Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Monday 17 December 2012

ಐ.ಎ.ಎಸ್ ಪರೀಕ್ಷೆಯಲ್ಲಿ ಬದಲಾವಣೆಗಳು



            2011ನೇ ಸಾಲಿನ ನಾಗರಿಕ ಸೇವೆಗಳ (ಐ.ಎ.ಎಸ್) ಪೂರ್ವಭಾವಿ ಪರೀಕ್ಷೆ (Preliminary Exam)ಯಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಿದ ಕೇಂದ್ರ ಲೋಕಸೇವಾ ಆಯೋಗ (U.P.S.C) ಮುಖ್ಯಪರೀಕ್ಷೆಯಲ್ಲಿಯೂ ಬದಲಾವಣೆಗಳನ್ನು ತರಲು ಆಲೋಚಿಸುತ್ತಿದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಬದಲಾವಣೆಗಳಿಗಾಗಿ ಅಲಘ್ ಸಮಿತಿ, ಎರಡನೇ ಆಡಳಿತ ಸುಧಾರಣಾ ಆಯೋಗ ಮತ್ತು ಎಸ್.ಕೆ.ಖನ್ನಾ ನೇತೃತ್ವದ ತಜ್ಞರ ಸಮಿತಿ ಶಿಫಾರಸು ಮಾಡಿದ್ದವು. ಪೂರ್ವಭಾವಿ ಪರೀಕ್ಷೆಯಲ್ಲಿ ಅಳವಡಿಸಲಾದ ಬದಲಾವಣೆಗಳಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಏಕೆಂದರೆ ಈ ಬದಲಾವಣೆಗಳು ಆಯ್ಕೆಗಾಗಿ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಅಭ್ಯರ್ಥಿಗಳಿಗೆ ಅನುಕೂಲಕರವಾಗಿವೆ. ತಪ್ಪಿಸಿಕೊಳ್ಳಲಾಗದ, ನಿರ್ಲಕ್ಷಿಸಲಾಗದ ಕಟ್ಟುನಿಟ್ಟಿನ ನಾಗರಿಕ ಸೇವೆಗಳಿಗೆ ಬಹುಭಾಷೆಗಳಿಂದ, ಬಹುಸಂಸ್ಕೃತಿ, ಸಮುದಾಯಗಳಿಂದ ಅರ್ಹ ಮತ್ತು ದಕ್ಷ ಅಭ್ಯರ್ಥಿಗಳನ್ನು ಆಯ್ಕೆಮಾಡುವ ಉದ್ದೇಶದಿಂದ ಆಯೋಗ ಮುಖ್ಯ ಪರೀಕ್ಷೆಯಲ್ಲಿಯೂ ಅಗತ್ಯವಿರುವ ಮತ್ತು ಸಾಧ್ಯವಿರುವ ಬದಲಾವಣೆಗಳನ್ನು ಅಳವಡಿಸಲು ಅಣಿಯಾಗಿದೆ. ಇದಕ್ಕಾಗಿ 2011 ಡಿಸೆಂಬರ್‌ನಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಹಿಂದಿನ ಚೇರ್ಮನ್ ಪ್ರೊ.ಅರುಣ್ .ಎಸ್. ನಿಗಾವೆಕರ್ ನೇತೃತ್ವದಲ್ಲಿ ಉನ್ನತ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ಪ್ರಚಲಿತ ಮುಖ್ಯ ಪರೀಕ್ಷೆಯ ವಿಧಾನವನ್ನು ಪರಿಶೀಲಿಸಿ ಅಗತ್ಯವಿರುವ ಬದಲಾವಣೆಗಳನ್ನು ಶಿಫಾರಸು ಮಾಡಿದೆ. ವರದಿ ಈಗಾಗಲೇ ಆಯೋಗದ ಕೈ ಸೇರಿರಬಹುದು. ಸಮಿತಿ ಶಿಫಾರಸು ಮಾಡುವ ಬದಲಾವಣೆಗಳ ಉದ್ದೇಶ ದೇಶಿಯ ಮತ್ತು ಜಾಗತಿಕ ಸಾಮಾಜಿಕ, ಆರ್ಥಿಕ ಹಾಗೂ ತಂತ್ರಜ್ಞಾನ ಸನ್ನಿವೇಶಗಳು ವೇಗವಾಗಿ ಬದಲಾಗುತ್ತಿರುವಾಗ ಉತ್ತಮ ಆಡಳಿತ ನೀಡಲು ಅರ್ಹ ಮತ್ತು ದಕ್ಷ ಅಭ್ಯರ್ಥಿಗಳನ್ನು ಗುರುತಿಸಿ ನಿರ್ಧರಿಸುವುದಾಗಿರುತ್ತದೆ.

              ಸಮಿತಿಯು ಈಗ ಚಾಲ್ತಿಯಲ್ಲಿರುವ ಆಯ್ಕೆ ವಿಧಾನಗಳನ್ನು ಅಧ್ಯಯನ ಮಾಡಿ ಮುಂದಿನ ದಶಕದ ಸಲುವಾಗಿ ಅಭ್ಯರ್ಥಿಗಳನ್ನು ಆಯ್ಕೆಮಾಡಲು ಅವರ ಅಪೇಕ್ಷಿತ ಅರ್ಹತೆ, ಪ್ರತಿಭೆ ಮತ್ತು ವ್ಯಕ್ತಿತ್ವವನ್ನು ಗುರುತಿಸುವುದಕ್ಕಾಗಿ ಆಯೋಗಕ್ಕೆ ಹೊಸ ಆಯ್ಕೆ ವಿಧಾನಗಳನ್ನು ಸಲಹೆ ಮಾಡಿರಬಹುದು. ಬದಲಾದ ಅಗತ್ಯಗಳಿಗೆ ಅನುಗುಣವಾಗದ ಆಯೋಗದ ಹಲೆಯ ವಿಧಾನದ ವಿಕಾಸಕ್ಕೆ, ವಿಕಸಿತ ವ್ಯವಸ್ಥೆಗೆ ಸಮಿತಿ ಒತ್ತು ನೀಡಿರಬಹುದು. ಆಯೋಗ ಆಯ್ಕೆ ಮಾಡುವ ಅಭ್ಯರ್ಥಿಗಳೇನಾದರೂ ತರಬೇತಿಯಲ್ಲಾಗಲಿ ಅಥವಾ ಪ್ರೊಬೇಶನರಿ (ಪರೀಕ್ಷಾರ್ಥ) ಅವಧಿಯಲ್ಲಾಗಲಿ ನಾಗರಿಕ ಸೇವೆಗೆ ಸೂಕ್ತವಲ್ಲವೆಂದು ತಿಳಿದುಬಂದರೆ ಪ್ರೊಬೇಶನರಿ ಅವಧಿಯೇ ರದ್ದಾಗಿ ಆಯೋಗಕ್ಕೆ ಅವಮಾನವಾಗುತ್ತದೆ. ಅದಕ್ಕಾಗಿ ಆಯ್ಕೆಯಾಗುವಾಗ ಅಭ್ಯರ್ಥಿಗಳ ಅಭ್ಯರ್ಥಿತನದ ಸಾಧನೆಯನ್ನು ಮೌಲ್ಯಮಾಪನ ಮಾಡುವುದರಲ್ಲಿ ಆಯೋಗ ನಿರ್ವಹಿಸಬೇಕಾಗ ಪಾತ್ರವನ್ನು ಸಮಿತಿ ಆಯೋಗಕ್ಕೆ ಮನದಟ್ಟು ಮಾಡಿರಬಹುದು. ನಾಗರಿಕ ಸೇವೆಗಳಿಗೆ ನಡೆಯುವ ಆಯ್ಕೆ ಪ್ರಕ್ರಿಯೆಗೆ ಪ್ರಸ್ತುತವೆನಿಸುವ ಇತರ ವಿಷಯಗಳ ಕುರಿತೂ ಸಮಿತಿ ಆಯೋಗಕ್ಕೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿರಬಹುದಾಗಿದೆ.

              ಸಮಿತಿಯು ಹಿಂದಿನ ಸಮಿತಿಗಳ, ಮುಖ್ಯವಾಗಿ ಅಲಘ್ ಸಮಿತಿ ಮತ್ತು ಎರಡನೇ ಆಡಳಿತ ಸುಧಾರಣಾ ಆಯೋಗದ ವರದಿಗಳನ್ನು ಸಹ ಪರಿಶೀಲಿಸಿರುತ್ತದೆ. 2001ರಲ್ಲಿ ರಚಿಸಲ್ಪಟ್ಟ ಅಲಘ್ ಸಮಿತಿ ಮುಖ್ಯ ಪರೀಕ್ಷೆಯ ವಿಧಾನವನ್ನು ಕೂಲಂಕುಷವಾಗಿ ಪರಿಶೀಲಿಸಿ ಉನ್ನತ ನಾಗರಿಕ ಸೇವೆಗಳಿಗೆ ನೇಮಕಗೊಳ್ಳುವವರ ಜ್ಞಾನದ ವ್ಯಾಪ್ತಿ, ಅರ್ಹತೆ, ಪ್ರತಿಭೆ ಮತ್ತು ವ್ಯಕ್ತಿತ್ವವನು ಪರೀಕ್ಷಿಸಲು ಐಚ್ಚಿಕ ವಿಷಯಗಳ ಬದಲಿಗೆ ಕಡ್ಡಾಯ ವಿಷಯಗಳಿಗೆ ಸಂಬಂಧಪಟ್ಟ ಪತ್ರಿಕೆಗಳಿರಬೇಕೆಂದು ಸಲಹೆ ಮಾಡಿತ್ತು.

                ನಿಗಾವೆಕರ್ ಸಮಿತಿಯ ಶಿಫಾರಸು ಆಯೋಗದ ಬಳಿ ಇರಬಹುದು. ಆದರೆ ಅದು ಶಿಫಾರಸು ಮಾಡಿದ ಬದಲಾವಣೆಗಳು 2013ರ ಮುಖ್ಯ ಪರೀಕ್ಷೆಯಲ್ಲಿ ಜಾರಿಗೆ ಬರುವ ನಿರೀಕ್ಷೆಯಿಲ್ಲ. 2013ರಲ್ಲಿ ಅಥವಾ 2014ರಲ್ಲಿ ಜಾರಿಗೆ ಬರಬಹುದು.

                                 - ಬಿ.ಎಸ್.ವಸಂತಕುಮಾರ

Wednesday 12 December 2012

Today's special

ಪ್ರಿಯ ಓದುಗರೇ,
ಇವತ್ತಿನ ದಿನ ತುಂಬಾ ವಿಶೇಷವಾದುದು. ದಿನಾಂಕ ೧೨ ತಿಂಗಳು ೧೨ ಮತ್ತು ವರ್ಷವೂ ಕೂಡ ೧೨ (೨೦೧೨) ಇಂಥ ದಿನ ನಮ್ಮ ಜೀವನದಲ್ಲಿ ಮತ್ತೆ ಬರುವುದಿಲ್ಲ. ಇಂದಿನ ದಿನವನ್ನು ನಾವೆಲ್ಲ ನೆನಪಿಟ್ಟುಕೊಳ್ಳಬೇಕಾದ ದಿನವಾಗಿದೆ.

Monday 12 November 2012

ದೀಪಾವಳಿ

               ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಲೇಖನ

                          "ಭಾರತವು ಹಬ್ಬಗಳ ತವರೂರು. ಇಲ್ಲಿ ಎಲ್ಲ ಹಬ್ಬಗಳನ್ನು ಆಯಾ ಧರ್ಮ, ಪ್ರಾದೇಶಿಕತೆ, ಸಂಸ್ಕೃತಿಗೆ ಅನುಗುಣವಾಗಿ ಆಚರಿಸುತ್ತಾರೆ. ಈ ಎಲ್ಲ ಹಬ್ಬಗಳಲ್ಲಿ ಪ್ರಮುಖವಾದ ಹಬ್ಬವೆಂದರೆ, ದೀಪಾವಳಿ." ಭಾರತದ ಎಲ್ಲ ಭಾಗಗಳಲ್ಲೂ ಸಂಭ್ರಮವಾಗಿ ಆಚರಿಸಲ್ಪಡುವ ದೀಪಾವಳಿಯನ್ನು ದಕ್ಷಿಣ ಭಾರತದಲ್ಲಿ ಮೂರು ದಿನ ಆಚರಿಸಿದರೆ, ಉತ್ತರ ಭಾರತದಲ್ಲಿ ಐದು ದಿನಗಳ ಕಾಲ ಆಚರಿಸುವರು.
                                  ಅಸತೋಮಾ ಸದ್ಗಮಯ
                                  ತಮಸೋಮಾ ಜ್ಯೋತಿರ್ಗಮಯ
                                  ಮೃತ್ಯೋಮಾ ಅಮೃತಂಗಮಯ ||
 ಅರ್ಥ: ಅಸತ್ಯದಿಂದ ಸತ್ಯದೆಡೆಗೂ, ಕತ್ತಲೆಯಿಂದ ಬೆಳಕಿನೆಡೆಗೂ, ಮೃತ್ಯುವಿನಿಂದ ಅಮೃತತ್ವದೆಡೆಗೂ ನಮ್ಮನ್ನು ಕರೆದೊಯ್ಯುವ ಜ್ಞಾನದ ಬೆಳಕಿನ ಸಂಕೇತವಾಗಿದೆ. "ಅಜ್ಞಾನವೆಂಬ ಅಂಧಕಾರವನ್ನು ಜ್ಞಾನವೆಂಬ ಬೆಳಕಿನಿಂದ ಹೊಡೆದೋಡಿಸಿ, ಮನುಷ್ಯನ ಬದುಕಿನಲ್ಲಿ ಜ್ಞಾನವನ್ನು ತುಂಬುವಂತೆ ಮಾಡುವ ಸಂಕೇತವೇ ದೀಪಾವಳಿ." ಒಂದು ದೀಪದಿಂದ ನೂರಾರು ದೀಪಗಳನ್ನು ಹೇಗೆ ಹಚ್ಚಬಹುದೋ ಹಾಗೆಯೇ ಒಬ್ಬ ಜ್ಞಾನಿಯು ತನ್ನಲ್ಲಿರುವ ಜ್ಞಾನದಿಂದ ನೂರಾರು ಅಜ್ಞಾನಿಗಳನ್ನು ಜ್ಞಾನಿಯನ್ನಾಗಿ ಪರಿವರ್ತಿಸಬಹುದು.
                                  ದೀಪ+ಅವಳಿ ಎಂದರೆ `ಜೋಡಿ ದೀಪ' ಹಾಗೂ ಸಾಲು ಸಾಲುಗಳ ದೀಪಗಳ ಹಬ್ಬಕ್ಕೆ ದೀಪಾವಳಿ ಎಂಬ ಹೆಸರು ಬಂದಿದೆ.
                           ಹಬ್ಬದ ಪೂರ್ವದಲ್ಲಿ ಮನೆ ಸ್ವಚ್ಚಗೊಳಿಸಿ, ಸಾರಿಸಿ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಈ ಹಬ್ಬದಲ್ಲಿ ಫಳಾರದ್ದೇ ಜೋರು. ಉಂಡಿ, ಚಕ್ಕುಲಿ, ಕರ್ಚಿಕಾಯಿ, ಶಂಕರಪಾಳಿ, ಚೂಡಾ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತದೆ.
                       ಅಶ್ವೀಜ ಮಾಸ ಬಹುಳ ತ್ರಯೋದಶಿಯಂದು ದೀಪಾವಳಿ ಪ್ರಾರಂಭವಾಗುತ್ತದೆ. ಇದಕ್ಕೆ `ಜಲಪೂರ್ಣ ತ್ರಯೋದಶಿ' ಎಂತಲೂ ಕರೆಯುತ್ತಾರೆ. ಅಂದು ಸಂಜೆ ಸ್ನಾನದ ಕೋಣೆಯನ್ನು ಚೆನ್ನಾಗಿ ಶುದ್ಧಮಾಡಿ ಹಂಡೆಗೆ, ನೀರಿನ ತೊಟ್ಟಿ(ಇಂದು ಗೀಜರ್, ಬಾಯ್ಲರ್) ಚೆನ್ನಾಗಿ ಉಜ್ಜಿ ತೊಳೆದು, ಶುದ್ಧವಾದ ನೀರನ್ನು ತುಂಬಿ ಪಾತ್ರೆಗಳಿಗೆ ಸುಣ್ಣದಲ್ಲಿ ಪಟ್ಟೆಯನ್ನು ಬಳಿದು, ಗೆಜ್ಜೆ ವಸ್ತ್ರಗಳನ್ನೇರಿಸಿ ಅರಿಶಿಣ, ಕುಂಕುಮಗಳಿಂದ ನೇವೈದ್ಯದಲ್ಲಿ ವಿಶೇಷವಾಗಿ ಶಾವಿಗೆ ಪಾಯಸ ಮಾಡಿ ನೇವೈದ್ಯ ಊಟ ಮಾಡುತ್ತಾರೆ. ಇದನ್ನು `ನೀರು ತುಂಬುವ ಹಬ್ಬ' ಎಂದು ಕರೆಯುತ್ತಾರೆ.

ನರಕ ಚತುರ್ದಶಿ : ಮನೆಯವರೆಲ್ಲರೂ ನರಕ ಚತುರ್ದಶಿಯಂದು ಎಣ್ಣೆ ಸ್ನಾನ ಮಾಡುತ್ತಾರೆ. ಕೇದಾರೇಶ್ವರ ವ್ರತ ಹಾಗೂ ಮನೆ, ಅಂಗಡಿ ಮುಂಗಟ್ಟುಗಳಲ್ಲಿ ಧನಲಕ್ಷ್ಮೀ ಪೂಜೆಯನ್ನು ಮಾಡಲಾಗುತ್ತದೆ. ಅರುಣೋದಯದಲ್ಲಿ ಮನೆಯಂಗಳ ಸಾರಿಸಿ, ರಂಗೋಲಿ ಹಾಕಿ ದೀಪಗಳನ್ನು ಬೆಳಗಿಸಲಾಗುತ್ತದೆ. ಅಂದ ಚೆಂದದ ಆಕಾಶಬುಟ್ಟಿಗಳನ್ನು ಮನೆಯ ಮುಂಬಾಗಿಲಿಗೆ ಇಳಿಬಿಟ್ಟ ದೃಶ್ಯ ಕಾಣಸಿಗುತ್ತದೆ. ಈ ದಿನದ ಸ್ನಾನಕ್ಕೆ ಬಹಳ ಮಹತ್ವವಿದೆ. ಸ್ತ್ರೀಯರು, ಪುರುಷರು, ಮಕ್ಕಳು, ವೃದ್ಧರು, ರೋಗಿಗಳನ್ನೊಳಗೊಂಡಂತೆ ಸನ್ಯಾಸಿಗಳು ಸಹ ಇಂದು ಎಣ್ಣೆಸ್ನಾನ ಮಾಡಲೇಬೇಕು ಎಂದು ಧರ್ಮಶಾಸ್ತ್ರ ಹೇಳುತ್ತದೆ. ಎಣ್ಣೆಯಲ್ಲಿ ಲಕ್ಷ್ಮೀಯು, ನೀರಿನಲ್ಲಿ ಗಂಗೆಯೂ ಇರುವದರಿಂದ ಲಕ್ಷ್ಮೀ, ಗಂಗೆಯರ ಕೃಪೆ, ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆಯಿಂದ ಎಣ್ಣೆಸ್ನಾನ ಮಾಡುತ್ತಾರೆ.
                   `ನರಕ' ಎಂಬುದಕ್ಕೆ ಅಜ್ಞಾನ ಎಂಬ ಅರ್ಥವಿದೆ. ಈ ಅಜ್ಞಾನವು ಚತುರ್ದಶಿಯ ದಿನದಿಂದಲೇ ನಾಶವಾಗಿ ಜ್ಞಾನವು ದೊರೆಯಲಿ ಎಂದು ನರಕ ಚತುರ್ದಶಿ ಹಬ್ಬವನ್ನು ಆಚರಿಸಲಾಗುತ್ತದೆ ಹಾಗೂ `ಚತುರ್ದಶಿ' ಎಂದರೆ ಹದಿನಾಲ್ಕು ವಿದ್ಯೆ ಎಂದರ್ಥ. ಜ್ಞಾನವನ್ನು ಪಡೆಯಲು ೧೪ ವಿದ್ಯೆಗಳನ್ನು ಸಂಪಾದಿಸಬೇಕೆಂದು ಎಂದು ವೇದೋಪನಿಷತ್ತುಗಳು ಹೇಳುತ್ತವೆ. ಆ ಹದಿನಾಲ್ಕು ವಿದ್ಯೆಗಳು ಹೀಗಿವೆ -
೧. ಯಜುರ್ವೇದ
೨. ಸಾಮವೇದ
೩. ಋಗ್ವೇದ
೪. ಅಥರ್ವಣವೇದ
೫. ಕಲ್ಪ
೬. ಸಂಹಿತೆ
೭. ಜ್ಯೋತಿಷ್ಯ
೮. ಪುರಾಣ
೯. ಸ್ಮೃತಿ
೧೦. ವ್ಯಾಕರಣ
೧೧. ಶೀಕ್ಷಾ
೧೨. ನ್ಯಾಯ
೧೩. ಛಂದಸ್ಸು
೧೪. ಮೀಮಾಂಸೆ
                    ದೀಪಾವಳಿ ಅಮವಾಸ್ಯೆ ಲಕ್ಷ್ಮೀ ಪೂಜೆಗೆ ಅತ್ಯಂತ ಪ್ರಶಸ್ತವಾದ ಶುಭದಿನ. ಸಾಮಾನ್ಯವಾಗಿ ಹಿಂದೂ ಪಂಚಾಂಗದ ಪ್ರಕಾರ ಅಮವಾಸ್ಯೆಯನ್ನು ಅಶುಭದಿನ ಎಂದು ಪರಿಗಣಿಸಲಾಗುತ್ತದೆ. ಅಂದು ಯಾವುದೇ ಹೊಸ ಕಾರ್ಯವಾಗಲೀ, ಖರೀದಿಯಾಗಲಿ, ಮಂಗಳಕರ ಪೂಜೆಯನ್ನಾಗಲೀ ಮಾಡುವದಿಲ್ಲ. ಆದರೆ, ಈ ದೀಪಾವಳಿ ಅಮವಾಸ್ಯೆಯು ಇದಕ್ಕೆ ಹೊರತಾಗಿದೆ. ಏಕೆಂದರೆ, ಪುರಾಣದ ಕಾಲದಲ್ಲಿ ಸಮುದ್ರಮಂಥನ ಮಾಡುವಾಗ ಮಹಾಲಕ್ಷ್ಮಿಯು ಜನಿಸಿದಳು ಎಂಬ ಪ್ರತೀತಿಯಿಂದ ಇಂದು ವ್ಯಾಪಾರಸ್ಥರು ತಮ್ಮ ಅಂಗಡಿ, ಮುಂಗಟ್ಟುಗಳಲ್ಲಿ, ಕಛೇರಿಗಳಲ್ಲಿ ಧನಲಕ್ಷ್ಮಿ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡಿ, "ವರುಷವೆಲ್ಲಾ ಹರುಷ ನೀಡಿ, ಸಿರಿ-ಸಂಪತ್ತು ನೀಡೆಂದು" ಪ್ರಾರ್ಥಿಸುತ್ತಾರೆ. ಎಲ್ಲರಿಗೂ ಸಿಹಿ ಹಂಚಿ ಖುಷಿಪಡುತ್ತಾರೆ. ಅಂದು ಇರುಳೆಲ್ಲ ಅಂಗಡಿ ಬಾಗಿಲು ತೆಗೆದಿರಿಸಿ ಜಾಗರಣೆ ಮಾಡುತ್ತಾರೆ. ಈ ದಿನದಂದು ಯಾವುದೇ ಶುಭಕಾರ್ಯವನ್ನು ತಿಥಿ, ನಕ್ಷತ್ರ ಕಾಲವನ್ನು ನೋಡದೇ ಆರಂಭಿಸಬಹುದೆಂದು ಹೇಳುತ್ತಾರೆ. ಸಂಜೆ ಹಾಡು, ಕುಣಿತ, ಬಂಧು-ಬಾಂಧವರೊಡನೆ ಜೂಜಾಡುತ್ತಾ ರಾತ್ರಿ ಸಮಯವನ್ನು ಕಳೆಯುತ್ತಾರೆ. ವಿಶೇಷವೆಂದರೆ, ಅಂದು ಮನೆ, ಬೀದಿ, ದೇವಸ್ಥಾನ ಅಲ್ಲದೇ ಸ್ಮಶಾನದಲ್ಲಿಯೂ ದೀಪವನ್ನು ಬೆಳಗಿಸಲಾಗುತ್ತದೆ.
                             ಈ ನರಕ ಚತುರ್ದಶಿಯ ಪೌರಾಣಿಕ ಹಿನ್ನೆಲೆ ಕಥೆಯೊಂದು ಹೀಗಿದೆ -
               ದ್ವಾಪರಯುಗದಲ್ಲಿ ನರಕಾಸುರ ಎಂಬ ರಾಕ್ಷಸನು ಲೋಕಕಂಟಕನಾಗಿದ್ದ. ಆತ ೧೬ ಸಾವಿರ ರಾಜಪುತ್ರಿಯರನ್ನು ಸೆರೆಯಲ್ಲಿಟ್ಟಿದ್ದನು. ಇವನ ಉಪಟಳ ತಾಳಲಾರದೆ ಇಂದ್ರಾದಿಯಾಗಿ ಎಲ್ಲ ದೇವತೆಗಳು ಶ್ರೀ ಕೃಷ್ಣನಲ್ಲಿ ಮೊರೆ ಹೋದರು.ನಂತರ ಶ್ರೀ ಕೃಷ್ಣನು ಅಶ್ವೀಜ ಮಾಸದ ಬಹುಳ ಕೃಷ್ಣಪಕ್ಷ ಚತುರ್ದಶಿಯಂದು ಸಂಹಾರ ಮಾಡಿದನು. ನಂತರ ಸೆರೆಯಲ್ಲಿಟ್ಟಿದ್ದ ೧೬ಸಾವಿರ ರಾಜಪುತ್ರಿಯರನ್ನು ಬಿಡುಗಡೆ ಮಾಡಿದನು. ಅವರೆಲ್ಲರೂ ಸೆರೆಯಾಳುಗಳಾಗಿದ್ದ ತಮ್ಮನ್ನು ಯಾರೂ ವಿವಾಹವಾಗುವದಿಲ್ಲವೆಂದು ಬಗೆದು ಶ್ರೀ ಕೃಷ್ಣನನ್ನು ವರಿಸಿದರು. ನರಕಾಸುರನನ್ನು ವಧಿಸಿದ ರಕ್ತದ ಕೊಳೆಯನ್ನು ತೊಳೆಯಲು ರುಕ್ಮಿಣಿಯು ಶ್ರೀ ಕೃಷ್ಣನಿಗೆ ಎಣ್ಣೆನೀರು ಹಚ್ಚಿ ಅಭ್ಯಂಗ ಸ್ನಾನ ಮಾಡಿಸಿದಳೆಂದು, ಅದರ ಪ್ರತೀಕವಾಗಿ ಎಣ್ಣೆನೀರು ಸ್ನಾನ ಮಾಡಲಾಗುತ್ತದೆ.
                                  ಈ ದಿನದ ಜೈನರ ೨೪ನೇ ತೀರ್ಥಂಕರನಾದ ಮಹಾವೀರನು ನಿರ್ವಾಣವಾಗಿರುವದರಿಂದ ಗುಜರಾತಿನ ಮಂದಿ ಇದನ್ನು ಹೊಸ ವರ್ಷವೆಂದು ಕರೆಯುತ್ತಾರೆ.

 ಬಲಪಾಡ್ಯಮಿ : ಇಂದಿನಿಂದ ಕಾರ್ತಿಕಮಾಸದಾರಂಭ. ಈ ಹಬ್ಬದ ಪೌರಾಣಿಕ ಕಥೆಯ ಪ್ರಕಾರ- ಪ್ರಹ್ಲಾದನ ಮೊಮ್ಮಗನಾದ ಬಲಿ ಚಕ್ರವರ್ತಿಯು ಮಹಾದಾನಿ; ಹಾಗೆಯೇ ಮಹಾಗರ್ವಿ. ಇಂದ್ರನನ್ನು ಸೋಲಿಸಿ ಸ್ವರ್ಗವನ್ನೇ ತನ್ನ ವಶದಲ್ಲಿಟ್ಟುಕೊಂಡಿದ್ದ. ಇವನ ಗರ್ವವನ್ನು ಮುರಿಯಬೇಕೆಂದು ಭಗವಾನ್ ವಿಷ್ಣುವು ವಾಮನ ಅವತಾರ ತಾಳಿ ಬಲಿಚಕ್ರವರ್ತಿಗೆ ಮೂರಡಿ ಜಾಗ ಕೇಳಿದಾಗ, ಬಲಿಯು ಅಹಂನಿಂದ "ಕೇವಲ ಮೂರಡಿ ಜಾಗವೇ, ವಿಶಾಲವಾದ ನನ್ನ ಸಾಮ್ರಾಜ್ಯದಲ್ಲಿ ನಿನಗೆ ಮೂರಡಿ ಜಾಗ ಕೊಡಬಲ್ಲೆ." ಎಂದು ಗರ್ವದಿಂದ ಹೇಳುತ್ತಾನೆ. ಕೂಡಲೇ ವಿಷ್ಣುವು ಆಕಾಶದೆತ್ತರಕ್ಕೆ ಬೆಳೆದು, ಒಂದು ಹೆಜ್ಜೆ ಭೂಮಿಯ ಮೇಲೆ ಇನ್ನೊಂದು ಹೆಜ್ಜೆ ಆಕಾಶದಲ್ಲಿ ಇಟ್ಟು, ಇನ್ನೊಂದು ಹೆಜ್ಜೆ ಎಲ್ಲಿ ಇಡಲಿ ಎಂದು ಕೇಳಿದಾಗ, ಬಲಿಯು ತನ್ನ ಗರ್ವವನ್ನು ಮುರಿದು ತನ್ನ ಶಿರಸ್ಸಿನ ಮೇಲೆ ಇಡು ಎಂದಾಗ ಅದರಂತೆ ವಿಷ್ಣುವು ಅವನನ್ನು ಪಾತಾಳಕ್ಕೆ ತಳ್ಳುತ್ತಾನೆ. ನಂತರ ಪಾತಾಳದ ದ್ವಾರವನ್ನು ತಾನೇ ಕಾಯುವದಾಗಿ ನಾರಾಯಣ ಹೇಳುತ್ತಾನೆ.
                    ಬಲಿ ಚಕ್ರವರ್ತಿಯು ವಿಷ್ಣುವಿನಲ್ಲಿ ವರುಷದಲ್ಲಿ ಮೂರುದಿನ ನನ್ನ ರಾಜ್ಯವನ್ನು ನೋಡುವ ಅವಕಾಶ ಎಂದು ಕೇಳಿದನಲ್ಲದೇ, "ಈ ಮೂರು ದಿನ ಮನೆಯಲ್ಲಿ ಯಾರು ಅವರ ಮನೆಯಲ್ಲಿ ದೀಪವನ್ನು ಬೆಳಗುತ್ತಾರೋ ಅವರ ಮನೆಯಲ್ಲಿ ನಿನ್ನ ಧರ್ಮಪತ್ನಿ ಮಹಾಲಕ್ಷ್ಮಿಯು ಸ್ಥಿರವಾಗಿ ನೆಲೆಸುವಂತೆ ಮಾಡು" ಎಂದು ವರ ಬೇಡಿದ. ಅದಕ್ಕೆ ವಿಷ್ಣುವು "ತಥಾಸ್ತು" ಎಂದ. ಹೀಗೆ ಪ್ರಜೆಗಳ ಹಿತವನ್ನೇ ಸದಾ ಬಯಸುತಿದ್ದ ಬಲಿ ತನ್ನ ಪ್ರಾಣತ್ಯಾಗ ಮಾಡಿದರೂ ಜನರ ಮನೆಗಳಲ್ಲಿ ಲಕ್ಷ್ಮೀ ಸದಾ ಸಾನಿಧ್ಯವಿರುವಂತೆ ಮಾಡಿದ ಮಹಾವ್ಯಕ್ತಿ. ತಾನೂ ಉರಿದರೂ, ಊರಿಗೆ ಬೆಳಕು ನೀಡುವ ಪರಂಜ್ಯೋತಿಯನ್ನು ನೋಡುತ್ತಾ, ಮನುಷ್ಯ ಸ್ವಾರ್ಥವನ್ನು ತಾನೂ ಜ್ಯೋತಿಯಂತೆ ಇತರರಿಗೆ ಬೆಳಕಾದ ಬಲಿಯ ನೆನಪಾಗಿ ಬಲಿಪಾಡ್ಯಮಿ ಆಚರಿಸಲಾಗುತ್ತದೆ.
                        ಅದೂ ಅಲ್ಲದೇ, ಇಂದು ಸಗಣಿಯಲ್ಲಿ ಕೋಟೆ ಕಟ್ಟಿ, ಅದಕ್ಕೆ ಸಮೃದ್ಧಿಯ ಸಂಕೇತವಾಗಿ ತೆನೆ, ಹುಚ್ಚೆಳ್ಳು, ಹೂವು ಸೇರಿಸಿ ಹೊಸಲಿನ ಬಳಿ ಇಡುತ್ತಾರೆ. ಈ ಪದ್ಧತಿ ಪಾಂಡವರಿಂದ ನಡೆದು ಬಂದಿದ್ದರಿಂದ ಇದನ್ನು `ಪಾಂಡವ'ಗಳು ಎಂದು ಕರೆಯಲಾಗುತ್ತದೆ. ಇನ್ನೂ ಬಲಿಪಾಡ್ಯಮಿ ಶ್ರೀರಾಮನಿಗೆ ಪಟ್ಟಾಭಿಷೇಕವಾದ ದಿನ. ಪಾಂಡವರು ಅಜ್ಞಾತವಾಸ ಮುಗಿಸಿದ ದಿನ. ಉತ್ತರಪ್ರದೇಶದ ಮಥುರೆಯ ಜನ ಈ ದಿನವನ್ನು `ಗೋವರ್ಧನ ಪೂಜೆ' ಎಂಬ ಹೆಸರಿನಲ್ಲಿ ಆಚರಿಸುತ್ತಾರೆ. ಇಂದ್ರನು ತನ್ನ ಪೂಜೆಯನ್ನು ತಪ್ಪಿಸಿದ ಮಥುರೆಯ ಜನರ ಮೇಲೆ ಏಳು ದಿನಗಳ ಕಾಲ ಧಾರಾಕಾರ ಮಳೆ ಸುರಿಸುತ್ತಾನೆ. ಇಂದ್ರನ ಅಹಂಕಾರವನ್ನು ಅಡಗಿಸಲು ಕೃಷ್ಣನು ಗೋವರ್ಧನ ಗಿರಿಯನ್ನೇ ಮೇಲಕ್ಕೆತ್ತಿ ಅದರ ಕೆಳಗೆ ಎಲ್ಲಾ ಗೋಪಾಲಕರಿಗೆ ಆಶ್ರಯ ನೀಡುತ್ತಾನೆ. ಹಾಗಾಗಿ ಈ ದಿನವನ್ನು ಕೃಷ್ಣನ ಹೆಸರಿನಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ. ಈ ದಿನದಂದು ಜನರ ಸಂಭ್ರಮಕ್ಕೆ ಕಳೆ ಕಟ್ಟಿರುತ್ತದೆ. ಇಂದು ಯಾರು, ಯಾವ ರೀತಿಯ ಮನಸ್ಸಿನಲ್ಲಿ ಇರುತ್ತಾರೋ, ಅದೇ ರೀತಿಯ ಮನಸ್ಥಿತಿಯಲ್ಲಿ (ಸಂತೋಷ, ದುಃಖ, ಅತೃಪ್ತಿ) ಆ ವರುಷವೆಲ್ಲಾ ಇರುತ್ತದೆಂದು ಹಿರಿಯರು ಹೇಳುತ್ತಾರೆ. ಹಾಗಾಗಿ ಬಲಿಪಾಡ್ಯಮಿಯ ದಿನ ಹಿರಿಯರಿಗೆ ಸಂತೋಷದಿಂದ ನಮಸ್ಕರಿಸಿ ಆಶೀರ್ವಾದ ಪಡೆಯುವ ಪದ್ಧತಿ ಇದೆ.
ಬಲಿ ಚಕ್ರವರ್ತಿ ಮನೆಗೆ ಬಂದ ಮೂರು ದಿನವೂ ಮನೆ ತುಂಬ ಸಂಭ್ರಮ, ಸಂತೋಷದ ಬೆಳಕು ತುಂಬಿರುತ್ತದೆ. ಬಲಿಯು ಕೂಡ ಪಾತಾಳದಿಂದ ಮೇಲೆದ್ದು ಬಂದು ಭೂಮಿಯ ಜನ ಸಂತೋಷಪಡುತ್ತಿರುವದನ್ನು ಕಂಡು ತಾನೂ ಸಂತೋಷಪಡುತ್ತಾನೆ.
  ಈ ಹಬ್ಬದ ವೇಳೆಗೆ ರೈತರಿಗೆ ಮುಂಗಾರು ಬೆಳೆಯ ಧನಲಕ್ಷ್ಮೀ ಕೈ ಸೇರಿರುತ್ತದೆ. (ಪ್ರಸ್ತುತ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ರೈತರು ಸಂಕಷ್ಟಕ್ಕೀಡಾಗಿರುವದು ವಿಷಾದಕರ ಸಂಗತಿ.) ಇಂತಹ ಸಂದರ್ಭದಲ್ಲಿ ಬಲಿಯು ಹಚ್ಚ ಹಸಿರು ಬಣ್ಣ ಹೊದ್ದು ಮಧುಮಗಳಂತೆ ಸಿಂಗರಿಸಿಕೊಂಡಿರುವ ಭೂಮಾತೆಯನ್ನು ನೋಡಲು ಹಂಬಲಿಸುತ್ತಾನೆ. ತಾನು ಬರುತ್ತಿರುವದರಿಂದ ಜನರೆಲ್ಲ ಸಂತೋಷಪಡುತ್ತಿರುವದನ್ನು ಕಂಡು, ತಾನು ಸಂತೋಷ, ಸಂತೃಪ್ತಿಯನ್ನು ಪಡೆಯುತ್ತಾನೆ. ತನ್ನ ರಾಜ್ಯದ ಬಗ್ಗೆ, ಅಲ್ಲಿಯ ಜನರ ಬಗೆ ಅದೆಷ್ಟು ಕಾಳಜಿ, ಪ್ರೀತಿ ಆತನಲ್ಲಿ ತುಂಬಿದೆ ಎಂಬುದು ಈ ಜಾನಪದ ಗೀತೆಯಿಂದ ತಿಳಿದುಬರುತ್ತದೆ.
              "ದನ ಕಾಯ್ವ ಮಕ್ಕಳಿರಾಽಽಽ
              ಕೊಡಿರಯ್ಯಾ ಬೀಜವಽಽ
              ಬಿತ್ತುತ ಹೋಗುವೆ ಹೊಲದಲಿಽಽ
              ಮುತ್ತು, ಮಾಣಿಕ್ಯವ ಬೆಳೆಯಲಿ." ಎಂದು ಬಲೀಂದ್ರ ಹಾರೈಸುತ್ತಾನೆಂದಾಗ ಆತನದು ಎಂತಹ ಉದಾತ್ತ ಆಶಯವೆನ್ನುವದು ತಿಳಿಯುತ್ತದೆ. ಹೀಗೆ ಬಂದ್ ಬಲಿಯು ಮರಳುವಾಗ ಜನರ ಹೃದಯ, ಮನ ಭಾರವಾಗುತ್ತದೆ. ಅದಕ್ಕೆ ಅವರು ಮನದಾಳದಿಂದ -
      "ಇಂದೋದ ಬಲೀಯಂದ್ರಽಽ
   ಮತ್ತೆಂದು ಬಪ್ಪೆಯೋಽಽ
  ಮುಂದಕ್ಕೆ ಈ ದಿನಕ್ಕೆ
  ಬಪ್ಪೆಯಾಽಽ..." ಎಂದು ಹಾಡುವದನ್ನು ಕೇಳಿದಾಗ ಹಳ್ಳಿಯ ಜನರ ಮನದಲ್ಲಿ ಅದೆಷ್ಟು ಆಳವಾಗಿ, ಆತ್ಮೀಯವಾಗಿ ವಾಸವಾಗಿದ್ದಾನೆ ಎನ್ನುವದು ತಿಳಿಯುತ್ತದೆ.
      ದೀಪಾವಳಿ ಹಬ್ಬದ ಕೊನೆಯ ದಿನವೇ ಯಮದ್ವಿತೀಯಾ, ಅಂದು ಯಮಧರ್ಮರಾಯನು ತನ್ನ ತಂಗಿಯಾದ ಯಮುನಾದೇವಿಯ ಮನೆಗೆ ಹೋಗಿ, ಆದರೋಪಚಾರಗಳಿಂದ ಆತಿಥ್ಯ ಪಡೆದು, ತಂಗಿಯನ್ನು ಹರಸಿದ ದಿನವೆಂದು ಈ ದಿನ ಅಕ್ಕ-ತಂಗಿಯರು, ಸಹೋದರರನ್ನು ಮನೆಗೆ ಆಹ್ವಾನಿಸಿ, ಪ್ರೀತಿಯಿಂದ ತಮ್ಮ ಕೈಯಾರೆ ಅಡುಗೆ ಮಾಡಿ ಉಣಬಡಿಸುವರು. ಆರತಿ ಮಾಡಿ, ಉಡುಗೊರೆ ಪಡೆಯುವರು.
               ದೀಪಾವಳಿಯಲ್ಲಿ ಇನ್ನೊಂದು ವಿಶೇಷತನವೆಂದರೆ, `ಅಳಿಯತನ'. ಮಗಳಿಗೆ ಮದುವೆಯಾದ ಮೊದಲ ವರ್ಷ ಮಗಳು, ಅಳಿಯ ಹಾಗೂ ಬೀಗರನ್ನು ಬರಮಾಡಿಕೊಂಡು ತರತರಹದ ಅಡುಗೆ ಮಾಡಿ, ಉಣಬಡಿಸಿ ಉಡುಗೊರೆಗಳನ್ನು ಕೊಡುವರು.
       ದೀಪಾವಳಿ ಹಬ್ಬದ ಸಂಭ್ರಮವಂತೂ ಸಿಡಿಮದ್ದುಗಳ ಹೊಗೆಯ ಕಪ್ಪಿನಲ್ಲೇ ತುಂಬಿರುತ್ತದೆ. ಹಬ್ಬದ ದಿನ ಬೀದಿಗಳಲ್ಲಿ ನಡೆದಾಡುವರು. ವಾಹನಗಳಲ್ಲಿ ಹೋಗುವವರು ಎಲ್ಲಿ ಯಾರು ಪಟಾಕಿಯನ್ನು ಎಸೆಯುತ್ತಾರೋ ಎಂಬ ಅಳುಕಿನಿಂದಲೇ ಓಡಾಡಬೇಕಾಗುತ್ತದೆ. ಹಬ್ಬದ ಸಂಭ್ರಮ ಅನುಭವಿಸುವದಕ್ಕಿಂತ ಎಲ್ಲಿ ಏನು ಅನಾಹುತವಾಬಿಡುತ್ತದೆಯೋ ಎಂಬ ಮಾನಸಿಕ ಒತ್ತಡವೇ ಜಾಸ್ತಿಯಾಗಿರುತ್ತದೆ. ಸಂಜೆಯಾಗುತ್ತಲೇ ಮಕ್ಕಳು ಪಟಾಕಿ ಯಾವಾಗ ಹೊಡೆಯುತ್ತವೆಯೋ ಎಂಬ ಆತುರ, ನಿರೀಕ್ಷೆಯಲ್ಲಿರುತ್ತಾರೆ. ಪಟಾಕಿ ಹೊಡೆಯುವಾಗ ಅವರ ಸಂಭ್ರಮ ಹೇಳತೀರದು. ಆದರೆ, ಕೊಂಚ ಎಚ್ಚರ ತಪ್ಪಿದರೆ, ಅಪಾಯ ಕಟ್ಟಿಟ್ಟ ಬುತ್ತಿ. ಕ್ಷಣಿಕ ಸಡಗರ ಅರಸಿ ಹೋದವರು ಜೀವನ ಪೂರ್ತಿ ನೋವು ಅನುಭವಿಸಬೇಕಾದ ಸ್ಥಿತಿ ಬರಬಹುದು. ಎಷ್ಟೋ ಬಾರಿ ಜೀವಹಾನಿಯು ಆಗುತ್ತದೆ. ಮದ್ದು ಸಿಡಿಯುವ ರೀತಿ, ಅದರಿಂದ ಹೊರಹೊಮ್ಮುವ ಶಾಖ, ಅದರಲ್ಲಿನ ರಾಸಾಯನಿಕ ಇವು ಆಘಾತವನ್ನುಂಟು ಮಾಡುತ್ತವೆ. ಪಟಾಕಿಯಿಂದ ಕಣ್ಣಿನ ಕಾರ್ನಿಯಾ, ಕಂಜೈಕ್ಟೆವಾ, ಕಪ್ಪು ಗುಡ್ಡೆಗಳಿಗೆ ತೊಂದರೆಯಾಗುವ ಸಾಧ್ಯತೆ ಜಾಸ್ತಿ. ಕಣ್ಣು ತುಂಬಾ ಸೂಕ್ಷ್ಮವಾಗಿದ್ದು, ಸ್ವಲ್ಪ ಎಚ್ಚರ ತಪ್ಪಿದರೆ ದೃಷ್ಟಿ ಕಳೆದುಕೊಳ್ಳಬೇಕಾದೀತು. 
         ಸಿಡಿಮದ್ದುಗಳನ್ನು ಮುಟ್ಟಿದ ಕೈಯಿಂದ ಕಣ್ಣು ಉಜ್ಜಿದರೆ, ಕಣ್ಣುರಿ, ಕಣ್ಣು ಕೆಂಪಾಗುವದು. ಕಣ್ಣಿನಲ್ಲಿ ನೀರು ಸೋರುವದು ಇತ್ಯಾದಿ ಸಮಸ್ಯೆಗಳು ಕಂಡು ಬರುತ್ತವೆ. ದೀಪಾವಳಿಯು ಸುರಕ್ಷಿತ ಮತ್ತು ಮಂಗಳಮಯವಾಗಿರಬೇಕು. ಅದಕ್ಕಾಗಿ ಈ ಕೆಳಗೆ ಕಾಣಿಸಿದ ಎಚ್ಚರಿಕೆ, ಸಲಹೆಗಳಂತೆ ಪಟಾಕಿ ಹಾರಿಸಿರಿ -
 ೧. ಪಟಾಕಿ ಚಿಕ್ಕದಿರಲಿ ಅಥವಾ ದೊಡ್ಡದಿರಲಿ ವಿಶಾಲವಾದ ಮೈದಾನದಲ್ಲಿ ಸಿಡಿಸಿರಿ.
 ೨. ರಾಕೆಟ್‍ನಂತಹ ಮೇಲಕ್ಕೆ ಹಾರುವ ಪಟಾಕಿಗಳನ್ನು ಮನೆಯ ಮಾಳಿಗೆಯ ಮೇಲೆ ಹಾರಿಸುವದು ಉತ್ತಮ. ಇಲ್ಲವೇ ನೀರ್‍ಇನ ಬಾಟಲಿಯಲ್ಲಿ ಮೇಲ್ಮುಖವಾಗಿ ನೇರವಾಗಿರುವಂತೆ ಸಿಕ್ಕಿಸಿ ಉಡಾಯಿಸಿರಿ.
೩. ಪಟಾಕಿ ಹಚ್ಚುವ ಸಮಯದಲ್ಲಿ ಕಾಟನ್ ಬಟ್ಟೆಗಳನ್ನು ಧರಿಸುವದು ಉತ್ತಮ.
೪. ಪಟಾಕಿಯನ್ನು ಕೈಯಲ್ಲಿ ಹಿಡಿದು ಹಚ್ಚುವದು ಒಳ್ಳೆಯದಲ್ಲ. ಮಕ್ಕಳು ಪಟಾಕಿ ಹಚ್ಚುವಾಗ ಹಿರಿಯರು ಅವರೊಂದಿಗೆ ಇರುವದು ಅವಶ್ಯ.
೫. ಮಕ್ಕಳು ಪಟಾಕಿಯನ್ನು ಜೇಬಿನಲ್ಲಿ, ಅಡುಗೆ ಮನೆಯಲ್ಲಿ ಇಡಲು ಅನುಮತಿ ಕೊಡಬೇಡಿ.
೬. ಪಟಾಕಿ ಹಚ್ಚುವ ಸ್ಥಳದ ಸುತ್ತಮುತ್ತ ಯಾವುದೇ ಜ್ವಲಿಸುವ ಪದಾರ್ಥ ಇರಬಾರದು.
೭. ದೊಡ್ಡ ಶಬ್ದ ಮಾಡುವ ಪಟಾಕಿಗಳನ್ನು ಹಚ್ಚುವಾಗ ಕಿವಿಗಳಿಗೆ ಹತ್ತಿ ಇಟ್ಟುಕೊಂಡರೆ ಒಳ್ಳೆಯದು. ಇಲ್ಲಾವಾದಲ್ಲಿ ಭಾರೀ ಶಬ್ದದಿಂದ ಕಿವಿಯ ತಮಟೆ ಹರಿಯುವದು.
೮. ಅರ್ಧ ಉರಿದು ಆರಿದ ಪಟಾಕಿಗಳನ್ನು ಮತ್ತೆ ಹಚ್ಚಲು ಹೋಗಬೇಡಿ.
೯. ಪಟಾಕಿಯ ಮದ್ದಿನ ತುದಿಯನ್ನು ಕಿತ್ತಿ, ಉದ್ದನೆಯ ಗಂಧದಕಡ್ಡಿಯಿಂದ ಹಚ್ಚುವದು ಕ್ಷೇಮ.
೧೦. ದೊಡ್ಡ ದೊಡ್ಡ ಪಟಾಕಿಗಳನ್ನು ಮಕ್ಕಳ ಕೈಗೆ ಕೊಡಬೇಡಿ.
೧೧. ನವಜಾತ ಮಗು, ಗರ್ಭಿಣಿ, ಹೃದಯರೋಗಿಗಳು, ಅಲರ್ಜಿ, ಅಸ್ತಮಾ ಇರುವವರ ಸಮೀಪ ಭಯಂಕರ ಶಬ್ದ ಮಾಡುವ ಪಟಾಕಿ ಹಚ್ಚಬೇಡಿ.
೧೨. ಸುಟ್ಟಗಾಯದ ಮುಲಾಮು, ಪ್ರಥಮಚಿಕಿತ್ಸಾ ಪೆಟ್ಟಿಗೆ, ನೀರು ಮುಂತಾದವು ತಕ್ಷಣ ಕೈಗೆ ಸಿಗುವಂತೆ ಇಡಬೇಕು.

