲ್ಲಿ ಶ್ರೀ ವಿದ್ಯಾಪೀಠ ಪ್ರೌಢಶಾಲೆಯಲ್ಲಿ  ೮ನೆ ತರಗತಿಗೆ ಸೇರಿಕೊಂಡೆ. ಅಲ್ಲಿಂದ ನನ್ನ ಕ್ರೀಡಾ ಜೀವನ ಪ್ರಾರಂಭವಾಯ್ತು. ಕಬಡ್ದಿ ಆಟಗಾರನಾಗಿ ಸೇರಿಕೊಂಡೆ. ಆಮೇಲೆ ಖೋ ಖೋ ಸೇರಿ ಅದರಲ್ಲೇ ಹೆಚ್ಚು ಪ್ರಖ್ಯಾತಿ ಪಡೆದೆ. ಎಸ್.ಎಸ್.ಎಲ್.ಸಿ.ಗೆ ಬರುವಷ್ಟರಲ್ಲಿ ಕ್ಯಾಪ್ಟೆನ್ ಆಗಿ ತಂಡವನ್ನು ನಿರ್ವಹಿಸುತ್ತಾ ಬಂದೆ. ಆಗಲೂ, ಮನ್ಯಲ್ಲಿ ಬಡತನದ ವಾತಾವರಣ ಹಾಗೆಯೇ ಮುಂದುವರೆದಿತ್ತು. ಜೀವನದಲ್ಲಿ ಮತ್ತೊಬ್ಬರಿಂದ ನಾವು ಮಾನವೀಯತೆಯನ್ನು ನಿರೀಕ್ಷೆ ಮಾಡುತ್ತಿದ್ದಂತ ದಿನಗಳನ್ನು ನಾನು ನೋಡಿದ್ದೆ. ಹೀಗಾಗಿ ಜೀವನದಲ್ಲಿ ನಾವು ಯಾವತ್ತೂ ಮಾನವೀಯತೆ ಮರೆಯಬಾರದು ಎನ್ನುವ ತತ್ವವನ್ನು ಪಾಲಿಸಿಕೊಂಡು ಬಂದಿದ್ದೀನಿ. ಬೆಳೆದಂತೆಲ್ಲ ಕೆಲವು ಜನ ಯಾವ ಕಾರಣಕ್ಕೆ ಇದನ್ನೆಲ್ಲ ಮರೆಯುತ್ತಾರೋ ನನಗಂತೂ ಗೊತ್ತಿಲ್ಲ. ಆದರೆ, ನನ್ನ ಮಟ್ಟಿಗೆ ಮರೆಯುವಂಥ ಪ್ರಮೇಯವೇ ಬರಲಿಲ್ಲ. ಜೀವನದ ಬಗ್ಗೆ ನಿಜವಾದ ಭಾವನೆ-ಕಲ್ಪನೆಗಳು ನಮಗೆ ಬೇಕು ಅನ್ನೋದೆ ನನ್ನ ಆಸೆ. ಆಗಲೇ ನಾವು ಸಂತೋಷ ಎಂದರೇನು, ನೆಮ್ಮದಿ ಎಂದರೇನು ಅನ್ನೋದನ್ನ ಅರ್ಥ ಮಡಿಕೊಳ್ಳೋಕೆ ಅದನ್ನು ಅನುಭವಿಸೋಕೆ ಸಾಧ್ಯವಾಗೋದು.

         ನಮ್ಮ ತಂದೆ ಬಡವರಾಗಿದ್ದರೂ, ಅವರನ್ನು ಎಲ್ಲರೂ ಸೇಠು ಎನ್ನುತ್ತಿದ್ದರು. ಮನೆಗೆ ಬಂದವರನ್ನು ಸತ್ಕಾರ ಮಾಡುತ್ತಿದ್ದ ಅವರ ಸಂಭ್ರಮ ನೋಡಿ ಅವರನ್ನು ದಿಲ್‍ದಾರ್ ಅನ್ನುತ್ತಿದ್ದರು. ಮನೆಗೆ ಬಂದವರನ್ನು ಸತ್ಕಾರ ಮಾಡುತ್ತಿದ್ದ ಅವರ ಸಂಭ್ರಮ ನೋಡಿ ಅವರನ್ನು ದಿಲ್‍ದಾರ್ ಅನ್ನುತ್ತಿದ್ದರು. ನಮ್ಮ ತಂದೆ-ತಾಯಿಗೆ ಬೇರೆಯವರನ್ನು ಕಂಡರೆ ಅವರಿಗೆ ಅಷ್ಟೊಂದು ಪ್ರೀತಿ, ಅಷ್ಟೊಂದು ಧಾರಾಳವಾಗಿ ಹಣ ಖರ್ಚು ಮಾಡುತ್ತಿದ್ದರು. ನಮ್ಮ ಮನೆಯಲ್ಲಿ ಎಷ್ಟೇ ಕಷ್ಟ ಇದ್ದರೂ, ಸಂತೋಷಕ್ಕೆ ಕೊರತೆ ಇರಲಿಲ್ಲ. ನಮ್ಮ ಹತ್ತಿರ ದುಡ್ಡಿಲ್ಲದೇ ಹೋದರೂ ನೆಮ್ಮದಿ ಇತ್ತು. ತಂದೆಯವರಿಗೆ ಮನೆ ಕಡೆ ಆಸ್ತಿ ಇದ್ದರೂ, ಅದರ ಕಡೆಗೆ ಅವರ ಯೋಚನೆ ಇರಲಿಲ್ಲ. ಆಮೇಲೆ ಅವರು ಹೊಟೇಲ್ ವ್ಯಾಪಾರ ಬಿಟ್ಟು ಕೊಬ್ಬರಿ ವ್ಯಾಪಾರ ಆರಂಭಿಸಿದರು. ಅಲ್ಲಿಂದ ನಮ್ಮ ಜೀವನ ಸ್ವಲ್ಪ ಸುಧಾರಣೆಯಾಯಿತು.