                           ಸಿಡಿಮದ್ದಿನಿಂದ ತ್ವಜೆಯ ಯಾವುದೇ ಭಾಗಕ್ಕೆ ಗಾಯವಾದರೂ ಮೊದಲು ಶುದ್ಧನೀರಿನಿಂದ ತೊಳೆಯಿರಿ. ಚಿಕ್ಕಪುಟ್ಟ ಗಾಯಗಳಾದರೆ ಮನೆಯಲ್ಲಿನ ಔಷಧಿಗಳನ್ನು ಹಚ್ಚಬಹುದು. ಆಘಾತ ದೊಡ್ಡ ಪ್ರಮಾಣದಲ್ಲಾಗಿದ್ದರೆ ಸಮೀಪದ ಡಾಕ್ಟರ್‌ರನ್ನು ಸಂಪರ್ಕಿಸುವದು ಒಳಿತು.
    ದೀಪಾವಳಿಯಲ್ಲಿ ಪಟಾಕಿ ಸುಡುವ ಸಂಪ್ರದಾಯದ ಹಿಂದೆ ಒಂದು ಒಳ್ಳೆಯ ಉದ್ದೇಶವಿತ್ತೆಂದು ಹೇಳಲಾಗುತ್ತದೆ. ಪಟಾಕಿಯ ಹೊಗೆಯಿಂದ ಮಳೆಗಾಲದಲ್ಲಿ ಹುಟ್ಟಿಕೊಂಡ ಹುಳ-ಹುಪ್ಪಡಿಗಳು ನಾಶವಾಗಲಿ ಮತ್ತು ಪಟಾಕಿಯ ಜೋರು ಸದ್ದಿನಿಂದ ವಿಷಜಂತುಗಳು ದೂರ್‍ಅ ಹೋಗಲಿ ಎಂಬ ಉದ್ದೇಶವಿತ್ತು.
             ಇನ್ನೂ ಈ ದೀಪಾವಳಿ ಹಬ್ಬವು ಸಂತೋಷ, ಸಂಭ್ರಮ ನೀಡುವದಷ್ಟೇ ಅಲ್ಲದೇ ಮುರಿದು ಹೋದ ಸಂಬಂಧಗಳನ್ನು ಪುನಃ ಬೆಸೆಯಲಿಕ್ಕಾಗಿ ಒಳ್ಳೆಯ ಅವಕಾಶ ಕಲ್ಪಿಸುತ್ತದೆ. ಅದುವರೆಗೂ ಮಾತು-ಕತೆ, ಒಡನಾಟ ಬಿಟ್ಟ ಬೀಗರನ್ನಾಗಲಿ, ತಂದೆ-ತಾಯಿ, ಪತ್ನಿ, ಮಕ್ಕಳು ಹೀಗೆ ಅಂದು ಎಲ್ಲರೂ ಒಂದುಗೂಡಿ ಪರಸ್ಪರ ಮನಸ್ಸಿನ ಮಾತುಗಳನ್ನು ಹೇಳಿಕೊಂಡಾಗ ಮನಸ್ಸು ಹಗುರವಾಗುತ್ತದೆ.
                             ಪ್ರೇಮಿಗಳಿಗೆ ಈ ಹಬ್ಬವೇನು ಹೊರತಲ್ಲ. ಅಂದು ಪರಸ್ಪರ ಉಡುಗೊರೆಗಳನ್ನು ಕೊಟ್ಟು ಶುಭಾಶಯ ಕೋರುತ್ತಾರೆ. ಒಂದು ನಿರ್ದಿಷ್ಟ ಸ್ಥಳದಲ್ಲಿ ಸಂಧಿಸಿ, ಪರಸ್ಪರ ಪ್ರೀತಿ-ಭಾವನೆಗಳನ್ನು ಹಂಚಿಕೊಳ್ಳುತ್ತಾರೆ.
                        ನೀವು ಕೊಡುವ ಉಡುಗೊರೆಗಳು ದುಬಾರಿಯೇ ಆಗಿರಲಿ ಅಥವಾ ಅಗ್ಗವಾಗಿಯೇ ಇರಲಿ ಆದರೆ, ಅದು ನಿಮ್ಮ ಭಾವನೆ, ಪ್ರೀತಿ ಅವರಿಗೆ ತಲುಪಿಸುವಂತಿರಬೇಕು. ನಿಸ್ವಾರ್ಥ ಮತ್ತು ನಿಷ್ಕಲ್ಮಶ ಸ್ನೇಹ ಸಿಂಚನಗೈಯುವ ಪ್ರೀತಿಯಿಂದ ಕೂಡಿರಬೇಕು; ಬದಲಾಗಿ ನಿಮ್ಮ ಶ್ರೀಮಂತಿಕೆ, ಅಹಂ ಇದರಲ್ಲಿ ಕೂಡಿರಬಾರದು ಅಂದಾಗ ಮಾತ್ರ ಅದು ನಿಜವಾದ ಉಡುಗೊರೆಯಾಗುವದು. ಉಡುಗೊರೆ ಕೊಡಲು ಸಾಧ್ಯವಾಗದಿದ್ದರೂ ತುಂಬು ಮನಸ್ಸಿನಿಂದ, ಹೃದಯಾಂತರಾಳದಿಂದ ಶುಭಾಶಯ ತಿಳಿಸಬೇಕು.
                "ವರುಷಕ್ಕೊಮ್ಮೆ ಬರುವದು ದೀಪಾವಳಿ
                 ಇನ್ನಾದರೂ ಅಳಿಯಲಿ, ದ್ವೇಷ, ಅಸೂಯೆ
                 ಎಂಬ ಹಾವಳಿ;
                 ಬದುಕಲ್ಲಿ ಅಜ್ಞಾನವೆಂಬ ಕತ್ತಲು
                 ಕಳೆದು, ಸುಜ್ಞಾನವೆಂಬ ಬೆಳಕು ಮೂಡಲಿ
                 ಎಲ್ಲರೂ ಒಟ್ಟಿಗೆ ಇರೋಣ
                 ನೂರುಕಾಲ ಬಾಳಿ..."

                                               ಲೇಖಕರು : - ಜಿ.ಎಸ್.ಹತ್ತಿಗೌಡರ

                                   

Tuesday 30 October 2012

ವಚನಗಳು



ಎನಿಸುಕಾಲ ಕಲ್ಲು ನೀರೊಳಗಿದ್ದರೇನು
ನೆನ್ದು ಮೃದುವಾಗಬಲ್ಲುದೇ?
ಎನಿಸುಕಾಲ ನಿಮ್ಮ ಪೂಜಿಸಿ ಏವೆನಯ್ಯಾ
ಮನದಲ್ಲಿ ಧೃಢವಿಲ್ಲದನ್ನಕ್ಕ?
ನಿಧಾನವ ಕಾಯ್ದಿದ್ದ ಬೆಂತರನಂತೆ
ಅದರ ವಿಧಿ ಎನಗಾಯಿತ್ತು ಕೂಡಲಸಂಗಮದೇವಾ|



ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ
ಕಾಮಿನಿ ನಿನ್ನವಳಲ್ಲ ಅದು ಜಗಕಿಕ್ಕಿದ ವಿಧಿ
ನಿನ್ನೊಡವೆ ಎಂಬುದು ಜ್ಞಾನರತ್ನ
ಅಂತಪ್ಪ ದಿವ್ಯರತ್ನವ ಕೆಡೆಗೊಡದೆ
ಆ ರತ್ನವ ನೀನಲಂಕರಿಸಿದೆಯಾದಡೆ
ನಮ್ಮ ಗುಹೇಶ್ವರ ಲಿಂಗದಲ್ಲಿ ನಿನ್ನಿಂದ
ಬಿಟ್ಟು ಸಿರಿವಂತರಿಲ್ಲ ಕಾಣಾ ಎಲೆ ಮನವೇ!


ಕೃತಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬಡಿದು ಬುದ್ಧಿಯ
ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯಾ,
ತ್ರೇತಾಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬೈದು ಬುದ್ಧಿಯ
ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯಾ
ದ್ವಾಪರಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ
ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯಾ
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ
ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯಾ,


ಆವ ವಿದ್ಯೆಯ ಕಲಿತಡೇನು?
ಸಾವ ವಿದ್ಯೆಯ ಬೆನ್ನ ಬಿಡದು
ಆಶನವ ತೊರೆದಡೇನು ವ್ಯಸನವ ಮರೆದಡೇನು?
ಉಸಿರ ಹಿಡಿದಡೇನು ಬಸುರ ಕಟ್ಟಿದಡೇನು?
ಚೆನ್ನಮಲ್ಲಿಕಾರ್ಜುನದೇವಯ್ಯಾ
ನೆಲ ತಳವಾರನಾದಡೆ ಕಳ್ಳನೆಲ್ಲಿಗೆ ಹೋಹನು?



`ಹರ ಬಸವಾಯ ನಮಃ' ಎಂದು ಪಾಪ ದೂರ್‍ಅನಾದೆ,
`ಗುರು ಬಸವಾಯ ನಮಃ' ಎಂದು ಭವದೂರ್‍ಅನಾದೆ,
`ಲಿಂಗ ಬಸವಾಯ ನಮಃ' ಎಂದು ಲಿಂಗಾಂಕಿತನಾದೆ
`ಜಂಗಮ ಬಸವಾಯ ನಮಃ' ಎಂದು ನಿಮ್ಮ
ಪಾದಕಮಲದಲ್ಲಿ ಭ್ರಮರನಾದೆ
ಏಳು ಸಂಗನಬಸವ ಗುರು, ಕಪಿಲ ಸಿದ್ಧ ಮಲ್ಲಿಕಾರ್ಜುನ ಸ್ವಾಮಿಯೇ.
                      - ಸಿದ್ಧರಾಮ



ಬಡತನಕ್ಕೆ ಉಂಬುವ ಚಿಂತೆ,
ಉಣಲಾದರೆ ಉಡುವ ಚಿಂತೆ,
ಉಣಲಾದರೆ ಇಡುವ ಚಿಂತೆ,
ಇಡಲಾದರೆ ಹೆಂಡಿರ ಚಿಂತೆ,
ಹೆಂಡಿರಾದರೆ ಮಕ್ಕಳ ಚಿಂತೆ
ಮಕ್ಕಳಾದರೆ ಬದುಕಿನ ಚಿಂತೆ,
ಬದುಕಾದರೆ ಕೇಡಿನ ಚಿಂತೆ
ಕೇಡಾದರೆ ಮರಣದ ಚಿಂತೆ
ಇಂತೀ ಹಲವು ಚಿಂತೆಗಳಲಿಪ್ಪವರನ್ನು ಕಂಡೆನು
ಶಿವಚಿಂತೆಯಲ್ಲಿದ್ದವರನೊಬ್ಬರನೂ ಕಾಣನೆಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು. 
                      - ಅಂಬಿಗರ ಚೌಡಯ್ಯ



ಕೆರೆ ಹಳ್ಳ ಬಾವಿಗಳು ಮೈದೆಗೆದರೆ ಗುಳ್ಳೆ ಗೊರಚೆ
ಚಿಪ್ಪುಗಳ ಕಾಣಬಹುದು
ವಾರಿಧ್ ಮೈದೆಗೆದರೆ ರತ್ನಂಗಳ ಕಾಣಬಹ್ದು
ಕೂಡಲ ಸಂಗನ ಶರಣರು ಮನದೆರೆದು ಮಾತನಾಡಿದರೆ
ಲಿಂಗವೆ ಕಾಣಬಹುದು.
                             - ಬಸವಣ್ಣ  


ಕ್ರಿಯೆಯೇ ಜ್ಞಾನ, ಜ್ಞಾನವೇ ಕ್ರಿಯೆ
ಜ್ಞಾನವೆಂದರೆ ತಿಳಿಯುವುದು, ಕ್ರಿಯೆ ಎಂದರೆ
ತಿಳಿದಂತೆ ಅಚರಿಸುವುದು
ಪರಸ್ತ್ರೀ ಭೋಗಿಸಬಾರದೆಂಬುದೇ ಜ್ಞಾನ
ಅದರಂತೆ ಆಚರಿಸುವದೇ ಕ್ರಿಯೆ
ಅಂತು ಆಚರಿಸದಿದ್ದರೆ ಅದೇ ಅಜ್ಞನ
ನೋಡಾ ಕೂಡಲ ಚೆನ್ನ ಸಂಗಮದೇವಾ!
                        - ಬಸವಣ್ಣ


ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ
ಕೂಡಲ ಸಂಗನ ಶರಣರ ಅನುಭಾವದಿಂದ
ಎನ್ನ ಮನದ ಕೇಡು ನೋಡಯ್ಯಾ
                          - ಬಸವಣ್ಣ


ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಂಗಳಿಗಂಜಿದಡೆಂತಯ್ಯಾ?
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೆರೆ ತೆರೆಗಳಿಗಂಜಿದಡೆಂತಯ್ಯಾ?
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದಡೆಂತಯ್ಯಾ?
ಚನ್ನಮಲ್ಲಿಕಾರ್ಜುನ ದೇವ ಕೇಳಯ್ಯಾ
ಲೋಕದೊಳಗೆ ಹುಟ್ಟಿದ ಬಳಿಕೆ ಸ್ತುತಿ ನಿಂದೆಗಳು ಬಂದಡೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು
                    - ಅಕ್ಕಮಹಾದೇವಿ



ಎತ್ತಣ ಮಾಮರ ಎತ್ತಣ ಕೋಗಿಲೆ
ಎತ್ತಣಿಂದೆತ್ತ ಸಂಬಂಧವಯ್ಯಾ
ಬೆಟ್ಟದ ನೆಲ್ಲಿಕಾಯಿ ಸಮುದ್ರದ ಉಪ್ಪು
ಎತ್ತಣಿಂದೆತ್ತ ಸಂಬಂಧವಯ್ಯಾ?
ಗುಹೇಶ್ವರ ಲಿಂಗಕ್ಕೆಯೂ ಎನಗೆಯೂ
ಎತ್ತಣಿಂದೆತ್ತ ಸಂಬಂಧವಯ್ಯಾ
                           - ಪ್ರಭುದೇವ


ಹೆದರದಿರು ಮನವೆ, ಬೆದರದಿರು ತನುವೆ,
ನಿಜವನಿರಿತು ನಿಶ್ಚಿಂತನಾಗಿರು, ಎಲೆ ಮನವೆ!
ಫಲವಾದ ಮರನ ಕಲ್ಲಲ್ಲಿ ಇಡುವುದೊಂದು ಕೋಟಿ
ಎಲವದ ಮರನ ಇಡುವರೊಬ್ಬ್ರ ಕಣೆ
ಭಕ್ತಿಯುಳ್ಳವರ ಬೈವರೊಂದು ಕೋಟಿ
ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ
ನಿಮ್ಮ ಶರಣರ ನುಡಿಯೆ ಎನಗೆ ಗತಿ
ಸೋಪಾನ, ಚೆನ್ನಮಲ್ಲಿಕಾರ್ಜುನ


ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ
ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ
ವಿಷಯಂಗಳಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ
ಜ್ಞಾನದಲ್ಲಿ ಪರಮನಂದವೆಡಗೊಂಡ ಬಳಿಕ
ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು ಬೇರಿಲ್ಲ ಕಾಣಿರೊ!
                     ಆಂಡಯ್ಯ


ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ
               - ಬಸವಣ್ಣ



ಹರ ತನ್ನ ಭಕ್ತರ ತಿರಿವಂತೆ ಮಾಡುವ
ಒರೆದು ನೋಡುವ ಸುವರ್ಣದ ಚಿನ್ನದಂತೆ
ಅರೆದು ನೋಡುವ ಚಂದನದಂತೆ
ಅರಿದು ನೋಡುವ ಕಬ್ಬಿನ ಕೋಲಿನಂತೆ
ಬೆದರದೆ ಬೆಚ್ಚದೆ ಇದ್ದರೆ ಕರವಿಡಿದೆತ್ತಿಕೊಂಬ
ನಮ್ಮ ರಾಮನಾಥ
           - ಜೇಡರ ದಾಸಿಮಯ್ಯ.


ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ
ಸುಳಿದು ಬೀಸುವ ಗಾಳಿ ನಿಮ್ಮ ದಾನ
ಉತ್ತು ನಿಮ್ಮ ದಾನ, ಬಿತ್ತು ನಿಮ್ಮ ದಾನ
ನಿಮ್ಮದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ರಾಮನಾಥ!
           - ಜೇಡರ ದಾಸಿಮಯ್ಯ



ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕ ಮಾಡುವ ಸದ್ಭಕ್ತಂಗೆ
ಎತ್ತ ನೋಡಿದತ್ತ ಲಕ್ಷ್ಮೀ ತಾನಾಗಿಪ್ಪಳು
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನಕ್ಕರ
                      - ಆಯ್ದಕ್ಕಿ ಲಕ್ಕಮ್ಮ


ಬಸವನ ನಡೆ ಪರುಷ, ನುಡಿಪರುಷ, ದೃಷ್ಟಿಪರುಷ
ಹಸ್ತ ಪರುಷ, ಮನಪರುಷ
ತನು, ಮನ, ಧನವ ಗುರುಲಿಂಗ ಜಂಗಮಕ್ಕೆ
ನಿವೇದಿಸುವಾತ ಬಸವನು
ಬಸವಣ್ಣನ ನೆನೆವುದೇ ಲಿಂಗಾರ್ಚನೆಯೆನೆಗೆ
ಬಸವಣ್ಣನ ನೆನೆವುದೇ ಪರತತ್ತ್ವವೆನೆಗೆ
ಪರಮ ಕಲ್ಯಾಣವೆನಗೆ
ಕಲಿದೇವಯ್ಯಾ ನಿಮ್ಮ ಶರಣ ಬಸವಣ್ಣನು ಇಂತಹ
ಘನ ಮಹಿಮ ನೋಡಯ್ಯ
         - ಮಡಿವಾಳ ಮಾಚಿದೇವರು.



ಆನೆಯನೇರಿಕೊಂಡು ಹೋದಿರೇ ನೀವು
ಕುದುರೆಯನೇರಿಕೊಂಡು ಹೋದಿರೇ ನೀವು
ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರೆ ಅಣ್ಣಾ!
ಸತ್ಯದ ನಿಲವನರಿಯದೇ ಹೋದಿರಲ್ಲಾ!
ಸದ್ಗುಣವೆಂಬ ಫಲವ ಬಿತ್ತಿ ಬೆಳೆಯದೆ ಹೋದಿರಲ್ಲಾ!
ಅಹಂಕಾರವೆಂಬ ಮದಗಜವೇರಿ
ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ!
ನಮ್ಮ ಕೂಡಲ ಸಂಗಮ ದೇವರನರಿಯದೆ
ನರಕಕ್ಕೆ ಭಾಜನವಾದಿರಲ್ಲಾ
                 - ಬಸವಣ್ಣ


ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ
ಲಿಂಗದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ವಂದಿಸಿ
ಪೂಜಿಸಿ ಪಾದೋದಕ ಪ್ರಸಾದವ ಕೊಂಬುದೇ ಯೋಗ್ಯ
ಹೀಗಲ್ಲದೆ ಉದಾಸೀನವ ಮಾಡಿ ಬಿಡುವವರಿಗೆ
ಪಂಚಮಹಾಪಾತಕ ನರಕ ಕಾಣಾ
ಕೂಡಲ ಚೆನ್ನಸಂಗಮದೇವಾ
                     - ಚೆನ್ನಬಸವಣ್ಣ


ಅರೇನೆಂದರೂ ಓರಂತಿಪ್ಪುದೇ ಸಮತೆ
ಆರು ಜನ್ರಿದರೂ ಅವರೆನ್ನಮನದ ಕಾಳಿಕೆಯ
ಕಳೆದರೆಂಬುದೇ ಸಮತೆ
ಇಂತಿದು ಗುರು ಕಾರುಣ್ಯ ಮನ ವಚನ ಕಾಯದಲ್ಲಿ
ಅಹಿತವಲ್ಲದೆ ಕಪಿಲಸಿದ್ಧ ಮಲ್ಲಿಕಾರ್ಜುನಾ
ನಿಮ್ಮವರ ನೀನೆಂಬುದೇ ಸಮತೆ
                  - ಸಿದ್ಧರಾಮ


ಶರಧಿಯ ಮೇಲೆ ಧರೆಯ ಕರಗದಂತಿರಿಸಿದೆ
ಅಂಬರಕ್ಕೆ ಗದ್ದುಗೆ ಬೋದುಗೆ ಇಲ್ಲದಂತಿರಿಸಿದೆ
ಎಲೆ ಮೃಡನೇ, ನೀನಲ್ಲದೆ ಉಳಿದ ದೈವಂಗಳಿಗಹುದೇ ರಾಮನಾಥಾ
                  - ಜೇಡರ ದಾಸಿಮಯ್ಯ


 ದೇವನೊಬ್ಬ ನಾಮ ಹಲವು
ಪರಮ ಪತಿವೃತೆಗೆ ಗಂಡನೊಬ್ಬ
ಮತ್ತೊಂದಕ್ಕೆ ರಗಿದರೆ ಕಿವಿ ಮೂಗ ಕೊಯ್ವನು|
ಹಲವು ದೈವದ ಎಂಜಲ
ತಿಂಬವರನೇನೆಂಬೆ ಕೂಡಲ ಸಂಗಮದೇವಾ?
                        - ಬಸವಣ್ಣ


ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ
ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ
ಗುಹೇಶ್ವರಾ, ನಿಮಗಾಗಿ ಸತ್ತವರನಾರನೂ ಕಾಣೆ
                  - ಪ್ರಭುದೇವ



ಹೊನ್ನು ಮಾಯೆಮೆಂಬರು, ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯೆಂಬರು, ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯೆಂಬರು, ಮಣ್ಣು ಮಾಯೆಯೆಲ್ಲ
ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರಾ
                      - ಪ್ರಭುದೇವ

Friday 12 October 2012

Just wait.

Dear K.A.S / I.A.S. aspirants, all aspirants are asking to publish a article on civil service preparation. now I am writing on it.  I will publish new article about Civil service exam preparation within 2-3 days. Please wait...

                   Your's
                Jnanamukhi.

Monday 3 September 2012

ಗೆಲುವಿನ ಹಿಂದೆ ಏನಿದೆ?



೧೮೩೧ರಲ್ಲಿ ಆತ ವ್ಯಾಪಾರದಲ್ಲಿ ಸೋತ. ೧೮೩೨ರಲ್ಲಿ ವಿಧಾನಸಭೆಯ ಚುನಾವಣೆಯಲ್ಲಿ ಸೋತ. ೧೮೩೩ರಲ್ಲಿ ಮತ್ತೆ ವ್ಯಾಪಾರದಲ್ಲಿ ಸೋತ. ೧೮೩೪ರಲ್ಲಿ ವಿಧಾನಸಭೆಗೆ ಆಯ್ಕೆಯಾದ. ೧೮೩೮ರಲ್ಲಿ ಆತ ವಿಧಾಸಭಾಧ್ಯಕ್ಷನ ಸ್ಥಾನದ ಆಯ್ಕೆಯಲ್ಲಿ ಸೋತ. ೧೮೪೬ರಲ್ಲಿ ಕಾಂಗ್ರೆಸ್‍ಗೆ ಆಯ್ಕೆಯಾದ. ೧೮೫೫ರಲ್ಲಿ ಸೆನೆಟ್‍ಗೆ ಸೋತ. ೧೮೫೬ರಲ್ಲಿ ಉಪಾಧ್ಯಕ್ಷ ಹುದ್ದೆಗೆ ಸೋತ. ೧೮೫೮ರಲ್ಲಿ ಮತ್ತೆ ಸೆನೆಟ್‍ಗೆ ಸೋತ. ೧೮೬೦ರಲ್ಲಿ ಅಮೆರಿಕಾದ ಅಧ್ಯಕ್ಷನಾದ.