         ನಾನು ಕಾಲೇಜಿಗೆ ಬರುವಷ್ಟರಲ್ಲಿ ನಮ್ಮ ಅಣ್ನ ಟಿ.ಎಸ್.ಬಸವರಾಜ್ ಡಿಗ್ರಿ ಮುಗಿಸಿದ್ದರು. ಅವರೂ ಸಹಾ ಒಳ್ಳೆಯ ಕ್ರೀಡಾಪಟುವಾಗಿದ್ದರು. ಮಾಜಿ ಪುರಸಭೆ ಅಧ್ಯಕ್ಷರಾಗಿದ್ದರು. ಎ.ಪಿ.ಎಂ.ಸಿ. ನಿರ್ದೇಶಕರಾಗಿದ್ದರು. ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ಈಗ ಅವರೂ ಕೊಬ್ಬರಿ ಅಂಗಡಿ ಇಟ್ಟಿದ್ದಾರೆ. ನಮ್ಮ ಅಣ್ಣ ಮತ್ತು ನಮ್ಮ ತಮ್ಮ ಇಬ್ಬರೂ ನಮ್ಮ ತಂದೆಯ ಜೊತೆ ವ್ಯಾಪಾರದಲ್ಲಿ ನೆರವಿಗೆ ನಿಂತರು. ಹೀಗಾಗಿ, ೧೯೭೬ರ ನಂತರ ನಮ್ಮ ಕುಟುಂಬದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿತ್ತು. ೩೬ವರ್ಷದ ನಂತರ ಬದಲಾವಣೆಯ ಗಾಳಿ ಶುರುವಾಯಿತು. ಆಗ ನನಗೆ ೧೬ವರ್ಷ. ಅಲ್ಲಿಯವರೆಗೂ ಜೀವನ ತುಂಬಾ ಕಠಿಣವಾಗಿತ್ತು. ೧೯೮೦ರಲ್ಲಿ ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಬಿ.ಎ.ಪದವಿಯನ್ನು ಮುಗಿಸಿದೆ. ಅದೇ ವರ್ಷ ಎನ್.ಡಿ.ಎ. ಮಿಲಿಟರಿ ಪರೀಕ್ಷೆ ಪಾಸು ಮಾಡಿದೆ. ಆದರೆ, ಮನೆಯವರು ನನ್ನನ್ನು ಮಿಲಿಟರಿಗೆ ಕಳುಹಿಸಲಿಲ್ಲ. ಒಂದು ವರ್ಷ ವ್ಯರ್ಥವಾಯಿತು. ೧೯೮೧ರಲ್ಲಿ ಬಿ.ಪಿ.ಎಡ್. ಮುಂದುವರೆಸಿದೆ. ಅದರಲ್ಲಿ ಮ್೩ನೇ ರ್ಯಾಂಕ್ ಪಡೆದುಕೊಂಡೆ. ಆ ಸಂದರ್ಭದಲ್ಲಿ ಅಖಿಲ ಭಾರತ ಅಮತರ ವಿಶ್ವವಿದ್ಯಾಲಯದ ಟೂರ್ನಿಗಳಲ್ಲಿ ಭಾಗವಹಿಸಿದ್ದೆ. ಬೆಂಗಳೂರು ವಿಶ್ವವಿದ್ಯಾಲಯದ ಖೋ ಖೋ ತಂಡದ ನಾಯಕನಾಗಿದ್ದೆ. ನಾನು ಚಿಕ್ಕಬಳ್ಳಾಪುರದಲ್ಲಿ ಕೆ.ವಿ.ವೆಂಕಟಯ್ಯ ತೆಪ್ಪ ಬಿ.ಪಿ.ಎಡ್ ಕಾಲೇಜಿನಲ್ಲಿ ಲೆಕ್ಚರರ್ ಆಗಿ ಸೇರಿದೆ. ಮೊದಲನೆ ವರ್ಷವೇ ನಮ್ಮ ಕಾಲೇಜಿಗೆ ನಾಲ್ಕು ರ್ಯಾಂಕ್, ೨ನೇ ವರ್ಷ ೮ರ್ಯಾಂಕ್ ಗಳಿಸಿತ್ತು. ಪ್ರತಿ ವರ್ಷ ನಮ್ಮ ಕಾಲೇಜಿಗೆ ಹೆಚ್ಚಿನ ರ್ಯಾಂಕ್ ಬರುತ್ತಿತ್ತು. ಅನಂತರ, ಜ್ಯೋತಿ ನಿವಾಸ್ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕನಾಗಿ ಮೂರು ವರ್ಷ ಕಾರ್ಯನಿರ್ವಹಿಸಿದೆ. ೧೯೯೦ರ ಮಾರ್ಚ್‍ನಲ್ಲಿ ಸಬ್ ಇನ್ಸ್‍ಪೆಕ್ಟರ್ ಆಗಿ ಆಯ್ಕೆಯಾದೆ. ಆ ಸಂದರ್ಭದಲ್ಲಿ ವೆಂಕಟಸುಬ್ಬಯ್ಯ ಅವರು ರಾಜ್ಯಪಾಲರಾಗಿದ್ದರು. ಆಯ್ಕೆ ಪ್ರಕ್ರಿಯೆ ಮುಗಿಯೋಕೆ ಆರು ವರ್ಷವಾಯಿತು. ತರಬೇತಿ ಮುಗಿಸಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು, ಬಾಗೇಪಲ್ಲಿ, ಚಿಕ್ಕಬಲ್ಲಪುರ, ಗೌರಿಬಿದನೂರು, ದೊಡ್ಡಬಳ್ಳಾಪುರದಲ್ಲಿ ಕಾರ್ಯನಿರ್ವಹಿಸಿದೆ. ಪುನಃ ಸರ್ಕಲ್ ಇನ್ಸಪೆಕ್ಟರ್ ಆಗಿ ಗೌರಿಬಿದರ್ನೂರಿನಲ್ಲಿ ಕೆಲಸ ಮಾಡಿದೆ. ಬೆಂಗಳೂರಿನಲ್ಲಿ ರಾಜ್ಯ ಗುಪ್ತದಳ, ನಗರ ಉಪ್ತದಳ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ವಿಭಾಗಲ್ಲಿ ಕೆಲಸ ಆಡಿದ್ದೀನಿ. ಅನಂತ್ರ, ಹೆಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸಿದೆ. ಈಗ ೨ ವರ್ಷಗಳಿಂದ ಉಪ್ಪಾರ ಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ವೃತ್ತಿಯಲ್ಲಿ ಮರೆಯಲಾಗದ ಘಟನೆ ಎಂದರೆ, ೧೯೯೩ರಲ್ಲಿ ಶೇರ್‍ನಾಗ್ ಮತ್ತು ಅವನ ಸಹೋದರರನ್ನು ದಸ್ತಗಿರಿ ಮಾಡಿದ್ದು, ಅವರು ನಟೋರಿಯಸ್ ಡಕಾಯಿತರಾಗಿದ್ದರು. ಅವರ ಮೇಲೆ ೬೮ ಕೇಸುಗಳಿದ್ದವು. 'ಲಂಕೇಶ ಪತ್ರಿಕೆ'ಯಲ್ಲಿ ದ್ವಾರಕಾನಾಥ ವರದಿಗಾರರಾಗಿದ್ದರು. ಅದೇ ಮೊದಲನೆ ಬಾರಿಗೆ ಪೊಲೀಸ್ ಅಧಿಕಾರಿಯ ಫೋಟೊ ಪ್ರಕಟಿಸಿ, ಪ್ರಶಂಸೆಯ ಲೇಖನ ಬರೆದಿದ್ದರು. ನನ್ನ ಹಾಗೂ ಪ್ರಭಾಕರ್ ತಂಡದ ಸಂಚಿಕೆಯನ್ನು ಆ ಸಂಚಿಕೆಯಲ್ಲಿ ಪ್ರಕಟಿಸಿದ್ದರು. ನಮ್ಮ ಸಾಹಸದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ನನ್ನ ವೃತ್ತಿ ಜೀವನ್ದಲ್ಲಿ ಇಂಥ ಹಲವಾರು ಘಟನೆಗಳಿವೆ."

         ಕೆಲಸದ ಒತ್ತಡ ನಡುವೆಯೂ ಲೋಕೇಶ್ವರ ವರು ಇಷ್ಟೆಲ್ಲ ನುಭವಗಳನ್ನು ಹಂಚಿಕೊಂಡೀದ್ದರು. ಅತ್ಯಂತ ಸಂಯಮದಿಂದ ಬಂದವರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಒಂದೆಡೆ ಪೊಲೀಸ್ ಇಲಾಖೆಯ ಸಾಹಸಮಯ ಬದುಕಿನ ಜೊತೆ ಸಮಾಜ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವೌ ನಿಜಕ್ಕೂ ಅಭಿನಂದನೀಯ.

ಸಂದರ್ಶನ: ನಂದಕುಮಾರ್


ಲೋಕೇಶ್ವರ ಅವರಿಗೊಂದು ಅಭಿನಂದನೆ ಸಲ್ಲಿಸಬೇಕೆ..? ಹ್ಯಾಟ್ಸಾಫ್ ಹೇಳಬೇಕೆನಿಸುತ್ತಿದೆಯೇ...? ಇಗೋ ಅವರ ವಿಳಾಸ

ಲೋಕೇಶ್ವರ
ಉಪ್ಪಾರಪೇಠೆ ಪೊಲೀಸ್ ಠಾಣೆ
ಸುಖಸಾಗರ ರೆಸ್ಟೊರೆಂಟ್ ಹತ್ತಿರ
ಧನ್ವಂತರಿ ರಸ್ತೆ
ಉಪ್ಪಾರಪೇಟೆ
ಬೆಂಗಳೂರು - 560009
Ph: 080-22942503

Sunday 11 December 2011

S.S.L.C.ENGLISH -5 (Prose)


S.S.L.C.English Notes                                                Prepared by: Mr.G.S.Hattigoudar
                                                          Lesson 5
                          KALPANA THE STAR
                                  

 Meaning of the New words:
 Aeronautics = ªÁ0iÀÄÄ0iÀiÁ£ÀªÀ£ÀÄß PÀÄjvÀÄ CzsÀå0iÀÄ£À
 Aerospace = ¨sÀÆ«Ä0iÀÄ ªÁvÁªÀgÀt
 Back packing = CUÀvÀå«gÀĪÀ ªÀ¸ÀÄÛUÀ¼À£ÀÄß ¨É£Àß ªÉÄÃ¯É ºÉÆvÀÄÛPÉÆAqÀÄ ¥Àæ0iÀiÁt ªÀiÁqÀĪÀzÀÄ.
Cantor = ZÀað£À°è ºÁqÀĪÀªÀgÀ ªÀÄÄRå¸ÀÜ
Crew = «ªÀiÁ£ÀzÀ ¹§âA¢
Disaster = C¤jÃQëvÀ D¥ÀvÀÄÛ
Embark = ºÀqÀUÀÄ CxÀªÁ «ªÀiÁ£À Kj ¥Àæ0iÀiÁt ªÀiÁqÀĪÀzÀÄ.
Faiths = zsÁ«ÄðPÀ £ÀA©PÉUÀ¼ÀÄ
Frontiers = UÀr ¸ÀgÀºÀzÀÄÝ
Glider = ¥ÉÊ®mï¤AzÀ ¤0iÀÄAwæ¸À®àqÀĪÀ «ªÀiÁ£À
Hiking = ¸ÀÄ¢ÃWÀð zÀÆgÀzÀ £ÀrUÉ
Launch = gÁPÉmï£ÀÄß ºÁj¸ÀĪÀzÀÄ
Logged = zÁR°¸ÀĪÀzÀÄ
Marvellous = CzÀÄãvÀ
Orbit = PÀPÉë
Pilot = «ªÀiÁ£À ZÁ®PÀ
Remarkable = C¸ÁzsÁgÀt
Spangled Skies = £ÀPÀëvÀæUÀ½AzÀ PÀÆrzÀ DPÁ±À
Simulate = C£ÀÄPÀj¸ÀÄ
Space Shuttle = UÀUÀ£À £ËPÉ
Telescope = zÀÆgÀzÀ±ÀðPÀ
Tribute = ªÉÄZÀÄÑUÉ0iÀÄ £ÀÄrUÀ¼ÀÄ
Pride = ºÉªÉÄä
Jubiliation = ¥ÀgÀªÀiÁ£ÀAzÀ
Bated breath = DvÀÄgÀvÉ
Forecast = ªÀÄÄAzÁUÀĪÀzÀ£ÀÄß ¤gÀƦ¸ÀÄ
Snag = vÁAwæPÀ zÉÆõÀ
Pull of gloom = «µÀtÚvÉ0iÀÄ w¼ÀĪÀ½PÉ
Disintegration = MAzÀÄ ªÀ¸ÀÄÛ«£À ¨sÁUÀªÀ£ÀÄß ¨ÉÃ¥Àðr¸ÀĪÀzÀÄ
Video footage =  «r0iÉÆÃzÀ awæÃPÀgÀt
Poignancy = ºÀÈzÀ0iÀÄ ¸Àà²ð
Zoom = ªÉÄîPÉÌ ºÁgÀĪÀzÀÄ
Fancy = PÀ°à¸ÀÄ
Amateur = ºÀªÁå¹ PÀ¯ÁPÁgÀ
Spangle = ºÉƼÉ0iÀÄĪÀ ªÀ¸ÀÄÛ
Bother = vÉÆAzÀgÉ PÉÆqÀÄ
Unique =¸Àj¸Án¬Ä®èzÀ
Preferred= EµÀÖ¥ÀlÖ
Freelance = PÀlÖPÀqÉUÉ
Pursue = C£ÀĸÀj¸ÀÄ
Acquire =¸ÀA¥Á¢¸ÀÄ
Stun = £Á±À ºÉÆAzÀÄ
Condole = ¸ÀAvÁ¥À ¸ÀÆa¸ÀÄ