      ಆತನ ಹೆಸರು? ಇಷ್ಟೆಲ್ಲಾ ಸೋಲುಗಳನ್ನು ಅನುಭವಿಸಿಯೂ ಛಲ ಬಿಡದೆ ಹೋರಾಡಿದ ಆ ಧೀಮಂತ ಮತ್ತಾರೂ ಅಲ್ಲ, ಅಬ್ರಹಾಂ ಲಿಂಕನ್. ಸಿವಿಲ್ ಯುದ್ಧವಾದ ಆ ದುರಂತದ ದಿನಗಳಲ್ಲಿ ಆತನ ಕ್ಯಾಬಿನೆಟ್‍ನ ಅರ್ಧಕ್ಕೂ ಮಿಕ್ಕಿದ ಸದಸ್ಯರು ಇದಕ್ಕೆ ವಿರುದ್ಧವಾಗಿ ನಿಂತರು. ಆಗ ನೀವೇಕೆ ಅವರ ಮೇಲೆ ಸಿಟ್ಟಾಗಲಿಲ್ಲ? ಎಂದು ಲಿಂಕನ್‍ರನ್ನು ಕೇಳಿದ್ದಕ್ಕೆ "ಅವರನ್ನು ಸ್ನೇಹಿತರನ್ನಾಗಿ ಮಾಡಿಕೊಂಡು ಶತ್ರುಗಳನ್ನು ಗೆಲ್ಲಲಿಲ್ಲವೇ?" ಎಂದು ಮಾರ್ಮಿಕವಾಗಿ ಉತ್ತರಿಸಿದರು. ಲಿಂಕನ್ ನಿಧನರಾದಾಗ ಅವರೆಲ್ಲರೂ ಇದ್ದು ಹೃದಯ ತುಂಬಿ ಅನಂದಿಸಿದರು. ನಾನಾ ರೀತಿಯಲ್ಲಿ ಅಮೆರಿಕದ ಅಭಿವೃದ್ಧಿಗೆ ಕಾರಣರಾದ ಲಿಂಕನ್ ದಾಸ್ಯತ್ವವನ್ನು ಹೊಡೆದೋಡಿಸಿದ ಖ್ಯಾತಿಗೆ ಪಾತ್ರರಾದರು. ಬಾಲ್ಯದಲ್ಲೇ ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು, ನಿರಂತರ ಪ್ರಯತ್ನದಿಂದ ಗೆಲ್ಲುವುದನ್ನು ಲಿಂಕನ್ ಕಲಿತರು. ಜೀವನದ ಎಲ್ಲ ಕಷ್ಟ - ಕಾರ್ಪಣ್ಯಗಳಿಗೂ ನಾವು ಹೇಗೆ ತಿರುಗೇಟು ಹೊಡೆಯುತ್ತೇವೆ ಎಂಬುದು ಮುಖ್ಯ. ಎಡೆಬಿಡದ ಪ್ರಯತ್ನ ಅದ್ಭುತ ಸಾಧನೆಗಳನ್ನು ಮಾಡಿಸುತ್ತದೆ.

         ನಮ್ಮ ಮನಸ್ಸಿನ ಸುಪ್ತಾವಸ್ಥೆ ಎಂದೂ ವಾದಿಸುವುದಿಲ್ಲ. ಅದು ಆದೇಶಗಳನ್ನು ತೆಗೆದುಕೊಂಡು ಪಾಲಿಸುತ್ತದೆ. ಹೀಗಾಗಿ ಜಾಗೃತಾವಸ್ಥೆ ನಿರಂತರವಾಗಿ ಒಳ್ಳೆಯ ಆಲೋಚನೆಗಳನ್ನು, ಆದೇಶಗಳನ್ನು ಸುಪ್ತಾವಸ್ಥೆಗೆ ನೀಡಿ, ಉತ್ತಮ ಫಲಿತಾಂಶ ಪಡೆಯಬೇಕು. ಈ ಬಗೆಯ ಅಭ್ಯಾಸವನ್ನು ನಿಯೋಜಿತವಾಗಿ ನಾವು ಪ್ರಯತ್ನಿಸಬೇಕು. ಮನುಷ್ಯ ಹೃದಯದಲ್ಲಿ ಏನು ಯೋಚಿಸುತ್ತಾನೋ ಅದೇ ಆಗುತ್ತಾನೆ. ನಾವು ಯಾವುದನ್ನು ಎಡೆಬಿಡದೆ ಯೋಚಿಸುತ್ತೆವೆಯೋ, ಪ್ರಯತ್ನಿಸುತ್ತೆವೆಯೋ ಅದು ತನ್ನದೆ ದಾರಿ ಮಾಡಿಕೊಂಡು ನಮ್ಮ ಶಕ್ತಿಯನ್ನೆಲ್ಲಾ ಬಳಸಿಕೊಂಡು ಬಯಸಿದ ಫಲಿತಾಂಶ ನೀಡುತ್ತದೆ.

        ಅಧ್ಯಯನವೊಂದರ ಪ್ರಕಾರ ಶೇ.೮೦ರಷ್ಟು ವ್ಯಾಪಾರಗಳು ಕುದುರುವುದೇ ಐದನೆಯ ಫೋನ್ ಕಾಲ್ ನಂತರ. ಶೇ. ೪೮ರಷ್ಟು ಸೇಲ್ಸ್‍ಮನ್ ಮೊದಲ ಫೋನ್ ಕಾಲ್ ನಂತರ ಮಾರಾಟವನ್ನು ನಿಲ್ಲಿಸುತ್ತಾರೆ. ಶೇ.೨೫ರಷ್ಟು ಸೇಲ್ಸಮನ್ ಎರಡನೇ ಫೋನ್ ಕಾಲ್ ನಂತರ ಬಿಡುತ್ತಾರೆ. ಶೇ.೧೨ರಷ್ಟು ಸೇಲ್ಸ್‍ಮನ್ ಮೂರನೇ ಫೋನ್ ಕಾಲ್ ನಂತರ ಬಿಡುತ್ತಾರೆ. ಶೇ.೧೦ರಷ್ಟು ಸೇಲ್ಸ್‍ಮನ್ ಮಾತ್ರ ಎಡೆಬಿಡದ ಪ್ರಯತ್ನದಿಂದ ಫೋನ್ ಮಾಡುತ್ತಾ ಶೇ.೮೦ರಷ್ಟು ವ್ಯಾಪಾರಗಳನ್ನು ಗಿಟ್ಟಿಸುತ್ತಾರೆ. ನಿರಂತರ ಪ್ರಯತ್ನಕ್ಕೆ ಬೆಲೆಯಿದೆ. ನಿರಂತರ ಪ್ರಯತ್ನ ಶಕ್ತಿಯನ್ನು ಕೊಡುತ್ತದೆ. ಎರಡು ಅಥವಾ ಮೂರನೇ ಬಾರಿ ಕೇಳಿದೊಡನೆ ಬಹಳಷ್ಟು ಬೇಸರಗೊಳ್ಳುತ್ತಾರೆ ಎಂಬ ಅರಿವು ನಿಮಗಿದೆಯೇ? ನಾವು ಹೇಗೆ ಕಲಿಯುತ್ತೇವೆ? ಅಭ್ಯಾಸದಿಂದ, ಪುನರಾವರ್ತನೆಯಿಂದ, ಜಾಹೀರಾತಿನ ಹಿಂದಿನ ನಿಯಮವೇನು? ಅದೇ ಕತೆಯನ್ನೆ ಮತ್ತೆ ಮತ್ತೆ ಹೇಳುವುದು. ಉದಾ: ರೈಲು ಅಪಘಾತದಲ್ಲಿ ೧೧೪ ಮಂದಿ ಸತ್ತರು ಎಂಬುದನ್ನೇ ಪತ್ರಿಕೆಗಳಲ್ಲಿ ಪದೇ ಪದೇ ಹಾಕುತ್ತಾ, ರೇಡಿಯೋ, ಟಿ.ವಿ.ಗಳಲ್ಲಿ ಮತ್ತೆ ಮತ್ತೆ ಪ್ರಸಾರ ಮಾಡುತ್ತಿದ್ದರೆ ಸತ್ತರವರು ೩೦೦ರ ಮೇಲಿರಬೇಕು ಎಂಬ ಗುಮಾನಿ ಹುಟ್ಟುತ್ತದೆ. ಅಂದರೆ ಮನಸ್ಸಿನಲ್ಲಿ ನಿಂತುಬಿಡುತ್ತದೆ. ಪುನರಾವರ್ತನೆಯಿಂದ ಮನಸ್ಸಿಗೆ ನಾಟುತ್ತದೆ. ಆದ್ದರಿಂದ ಎಡೆಬಿಡದೆ ಪ್ರಯತ್ನಿಸಿ, ಫಲಿತಾಂಶ ಪಡೆಯಬೇಕು.

        ಡೇವಿಡ್‍ಸನ್ ತಮ್ಮ ಪುಸ್ತಕ `ಹೌ ಐ ಡಿಸ್ಕವರ್ಡ್ ದಿ ಸೀಕ್ರೆಟ್ ಆಫ್ ಸಕ್ಸೆಸ್ ಇನ್ ದಿ ಬೈಬಲ್'ನಲ್ಲಿ ಹೇಳುತ್ತಾರೆ. "ನಮ್ಮ ಮನಸ್ಸು ಅರ್ಥವಾಗದ್ದರ ಮೇಲೆ ಕೆಲಸ ಮಾಡುವುದಿಲ್ಲ. ಪದೇ ಪದೇ ಒಂದನ್ನೇ ಕೇಳುವುದರಿಂದ, ಮಾಡುವುದರಿಂದ ಮನಸ್ಸಿಗೆ ನಾಟುತ್ತದೆ. ಅಲ್ಲದೆ ಈ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯಗಳು, ವಿರೋಧಗಳು ಎದುರಾದಾಗ ಅದನ್ನು ವಿರೋಧಿಸುವ, ನಡೆಯುತ್ತಿರುವ ಹಾದಿ ಸರಿಯಾಗಿದೆ ಎಂಬ ನಂಬಿಕೆಯನ್ನು ಗಟ್ಟಿಗೊಳಿಸುವ ಶಕ್ತಿ ಪುನರಾವರ್ತನೆ, ನಿರಂತರ ಪ್ರಯತ್ನಕ್ಕಿದೆ." ನಿರಂತರ ಪ್ರಯತ್ನಕ್ಕಿಂತ ಹಿರಿದಾದ, ಪ್ರಭಾವಕಾರಿಯಾದ ಭಾವನೆ, ಶಕ್ತಿ ಯಾವುದು ಇಲ್ಲ. ದಿನದಿಂದ ದಿನಕ್ಕೆ ನಾನು ಗುರಿಯತ್ತ ಹತ್ತಿರವಾಗುತ್ತಿದ್ದೇನೆ ಎಂದು ನೀವು ಎಡೆಬಿಡದೆ ಪ್ರಯತ್ನಿಸಿದರೆ ಗುರಿಯನ್ನು ಸಾಧಿಸಿಯೇ ತೀರುತ್ತಿರಿ.

            ನಿರಂತರ ಪ್ರಯತ್ನದಿಂದ ಶಾಂತಿ ಮತ್ತು ತೃಪ್ತಿ ನಮ್ಮಲ್ಲಿ ಮೂಡುತ್ತದೆ. ನಾವು ಯಾವಾಗ ನಮ್ಮ ಸಾಮರ್ಥ್ಯವನ್ನು, ಶಕ್ತಿಯನ್ನು ದೇವರು ನೀಡಿದ ಪ್ರತಿಭೆಗಳನ್ನು ಒಂದು ಒಳ್ಳೆಯ ಗುರಿಯಾಗಿ ನಿರಂತರ ಪ್ರಯತ್ನಿಸುತ್ತೆವೆಯೋ ಆಗ ನಿಜವಾದ ಶಾಂತಿ ದೊರಕುತ್ತದೆ. ನಾವು ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಹೆಚ್ಚು ದುಡಿದಷ್ಟು ನಾವು ಸಂತೋಷಪಡುತ್ತೇವೆ. ನಾವು .ದೂರವಾಗುತ್ತವೆ. ಬಹಳಷ್ಟು ಜನರಿಗೆ ಕೆಲಸಕ್ಕೆ ಹೋಗಲು ಇಷ್ಟವಿರುವುದಿಲ್ಲ. ಆದರೆ ಕೆಲಸಕ್ಕೆ ಹೋಗುವ ಬದಲು ಏನು ಮಾಡುತ್ತಾರೆ ಎಂಬುದಕ್ಕೆ ಅವರಲ್ಲಿ ನಿಶ್ಚಿತ ಉತ್ತರವಿಲ್ಲ. ನಮಗೇನು ಬೇಕು ಎಂದು ತಿಳಿಯದಿದ್ದಾಗ, ಅದರಲ್ಲಿ ಸಂತೋಷವಾಗಲೀ, ಶಾಂತಿಯಾಗಲೀ, ಪ್ರಯತ್ನವಾಗಲೀ ಇರುವುದಿಲ್ಲ. ಬದುಕಿಗೊಂದು ಗುರಿ ಬೇಕು ಅದಕ್ಕಾಗಿ ನಮ್ಮೆಲ್ಲಾ ಪ್ರಯತ್ನಗಳೂ, ಪ್ರತಿಭೆಗಳು, ಸಾಮರ್ಥ್ಯ, ಮನೋಶಕ್ತಿ, ವ್ಯಕ್ತಿತ್ವ ಎಲ್ಲವನ್ನೂ ಧಾರೆಯೆರೆದು ನಿರಂತರವಾಗಿ ದುಡಿದರೆ ಬದುಕಿನಲ್ಲಿ ಸಾರ್ಥಕತೆ ಮೂಡುತ್ತದೆ.

by- Dr.K.Jayalaxmi

Sunday 12 August 2012

`ಜ್ಞಾನಮುಖಿ'ಗೆ ಭೇಟಿ ಕೊಟ್ಟವರ ಸಂಖ್ಯೆ 10,000

ಪ್ರಿಯ ಓದುಗರೇ,
     ಈ `ಜ್ಞಾನಮುಖಿ' ಬ್ಲಾಗ್‍ಗೆ ಭೇಟಿಕೊಟ್ಟವರ ಸಂಖ್ಯೆ ಹತ್ತುಸಾವಿರ ಮೀರಿದೆ ಎಂಬ ಸಂತೋಷವನ್ನು ತಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಸಂತಸವಾಗುತ್ತಿದೆ. ಇದುವರೆಗೆ ಹಲವಾರು ಜನರು ಬ್ಲಾಗ್ ಉದ್ದೇಶಿಸಿ ಈ-ಮೇಲ್, ಫೋನ್ ಕರೆಗಳನ್ನು ಮಾಡಿ ತಮ್ಮ ಅಮೂಲ್ಯ ಸಲಹೆ-ಸೂಚನೆ, ಶಹಭಾಸಗಿರಿ ನೀಡಿದ್ದಾರೆ. ಅವರೆಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು. ನಿಮ್ಮ ಬೆಂಬಲ ಹೀಗೆ ಸದಾ ಮುಂದುವರೆಯಿಲಿ ಎಂದು ಆಶಿಸುತ್ತೇನೆ.

           ಇಂತಿ
         ಜ್ಞಾನಮುಖಿ

Thursday 9 August 2012

ಭಗವದ್ಗೀತೆ




ಇಂದು ಗೋಕುಲಾಷ್ಟಮಿ. ಕಿಶೋರ ಭಾರತ ಎಂಬ ಪುಸ್ತಕ ಓದುತ್ತಿದ್ದೆ. ಅದರಲ್ಲಿ ಭಗವದ್ಗೀತೆ ಎಂಬ ಅಧ್ಯಾಯ ಬರುತ್ತದೆ. ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ರಣರಂಗದಲ್ಲಿ ಬೋಧಿಸಿದ ತತ್ವಗಳೇ ಭಗವದ್ಗೀತೆ ಎಂಬ ಸ್ವರೂಪ ಪಡೆದು ಹಿಂದೂಗಳ ಪವಿತ್ರ ಗ್ರಂಥವಾಯಿತು.
                                           *******************
                  ಖಾಂಡವದಹನ ಕಾಲದಲ್ಲಿ ಅಗ್ನಿಯು ಅರ್ಜುನನಿಗೆ ಅನುಗ್ರಹಿಸಿದ ದಿವ್ಯ ರಥವನ್ನೇರಿ ಅರ್ಜುನನು ರಣರಂಗಕ್ಕೆ ಬಂದನು. ಪರಮವಂದ್ಯನಾದ ಶ್ರೀ ಕೃಷ್ಣನೇ ಆ ರಥದ ಸಾರಥಿ. ರಥದ ಕುದುರೆಗಳು ಬಿಳಿಯ ಬಣ್ಣದವು. ರಥಧ್ವಜವು ಅರುಣವರ್ಣವನ್ನು ಹೊಂದಿದ್ದಿತು. ಆ ಧ್ವಜದಲ್ಲಿ ಗದಾಧಾರಿಯಾಗಿದ್ದ ಆಂಜನೇಯನು ಉಪಸ್ಥಿತನಿದ್ದನು.

        ಎರಡೂ ಸೈನ್ಯಗಳೂ ಸಜ್ಜಾದ ನಂತರ ಯುದ್ಧ ಪ್ರಾರಂಭಕ್ಕೆ ಮುಂಚೆ ಭೀಷ್ಮನು ಗಟ್ಟಿಯಾಗಿ ಸಿಂಹನಾದ ಮಾಡಿ ಶಂಖವನ್ನೂದಿದನು. ಅದನ್ನು ಕೇಳಿದ ಕೂಡಲೇ ಕೌರವ ಸೇನೆಯಿಂದ ಸಾವಿರಾರು ಶಂಖಗಳೂ, ರಣಭೇರಿಗಳು, ಪಣವ, ಅನಕ, ಗೋಮುಖಗಳೆಂಬ ರಣವಾದ್ಯಗಳು ಮೊಳಗಿಸಲ್ಪಟ್ಟವು.
                                                     
              ಅನಂತರ ಪಾಂಡವ ಸೇನೆಯವರೂ ತಮ್ಮ ಶಂಖಗಳನ್ನು ಊದಿದರು. ಶ್ರೀ ಕೃಷ್ಣನು ಪಾಂಚಜನ್ಯವನ್ನೂ, ಅರ್ಜುನನು ದೇವದತ್ತವನ್ನೂ, ಯುಧಿಷ್ಠಿರನು ಅನಂತವಿಜಯವನ್ನೂ, ಭೀಮನು ಪ್ರೌಂಢ್ರವನ್ನೂ, ನಕುಲನು ಸುಘೋಷವನ್ನೂ, ಸಹದೇವನು ಮಣಿಪುಷ್ಪಕವನ್ನೂ ಊದಿದರು. ಧೃಷ್ಟದ್ಯುಮ್ನನೂ, ಸಾತ್ಯಕಿಯೂ, ಚೇಕಿತಾನನೂ, ದ್ರುಪದನೂ, ವಿರಾಟನೂ, ಅಭಿಮನ್ಯುವೂ, ಉಪಪಾಂಡವರೂ ತಮ್ಮ ತಮ್ಮ ಶಂಖಗಳನ್ನು ಊದಿದರು. ಯುದ್ಧ ಮಾಡಲು ಸಿದ್ಧರಾಗಿ ನಿಂತಿರುವ ತನ್ನ ಶತ್ರುಪಕ್ಷದ ಪ್ರಮುಖರನ್ನೊಮ್ಮೆ ನೋಡಬಯಸಿ ಅರ್ಜುನನು ತನ್ನ ರಥವನ್ನು ಯುದ್ಧರಂಗದ ಮಧ್ಯದಲ್ಲಿ ನಿಲ್ಲಿಸುವಂತೆ ಶ್ರೀಕೃಷ್ಣನಿಗೆ ಹೇಳಿದನು. ಶ್ರೀ ಕೃಷ್ಣನು ರಥವನ್ನು ನಿಲ್ಲಿಸಿದನು.

        ಅರ್ಜುನನು ಸುತ್ತಲೂ ಕಣ್ಣು ಹಾಯಿಸಿದನು. ನೋಡುತ್ತಾನೆ! ಅಲ್ಲಿ ಕಾಣುವವರಾದರೂ ಯಾರು? ತನ್ನ ಅಣ್ಣ ತಮ್ಮಂದಿರಾದ ದುರ್ಯೋಧನ ದುಶ್ಯಾಸನಾದಿಗಳು; ತಾತನಾದ ಭೀಷ್ಮ, ಗುರುಗಳಾದ ಕೃಪ-ದ್ರೋಣರು, ಒಡನಾಡಿಯಾದ ಅಶ್ವತ್ಥಾಮಾ, ಮಾವನಾದ ಶಲ್ಯ! ಅಬ್ಬಬ್ಬ! ಇವರನ್ನು ಎದುರಿಸಬೇಕೆ! ಇವರನ್ನು ಕೊಂದು ಗಳಿಸಿದ ರಾಜ್ಯವನ್ನು ತಾವು ಆಳಬೇಕೆ! ಅಯ್ಯೋ! ಎಂತಹ ಅನ್ಯಾಯ ಮಾಡುತ್ತಿದ್ದೇವೆ! ಎಂದು ಸಂಕಟಪಟ್ಟನು. ಅನಂತರ ಶ್ರೀ ಕೃಷ್ಣನಿಗೆ ತನ್ನ ಮನದ ಅಳಲನ್ನು ತಿಳಿಸಿ, "ಶ್ರೀ ಕೃಷ್ಣ! ನಾನು ಯುದ್ಧ ಮಾಡುವುದಿಲ್ಲ" ಎಂದು ಹೇಳಿ, ಗಾಂಢೀವವನ್ನು ಕೆಳಗೆ ಹಾಕಿ ಸುಮ್ಮನೆ ಕುಳಿತುಬಿಟ್ಟನು.

               ಅರ್ಜುನನ ಮಾತು ಕೇಳಿ ಶ್ರೀಕೃಷ್ಣನಿಗೆ ನಗು ಬಂತು. "ಎಂತಹ ಪರಾಕ್ರಮಿಗಳೂ ಸಹ ಕೆಲವು ಸಮಯದಲ್ಲಿ ಎಷ್ಟು ವಿಚಿತ್ರವಾಗಿ ವರ್ತಿಸುತ್ತಾರಲ್ಲ! ಅರ್ಜುನನು ಹಿಂದೆ ವಿರಾಟನಗರದಲ್ಲಿ ಇದೇ ಕುರುಸೇನೆಯನ್ನು ಎದುರಿಸಲಿಲ್ಲವೇ? ಈಗೇಕೆ ಈ ವ್ಯಾಮೋಹ ಅವನನ್ನು ಆವರಿಸಿದೆ?" ಎಂದುಕೊಂಡ. ಅನಂತರ ಅರ್ಜುನನನ್ನು ಉದ್ದೇಶಿಸಿ ಮಾತನಾಡಲಾರಂಭಿಸಿದ.

     "ಅರ್ಜುನ! ನಿನ್ನ ಮಾತನ್ನು ಕೇಳಿ ನನಗೆ ಆಶ್ಚರ್ಯವಾಗುತ್ತಿದೆ. ಉತ್ತಮರಿಗೆ ಅಪಕೀರ್ತಿಯನ್ನು ತರುವ ಇಂಥ ವ್ಯಾಮೋಹ ನಿನಗೇಕೆ ಹುಟ್ಟಿತು? ಧೀರನಾದವನಿಗೆ ಯುದ್ಧದಲ್ಲಿ ಹೋರಾಡುವುದೇ ಭೂಷಣ. ಗೆದ್ದರೆ ರಾಜ್ಯ ವೈಭವ ಪ್ರಾಪ್ತವಾಗುತ್ತದೆ; ಸೋತು ಮಡಿದರೆ ವೀರಸ್ವರ್ಗ ದೊರಕುತ್ತದೆ.

               ಈಗೊಂದು ವೇಳೆ ನೀನು ಯುದ್ಧದಿಂದ ವಿಮುಖನಾಗಿ ಕುರುಸೇನೆಯನ್ನು ಕೊಲ್ಲದೆ ಬಿಡುತ್ತೀಯೇ ಎಂದುಕೊಳ್ಳೋಣ. ಆಗ ಇವರೆಲ್ಲ ಶಾಶ್ವತವಾಗಿ ಜೀವಿಸಿರುತ್ತಾರೆಯೇ? ಅಥವಾ ನಿನ್ನ ಉದಾರತೆಯಿಂದಾಗಿ ನೀನಾದರೂ ಚಿರಂಜೀವಿಯಾಗಿರುತ್ತೀಯಾ? ಉಹೂಂ, ಖಂಡಿತ ಇಲ್ಲ. ಹುಟ್ಟಿದವನಿಗೆ ಸಾವು ತಪ್ಪದು. ಆದ್ದರಿಂದ ಸಾವಿಗಾಗಿ ಶೋಕಿಸುವುದು ಸರಿಯಲ್ಲ.

        ಅರ್ಜುನ! ಸಾವು ಬರುವುದು ನಮ್ಮ ಹೊರ ದೇಹವಾದ ಶರೀರಕ್ಕೆ ಮಾತ್ರ. ಆದರೆ ಶರೀರದೊಳಗಿನ ಆತ್ಮ ಸಾಯುವುದಿಲ್ಲ. ಅದು ಅಮರವಾದುದು. ನಾವು ಹಳೆಯ ಬಟ್ಟೆಯನ್ನು ಬಿಟ್ಟು ಹೊಸದನ್ನು ಉಟ್ಟುಕೊಳ್ಳುವಂತೆ, ಆತ್ಮವು ಒಂದು ಶರೀರವನ್ನು ಬಿಟ್ಟು ಮತ್ತೊಂದು ಶರೀರವನ್ನು ಸೇರಿಕೊಳ್ಳುತ್ತದೆ. ಈ ಯುದ್ಧದಲ್ಲಿ ನಿನ್ನ ಬಾಣಗಳಿಂದ ಕೌರವರ ದೇಹಗಳು ಮಾತ್ರ ಅವಸಾನ ಹೊಂದುತ್ತವೆಯೇ ಹೊರತು ಅವರ ಆತ್ಮಗಳಲ್ಲ. ಅವರ ಆತ್ಮಗಳು ಇನ್ನಾವುದೋ ದೇಹವನ್ನು ಸೇರಿಕೊಂಡು ಅದಕ್ಕೆ ಚೇತನವಾಗುತ್ತವೆ. ಆದುದರಿಂದಲೇ ದುಃಖದಲ್ಲಿ ಉದ್ವಿಗ್ನರಾಗದ, ಸುಖದಲ್ಲಿ ಆಸಕ್ತಿಯಿಲ್ಲದ, ಕಾಮ-ಕ್ರೋಧ-ಲೋಭಗಳನ್ನು ಹೊಂದಿಲ್ಲದ ಸ್ಥಿತಪ್ರಜ್ಞರೆನಿಸಿಕೊಂಡವರು ಹುಟ್ಟು ಸಾವುಗಳಿಗಾಗಿ ಈಗ ಸಂತೋಷಿಸುವುದಾಗಲಿ, ಶೋಕಿಸುವುದಾಗಲೀ ಇಲ್ಲ. ಯುದ್ಧರಂಗದಲ್ಲಿ ನೀನು ಸಹ ಸ್ಥಿತಪ್ರಜ್ಞನಂತೆಯೇ ವರ್ತಿಸು.

             ಅರ್ಜುನ! ಕರ್ಮ - ಎಂದರೆ ಕೆಲಸ. ಅದು ಬಾಳಿಗೆ ಅಂಟಿಕೊಂಡಿರುವುದು. ಅದನ್ನು ಬಿಡುವಂತಿಲ್ಲ. ಉಸಿರಾಡುವುದು, ಆಹಾರ ಸೇವಿಸುವುದು, ಮಿತ್ರರೊಂದಿಗೆ ಬೆರೆಯುವುದು, ಇವೆಲ್ಲವೂ ಸಹಜವಾದ ಕ್ರಿಯೆಗಳಲ್ಲವೇ? ಇದೇ ರೀತಿಯಲ್ಲೇ ನಿನ್ನ ಕರ್ತವ್ಯವನ್ನೂ ನೀನು ಸಹಜವಾಗಿಯೇ ಮಾಡು. ದುಷ್ಟರ ದಮನವೇ ಕ್ಷತ್ರಿಯನಾದ ನಿನ್ನ ಕರ್ತವ್ಯ. ಅವರು ಹಿರಿಯರೆಂದೂ, ಬಂಧುಗಳೆಂದೂ ಹಿಂಜರಿದರೆ ನೀನು ಕರ್ತವ್ಯಚ್ಯುತನಾಗುತ್ತೀಯೆ. ಆದ್ದರಿಂದ ಯುದ್ಧ ಮಾಡುವುದೇ ನಿನ್ನ ಕರ್ತವ್ಯ. ಅದೇ ನೀನು ಮಾಡಬೇಕಾದ ಕರ್ಮ.

                      ಆದರೆ ಕರ್ಮ ಮಾಡುವವನು ಯಾವುದೇ ಫಲಾಪೇಕ್ಷೆ ಹೊಂದಿರಬಾರದು. ಹಾಗೆ ಫಲ ನಿರೀಕ್ಷೆ ಹೊಂದಿದ್ದರೆ ನೀನು ಮಾಡಿದ ಕರ್ಮ ದೋಷಪೂರಿತವಾಗುತ್ತದೆ. ಆದ್ದರಿಂದ ಫಲಾಪೇಕ್ಷೆ ಇಲ್ಲದೆ ನಿನ್ನ ಕರ್ಮಗಳನ್ನು ಆಚರಿಸು. ಕರ್ಮವನ್ನು ಮಾಡಲು ಮಾತ್ರ ನಿನಗೆ ಅಧಿಕಾರ. ಅದರ ಫಲವನ್ನು ಬೇಡಲು ನಿನಗೆ ಅಧಿಕಾರವಿಲ್ಲ. ಫಲದ ಆಸೆಯಿಂದ ಕರ್ಮ ಮಾಡಬೇಡ. ಅಥವಾ ಫಲ ದೊರೆಯುವುದಿಲ್ಲವೆಂದು ಕರ್ಮವನ್ನು ಬಿಡಲೂ ಬೇಡ.

              ಆತ್ಮಯೋಗಕ್ಕೂ ಕರ್ಮವೇ ಸಾಧನ. ಭಕ್ತಿ, ಜ್ಞಾನ, ಸಂನ್ಯಾಸ, ಇವೆಲ್ಲವೂ ಕರ್ಮದಲ್ಲೇ ಸೇರಿವೆ. ತಾನು ಮಾಡಿದ ಕರ್ಮದ ಫಲವನ್ನು ಚಿಂತಿಸದೇ ಸದಾ ಕರ್ಮನಿರತನಾಗಿರುವವನೇ ವಿರಾಗಿ ಅಥವಾ ಕರ್ಮಯೋಗಿ. ಈ ಯೋಗಿಯು ತಪಸ್ವಿಗಳಿಗಿಂತಲೂ, ವೇದಪಾರಂಗತರಿಗಿಂತಲೂ ಶ್ರೇಷ್ಠನಾದವನು.

               ಅರ್ಜುನ! ನೀನಾಗಲಿ, ನಾನಾಗಲಿ ಅಥವಾ ನಮ್ಮ ಸುತ್ತಲೂ ಇರುವ ಬಂಧುಮಿತ್ರರಾಗಲೀ, ಈ ಹಿಂದೆ ಇರಲಿಲ್ಲವೆಂದೆಲ್ಲ ಅಥವಾ ಮುಂದೆ ಮತ್ತೆ ಹುಟ್ಟುವುದಿಲ್ಲವೆಂದೂ ಅಲ್ಲ. ಆದರೆ ನಿನಗೆ ಹಿಂದಿನ ನೆನಪಿಲ್ಲ; ಅಷ್ಟೇ. ಹಾಗೆಯೇ ಮುಂದಿನ ಅರಿವೂ ಇಲ್ಲ. ಹುಟ್ಟಿದವನು ಸಾಯುವುದು ಖಂಡಿತ. ಅದೇ ರೀತಿ, ಸತ್ತವನು ಮತ್ತೆ ಹುಟ್ಟುವುದೂ ನಿಶ್ಚಿತ. ಆದ್ದರಿಂದ ಯಾರ ಸಾವಿಗೂ ದುಃಖಪಡಬೇಡ.

                     ಅರ್ಜುನ! ಈ ಯುದ್ಧದಲ್ಲಿ ನೀನು ಕೌರವಾದಿ ದುಷ್ಟರನ್ನು ನಿಗ್ರಹಿಸಬೇಕೆಂದು ನಾನು ಆಗ್ರಹಪಡಿಸುತ್ತಿದ್ದೇನೆ. ಏಕೆಂದರೆ ದುಷ್ಟರನ್ನು ಶಿಕ್ಷಿಸುವುದು ನನ್ನ ಕರ್ತವ್ಯವೇ ಆಗಿದೆ. ಕಂಸ, ಶಿಶುಪಾಲ, ದಂತವಕ್ರ ಮೊದಲಾದ ಅಧರ್ಮಿಗಳನ್ನು ಕೊಲ್ಲುವ ಸಲುವಾಗಿ ನಾನು ಈ ಜನ್ಮ ತಾಳಿದ್ದೇನೆ. ಅದೇ ರೀತಿ ಅನ್ಯಾಯದ ಹಾದಿ ಹಿಡಿದಿರುವ ಕೌರವಾಗಿಗಳನ್ನು ನಾಶಪಡಿಸುವುದೂ ನನ್ನ ಕರ್ತವ್ಯವಾಗಿದೆ. ಅದನ್ನು ನಾನು ನಿಮ್ಮ ಮೂಲಕ ಮಾಡಿಸುತ್ತಿದ್ದೇನೆ ಅಷ್ಟೇ. ಆದ್ದರಿಂದ ಅವರ ಸಾವಿಗೆ ನೀವಾರು ಕಾರಣರಲ್ಲ. ಅವರು ತಮ್ಮ ವಿನಾಶವನ್ನು ತಾವೇ ತಂದುಕೊಳ್ಳುತ್ತಿದ್ದಾರೆ. ನೀನು ಖಂಡಿತ ದುಃಖಿಸಬೇಡ. ಈ ಹಿಂದೆ ನಾನು ಅನೇಕ ಅವತಾರಗಳನ್ನು ಎತ್ತಿದ್ದೆ. ಮುಂದೆಯೂ ಸಹ ಬೇರೆ ಬೇರೆ ರೂಪಗಳನ್ನು ತಾಳುತ್ತೇನೆ. ಪ್ರಪಂಚದಲ್ಲಿ ಧರ್ಮವು ಕ್ಷೀಣವಾದಾಗಲೆಲ್ಲಾ ನಾನು ಅವತರಿಸಿ, ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ಪರಿಪಾಲಿಸಿ, ಧರ್ಮದ ಪ್ರತಿಷ್ಠಾಪನೆಯನ್ನು ಮಾಡುತ್ತೇನೆ.

         ಪಾರ್ಥ! ಧರ್ಮಸಂಸ್ಥಾಪನೆಗಾಗಿ ನಾನು ಜನ್ಮ ತಾಳಿದ್ದೇನೆಂದರೆ ನಿನಗೆ ಆಶ್ಚರ್ಯವಾಗುತ್ತಿದೆಯೇ? ನಾನು ಯಾರೆಂಬ ಕುತೂಹಲವುಂಟಾಗುತ್ತಿರಬಹುದಲ್ಲವೇ? ಅರ್ಜುನ! ಸ್ಥಿತಿಕರ್ತನಾದ ವಿಷ್ಣುವು ನಾನೇ. ಸೃಷ್ಟಿಕರ್ತ ಬ್ರಹ್ಮನೂ, ಲಯಕರ್ತನಾದ ಈಶ್ವರನೂ ನನ್ನ ಅಂಶಗಳೇ. ದ್ವಾದಶಾದಿತ್ಯರೂ ಏಕಾದಶ ರುದ್ರರೂ, ಅಷ್ಟವಸುಗಳೂ, ಯಕ್ಷ-ಗಂಧರ್ವ-ಕಿನ್ನರರೂ, ಮರುದ್ಗುಣಗಳೂ, ದೇವತೆಗಳೂ, ನಕ್ಷತ್ರಗಳೂ, ಚಂದ್ರ-ಸೂರ್ಯರೂ ನನ್ನಲ್ಲಿಯೇ ಇದ್ದಾರೆ. ದೇವತೆಗಳ ಗುರು ಬೃಹಸ್ಪತಿ, ಸೇನಾಪತಿ ಸ್ಕಂದ, ಭೃಗುಮಹರ್ಷಿ, ದೇವರ್ಷಿ ನಾರದ, ಪ್ರಣವವಾದ `ಓಂ'ಕಾರ - ಎಲ್ಲವೂ ನಾನೇ. ಸಮಸ್ತ ಪ್ರಾಣಿಗಳ ಅಂಶವೂ ನನ್ನಲ್ಲಿದೆ. ಪಾಂಡವ-ಕೌರವರಾದ ನಿಮ್ಮನ್ನೂ ಮೊದಲುಗೊಂಡಂತೆ ನನ್ನಲ್ಲಿಲ್ಲದ ಚರಾಚರ ವಸ್ತುಗಳೇ ಇಲ್ಲ." ಎಂದು ಹೇಳಿ ಶ್ರೀಕೃಷ್ಣನು ತನ್ನ ವಿಶ್ವರೂಪವನ್ನು ತೋರಿದನು.

          ಭೂಮಿ-ಆಕಾಶಗಳು ತಾಗುವಷ್ಟು ದೊಡ್ಡದಾಗಿ ಬೆಳೆದ ಶ್ರೀಕೃಷ್ಣನ ಶರೀರದಲ್ಲಿ ಸೂರ್ಯ-ಚಂದ್ರರಾದಿಯಾಗಿ ಸಮಸ್ತ ದೇವತೆಗಳೂ, ರಾಕ್ಷಸರೂ, ಮನುಷ್ಯರೂ, ಪ್ರಾಣಿಗಳೂ, ಲೋಕಗಳೂ, ನಕ್ಷತ್ರಗಳೂ, ಪರ್ವತ-ಸಮುದ್ರ-ನದಿಗಳೂ ಅಡಗಿರುವುದನ್ನು ಅರ್ಜುನನು ಕಂಡನು.

          ಅನಂತರ ಶ್ರೀಕೃಷ್ಣನು "ಅರ್ಜುನ! ಮೋಹವನ್ನು ಬಿಡು; ಯುದ್ಧ ಮಾಡು. ನಿನ್ನ ಕರ್ತವ್ಯವನ್ನು ನೆರವೇರಿಸಿ ಸತ್ಕೀರ್ತಿಯನ್ನು ಪಡೆ, ಏಳು" - ಎಂದನು.

           ಶ್ರೀಕೃಷ್ಣನು ಮಾಡಿದ ಉಪದೇಶದಿಂದಲೂ, ಅವನು ತೋರಿಸಿದ ವಿಶ್ವರೂಪದಿಂದಲೂ ಅರ್ಜುನನು ರೋಮಾಂಚನಗೊಂಡನು. ಅವನು ಶ್ರೀಕೃಷ್ಣನಿಗೆ ನಮಸ್ಕರಿಸಿ "ಸ್ವಾಮಿ! ನನ್ನನ್ನು ಆವರಿಸಿದ್ದ ಮೋಹವು ದೂರವಾಯಿತು. ನೀನು ಹೇಳಿದಂತೆಯೇ ಯುದ್ಧ ಮಾಡುತ್ತೇನೆ" ಎಂದು ಹೇಳಿ ಯುದ್ಧ ಸನ್ನದ್ಧನಾದನು.

         ಹೀಗೆ ಭಗವಂತನಾದ ಶ್ರೀ ಕೃಷ್ಣನು ಅರ್ಜುನನಿಗೆ ಯುದ್ಧ ಭೂಮಿಯಲ್ಲಿ ನೀಡಿದ ಉಪದೇಶಾಮೃತವೇ ಭಗವದ್ಗೀತೆ.

Friday 15 June 2012

ವಿಭಿನ್ನವಾಗಿ ಆಲೋಚಿಸಿ, ಯಶಸ್ಸು ಗಳಿಸಿ

"ಗುಂಪಿನಲ್ಲಿ ಗೋವಿಂದ" ಎನ್ನುವ ಪಂಗಡ ಸೇರದೆ ಸಂತ ಶಿಶುನಾಳ ಷರೀಫರಂತೆ "ಎಲ್ಲರಂಥವನಲ್ಲ ನನ್ನ ಗಂಡ, ಬಲ್ಲಿದನು ಪುಂಡ" ಎಂದು ಹೊಸ ಹಾದಿ ಹಿಡಿಯಬೇಕಾಗಿದೆ.  (Click on image to read)
Thanks to Shri Manjunath Bedre
                www.bedrefoundation.blogspot.in

Monday 4 June 2012

ಭೇಷ್...! ಮಹಿಬೂಬಿಯಾ

ನಮ್ಮ ಗ್ರಾಮೀಣ ಭಾಗದ ಅದರಲ್ಲೂ ಬಡತನವೇ ಹಾಸಿ ಹೊದ್ದುಕೊಳ್ಳುತ್ತಿರುವ ವಿದ್ಯಾರ್ಥಿಗಳಲ್ಲಿ ಒಂದು ಭಾವನೆ ಬಲವಾಗಿ ಬೇರೂರಿದೆ. ಅದೆಂದರೆ : "ನಾವು ಬಡವರು, ಊಟಕ್ಕೂ ಗತಿಯಿಲ್ಲ ಗುಡಿಸಲಲ್ಲಿ ಬದುಕುತ್ತಿದ್ದೇವೆ ನಮ್ಮಿಂದ ಓದು ಸಾಧ್ಯವಿಲ್ಲ ಅಂಥದರಲ್ಲಿ ಸಾಧನೆಯಂತೂ ಕನಸಿನ ಮಾತು" ಎಂಬುದು
        ಒಂದು ಕ್ಷಣ ನಿಲ್ಲಿ. ದಯವಿಟ್ಟು ಈ ಕೆಳಗೆ ಕೊಟ್ಟಿರುವ ಸುದ್ದಿ ಚಿತ್ರಣವನ್ನು ಒಮ್ಮೆ ಓದಿ. ನಂತರದ ನಿರ್ಧಾರ ನಿಮ್ಮದು. (ಚಿತ್ರದ ಮೇಲೆ ಕ್ಲಿಕ್ ಮಾಡಿ ಓದಿ.)


Friday 1 June 2012

ಸಂಯುಕ್ತ ಕರ್ನಾಟಕ ಪತ್ರಿಕೆಗೆ ಧನ್ಯವಾದ

ಪ್ರಿಯ ಸ್ನೇಹಿತರೆ,
    ಇಂದಿನ `ಸಂಯುಕ್ತ ಕರ್ನಾಟಕ' ಪತ್ರಿಕೆಯ 14ನೇ ಪುಟದಲ್ಲಿ ನನ್ನ `ಜ್ಞಾನಮುಖಿ' ಬ್ಲಾಗ್ ಬಗ್ಗೆ ಪರಿಚಯ ಬಂದಿದೆ. ಜೊತೆಗೆ ಫೋಟೋ ಬಂದಿದೆ. ನನ್ನ ಈ ಪುಟ್ಟ ಪ್ರಯತ್ನವನ್ನು ಗುರುತಿಸಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ `ಸಂಯುಕ್ತ ಕರ್ನಾಟಕ' ಪತ್ರಿಕೆಯ ಎಲ್ಲ ಸಿಬ್ಬಂದಿವರ್ಗದವರಿಗೆ ನನ್ನ ಅನಂತ ಧನ್ಯವಾದಗಳು.
ಅದರ ಲಿಂಕ್ ಇಲ್ಲಿದೆ :http://epaper.samyukthakarnataka.com/40343/Samyuktha-Karnataka/Jun-01-2012-HUB#page/15/1

Tuesday 29 May 2012

ಡಾ|| ಗುರುರಾಜ ಕರಜಗಿಯವರ ವ್ಯಕ್ತಿತ್ವ ಪರಿಚಯ

             ಮೊನ್ನೆ ಬಿಜಾಪುರದ ಎ.ಪಿ.ಎಂ.ಸಿ.ಯಲ್ಲಿ ಮರ್ಚಂಟ್ಸ್ ಅಸೋಶಿಯೇಷನ್ ಮತ್ತು ಭಾರತ ವಿಕಾಸ ಸಂಗಮ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ `ಉದ್ಯೋಗ ಮತ್ತು ಜೀವನದಲ್ಲಿ ಸಂತೋಷ' ಎಂಬ ವಿಷಯವಾಗಿ ಮಾತನಾಡಲು  ನಮ್ಮ ಡಾ||ಗುರುರಾಜ್ ಕರಜಗಿ ಅವರು ಬಂದಿದ್ದರು. ಆ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಡಾ|| ಗುರುರಾಜ ಕರಜಗಿ ಅವರ ವ್ಯಕ್ತಿತ್ವ ಪರಿಚಯ ಎಂಬ ಜೆರಾಕ್ಸ್ ಪ್ರತಿಯನ್ನು ನೀಡಿದರು. ಅವರ ಅಮೋಘ ವ್ಯಕ್ತಿತ್ವ ಪರಿಚಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನ್ನಿಸಿತು. ಇಗೋ ಇಲ್ಲಿದೆ ಅವರ ವ್ಯಕ್ತಿತ್ವ ಪರಿಚಯ...


                                    ವ್ಯಕ್ತಿತ್ವ ಪರಿಚಯ

                                                       ಡಾ|| ಗುರುರಾಜ ಕರಜಗಿ

ಆಸಕ್ತಿ : ಸೃಜನಶೀಲತೆ, ಸಂವಹನ ಕೌಶಲ, ಅಭಿಪ್ರೇರಣೆ, ವೃತ್ತಿ ಸಂಹಿತೆ, ಮಾನವೀಯ ಮೌಲ್ಯಗಳು ಮತ್ತು ತತ್ವಶಾಸ್ತ್ರ

ಶೈಕ್ಷಣಿಕ ಸಾಧನೆ :
* ಕರ್ನಾಟಕ ವಿಶ್ವವಿದ್ಯಾಲಯದಿಂದ ವಿಜ್ಞಾನ ಸ್ನಾತಕ ಪದವಿಯಲ್ಲಿ ತೃತೀಯ ರ್‍ಯಾಂಕ್ ಹಾಗೂ Analytical chemistryಯನ್ನು ಅಭ್ಯಸಿಸಿ ಸ್ನಾತಕೋತ್ತರ ಪದವಿಯಲ್ಲಿ ದ್ವಿತೀಯ ರ್‍ಯಾಂಕ್‍ನ ಸಾಧನೆ.

* Inorganic chemistryಯಲ್ಲಿ ಸಂಶೋಧನಾ ಪ್ರಬಂಧವನ್ನು ಎರಡೇ ವರ್ಷಗಳಲ್ಲಿ ಸಂಪೂರ್ಣಗೊಳಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯ ಗಳಿಕೆ.

* ೨೨ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಮಂಡಿಸಿದ ಹೆಗ್ಗಳಿಕೆ


ವೃತ್ತಿ ಜೀವನದ ಯಾತ್ರೆ :

* ಬೆಂಗಳೂರು ವಿ.ವಿ.ಯ ಪ್ರತಿನಿಧಿಗಳ ಮಂಡಳಿ, ಆಡಳಿತ ಮಂಡಳೀ, ಶಿಕ್ಷಣ ಮಂಡಳಿ, ಕಾಲೇಜು ಅಭಿವೃದ್ಧಿ ಮಂಡಳಿ, ರಸಾಯನಶಾಸ್ತ್ರ ವಿಭಾಗದ ಪರೀಕ್ಷಾಂಗದ ಸದಸ್ಯರಾಗಿ, ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ ಜೀವಮಾನದ ಸಭಾಸದರಾಗಿ Electrochemical society of Indiaಯಲ್ಲಿ ಕಾರ್ಯ ನಿರ್ವಹಣೆ.

* ಬೆಂಗಳೂರಿನ ವಿ.ವಿ.ಎಸ್. ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯರಾಗಿ ಸತತ ೧೬ ವರ್ಷಗಳ ಕಾಲ ಸೇವೆ ಸಲ್ಲಿಕೆ.

* ಅನೇಕ ವರ್ಷಗಳ ಕಾಲ Bangalore University cricket selection committe ಯಲ್ಲಿ ಸಕ್ರಿಯ ಸದಸ್ಯರಾಗಿ ಜವಾಬ್ದಾರಿ ನಿರ್ವಹಣೆ

* ರಾಜಾದ್ಯಂತ ಉತ್ಕೃಷ್ಟ ಶಿಕ್ಷಣ ನೀಡಲು ಕಾರ್ಯಯೋಜನೆ ರೂಪಿಸಿರುವ PACER FOUNDATION - PACER (Professionals Action Committee for Educational Reforms) ಸಂಸ್ಥೆಯ ಸಭಾಧ್ಯಕ್ಷರಾಗಿ ಆಯ್ಕೆ. ಉನ್ನತ ಶಿಕ್ಷಣನೀತಿಗಳನ್ನು ರೂಪಿಸುವ ತಂಡದ ಸದಸ್ಯರಾಗಿ ಕರ್ನಾಟಕ ಸರ್ಕಾರದಿಂದ ನೇಮಕ.

* ಕರ್ನಾಟಕ ರಾಜ್ಯದ ಪ್ರಥಮದರ್ಜೆ ಕಾಲೇಜುಗಳ ಪ್ರಾಚಾರ್ಯರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ರಾಜ್ಯದ ಉತ್ತಮ ಶಿಕ್ಷಕರನ್ನು ಆಯ್ಕೆಮಾಡುವ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಣೆ

* ಭಾರತದ ಶಾಲಾ ಕಾಲೇಜುಗಳಲ್ಲದೇ ಸಿಂಗಾಪುರ, ಬ್ಯಾಂಕಾಕ್, ದುಬೈ ಮತ್ತು ಯು.ಎಸ್.ಎ ದೇಶಗಳ ಶಾಲಾ ಕಾಲೇಜುಗಳಲ್ಲೂ ತರಬೇತಿ ಕಾರ್ಯಕ್ರಮಗಳ ನಿರ್ವಹಣೆ.