* Answer the following questions in a word, phrase or sentence each. (These questions may be ask in MCQ)

Q. Kalpana was the _______ Indian womam astronaut.
      First

Q. "She always held in high esteem." This means that she_______
     held high regard for him.

Q. Is a young girl Kalpana would look up at the stars and wish that-
     She had a telescope.

Q. "She left India as a student, but would see the nation of her birth all of it from hundreds of miles above." Who said this?
     George Bush

Q. Kalpana as student had great interest in subjects-
     Painting
                                                    
 
Q. In the drawing class Kalpana Chawla had a great interest in drawing-
     Planets and stars

Q. What subject did Kalpana choose for her higher studies?
     Aerospace Engineering

Q. The expanded form of "NASA" is_______
     National Aeronautics and Space Administration.

Q. Kalpana Chawla earned her bachelor's degree and moved to the______
     U.S.A.

Q. Kalpana Chawla had high aspect of J.R.D. Tata because-
     He had done some of the first mail flights.

Q. Kalpana was selected to the astronaut candidate by-
     NASA

Q. Piere Harrison wanted to marry Kalpana Chawla because-
     His Openion and belief were the same as Kalapana's.

Q. Just as the space shuttle Columbia was about to enter the earth's atmospher, it exploded because
     there was a technical snag.

Q. Kalpana Chawla was unique in many ways. The underlined word means-
    different from others

Q. On that ill fated saturday, stuudents had gathered at the school. The underlined word means-
     Unlucky

Q,. "She is immortal" This means that she-
      will never be forgotten

Q, The distance travelled by Kalpana Chawla in the 16 day trip during which she made 252 orbits of the earth is-
      6.5 million miles.

Q. Kalpana completed her schooling from-
     Tagore school

Q. The laboratory which was well-equipped for conducting experiments is-
     Space research laboratory

Q. As a girl Kalpana was a dreamer. This statement means that she-
     had lofty aims in life.

Q. USA is called the gateway to the skies. because-
     the USA does pioneering work in space research.

Q. Kalpana joined NASA in-
     1988
                                                                Jean pierrie Harrison

Q. The unfulfilled dreams or Kalpana was that
     landing on the mars

Q. Prime Minister Mr.Vajapeyee spoke words of great optimism when he said that-
     Our hearts go out to the bright young men and women who were on that space craft.

Q. The first Indian to fly in space was-
      Rakesh Sharma

Q. The tragedy will not deter further exploration because-
     Man is adventerous and not frightened of death.

Q. "I can't describe the overwhelming sense jubilation" Kalpana made this statement______
     on seeing the landscape of India from spacecraft.

Q. On its downward journey the temperature of underface of the satellite was_____
     2800 F

Q. "Sister mind the road," shouted Sanjay, when did Sanjay say these words? It was when Kalpana was____
     riding a bicycle dreaming that she was flying a pushpak.

Q. Karnal is______ km from Delhi.
     150

Q. While she was watching the sky, she desired for-
     a telescope to look at the stars clearly.

Q. How was she different from others as a girl? She____
     was a dreamer

Q. Why did her father resisted when she chose aerospace engineering as her subject of study at BE? It was because_____
     It was not a subject normally girls chose.

Q. Kalpana had her first flight into space on.
     Nov.19, 1997

Q. Then came the sad news and stunned silence. stunned means______
     shocked

Q. All the people working on ship or plain or space craft are called-
     Crew
                                                                                                             
Q. Karnal had a _____club.
     Flying

Q. Colombia space shuttle caught fire while-
    When it was re entering the earth's atmosphere.

Q. Kalpana was the first Indian woman-
     Astronaut

Q. The Government of India honoured Kalapana Chawla by -
     Renaming its first weather satellite 'Kalpana-1' in her honour.

Q. 'Kalpana-1' is the name of a-
      Weather satellite.

Q. "I'm not just another girl." To whom was it said by Kalpana Chawla?
      To Brother

Q. Sanjay Chawla said, "Isn't that what a star is?" - It means
      Kalpana never dies.

Q. Why did the students of Karnal gathered at the school?
     Premises firing of crackers in anticipation of the safe landing of the space craft.

Q. People all over the world particularly from India were waiting with bated brith for the landing fo spacecraft Because-
     One of the crew was Kalpana Chawla.

Q. Kalpana said,"I can't describe the over learning sunset jubilation. Here jubilation means-
     Great joy

Q. Kalpana was unique many ways, here unique means-
     Unusual

Q. She always held him in high esteem. Here 'esteem' means-
     Great respect

Q. Kalpana Chawla married______  Jean Pierre Harrison

Q. After a technical snag the shuttle caught fire and -
      Broke apart.

Q. An aeroplanes landing is also called-
     touch down.

Q. On the very first day at the university of Texas, Kalpana met_____ a freelance flying instructor.
     Jean Pierre Harrison.

Q. Give the correct form of the verb- Electronics was not the_______ subject of Kalpana.
     preffered

Q. The opposite of the initially is -
     Finally
                                                    
Q. People watched in horror as the plane crashed to the ground. Here horror means-
     A feeling of extreme fear.

Q. 'KALPANA-1' is the name of -
      First weather satellite.

Q. The space craft was on its_____journey.
      255th

Q. "We mourn with you in this moment of grief who said this?
     Atal Bihari Vajapeyi.

Q. Kalpana Chawla hails from this state-
     Haryana

Q. Convert this sentence into comparative degree- Karim is not as clever as Aziz.
      Karim is cleverer than Aziz.

Q. "I can't describe the over whelming sense of jubilation, I feel up here. The sun rises, the sun sets, the moon rises and the moon sets again and gain." Who said this?
      Willie MCcool.

Q. Kalpana Chawla had an opportunity of travelling in space the American space shuttle-
      Colombia

Q. Kalpana Chawla was the Indian born woman to go into the space.
      first

Q. The touch down time of 'Colombia' was______
      9:16 a.m.
                                                  
                                                
Q. The meaning of 'bated breath' is________
      anxiety

Q. The synonym of the word 'snag' is_____
      Technical trouble

Q. The space shuttle 'Colombia' caught fire and broken apart in the sky over Florida on______
      Feb.1, 2003

Q. 'Colombia' met with an accident barely___minutes before the scheduled touchdown time.
       11

Q. The expanded form of "IST" is ______
       Indian Standard Time

Q. Karnal is a small town in ______
      Haryana


Q. "Sister, mind the road." Who said this?
       Sanjay Chawla

Q. Whom did Kalpana Chawla hold in 'high esteem?'
     J.R.D.Tata

Q. Kalpana Chawla got admission at the Punjab engineering college in______
     Haryana

Q. Kalpana Chawla earned her Master's degree in Aerospace engineering in ______
     1984

Q. Kalpana Chawla earned her Ph.D degree from _______university in 1988.
     Colorado

    * Fill in the blanks with suitable prepostions
Q. A shocked nation paid rich tribute____Kalpana Chawla.
      to

Q. The nation was prepared_____dedicate____memory_____Kalpana Chawla METSAT
     to   in   of

Q. She was born____karnal____Haryana_____July 1, 1963
     at     in     in

Q. Kalpana was not afraid_____living out her passions.
     Of
                                                            

Q. _______the country, people_____various faiths drew ____beliefs____something_______death____explain____the disaster.
     across, of, on, of, beyond, to, to

Q. Kalpana wanted______reach out______for the stars
     to, for

Q. She became the first woman_____rocket_____space_____a NASA fact finding mission______microgravity.
     to,  into,  on, on

Q. After doing aeronautical engineering_____Punjab. She moved_____the U.S. a typical gateway____the skies and completed Ph.D_____colorado______being picked_____ NASA_____ 1994.
     in,  to,  to,  from,  beyond,  by,  in



* Fill the appropriate articles in the gap in the extracts

Q. Majappa is______empty. He is living in_______small house.
     Manjappa is an empty. He is living a small house.

Q. In____flash space story turned into matter of heaven.
     a

Q. Kalpana did nearly ____billion Indians proud.
     a

Q. She had____passion for flying.
     a

Q. ____so called space lab was equipped for experiments.
    The
                                                          

Q. One of______experiments completed_____day before her death involoved____Bio reacter demonstration system.
     the, the,  a

Q. _____crew also studied_____behaviour of bees, ants and spiders in micro gravity.
     the,    the

* Change into Indirect speech.