* `ಸೃಜನಶೀಲತೆ' ಬಗ್ಗೆ ಭಾರತದಲ್ಲಿ ಪಠ್ಯಕ್ರಮವನ್ನು ರಚಿಸಿದ ಮೊದಲಿಗರು. ಇದುವೇ ಯು.ಕೆ. ದೇಶದ ಸ್ನಾತಕೋತ್ತರ ಪದವಿಯ ಪಠ್ಯಕ್ರಮದ ಒಂದು ಭಾಗವಾಗಿದೆ.

* ಭಾರತದ ಅನೇಕ ಬಹುರಾಷ್ಟ್ರೀಯ ಕಂಪೆನಿಗಳ ಮತ್ತು ಸಾರ್ವಜನಿಕ ಸಂಸ್ಥೆಗಳ ನೌಕರರಿಗೆ ತರಬೇತುಗೊಳಿಸಿದ ಹಿರಿಮೆ.


ಪ್ರಕಾಶನಗಳು :
  `ಪ್ರಜಾವಾಣಿ' ದಿನಪತ್ರಿಕೆಯಲ್ಲಿ ನಿತ್ಯವೂ ಪ್ರಕಟಗೊಳ್ಳುವ `ಕರುಣಾಳು ಬಾ ಬೆಳಕೆ' ಅಂಕಣವು, ವೈಜ್ಞಾನಿಕ ತಳಹದಿಯಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ೯೦೦ಕ್ಕೂ ಹೆಚ್ಚಿನ ಕಥೆಗಳು ಜನರ ಮನೆ-ಮನ ತುಂಬಿವೆ. ಅವುಗಳಲ್ಲಿ ೩೦೦ ಕಥೆಗಳನ್ನು ಮೂರು ಪುಸ್ತಕಗಳಲ್ಲಿ ಮುದ್ರಿಸಿ ಲೋಕಾರ್ಪಣೆ ಮಾಡಿದ ಖ್ಯಾತಿ ಇವರದ್ದು. `ವಿವೇಕ ಸಂಪದ' ಆಧ್ಯಾತ್ಮ ಪತ್ರಿಕೆಯ ಪ್ರತಿಪ್ರಕಟಣೆಯಲ್ಲೂ ತಮ್ಮ ಲೇಖನಗಳ ಕೊಡುಗೆ ನೀಡಿದ್ದಾರೆ. `ಶ್ರೀ ಶಂಕರ' ಅಧ್ಯಾತ್ಯವಾಹಿನಿಯಲ್ಲಿ ದಾಸಸಾಹಿತ್ಯದ ಕುರಿತಾದ ಇವರ ಉಪನ್ಯಾಸಮಾಲೆ ೧೦೦ ಸಂಚಿಕೆಗಳನ್ನು ಪೂರೈಸಿವೆ. ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ, ಜೀವನ ಧರ್ಮಯೋಗ, ಬಾಳಿಗೊಂಡು ನಂಬಿಕೆ, ಜ್ಞಾಪಕ ಚಿತ್ರಶಾಲೆ ಹಾಗೂ ಭಗವದ್ಗೀತೆಯ ಕುರಿತಾದ ಉಪನ್ಯಾಸಗಳು ಸಿ.ಡಿ.ಗಳಲ್ಲಿ ಲಭ್ಯ.

Sunday 27 May 2012

ಕೆ. ಎಸ್. ಅಶ್ವಥ್


       
ನಮ್ಮ ಕೆ. ಎಸ್. ಅಶ್ವಥ್ ಅವರು ಜನಿಸಿದ ದಿನ ಮೇ 25, 1925 ಎಂದು ಹಲವೆಡೆ ಉಲ್ಲೇಖವಿದೆ. ಮೈಸೂರಿನಲ್ಲಿ ಈ ವರ್ಷ ಮಾರ್ಚ್ ತಿಂಗಳಲ್ಲಿ ಅವರ ಹುಟ್ಟಿದ ಹಬ್ಬದ ಸಮಾರಂಭ ನಡೆದಂತಿತ್ತು. ಅದೇನೇ ಇರಲಿ ಕೆ ಎಸ್ ಅಶ್ವಥ್ ಅಂತಹ ಹಿರಿಯರನ್ನು ನೆನೆಯುವುದು ಮನಸ್ಸಿಗೆ ಅವ್ಯಕ್ತವಾದ ಒಂದು ಸಮಾಧಾನ ನೀಡುವಂತಹ ಸಂಗತಿ.

ಚಲನಚಿತ್ರರಂಗವನ್ನು ನೋಡಿದಾಗ ಇವರು ‘ನಮ್ಮಂತೆಯೇ ಇರುವ ನಮ್ಮ ಪ್ರತಿನಿಧಿ’ ಎಂಬ ಭಾವವನ್ನು ಹುಟ್ಟಿಸುವ ಮಂದಿ ಬಲು ಕಡಿಮೆ. ಅದು ಚಿತ್ರರಂಗದ ಜನರ ತಪ್ಪು ಎನ್ನುವುದಕ್ಕಿಂತ, ಬಣ್ಣದ ಲೋಕವನ್ನು ನೋಡಿದಾಗ ಅದು ನಮ್ಮಲ್ಲಿ ಮೂಡಿಸುವ ಭ್ರಮೆ ಅದಕ್ಕೆ ಕಾರಣ ಇರಲೂಬಹುದು. ಹೀಗಿದ್ದೂ ಚಿತ್ರರಂಗದಲ್ಲಿ ಎಲ್ಲ ರೀತಿಯಿಂದಲೂ ಸಂಭಾವಿತರು ಎಂಬ ಹೃದ್ಭಾವ ಹುಟ್ಟಿಸಿದ ವಿರಳರಲ್ಲಿ ವಿರಳರು ಕೆ. ಎಸ್. ಅಶ್ವಥ್. ಬಹುಷಃ ಅವರು ನಿರ್ವಹಿಸಿದ ಸಂಭಾವಿತ ಪಾತ್ರಗಳು, ನಮ್ಮಲ್ಲಿ ಅವರ ಬಗ್ಗೆ ಸಂಭಾವ್ಯತೆ ಹುಟ್ಟಿರುವುದಕ್ಕೆ ಒಂದು ಪ್ರಮುಖ ಕಾರಣ. ಅತೀ ಚೆಲ್ಲು ಚೆಲ್ಲಾದ ಪಾತ್ರಗಳನ್ನಾಗಲಿ, ಕ್ರೂರಿಯಾದ ಪಾತ್ರಗಳನ್ನಾಗಲಿ ನಾವು ಅವರಲ್ಲಿ ಕಂಡದ್ದಿಲ್ಲ. ಹಾಗೆ ಅವರು ಅಂತಹ ಪಾತ್ರ ಮಾಡಿರಬಹುದಾದ ಸಾಧ್ಯತೆ ಇದ್ದರೂ, ಅಂತಹವು ಅವರು ನಟಿಸಿದ ಮುನ್ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಾವು ಗಮನಿಸದ ಹಾಗೆ ಎಲ್ಲೆಲ್ಲೆಲ್ಲೋ ಹುದುಗಿಕೊಂಡುಬಿಟ್ಟಿರುತ್ತವೆ. ಹೀಗಾಗಿ ಅವರು ಎಂದಿಗೂ ಆಪ್ತ ವ್ಯಕ್ತಿಯಾಗಿಯೇ ಕನ್ನಡ ಚಿತ್ರಪ್ರೇಕ್ಷಕರಲ್ಲಿ ಮನನದಲ್ಲಿ ಸ್ಥಾಪಿತರು.

ತಾವು ನಡೆಸಿದ ಬದುಕಿನ ರೀತಿಯಲ್ಲಿ ಕೂಡ ಅಶ್ವಥ್ ಅವರು ಸಾಮಾನ್ಯ ಮಧ್ಯಮವರ್ಗದ ಜನರಿಗೆ ಎಲ್ಲ ರೀತಿಯಲ್ಲೂ ಹತ್ತಿರದ ರೀತಿಯವರು. ಅದು ಬದುಕಿನ ಸುಂದರ ಕ್ಷಣಗಳಿಗೆ ಮಾತ್ರ ಅನ್ವಯಿಸದೆ, ಬದುಕಿನ ಏರಿಳಿತಗಳು, ಖಾಳಜಿಗಳು, ಕಾಹಿಲೆಗಳು, ಅನಿಶ್ಚಿತತೆಗಳು, ನೋವುಗಳು, ಭಯ ಭೀತಿಗಳು, ಜವಾಬ್ಧಾರಿಗಳು, ಅಸಹಾಯಕತೆಗಳು ಹೀಗೆ ಪ್ರತಿಯೊಂದರಲ್ಲೂ ಅವರ ಬದುಕು ‘ಮೇಲಕ್ಕೆ ಏರಲಾಗದ, ಕೆಳಕ್ಕೆ ಇಳಿಯಲೂ ಆಗದ ವಿಚಿತ್ರ ಅಸಹಾಯಕ ಸ್ಥಿತಿಯ ಮಧ್ಯಮ ವರ್ಗದ ಬದುಕಿನದು’. ನನಗೆ ಅಶ್ವಥ್ ಅವರ “ನಮ್ಮ ಮಕ್ಕಳು” ಚಿತ್ರ ತುಂಬಾ ತುಂಬಾ ಅತ್ಮೀಯವಾದುದು. ಅದು ಅಶ್ವಥ್ ಅವರ, ಅಂದಿನ ದಿನಗಳಲ್ಲಿ ನೂರಾರು ಕನಸುಗಳನ್ನು ಹೊತ್ತು ಬೆಳೆಯುತ್ತಿದ್ದ ಮಕ್ಕಳಾಗಿದ್ದ ನಮ್ಮಂತವರ, ನಮ್ಮನ್ನು ಸಾಕುತ್ತಿದ್ದ ನಮ್ಮ ಪೋಷಕರ, ನಮ್ಮ ಸಂಸ್ಕೃತಿಗಳ, ನಮ್ಮ ಬದುಕಿನ ರೀತಿಯ ಯಥಾವತ್ತಾದ ಚಿತ್ರಣ. ನಾನು ಆ ಚಿತ್ರದಲ್ಲಿ ಕಥೆಗಿಂತ ಮಿಗಿಲಾದ ಆ ಕಥೆಯ ಪಾತ್ರಗಳ ಬಗ್ಗೆ ಹೇಳುತ್ತಿದ್ದೇನೆ. ಆ ನಿಟ್ಟಿನಲ್ಲಿ ನಮಗೆ ಬಹಳ ಹತ್ತಿರವಾದವರು ‘ನಮ್ಮ ಮಕ್ಕಳು’ ಚಿತ್ರದ ಅಶ್ವಥ್, ಪಂಡರಿಬಾಯಿ ಮತ್ತು ಆ ಚಿತ್ರದಲ್ಲಿನ ಅವರ ಮೂರು ಮಕ್ಕಳು.

ಅಶ್ವಥ್ ಚಿತ್ರರಂಗದಲ್ಲಿ ಹೆಚ್ಚು ಇದ್ದದ್ದು 1955 ರಿಂದ 1995ರ ಅವಧಿಯಲ್ಲಿ. ಆ ನಂತರ ಜೀವನವನ್ನು ನೆಮ್ಮದಿಯಲ್ಲಿ ಕಳೆಯುತ್ತೇನೆ ಎಂದು ಭಾವಿಸಿಕೊಂಡು ನಿವೃತ್ತರಾದ ಅವರಿಗೆ ಅವರು ಕನಸಿದ್ದ ಜೀವನಕ್ಕಿಂತ ವಿಭಿನ್ನ ವೃದ್ಧಾಪ್ಯದ ಜೀವನ ಸಿಕ್ಕಿದ್ದು ದುರದೃಷ್ಟಕರ. ಆದರೆ ಒಂದು ರೀತಿಯಲ್ಲಿ ಅದೇ ಬದುಕು. ಇಲ್ಲಿ ಅಶ್ವಥ್ ಅವರು ಮೇಲೆ ಹೇಳಿದ ಕೆಲವು ಮಾತುಗಳಂತೆ ಈ ಬದುಕಿನ ಘಟ್ಟದ ಬಹು ಮುಖ್ಯ ಪ್ರಾತಿನಿಧಿಕರು ಕೊಡಾ ಹೌದು. ಅಶ್ವಥ್ ಅವರು ಚಿತ್ರರಂಗದಲ್ಲಿ ಕ್ರಿಯಾಶೀಲರಾಗಿದ್ದ ದಿನಗಳಲ್ಲಿ ಅವರನ್ನು ಅವರ ಮೈಸೂರಿನಲ್ಲಿ ನೋಡುವುದು ಕಷ್ಟವಿರಲಿಲ್ಲ. ಇಂದಿನ ಕಾಲದಲ್ಲಿ ಎಲ್ಲ ಕೆಲಸ ಮಾಡುವವರೂ ಕಾರಿನಲ್ಲಿ ಓಡಾಡುತ್ತಾರೆ. ಅಂದಿನ ದಿನದಲ್ಲಿ ಅಶ್ವಥ್ ಒಂದು ಜಟಕಾ ಗಾಡಿಯನ್ನು ಶಾಶ್ವತವಾಗಿ ಬಾಡಿಗೆಗೆ ಗೊತ್ತು ಮಾಡಿಕೊಂಡಿದ್ದರು. ಅದೊಂದು ಸುಂದರ ಗಾಡಿ. ಅದರಲ್ಲೇ ಅಶ್ವಥ್ ಅವರ ದಿನನಿತ್ಯದ ಪಯಣ. ಹಾಗಾಗಿ ಅವರನ್ನು ಮೈಸೂರಿಗರು ನೋಡಬಹುದಾದದ್ದು ಸರ್ವೇಸಾಮನ್ಯವಾಗಿತ್ತು.

ಅಶ್ವಥ್ ಅವರ ವಿಚಾರದಲ್ಲಿ ಮತ್ತೊಂದು ಗಮನಿಸಿದ್ದ ಅಂಶವೆಂದರೆ ಅಂದಿನ ದಿನಗಳಲ್ಲಿ ನಡೆಯುತ್ತಿದ್ದ ಬಯಲು ಭಾಷಣ ಕಾರ್ಯಕ್ರಮಗಳಲ್ಲಿ, ಅನಾವಶ್ಯಕವಾದ ಜನಗಳ ಆಕರ್ಷಣೆ ತಮ್ಮೆಡೆಗೆ ಬೀರದಿರಲಿ ಎಂದು ಒಂದು ಮಫ್ಲರ್ ಸುತ್ತಿಕೊಂಡು ಒಂದೆಡೆ ಬಂದು ನಿಲ್ಲುತ್ತಿದ್ದರು. ಮೈಸೂರಿನ ಟೌನ್ ಹಾಲಿನ ಮುಂದೆ ಅಂದಿನ ದಿನಗಳಲ್ಲಿ, ಅದರಲ್ಲೂ ತುರ್ತು ಪರಿಸ್ಥಿತಿಯ ಆಸುಪಾಸಿನ ದಿನಗಳಲ್ಲಿ ಎಲ್ಲಾ ಭಾಷಣ ಕಾರ್ಯಕ್ರಮಗಳಲ್ಲಿ ಅವರನ್ನು ಕಾಣುವುದು ಸರ್ವೇ ಸಾಮಾನ್ಯವಾಗಿತ್ತು. ಹೀಗೆ ಅಶ್ವಥ್ ತಾವು ಬಣ್ಣದ ಲೋಕದಲ್ಲಿದ್ದರೂ ತಮ್ಮನ್ನು ಸಾಮಾನ್ಯನನ್ನಾಗಿರಿಸಿಕೊಂಡಿದ್ದರು.

ನಾವು ಚಿತ್ರ ವಿಮರ್ಶೆಗಳನ್ನು ಓದುವಾಗ ಹಲವು ನಟ ನಟಿಯರ ಅಭಿನಯದ ಬಗ್ಗೆ ಉತ್ತಮವಲ್ಲದ ಮಾತುಗಳನ್ನು ನೋಡುವುದಿದೆ. ಅಂತಹ ಮಾತುಗಳನ್ನು ಅಶ್ವಥ್ ಅವರ ಬಗ್ಗೆ ಕೇಳಿರಲಿಕ್ಕೆ ಸಾಧ್ಯವಿಲ್ಲ. ಅವರು ಅಭಿನಯದಲ್ಲಿ ಅಷ್ಟೊಂದು ಸಹಜರು. ‘ನಾಗರಹಾವು’ ಚಿತ್ರದ ಚಾಮಯ್ಯ ಮೇಷ್ಟ್ರು ಪಾತ್ರದಲ್ಲಿ ಅವರು ಒಂದು ಪವಾಡ ಸದೃಶರಾಗಿದ್ದರು. ಅವರ ಪಾತ್ರಾಭಿನಯ ಅಷ್ಟೊಂದು ಪ್ರಭಾವಿ. ಹಾಗಾಗಿ ಅವರು ಚಾಮಯ್ಯ ಮೇಷ್ಟರು ಎಂದು ಅನ್ವರ್ಥವಾಗಿಹೋಗಿದ್ದರು. ಹಾಗೆ ನೋಡಿದರೆ ಅವರ ಅಭಿನಯದಲ್ಲಿ ಅಂತಹ ಪಾತ್ರಗಳು ಅನೇಕವು ಮೂಡಿವೆ. ಆದರೆ ಪುಟ್ಟಣ್ಣ ಕಣಗಾಲ್ ಸೃಷ್ಟಿಸುತ್ತಿದ್ದ ಪಾತ್ರಗಳಲ್ಲಿ ಮಾತ್ರ ಕಲಾವಿದರಲ್ಲಿ ಮಿನುಗುತ್ತಿದ್ದ ಬೆರಗು ವಿಶಿಷ್ಟವಾದದ್ದು. ಆ ವಿಶಿಷ್ಟತೆಯಲ್ಲಿ ಕೆ. ಎಸ್. ಅಶ್ವಥ್ ಅಜರಾಮರರಾಗಿಬಿಟ್ಟರು. ಅಶ್ವಥ್ ಅವರ ಕಸ್ತೂರಿ ನಿವಾಸ, ಮುತ್ತಿನಹಾರ ಪಾತ್ರಗಳು ಸಹಾ ಅದೇ ಮೆರುಗಿನವು.

ತಂದೆಯಾಗಿ, ಸಹೋದರನಾಗಿ, ಪತಿಯಾಗಿ, ತಾತನಾಗಿ, ನಾರದನಾಗಿ, ಹಳ್ಳಿಗನಾಗಿ, ಪಟ್ಟಣಿಗನಾಗಿ, ಗುರುವಾಗಿ, ಅಧಿಕಾರಿಯಾಗಿ, ಸೇವಕನಾಗಿ, ಋಷಿಯಾಗಿ ಹೀಗೆ ವಿಭಿನ್ನ ನೆಲೆಗಳಲ್ಲಿ ಅಶ್ವಥ್ ಅವರು ಅವರ ಪಾತ್ರಗಳಿಗೆ ನೀಡಿದ ಬೆಲೆ ಅಸದೃಶವಾದದ್ದು. ಅವರನ್ನು ನಾವು ನೋಡಿದ ಇಷ್ಟಪಟ್ಟ ಒಂದೆರಡು ಪಾತ್ರಗಳ ನೆಲೆಯಲ್ಲಿ ಅವಲೋಕಿಸುವುದಕ್ಕಿಂತ ತಾವು ನಟಿಸಿದ ಪಾತ್ರಗಳಲ್ಲೆಲ್ಲ ಅವರು ತುಂಬಿದ ಸಹಜತೆಯ ಆಳದಲ್ಲಿ ಅವರಿಗೆ ಇದ್ದ ಸಾಮರ್ಥ್ಯ, ಜೀವಂತಿಕೆ, ನಿಷ್ಠೆ ಜೊತೆಗೆ ಇವೆಲ್ಲಕ್ಕೂ ಮಿಗಿಲಾಗಿ ತಮ್ಮನ್ನು ಸಾಮಾನ್ಯನಂತೆ ಕಂಡುಕೊಳ್ಳುವ ವಿಧೇಯತೆ, ಬದುಕಿನ ಜೊತೆ ಹೊಂದಿದ್ದ ಸಾಮೀಪ್ಯತೆ ಇತ್ಯಾದಿಗಳಿಂದ ಅವರನ್ನು ನೋಡುವುದು ಅತ್ಯಂತ ಮಹತ್ವದ್ದೆನಿಸುತ್ತದೆ.

ಅಶ್ವಥ್ ಅವರ ವೈಯಕ್ತಿಕ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದಾಗ ಒಂದು ಗಹನವಾದ ವಿಚಾರ ವೇಧ್ಯವಾಗುತ್ತದೆ. ಒಬ್ಬ ವೃತ್ತಿಪರ ವ್ಯಕ್ತಿ ತಾನು ತನ್ನ ಕಾರ್ಯಕ್ಷೇತ್ರದಿಂದ ನಿವೃತ್ತಿ ಪಡೆದಾಗ ಆತನ ಬದುಕಿನಲ್ಲಿ ಮೂಡುವ ಅನಿಶ್ಚಿತತೆಗಳು ಅಶ್ವಥ್ ಅಂತಹ ಹಲವು ವರ್ಷಗಳು ನಿರಂತರ ಸೇವೆಯಲ್ಲಿದ್ದ ವ್ಯಕ್ತಿಯನ್ನು ಸಹಾ ಕಾಡಿತ್ತು ಎಂದರೆ ಈ ದೇಶದಲ್ಲಿ ಪಿಂಚಣಿ ಎಂಬ ಭದ್ರತೆ ಇಲ್ಲದ ಸಾಮಾನ್ಯ ಜನರ ಪಾಡೇನು ಎಂದು ಪ್ರಶ್ನಿಸಿಕೊಳ್ಳುವಂತಾಗುತ್ತದೆ. ಈ ದೇಶದ ಸಾಮಾನ್ಯನ ಬದುಕಿನಲ್ಲಿ “ಹಣದುಬ್ಬರ, ಆಡಂಭರದ ಹೈಟೆಕ್ ಎಂಬ ಹೆಸರಿನಲ್ಲಿ ಆರೋಗ್ಯ ಮತ್ತಿತರ ಮೂಲಭೂತ ಅವಶ್ಯಕತೆಗಳಲ್ಲಿ ತುರುಕಿರುವ ಕೈಗೆಟುಕದಂತಿರುವ ಶ್ರೀಮಂತಪರ ಬೆಲೆ ತೆತ್ತುವಿಕೆ” ಮುಂತಾದವು ಮಾಡಿರುವ ಹಾನಿಗಳು ಸಹಿಸಲಾಸಾಧ್ಯವಾದಂತಹವು. ಇದು ಪರಂಪರಾಗತ ಮೌಲ್ಯ ಇತ್ಯಾದಿಗಳ ಬಗ್ಗೆ ಭೋಳೆ ಬಿಟ್ಟು ನಿಜ ಬದುಕನ್ನು ಕಂಗೆಡಿಸಿ ಕುಳಿತಿರುವ ನಮ್ಮ ಸಾರ್ವಜನಿಕ, ರಾಜಕೀಯ, ಆರ್ಥಿಕವಲಯ ಸೃಷ್ಟಿಸಿರುವ ದೊಡ್ಡ ಕಂದರವನ್ನು ತೋರುತ್ತದೆ. ನಮ್ಮ ನಿತ್ಯದ ಬದುಕಿನಲ್ಲಿ ಇಂತಹ ದೊಡ್ಡ ಕಂದರವನ್ನು ಇಟ್ಟುಕೊಂಡು ನೀನು ನಿಶ್ಚಿಂತನಾಗಿ ಯೋಗೀಶ್ವರನಾಗು, ಬದುಕಿನಲ್ಲಿ ಆಸೆ, ಭಯ, ಕ್ರೋಧ ಎಲ್ಲಾ ಬಿಟ್ಟು ಬದುಕು ಎಂದು ಪುರಾಣ ಹೇಳುತ್ತದೆ ನಮ್ಮ ವ್ಯವಸ್ಥೆ. ಇದರ ಬಗ್ಗೆ ವ್ಯವಸ್ಥೆ ಏನು ಮಾಡುತ್ತದೋ ಗೊತ್ತಿಲ್ಲ ವೈಯಕ್ತಿಕವಾಗಿ ನಾವು ಅರಿವನ್ನು ಹೊಂದಿರುವುದು ಅತ್ಯಗತ್ಯ ಎಂಬ ಪಾಠ ಕೂಡ ಅಶ್ವಥ್ ಅವರ ಜೀವನದಲ್ಲಿ ಅಡಗಿದೆ. ಅಶ್ವಥ್ ಅವರು ಜನವರಿ 18, 2010ರಂದು ನಿಧನರಾಗುವ ಮುಂಚೆ ಕಡೇ ಪಕ್ಷ ಒಂದು ದಶಕಕ್ಕೂ ಹೆಚ್ಚು ಕಾಲ ಅಶ್ವಥ್ ಕಷ್ಟದ ಬದುಕನ್ನು ನಡೆಸಿರುವುದು ಸರ್ವವೇದ್ಯ. ಅವರು ದೊಡ್ಡ ಕಲಾವಿದರು, ಅವರಿಗೆ ನಾವು ಬೆಂಬಲವಾಗಿದ್ದೆವು ಎಂದು ತೋರಿಸಿಕೊಳ್ಳಲು ನಮ್ಮ ಸಾಮಾಜಿಕ ವ್ಯವಸ್ಥೆಗೆ ಆಸ್ಥೆ ಮೂಡಿಸಿಕೊಂಡಿದ್ದು ಅವರು ಸಾಯುವ ಕೆಲವು ಮುಂಚಿತ ದಿನಗಳಲ್ಲಿ ಮಾತ್ರ. ಅಶ್ವಥ್ ಅವರಂತೆ ಇನ್ನೂ ಬಹುತೇಕ ಕಲಾವಿದರು, ಸಾಮಾನ್ಯ ಜನ, ಸಾಮಾನ್ಯರಲ್ಲಿ ಸಾಮಾನ್ಯರ ಬಗ್ಗೆ ನಮ್ಮ ಇಂದಿನ ವ್ಯವಸ್ಥೆ ಎಂಬ ಅವ್ಯವಸ್ಥೆ ತೀವ್ರವಾಗಿ ನೋಡುವ ಅಗತ್ಯತೆ ಇದೆ.

ಹೀಗೆ ಕೆ.ಎಸ್. ಅಶ್ವಥ್ ಎಲ್ಲ ರೀತಿಯಲ್ಲೂ ಸಾಮಾನ್ಯರ ಪ್ರತಿನಿಧಿ. ಅಸಾಮಾನ್ಯ ಕಲಾವಿದ. ಅವರು ಎಲ್ಲ ರೀತಿಯಲ್ಲೂ ನಮ್ಮ ಹೃದಯದಲ್ಲಿ ಸ್ಥಾಪಿತರು. ಅವರ ನೆನಪು ಅವರ ಜೀವನ ಕಾಲದಲಿದ್ದ ನಮಗೆ ಎಂದೆಂದೂ ಅಮರ.

Tuesday 22 May 2012

ಪ್ರಾಮಾಣಿಕ ಅಧಿಕಾರಿಗಳ ಜೀವಕ್ಕೆ ಬೆಲೆಯೆ ಇಲ್ಲವೇ..?

           ಮೇ ೧೫ರ ಮಂಗಳವಾರ ರಾತ್ರಿ ಕಚೇರಿಯಿಂದ ಕಾರಿನಲ್ಲಿ ಮನೆಯತ್ತ ಹೊರಟಿದ್ದ ಕೆ.ಎ.ಎಸ್. ಅಧಿಕಾರಿ ಎಸ್.ಪಿ.ಮಹಾಂತೇಶ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಲ್ಲಿಗೆ ನರ್ಸಿಂಗ್ ಹೋಂಗೆ ದಾಖಲು ಮಾಡಲಾಯಿತು. ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಅಂದ ಮೇ ೨೦ ರ ಬೆಳಗಿನ ಜಾವ ೪ಗಂಟೆಯ ಸುಮಾರು ಮಹಾಂತೇಶ್ ಅವರು ಕೊನೆಯುಸಿರೆಳೆದರು. ಈ ಸುದ್ದಿ ನಾಡಿನಾದ್ಯಂತ ಕಾಳ್ಗಿಚ್ಚಿನಂತೆ ಹರಡಿದೆ. ನಾಡಿನೆಲ್ಲೆಡೆ ಈ ವಿಷಯವಾಗಿ ಚರ್ಚೆ ನಡೆದಿದೆ. ಪ್ರಾಮಾಣಿಕ ಅಧಿಕಾರಿ ಮಹಾಂತೇಶ್ ಅವರ ಹತ್ಯೆ ಲ್ಯಾಂಡ್ ಮಾಫಿಯಾದವರಿಂದ ನಡೆದಿದೆ ಎಂಬ ವದಂತಿ ಎಲ್ಲೆಡೆ ಹರಡಿ ಹಲವಾರು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ. ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳ ನೈತಿಕಸ್ಥೈರ್ಯ ಕುಸಿಯುವಂತೆ ಮಾಡಿರುವ ಈ ಘಟನೆ ವ್ಯಾಪಕ ಖಂಡನೆಗೆ ಒಳಗಾಗಿದೆ. ಪ್ರಾಮಾಣಿಕ ಅಧಿಕಾರಿಗಳು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂಥ ಪರಿಸ್ಥಿತಿ ನಿರ್ಮಾಣವಾಗಬಾರದಿತ್ತು. ಆದಾಗ್ಯೂ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಆಡಳಿತದಲ್ಲಿರುವ ಬೆರಳೆಣಿಕೆಯಷ್ಟು ಪ್ರಾಮಾಣಿಕ ಅಧಿಕಾರಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಪ್ರಾಮಾಣಿಕತೆಗೆ ಇಂದು ಬೆಲೆ ಇಲ್ಲ ಎಂಬುದನ್ನು ಈ ಘಟನೆ ನಿರೂಪಿಸುತ್ತಿದೆ. ಜೊತೆಗೆ ಅಂಥ ಅಧಿಕಾರಿಗಳು ಸ್ವರಕ್ಷಣಾ ತಂತ್ರಗಳನ್ನು ಕಲಿತು ವಿಶೇಷ ತರಬೇತಿ ಪಡೆದು ಕರ್ತವ್ಯ ನಿರ್ವಹಿಸುವುದು ಒಳ್ಳೆಯದು ಎಂಬುದು ನನ್ನ ಅನಿಸಿಕೆ. ಆದರೆ ಯಾವುದೇ ಕಾರಣಕ್ಕೂ ಪ್ರಾಮಾಣಿಕ ಅಧಿಕಾರಿಗಳು ನೈತಿಕಸ್ಥೈರ್ಯ ಕಳೆದುಕೊಳ್ಳಬಾರದು.

                       ಜ್ಞಾನಮುಖಿ
                                             




ಯು.ಪಿ.ಎಸ್.ಸಿ.ಸಾಧಕರು - 2012

೨೦೧೨ ರ ಮೇ ೫ರಂದು ಎಲ್ಲ ಸುದ್ದಿಪತ್ರಿಕೆಗಳಲ್ಲಿ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಬಗ್ಗೆ ಬಂದ ಮಾಹಿತಿ ಇಲ್ಲಿದೆ.







Saturday 12 May 2012

ಕೆ.ಎ.ಎಸ್. ಆದ ಸ್ಲಂ ಮಹಿಳೆ

        ಕಿತ್ತು ತಿನ್ನುವ ಬಡತನ. ಒಪ್ಪತ್ತಿನ ಗಂಜಿಗೂ ಪರದಾಡುವ ಸ್ಥಿತಿ. ಕೂಲಿಯಿಂದಲೇ ಬದುಕು ಸಾಗಬೇಕಿತ್ತು. ಮಗಳು ತಮ್ಮಂತೆಯೇ ಕೂಲಿ ಮಾಡಬಾರದು, ಬಡತನ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬುದು ಪೋಷಕರ ನಿಲುವಾಗಿತ್ತು. ಮಗಳನ್ನು ಓದಿಸಿ ಅಧಿಕಾರಿಯನ್ನಾಗಿ ಮಾಡಬೇಕೆನ್ನುವ ಹೆತ್ತವರ ಕನಸು ಕೊನೆಗೂ ಈಡೇರಿತು.

ಕೊಳೆಗೇರಿಯಲ್ಲಿ ಹುಟ್ಟಿದ ಬಾಲೆ ಬೆಳೆದು ದೊಡ್ಡವಳಾಗಿ ಕೆಎಎಸ್ ಪರೀಕ್ಷೆ ಪಾಸು ಮಾಡಿ ಉನ್ನತ ಹುದ್ದೆಗೆ ಆಯ್ಕೆಯಾಗುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಅಂದಹಾಗೆ ಇಲ್ಲಿ ಹೇಳಹೊರಟಿರುವುದು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ ಕಂದಾಯ ಇಲಾಖೆಯಲ್ಲಿ ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿರುವ ಮೈಸೂರಿನ ಕೊಳೆಗೇರಿ ಮಂಜುನಾಥಪುರದ ದಲಿತ ಕುಟುಂಬದಲ್ಲಿ ಜನಿಸಿದ ಅನಿತಾ ಲಕ್ಷ್ಮಿ ಅವರ ಸಾಧನೆಯ ಬಗ್ಗೆ. ಕೂಲಿ ಮಾಡಿಕೊಂಡಿದ್ದ ಚಿಕ್ಕಆಂಜನಪ್ಪ, ಮರಿಸಿದ್ದಮ್ಮ ಅವರ ಏಕೈಕ ಪುತ್ರಿ ಅನಿತಾ ಲಕ್ಷ್ಮಿ. ಬಡತನ ಹಾಸಿ ಹೊದ್ದುಕೊಳ್ಳುವಷ್ಟಿದ್ದರೂ ಮಗಳಿಗೆ ಲಕ್ಷ್ಮಿ ಎಂದೇ ಹೆಸರಿಟ್ಟರು.

ಹೆಣ್ಣು ಮಗಳೆಂದು ಹೆತ್ತವರು ಜರೆಯಲಿಲ್ಲ. ಕೀರ್ತಿಗೊಬ್ಬ ಬೇಕೆಂದು ಹಂಬಲಿಸಲಿಲ್ಲ. ಮಗಳು ನಮ್ಮಂತೆಯೇ ಅನಕ್ಷರಸ್ಥಳಾಗಬಾರದು, ಚೆನ್ನಾಗಿ ಓದಿ ಒಳ್ಳೆಯ ಹುದ್ದೆ ಅಲಂಕರಿಸಿದರೆ ಸಾಕು ಎಂಬುದು ಪೋಷಕರ ಬಯಕೆಯಾಗಿತ್ತು.

ಲಕ್ಷ್ಮಿ ಅವರಿಗೆ ಚಿಕ್ಕಂದಿನಿಂದಲೇ ಓದಿನ ಬಗ್ಗೆ ವಿಶೇಷ ಆಸಕ್ತಿ. ಸುತ್ತಮುತ್ತಲಿನ ಜನ ಬಡತನದ ಬೇಗೆಯಲ್ಲಿ ಬೇಯುತ್ತಿದ್ದುದು ಇವರ ಮನಸ್ಸಿನ ಮೇಲೆ ಪರಿಣಾಮ ಬೀರತೊಡಗಿತು. ಅನಿತಾ ಕೊಳೆಗೇರಿಯಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಿದರು.

ವಿ.ವಿ.ಮೊಹಲ್ಲಾದ ಮಾತೃ ಮಂಡಳಿಯಲ್ಲಿ ಪ್ರೌಢಶಾಲೆ, ಮಹಾರಾಣಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು. ವೀರಾಜಪೇಟೆಯಲ್ಲಿ ಟಿಸಿಎಚ್ ಮುಗಿಸಿದ ಇವರು ಪ್ರಾಥಮಿಕ ಶಾಲಾ ಶಿಕ್ಷಕಿಯಾದರು. 

ಹೆತ್ತವರ ಹಂಬಲದಂತೆ ಓದಿ ಮುಂದೆ ದೊಡ್ಡ ಹುದ್ದೆ ಅಲಂಕರಿಸಬೇಕೆಂದು ಅನಿತಾ ಅವರ ಕನಸು ಚಿಗರೊಡೆಯತೊಡಗಿತು. ಕೂಲಿ ಮಾಡುತ್ತಿದ್ದ ಹೆತ್ತವರಿಗೆ ನೆರವಾಗಿ ಮನೆಯಲ್ಲಿ ಹಾಸುಹೊಕ್ಕಾಗಿದ್ದ ಬಡತನವನ್ನು ಹೊಡೆದೋಡಿಸಿ ಅಂದುಕೊಂಡ ಗುರಿ ಮುಟ್ಟಬೇಕೆಂದು ಪಣ ತೊಟ್ಟರು.

ಶಿಕ್ಷಕಿಯಾಗಿ ದುಡಿಯುತ್ತಲೇ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿಎ, ಎಂಎ, ಬಿ.ಇಡಿ ಪದವಿ ಸಹ ಪಡೆದರು. ಶಿಕ್ಷಣದಿಂದ ಏನು ಬೇಕಾದರೂ ಸಾಧಿಸಬಹುದು ಎಂಬ ಸಾಧಕರ ಮಾತು ಅನಿತಾ ಅವರ ಕಿವಿಯಲ್ಲಿ ಗುನುಗುಡುತ್ತಿತ್ತು.

2003ನೇ ಸಾಲಿನಲ್ಲೇ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಕಂಟ್ರ್ಯಾಕ್ಟರ್ ಆದ ಸೋದರ ಮಾವ ಎಸ್.ಬಸವರಾಜು ಅವರನ್ನು ಅನಿತಾ ವರಿಸಿದರು. ದಂಪತಿಗೆ ಗಗನ್ ಎಂಬ ಮುದ್ದು ಮಗ ಜನಿಸಿದ. ಕುಟುಂಬ ನಿರ್ವಹಣೆ, ಕೆಲಸದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವುದನ್ನು ಆರಂಭಿಸಿದರು. 2008ರಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದರು. ಸಂದರ್ಶನಕ್ಕೆ ಸಹ ಹೋಗಿ ಬಂದರು. ಆದರೆ ಪ್ರಯೋಜನವಾಗಲಿಲ್ಲ.

ಹಣಕಾಸಿನ ತೊಂದರೆಯನ್ನು ನಿವಾರಿಸಿಕೊಳ್ಳುವ ಸಲುವಾಗಿ 2009ನೇ ಸಾಲಿನಲ್ಲಿ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗೆ ಪರೀಕ್ಷೆ ಬರೆದು ಉತ್ತೀರ್ಣರಾಗಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ (ಎಟಿಐ)ದಲ್ಲಿ ಎಫ್‌ಡಿಎ ಆಗಿ ಸೇವೆ ಆರಂಭಿಸಿದರು.

ಆದರೆ ಕೆಎಎಸ್ ಪರೀಕ್ಷೆಗೆ ಮತ್ತೆ ತಯಾರಿ ನಡೆಸಿದರು. ಮೈಸೂರಿನ `ಜ್ಞಾನಬುತ್ತಿ ಸಂಸೆ`್ಥಯಲ್ಲಿ ತರಬೇತಿ ಸಹ ಪಡೆದರು. 2010ನೇ ಸಾಲಿನಲ್ಲಿ ಎದುರಿಸಿದ ಪರೀಕ್ಷೆ ಅನಿತಾ ಅವರ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ.

ರಾಜ್ಯದಲ್ಲಿ 23ನೇ ರ‌್ಯಾಂಕ್ ಗಳಿಸಿ ಕಂದಾಯ ಇಲಾಖೆಯಲ್ಲಿ  ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆ ಆಗಿಯೇ ಬಿಟ್ಟರು. ಆದರೆ ಮಗಳು ಕೆಎಎಸ್ ಹುದ್ದೆಗೆ ಆಯ್ಕೆಯಾದ ವಿಷಯ ಕೇಳಿ ಆನಂದಿಸುವ ಭಾಗ್ಯ ತಂದೆ ಚಿಕ್ಕ ಅಂಜನಪ್ಪ ಅವರಿಗೆ ಒದಗಿಬರಲಿಲ್ಲ.

2009ರಲ್ಲಿ ಚಿಕ್ಕ ಅಂಜನಪ್ಪ ಅನಾರೋಗ್ಯದಿಂದ ತೀರಿಕೊಂಡರು. ತಂದೆಯನ್ನು ಕಳೆದುಕೊಂಡ ಕೊರಗು ಅವರನ್ನು ಕಾಡುತ್ತಿದೆ. ಆದರೆ ಅಪ್ಪನ ಆಸೆ ಈಡೇರಿಸಿದ ಸಂತೃಪ್ತಿ ಇದೆ.

ಮಂಜುನಾಥಪುರದಲ್ಲಿ ಬಹುತೇಕ ಮಂದಿ ಪೌರಕಾರ್ಮಿಕರೇ ಹೆಚ್ಚು. ಉಳಿದಂತೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಸ್ಲಂ ಎಂದ ಮೇಲೆ ಅಲ್ಲಿನ ಮಕ್ಕಳ ವಿದ್ಯಾಭ್ಯಾಸ ಕೇಳಬೇಕಾಗಿಲ್ಲ. ಪದವಿ ಮಾಡಿದವರು ಬೆರಳೆಣಿಕೆಯಷ್ಟು.

ದುರ್ಬೀನು ಹಾಕಿ ಹುಡುಕಿದರೂ ಸರ್ಕಾರಿ ಹುದ್ದೆ ಅಲಂಕರಿಸಿದ ಹೆಣ್ಣುಮಕ್ಕಳು ಸಿಗುವುದಿಲ್ಲ. ಆದರೆ ಮುಳ್ಳಿನ  ಹಾದಿಯಲ್ಲೇ ನಡೆದು ಬಂದ ಅನಿತಾ ಲಕ್ಷ್ಮಿ ತಮ್ಮಲ್ಲಿದ್ದ ಛಲದಿಂದಾಗಿ ಕೆಎಎಸ್ ಪರೀಕ್ಷೆ ಬರೆದು ಅಧಿಕಾರಿ ಹುದ್ದೆಗೆ ಆಯ್ಕೆಯಾಗಿ ಇತರರಿಗೆ ಮಾದರಿಯಾಗಿದ್ದಾರೆ.

ನಮ್ಮ ನಡುವೆ ಇದ್ದ ಬಡ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳು ಕೆಎಎಸ್ ಪರೀಕ್ಷೆ ತೇರ್ಗಡೆಯಾಗಿ ಅಧಿಕಾರಿ ಆಗುತ್ತಿರುವುದು ಮಂಜುನಾಥಪುರ ಕೊಳೆಗೇರಿ ಜನರಲ್ಲಿ ಸಂತಸ ತಂದಿದೆ. ತಮಗೆ ಎಷ್ಟೇ ಕಷ್ಟವಿದ್ದರೂ ಅದನ್ನು ಬದಿಗೊತ್ತಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ ಅನಿತಾ ಲಕ್ಷ್ಮಿಯಂತೆ ಅಧಿಕಾರಿಯನ್ನಾಗಿ ಮಾಡಬೇಕೆಂಬ ನಿಲುವು ಈಗ ಬಡಾವಣೆಯ ಜನತೆಯಲ್ಲಿ ಬಂದಿದೆ.

ಸಾಧನೆ ಮಾಡುವಲ್ಲಿ ಸಹಕರಿಸಿದ ಹೆತ್ತ ತಾಯಿ ಮತ್ತು ಕೈ ಹಿಡಿದ ಪತಿ ಮತ್ತು ಕುಟುಂಬದವರನ್ನು ಅನಿತಾ ನೆನೆಯುತ್ತಾರೆ. ನನ್ನಂತೆಯೇ ಬಡಾವಣೆಯ ಹೆಣ್ಣು ಮಕ್ಕಳು ಸಾಧನೆ ಮಾಡಬೇಕು.

ಅದಕ್ಕಾಗಿ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಬಡಾವಣೆಯಲ್ಲಿ ತೆರೆಯಬೇಕೆಂಬ ಹಂಬಲ ಇವರಲ್ಲಿದೆ. ತಮ್ಮ ಕೇರಿಯ ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯುವಂತೆ ಆತ್ಮವಿಶ್ವಾಸ ತುಂಬುತ್ತಿದ್ದಾರೆ.

ಕಷ್ಟ-ಸುಖವನ್ನು ಬದಿಗೊತ್ತಿ ಹಗಲು-ರಾತ್ರಿ ಅಭ್ಯಾಸ ಮಾಡಿದ್ದರಿಂದಲೇ ಸಾಧನೆ ಮಾಡಲು ಸಾಧ್ಯವಾಯಿತು. ಹೆತ್ತವರ ಕನಸನ್ನು ನನಸು ಮಾಡಿದ್ದೇನೆ. ಮನೆಯಲ್ಲಿ ಬಡತನ ಇತ್ತು.

ಆದರೆ ಅದು ಸಾಧನೆಗೆ ಅಡ್ಡಿಯಾಗಲಿಲ್ಲ. ತಾಯಿ-ಪತಿ ಇಬ್ಬರು ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತರು. ಛಲ ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು.

ಹಿಡಿದ ಕೆಲಸವನ್ನು ಕೊನೆ ಮುಟ್ಟುವವರೆಗೂ ಬಿಡಬಾರದು. ರಾಜ್ಯದ ಯಾವುದೇ ಮೂಲೆಗೂ ಅಧಿಕಾರಿಯಾಗಿ ಹೋದರೂ ತಾಯಿ, ಹುಟ್ಟಿದ ಮನೆಯನ್ನು ಮರೆಯಲಾರೆ ಎಂದು ಹೇಳುವಾಗ ಅನಿತಾ ಅವರ ಕಣ್ಣಂಚಿನಲ್ಲಿ ಆನಂದಬಾಷ್ಪ ಇಣುಕಿತು. ಛಲ, ದೃಢ ವಿಶ್ವಾಸ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಅನಿತಾ ಲಕ್ಷ್ಮಿ ಅವರೇ ಸಾಕ್ಷಿ.

ಓದಿ ವಿದ್ಯಾವಂತರಾಗಿ ಒಳ್ಳೆಯ ಹುದ್ದೆ ಅಲಂಕರಿಸಲಿ ಎಂದು ಪೋಷಕರು ಮಕ್ಕಳಿಗೆ ಎಲ್ಲ ಸವಲತ್ತುಗಳನ್ನು ಒದಗಿಸುತ್ತಾರೆ. ಆದರೆ ಬಡತನದಲ್ಲಿ ಬೆಂದು ಯಾರ ಸಹಾಯವಿಲ್ಲದೆ ಕಠಿಣ ಅಭ್ಯಾಸ ಮಾಡಿ ಸಾಧನೆ ಮಾಡಿರುವ ಅನಿತಾಲಕ್ಷ್ಮಿ ಎಲ್ಲರಿಗೆ ಮಾದರಿಯಾಗಿದ್ದಾರೆ.

 Thanks to Prajavani Paper.