Q. "We miss people today." he told is son.
     He told his son that they missed people that day.

Q. PM Vajapayee said, “I am pleased to dedicate in Kalpana’s memeory METSAT lauched by the ISRO”
 PM Vajapayee happily announced that he was pleased to dedicate in Kalpana memory METSAT that had been lauched by the ISRO

Q. Kalpana said, “After partition my family was left without possessions but we learnt you couldn’t loose by working hard.”
    Kalpana said that after partition her family had been left without possessions but they had learnt that we couldn’t lose by working hard.

Q. After her school education, Kalpana_______(choose) science for her graduation.
    The appropriate tense form of the verb which should be used in the blank.
     Chose

Q. “And it is no wonder that the 41 years old Chawla flew throughout her life in flying colours” The Phrase underlined means_________
    With great distinction.


Q. Instead of celebration a pal of gloom decended on India. The phrase underlined means
  A sense of sorrow.

Q. A good paragraph must have the following features:
     Unity,  clarity   coherence   variety

Q. “Flying space craft became her passion.” The word ‘flying’ is a _________
      Gerund

Q. Substitute the following phrase- “A feeling of sorrow” –Give one word.
      Grief


* Answer the following questions in 2-3 sentences

Q. What makes you think that Kalpana as a girl was a unique?
     Kalpana's left in country yard of her house in summers she use to look at the sky. The stars imagining that she had a telescope.

Q. Why did Kalpana had great regard for J.R.D.Tata?
     Kalpana know that J.R.D.Tata had done some of the first mail flights in India. She also saw the aeroplanes that he flew hanging in one of the aerodromes.

Q. What was Kalpana's ambition in life?
     Kalpana was a unique as a girl she was a dreamer. She wanted to become a pilot or astronaut.

Q. How can you say, A Kalpana Chawla was different from other girls of her age?
     Kalpana Chawla was different from other children of her age. She would be drawing the designed of aeroplanes and space ships. She would not spend time chit-chatting. She could read books science and great scientist.

Q. What subject did Kalpana want to choose for higher studies? Why did her father resist?
     Kalpana wanted to choose aerospace engineering for her higher studies. Her father wanted to choose her electronics or electricals or architecture. They were the preffered the subjects of most of the students especially girls in those days.

Q. Why did the students gathering at the school on saturday twice?
     Students gathered at the school on saturday twice they were singing, dancing and setting of crackers in anticipation of the safe landing of the space craft. On the came to know that space craft caught fire and Kalpana perished. The students gathered again to mourn for Kalpana's death.

Q. What did the prime minister said about Kalpana in his condolens message?
     The prime minister said, "We mourn with you in this moment of grief. Our hearts go out to the bright young men and women who were on that space craft. For us in India we feel that since one of them is an Indian born woman."

Q. What did her brother Sanjay Chawla said about Kalpana Chawla?
     Sanjay Chawla said,"To me, my sister is not dead. She is immortal. Isn't that what a star is? She is a permanent star in the sky. She will always be there where she belongs."

Q. What were the achievements of Kalpana as an astronaut?

   Kalpana took part in two space Mission. In her second and the last mission she went round the earth 252 times covering millions of Kilometers. It was a record.

Q. How did Kalpana's father encourage her?
      Klapana's father played a crucial role in her career. There was a lot of opposition to her taking up aerospace engineering. Finally he consented and encouraged her.

Q. How did the Government of India honour Kalpana?
     As soon as the news of the tragedy came the Prime Minister announced in the Parliament renaming METSAT launched by ISRO on Sept 2, 2002 as Kalpana and dedicated it to her.

Q. How did Kalpana meet the opposition to her talking up aerospace engineering?
      Kalpana was a dreamer. Most people in her family were against her taking up aerospace engineering as her subject in the engineering college. She persisted and finally her father relented.

*Answer the following questions in a paragraph.

Q. What do you learn the life of Kalpana Chawla?
     We learn a great dream of Kalpana's life. She had set off goal for herself. Kalpana dreamed up becoming an astronaut. She worked with devotion to realize her dream. She had to face many herls. She had a strong will and face them successfully and realize the goal like Kalpana we should have a goal in our life and try to best achieve it. When her dreams come in oury way. We should face them boldly. We should learnt be brave and advantures.

Q. Discuss briefly on Kalpana's Education of India and aboard?
     Kalpana Chawla complete her schooling from Tagore's school in 1976. Later, She joined the Punjap engineering college Chandigarh and earned her bachelor degree. Kalpana went to united states and joined the university of texas. She earned her master degree in aerospace engineering. She then acquired Ph.D from colorado university in 1988.

Q. Give a brief account of the last flight of Kalpana Chawla?
       Kalpana Chawla and six other members of crew of the space shuttle of colombia took sits. The space shuttle started be moving very fast. The touch down time was 9:16a.m. in the morning. Just when every thing looked all right the instruments reported snag of some shorts. Some thing to do with tempareture on the tyre pressure. Before any one could think of what had happened the space shuttle caught fire and broke apart. All the members in space shuttle were burnt to death. All this happen on February 1, 2003.


          Additional information belongs to the lesson of     'KALPANA THE STAR'

                It was starting to get dim outside, so you got to see your own reflection. And there is the Earth, and you can still see the Earth's surface and the dark sky overhead. And I could then see my reflection in the window and in the retina of my eye the whole earth and the sky could be seen reflected. So I called all the crew members one by one and they saw it, and they said, 'oh wow'.
                                                                    Kalpana Chawla-Speaking from spaceship, Columbia.




      LEFT WING PUNCTURE CAUSED COLUMBIA CRASH: NASA

     A devastating puncture that allowed hot air inside the left wing may be the reason behind the disintegration of space shuttle Columbia on February. I that killed Kalpana Chawla and six other astronauts.
        Investigators, in a first significant determination on the cause of the crash, said Columbia broke up during re-entry possibly because of the presence of super-heated air or plasma inside the left wing.
             The new theory for the crash of the space shuttle effectively rules out the loss of heat resistant tiles as was intially put forth as a possible cause for the disaster.
    The columbia accident investigation board was now studying various scenarios that could cause a breach allowing plasma, that surrounds a spacecraft during re-entry, into the wheel compartment or elsewhere in the wing.
         Moments before Columbia disintegrated, mission control in Houston detected an unusually high geat build-up in the shuttle's left wing, which could have indicated missing or damaged tiles.


        A description of what went wrong to Columbia space shuttle

         On 16 January 2003 the space shuttle Columbia lifted off from Kennedy Space center in Florida for its 28th flight into space. 82 seconds into the launch, as the shuttle prepared to increase power to its engines, a 50 cm, 1.13 kg piedce of insulating foam was seen to break off from the external fuel tank and strike Columbia’s wing. At the time engineers the incident was unlikely to have caused any serious damage.





Colombia’s crew more than two weeks in space, orbiting the Earth at 28, 163 km/h. In this time the astronauts carried out more than 80 experiments, including investigation into tumor growth, cleaner methods of combustion and climate change, in the shuttle’s onboard laboratory, spacehab. Investigatiors later disclosed that on day two, military radar images unseen by Nasa technicians at the time-showed what could have been a small section of the leading edge of the left wing floating away into space.




    At0815 (1315GMT) on 1 February the astronaut used Columbia’s maneuvering rockets to position the shuttle into the correct angle to re-enter the Earth’s atmosphere. During is descent, the shuttle would have reached speeds in excess of Mach 20. As the plunged downwards, atmospheric gases pushed out of the way by the vehicle’s airframe would have generate temperatures of about 1,600 degrees Celsius. About 20,000 ceramic tiles covering the shuttle’s surfaces were supposed to protect it and the crew from the intense heat.



       
                              First sing of trouble

As Columbia descended, the autopilot made a series of sharp 58-degree turns to slow the vehicle. At 0851 the first sign emerged that the shuttle’s aerodynamics were not behaving as on previous flights. Columbia started to experience increased drag on its left-hand side. As the right fired in an attempt to compensate. At 0852 a series of sensors began to show unusual temperature rises in and around the left wing.




Investigators believes that the leading edge of the wing, damaged by the insulating foam during lauch, allowed superheated gas at temperatures of about 1,600 degrees Celsius to penetrate and melt the interior. At 0853 an amateur photographer captured footage of debris leaving the shuttle at 231,000 feet as it crossed the California coastline. Another image appeared to show the left wing of the shuttle with a jagged edge, with a trail of debris showering behind.



                                     Columbia breaks up

          For the next six minutes, recovered flight data shows that the shuttle was finding it increasingly difficult to maintain stability. A number of temperature sensors in the left side of the shuttle had stopped working. At 0859 flight controllers contacted shuttle commander Rick Husband about abnormal tyre temperature readings.  Husband responded: “Roger….erm..” Contact with the shuttle was lost. Columbia was close to Dallas, Texas, and traveling at Mach 18. Analysis of video footage indicates the main body of the shuttle broke apart about 20 seconds after 0900.