Monday 30 April 2012

ಜೀವನ್ಮುಖಿ

ಚಹಾ ಕುಡಿಯುವಾಗ, ಊಟಕ್ಕೆ ಕುಳಿತಾಗ ಯಾವುದಾದರೊಂದು ಮ್ಯಾಗಜೀನ್, ನ್ಯೂಸ್ ಪೇಪರ್ ಅಥವಾ ಕೈಗೆ ಸಿಕ್ಕ ಪುಸ್ತಕವೊಂದನ್ನು ಕೈಗೆತ್ತಿಕೊಂಡು ಕುಳಿತುಬಿಡುವುದು ನನ್ನ ದುರಭ್ಯಾಸ (?).ಅದಿರಲಿ, ನಿನ್ನೆ ಹೀಗೆ ಕುಳಿತಾಗ `ವಿಜಯವಾಣಿ' ಪತ್ರಿಕೆಯಲ್ಲಿ ಪ್ರಕಟವಾದ ಕಥೆಯೊಂದರ ಮೇಲೆ ಅನಾಯಾಸವಾಗಿ ಕಣ್ಣು ಹೊರಳಾಡಿತು. `ಜೀವನ್ಮುಖಿ' ತಲೆಬರಹದ ಕಥೆಯೊಂದು ಇಷ್ಟವಾಯಿತು. ಜೀವನದಲ್ಲಿ ದುಡ್ಡೊಂದೇ ಮುಖ್ಯ ಎನ್ನುವವರಿಗೆ ನೀತಿಪಾಠದಂತಿದೆ ಈ ಕಥೆ. ಜೀವನದಲ್ಲಿ ದುಡ್ಡು ಮುಖ್ಯ ನಿಜ. ಆದರೆ ಅದಕ್ಕಿಂತ ಮುಖ್ಯವಾದದ್ದು ಇನ್ನೊಂದು ಇದೆ. ಅದೇ - ಮಾನವೀಯ ಮೌಲ್ಯಗಳು. ಆದರ್ಶಗಳು, ತತ್ವ-ಸಿದ್ಧಾಂತಗಳು. ಹೌದು, ಬೇಕಾದರೆ ಒಮ್ಮೆ ಹಿಂತಿರುಗಿ ನೋಡಿ. ಇತಿಹಾಸದಲ್ಲಿ ಆಗಿ ಹೋದ ಮಹಾನ್ ಮಹಾನ್ ವ್ಯಕ್ತಿಗಳೆಲ್ಲ ತತ್ವ-ಸಿದ್ಧಾಂತಗಳಿಗೆ, ಮಾನವೀಯ ಮೌಲ್ಯಗಳಿಗೆ ಬೆಲೆಕೊಟ್ಟರು. ಅದಕ್ಕೆ ಅವರೆಲ್ಲ ಅಜರಾಮರಾದರು. ಇತಿಹಾಸದಲ್ಲಿ ಅಸಂಖ್ಯ ಸಂಖ್ಯೆಯಲ್ಲಿ ಶ್ರೀಮಂತರಾಗಿ ಹೋಗಿದ್ದಾರೆ. ಆದರೆ ಅವರ ಯಾರ ಹೆಸರೂ ನಮಗೆ ತಿಳಿದಿಲ್ಲ ಅವರೆಲ್ಲ ಕತ್ತಲ ಮರೆಯಲ್ಲಿ ಮರೆಯಾಗಿ ಹೋಗಿದ್ದಾರೆ. ದುಡ್ಡೆಂಬ ಮಾಯಾಜಿಂಕೆಯ ಹಿಂದೆ ಓಡಿ ಹೋದವರಾರು ನೆಮ್ಮದಿಯಾಗಿ ಬದುಕಿಲ್ಲ. ಬದುಕುವುದೂ ಇಲ್ಲ. ಆದಾಗ್ಯೂ ನಾವೆಲ್ಲ ದುಡ್ಡು ದುಡ್ಡು ಎಂದು ಹಂಬಲಿಸಿವುದೇತಕೋ....? ಹಾಗಾದರೆ ಜೀವನದಲ್ಲಿ ದುಡ್ಡು ಮುಖ್ಯ ಅಲ್ಲವೇ ಅಲ್ಲವಾ...? ದುಡ್ಡು ಗಳಿಸಬಾರದಾ...? ಖಂಡಿತ ಗಳಿಸಬೇಕು ನಮ್ಮ ಜೀವನಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಗಳಿಸಬೇಕು. ನನ್ನ ಮಕ್ಕಳ ಜೀವನಕ್ಕೂ ದುಡ್ಡು ಕೂಡಿಡ್ತೀನಿ, ಮುಂದೆ ನನ್ನ ಏಳೆಂಟು ತಲೆಮಾರುಗಳು ಕುಳಿತು ತಿನ್ನುವಷ್ಟು ದುಡ್ಡು ಸಂಪಾದಿಸ್ತೀನಿ ಅಂತ ಹೊರಟರೆ ಅದಕ್ಕಿಂತ ಮೂರ್ಖತನ ಇನ್ನೊಂದಿಲ್ಲ. ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ನಮಗೆ ನಮ್ಮ ತಂದೆಯ ಮೇಲೆ ಇದ್ದಷ್ಟು ಪ್ರೀತಿ ನಮ್ಮ ತಾತನ ಮೇಲಿರುವುದಿಲ್ಲ. ತಾತನ ಮೇಲೆ ಇದ್ದಷ್ಟು ಪ್ರೀತಿ ಮುತ್ತಾತನ ಮೇಲೆ ಇರುವುದಿಲ್ಲ. ಇನ್ನೂ ಮುತ್ತಾತನ ಮೇಲೆ ಪ್ರೀತಿ ಇರುವುದಿರಲಿ ಆತ ಯಾರು, ಹೇಗಿದ್ದ ಏನು ಹೆಸರು ಎಂಬುದೇ ಸರಿಯಾಗಿ ತಿಳಿದಿರುವುದಿಲ್ಲ. ನಮ್ಮ ಪಾಲಿಗೆ ಆತ ಅಸ್ಪಷ್ಟ ಚಿತ್ರ. ಇದೇ ಮುಂದೆ ನಮಗೂ ಅನ್ವಯಿಸುತ್ತದೆ ಅಲ್ಲವಾ...? ಹಾಗಾದರೆ ಯಾರಿಗಾಗಿ ಈ ಗಳಿಕೆ? ಯಾರ ಮೆಚ್ಚಿಸುವುದಕ್ಕಾಗಿ ಈ ದುಡಿಕೆ? ಬಿಲೀವ್ಹ್ ಮಿ ಫ್ರೆಂಡ್ಸ್ ಈ ಜಗತ್ತಿನಲ್ಲಿ ತತ್ವ-ಸಿದ್ಧಾಂತಗಳನ್ನು ನೆಚ್ಚಿ ಬದುಕಿದವರು ಇದುವರೆಗೂ ಸತ್ತಿಲ್ಲ. ಆದರೆ ಹಣವನ್ನೇ ನೆಚ್ಚಿ ಬದುಕಿದವರ ಹೆಸರೇ ನಮಗೆ ತಿಳಿದಿಲ್ಲ. ದುಡ್ಡಿಗೆ ದ್ವಿತೀಯ ಆದ್ಯತೆ ನೀಡೋಣ. ಮಾನವೀಯ ಮೌಲ್ಯಗಳಿಗೆ, ತತ್ವ-ಸಿದ್ಧಾಂತಗಳಿಗೆ ಪ್ರಥಮಾದ್ಯತೆ ನೀಡೋಣ. ಅಂದಾಗ ಮಾತ್ರ ಸಾರ್ಥಕ ಬದುಕು ಬಾಳಿದಂಥ ನೆಮ್ಮದಿ ನಮ್ಮದಾಗುತ್ತದೆ.

             ಹಣದ ಬೆನ್ನುಹತ್ತಿ ಹೋದ ವೈದ್ಯನೊಬ್ಬನ ಕಥೆ-ವ್ಯಥೆಯನ್ನು ವಿವೇಕಾನಂದ ಕಾಮತ್ ಅವರು ಸುಂದರವಾಗಿ ಇಲ್ಲಿ ಒಡಮೂಡಿಸಿದ್ದಾರೆ. ಒಮ್ಮೆ ಓದಿಕೊಳ್ಳಿ.
                                                                          ನಿಮ್ಮವ
                                                                         ಜ್ಞಾನಮುಖಿ
                                                                 

Saturday 28 April 2012

ಇವ ನಮ್ಮವ...

ಬಡತನದಲ್ಲಿ ಬೆಳೆದ ಹುಡುಗ ಸಾಧಕನಾದ ಯಶೋಗಾಥೆ.

Monday 9 April 2012

ಮೀನಾ ನಾಟಕ ಮತ್ತು ಬೀಳ್ಕೊಡುವ ಸಮಾರಂಭ

ಇತ್ತೀಚೆಗೆ ನಮ್ಮ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಒತ್ತನ್ನು ಕುರಿತು `ಮೀನಾ' ಎಂಬ ಬೀದಿನಾಟಕವನ್ನು ಏರ್ಪಡಿಸಿದ್ದೆವು. ಹಾಗೂ ೭ನೇ ವರ್ಗದ ವಿದ್ಯಾರ್ಥಿ/ನಿಯರ ಬೀಳ್ಕೊಡುವ ಸಮಾರಂಭವನ್ನು ಹಮ್ಮಿಕೊಂಡಿದ್ದೆವು. ತದನಿಮಿತ್ಯ ಆ ಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
               ಮುಖ್ಯ ಗುರುಗಳಾದ ಶ್ರೀಮತಿ ಪಿ.ಆರ್.ಚವ್ಹಾಣ ಅವರಿಂದ ಗಿಳಿ ಪಾತ್ರದಾರಿ ವಿದ್ಯಾ ಕಾಳೆ ಇವಳಿಗೆ ಪ್ರಶಸ್ತಿ ಫಲಕ

ಬೀಳ್ಕೊಡುವ ಸಮಾರಂಭದಂದು ನಮ್ಮ ಮುದ್ದು ವಿದ್ಯಾರ್ಥಿಗಳು ನನಗೆ ಹೂ ನೀಡುತ್ತಿರುವುದು. ಮುಖದಲ್ಲಿ ನಗೆಯಿತ್ತಷ್ಟೆ, ಆದರೆ ಬೀಳ್ಕೊಡುವ ಸಂಗತಿ ಹೃದಯ ಭಾರವಾಗಿಸಿತ್ತು.

Sunday 25 March 2012

ಗೆದ್ದೇ ಗೆಲ್ಲುವೆವು - ಕೃತಿ ಪರಿಚಯ

ಪ್ರಿಯ ಓದುಗರೇ,
       ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಒಂದು ಗಂಟೆ ನಿದ್ರಿಸಿದರೂ ಜಗತ್ತು ನಮ್ಮನ್ನು ಬಿಟ್ಟು ನೂರಾರು ಕಿಲೋಮೀಟರ್ ಮುಂದಕ್ಕೆ ಓಡಿರುತ್ತದೆ. ಜೀವನದ ಪ್ರತಿ ಹಂತದಲ್ಲೂ ಪ್ರತಿ ಕ್ಷಣದಲ್ಲೂ ನಾವು ಸ್ಪರ್ಧೆಯನ್ನು ಎದುರಿಸುತ್ತಿದ್ದೇವೆ. ಅದರಲ್ಲೂ ಅಧ್ಯಯನ ನಿರತ ವಿದ್ಯಾರ್ಥಿ/ಸ್ಪರ್ಧಾರ್ಥಿಗಳಂತೂ ಪ್ರತಿ ಕ್ಷಣವೂ ಸ್ಪರ್ಧಾಕಣದಲ್ಲಿರಬೇಕಾಗುತ್ತದೆ. ಹೀಗೆ ಸ್ಪರ್ಧಾಕಣದಲ್ಲಿದ್ದು ಸ್ಪರ್ಧೆಯನ್ನು ಎದುರಿಸುವುದು ಸುಲಭದ ಮಾತಲ್ಲ. ಎಷ್ಟೋ ಬಾರಿ ನಮಗೆ ಅರಿವಿಲ್ಲದೆಯೇ ಮನಸ್ಸು `ಯಾವನಿಗೆ ಬೇಕು ಈ ಕಾಂಪಿಟೇಶನ್ ಸಾಯ್ಲಿ ಅತ್ಲಾಗೆ' ಎಂದು ಹಾಸಿಗೆ ಹೊದ್ದು ಮಲಗಿಬಿಡುತ್ತದೆ. ಚಿಕ್ಕಚಿಕ್ಕ ಸೋಲು, ನಿರಾಶೆ, ಹತಾಶೆ ಇನ್ನೆಂದು ನಾನು ಪಾಸ್ ಆಗುವುದಿಲ್ಲವೇನೋ ಎಂಬ ಭಾವ ಸದ್ದಿಲ್ಲದೇ ಕಾಡುತ್ತಿರುತ್ತೆ. ಎಷ್ಟೋ ಬಾರಿ ಸ್ಪರ್ಧೆಯನ್ನು ಹೇಗೆ ಎದುರಿಸಬೇಕು ಎಂಬ ಮಾರ್ಗದರ್ಶನವೇ ಸರಿಯಾಗಿ ಲಭ್ಯವಾಗಿರುವುದಿಲ್ಲ. ನೆರೆ-ಹೊರೆಯವರ ಕೊಂಕು ನುಡಿ, ನಿರುತ್ಸಾಹಗೊಳಿಸುವ ಮಾತುಗಳು, ಒಂದೇ ಎರಡೇ ನಮ್ಮನ್ನು ಸ್ಪರ್ಧೆಯಿಂದ ವಿಮುಖಗೊಳಿಸಲು.... ಆದರೆ ಈ ಹಂತದಲ್ಲಿ ಪ್ರತಿಯೊಬ್ಬರಿಗೂ ಸಂಜೀವಿನಿಯಂತೆ ಒದಗಿಬರುವುದೇ - `ಗೆದ್ದೇ ಗೆಲ್ಲುವೆವು' ಕೃತಿ. ನಾಡಿನ ಹೆಸರಾಂತ ಲೇಖಕರಾದ ಹಾಗೂ ನನ್ನ ಆತ್ಮೀಯ ಮಿತ್ರ (ಹಾಗೆಂದು ನಾ ತಿಳಿದುಕೊಂಡಿದ್ದೇನೆ) (ಹಿರಿಯ)ರಾದ ಶ್ರೀ ಮಂಜುನಾಥ ಬೇದ್ರೆಯವರು ಈ ಕೃತಿಯ ಲೇಖಕರು. ಊಟಕ್ಕೆ ಕುಳಿತಿರುವವರಿಗೆ ಏನೇನು ಬಡಿಸಬೇಕು? ಎಷ್ಟು ಬಡಿಸಬೇಕು? ಎಂಬುದನ್ನು ತಿಳಿದ ಪಾಕಶಾಸ್ತ್ರ ಪ್ರವೀಣರಂತೆ ಬೇದ್ರೆ ಮಂಜುನಾಥ ಅವರು ಸ್ಪರ್ಧಾರ್ಥಿಗಳಿಗೆ ಉಪಯುಕ್ತವಾಗುವಂತೆ - ಐ.ಎ.ಎಸ್., ಐ.ಪಿ.ಎಸ್. ಕೆ.ಎ.ಎಸ್.ನಂತಹ ಪರೀಕ್ಷೆಗಳಿಗೆ ಹೇಗೆ ಸಿದ್ಧರಾಗುವುದು? ಕೆ.ಎ.ಎಸ್.ನ ಹೊಸ ಪಠ್ಯಕ್ರಮ ಏನು? ಸಂದರ್ಶನವನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆ? ಉಪಯುಕ್ತವಾದ ವೆಬ್‍ಸೈಟ್‍ಗಳು ಯಾವುವು? ಹೀಗೆ ಹತ್ತು ಹಲವು ವಿಷಯಗಳನ್ನು  ಸ್ಪರ್ಧಾರ್ಥಿಗಳಿಗೆ ಉಣಬಡಿಸಿದ್ದಾರೆ.. ಪ್ರತಿಯೊಬ್ಬ ಸ್ಪರ್ಧಾರ್ಥಿಯ ಕೈಚೀಲದಲ್ಲಿ, ಗ್ರಂಥಾಲಯದಲ್ಲಿ ಇರಲೇಬೇಕಾದ ಪುಸ್ತಕ ಇದು ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಹಾಗಾದರೆ ಇನ್ನೇಕೆ ತಡ...? ಈಗಲೇ ಪುಸ್ತಕ ತರಿಸಿಕೊಳ್ಳಿ. ಓದಿ ಮುಗಿಸುವದರೊಳಗೆ ನಿಮ್ಮಲಿ ನವ ಚೈತನ್ಯವೊಂದು ಮೂಡಿರುತ್ತದೆ. ಪ್ರಾಮಿಸ್........

 

 

Gedde Gelluvevu - We Will Win - A Handbook on Career Guidance and Personality Development by Bedre Manjunath

Gedde Gelluvevu - We Will Win - A Handbook on Career Guidance and Personality Development by Bedre Manjunath

Gedde Gelluvevu - We Will Win - A Handbook on Career Guidance and Personality Development by  Bedre Manjunath
Published by Navakarnataka Publications, Bangalore  Pages: 216 + 4 ,  Price: 100/-

Copies are available from all Navakarnataka Book Stores, Exhibition Outlets, Leading Book Stalls, Bus-Stand Book Depots and also from 
www.flipkart.com
WWW - WE WILL WIN. ಗೆದ್ದೇ ಗೆಲ್ಲುವೆವು! ಹೇಗೆ? ಗೆಲವಿನ ಗುಟ್ಟನ್ನು ಹಂಚಿಕೊಳ್ಳುವ ಕೃತಿ ಇದು. ಎಂಪ್ಲಾಯಬಿಲಿಟಿ ಸ್ಕಿಲ್ಸ್ - ಪೂರ್ವಸಿದ್ಧತೆ, ಸ್ಪರ್ಧಾತ್ಮಕ ಪರೀಕ್ಷೆಗಳು, ಕಲಿಕೆ - ಗಳಿಕೆಯ ಕೋರ್ಸ್‌ಗಳು, ಅತ್ಯುಪಯುಕ್ತ ವೆಬ್‌ಸೈಟ್ ಮತ್ತು ಪುಸ್ತಕಗಳು ಹಾಗೂ ವ್ಯಕ್ತಿತ್ವ ವಿಕಾಸ ಮತ್ತು ಯಶಸ್ಸಿನ ಕಥೆಗಳು ಎಂಬ ಐದು ಭಾಗಗಳಲ್ಲಿ, 114 ಅಧ್ಯಾಯಗಳಲ್ಲಿ ಸಂಕಲಿತವಾಗಿರುವ "ಗೆದ್ದೇ ಗೆಲ್ಲುವೆವು - ಸ್ಪರ್ಧಾತ್ಮಕ ಪರೀಕ್ಷೆಗಳು, ವೃತ್ತಿ ಮಾರ್ಗದರ್ಶನ, ಹೊಸ ಹೊಸ ಕೋರ್ಸ್‌ಗಳ ಮಾಹಿತಿ ಸಾಹಿತ್ಯ ಕೈಪಿಡಿ" ಕನ್ನಡದಲ್ಲಿ ದೊರೆಯುವ ಏಕೈಕ ಸಮಗ್ರ ವೃತ್ತಿ ಮಾರ್ಗದರ್ಶಿ ಮಾಹಿತಿ ಸಾಹಿತ್ಯ ಕೃತಿ. ಎಂಪ್ಲಾಯಬಿಲಿಟಿ ಸ್ಕಿಲ್ಸ್! ಐ.ಕ್ಯು., ಇ.ಕ್ಯು., ವಿ.ಕ್ಯು., ಕೆ.ಕ್ಯು., ಜಿ.ಕೆ.ಕ್ಯು., ಸಿ.ಕ್ಯು., ಮೊದಲಾದ ಸಾಮರ್ಥ್ಯಗಳು, ಎಸ್.ಕ್ಯು., ಸಿ.ವಿ./ ರೆಸ್ಯೂಮೆ / ಬಯೋಡಾಟಾ ಹೇಗಿರಬೇಕು ? ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸಿಗೆ ದಿನಪತ್ರಿಕೆಗಳೇ ದಾರಿದೀಪ, ಎಸ್.ಡಿ.ಎ. / ಎಫ್.ಡಿ.ಎ./ಕೆ.ಇ.ಎಸ್./ಕೆ.ಎ.ಎಸ್./ಐ.ಎ.ಎಸ್. ಪರೀಕ್ಷೆಗಳಿಗೆ ಸಿದ್ಧತೆ ಹೇಗೆ ? ಆದ್ರೆ ಆಡೋಕ್ಬಂದೆ, ಆಗ್ದಿದ್ರೆ ನೋಡೋಕ್ಬಂದೆ ಅನ್ನೋರಿಗೆಲ್ಲಾ ಈ ಐ.ಎ.ಎಸ್./ಐ.ಎಫ್.ಎಸ್., ಯಂಗ್ ಇಂಡಿಯಾ ಬ್ಯುರೋಕ್ರಸಿ, ನೇಮಕಾತಿ ಪರೀಕ್ಷೆಗಳು, ವಿಭಿನ್ನವಾಗಿ ಆಲೋಚಿಸಿ - ಯಶಸ್ಸು ಗಳಿಸಿ, ಎಡ್ವರ್ಡ್-ಡ-ಬೋನೋ, ಡಾ. ಸ್ಪೆನ್ಸರ್ ಜಾನ್ಸನ್, ಪಾಲ್ ಆರ್ಡೆನ್, ಗ್ಲಾಡ್‌‍ವೆಲ್‌ನ 10,000 ಗಂಟೆಗಳ ಪರಿಶ್ರಮ ಸೂತ್ರ!, ಸ್ಟೀವ್ ಜಾಬ್ಸ್‌ನ - ಸ್ಟೇ ಹಂಗ್ರಿ, ಸ್ಟೇ ಫೂಲಿಶ್, ದಿ ಲಾಸ್ಟ್ ಲೆಕ್ಚರ್... ಒಹ್! ಏನೆಲ್ಲಾ ಅಡಗಿದೆ ಇಲ್ಲಿ! ಶಿಕ್ಷಕರು, ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಯಶಸ್ಸಿನ ಬೆನ್ನು ಹತ್ತಿರುವ ಸ್ಪರ್ಧಾರ್ಥಿಗಳ ಆಪ್ತ ಸಂಗಾತಿ ಇದು. ಕ್ವಿಜ್, ಅಡ್ವೆಂಚರ್,ಕೆರೀರ್ ಗೈಡೆನ್ಸ್, ಸ್ಕಿಲ್ ಟ್ರೈನಿಂಗ್, ಇಂಗ್ಲಿಷ್, ವ್ಯಕ್ತಿತ್ವ ವಿಕಾಸ ಮತ್ತು ಸಾಮಾನ್ಯ ಜ್ಞಾನದ ತರಬೇತಿ ಶಿಬಿರಗಳನ್ನು 1985ರಿಂದ ಸಂಘಟಿಸುತ್ತಿರುವ, ಸ್ಪರ್ಧಾ ಮಾಹಿತಿಯ ಅಂಕಣ ಬರಹಗಳು ಮತ್ತು 75ಕ್ಕೂ ಹೆಚ್ಚು ಕೃತಿಗಳ ಮೂಲಕ ಯುವಜನರಿಗೆ ಉಪಯುಕ್ತ ಮಾರ್ಗದರ್ಶನ ಮಾಡುತ್ತಿರುವ ಬೇದ್ರೆ ಮಂಜುನಾಥ ಅವರ ಹಲವು ವರ್ಷಗಳ ಪರಿಶ್ರಮದ ಸಂಕಲನ ಇದು. ಓದಿ. ಓದಿಸಿ. ಯಶಸ್ಸು ನಿಮ್ಮದಾಗಲಿ!
 
ಮೂಲ : ಬೇದ್ರೆ ಫೌಂಡೇಶನ್ ಬ್ಲಾಗ್   www.bedrefoundation.blogspot.in
  ಕೃತಿಯ ಲೇಖಕರು:- ಶ್ರೀ ಮಂಜುನಾಥ ಬೇದ್ರೆ.

Friday 16 March 2012

ಚೈತನ್ಯ ಹೆಗಡೆಯವರ ಲೇಖನ

ವಾಸ್ತವ ಸಂಗತಿಗಳ ಸೂಕ್ಷ್ಮತೆಯನ್ನು ಶ್ರೀ ಚೈತನ್ಯ ಹೆಗಡೆಯವರು ಎಳೆ ಎಳೆಯಾಗಿ ಈ ಲೇಖನದಲ್ಲಿ ಬಿಡಿಸಿಟ್ಟಿದ್ದಾರೆ. ಒಮ್ಮೆ ಓದಿ ನೋಡಿ..

Thursday 8 March 2012

ಕನ್ನಡ ಮಾಧ್ಯಮ ನಿಕೃಷ್ಟವಲ್ಲ...

ಉನ್ನತ ಶಿಕ್ಷಣ ಪಡೆಯಲು ಅಥವಾ ಉನ್ನತ ಹುದ್ದೆ ಹೊಂದಲು ಕನ್ನಡ ಮಾಧ್ಯಮದಲ್ಲಿ ಓದಿದರೆ ಸಾಧ್ಯವಿಲ್ಲ. ಆಂಗ್ಲ ಮಾಧ್ಯಮದಲ್ಲಿಯೇ ಓದಬೇಕು ಎಂದು ಹಲುಬುವವರಿಗೆ ಇದೊಂದು ಅರಿವಿನ ಪಾಠ...

Friday 24 February 2012

ವಾಹನ ನೋಂದಣಿ ಸಂಖ್ಯೆಗಳು


       1988ರ ಐ.ಎಂ.ವಿ.ಆಕ್ಟ್ ಸಬ್ ಸೆಕ್ಷನ್ (6) ಆಕ್ಟ್ ಸೆಕ್ಷನ್ 1ರ ಪ್ರಕಾರ ಭಾರತ ಸರ್ಕಾರ ಮೊದಲ ಎರಡು ಅಕ್ಷರ ನೀಡುತ್ತದೆ. ಅದನ್ನು ಅಧಿಸೂಚಿ : ಸಂಖ್ಯೆ, 50/444 (ಇ) ದಿ.2-6-1989ರಲ್ಲಿ ಜಾರಿ ಮಾಡಲಾಯಿತು.

ಉದಾಹರಣೆಗೆ :
ಆಂಧ್ರಪ್ರದೇಶ -ಎ.ಪಿ.
ಆಸ್ಸಾಂ - ಎ.ಆರ್.
ಬಿಹಾರ - ಬಿ.ಆರ್.
ಚಂಡೀಘಡ - ಸಿ.ಎಚ್.
ದೆಹಲಿ : ಡಿ.ಎಲ್.
ಗುಜರಾತ್ - ಜಿ.ಜೆ.
ಹರಿಯಾಣ - ಹೆಚ್.ಆರ್.
ಕರ್ನಾಟಕ - ಕೆ.ಎ.
ಮಹಾರಾಷ್ಟ್ರ - ಎಂ.ಎಚ್.
        ಹೀಗೆ ಇದರ ಮುಂದಿನ ಸಂಖ್ಯೆಯನ್ನು ಆಯಾ ರಾಜ್ಯದಲ್ಲಿ ನೀಡುತ್ತಾರೆ.
ಕರ್ನಾಟಕದಲ್ಲಿ ಇದನ್ನು ಅಧಿಸೂಚಿ : ಸಂಖ್ಯೆ ೫೫/೧೭೦೫/೮೯ ದಿ: ೧೨-೬-೮೯ರಿಂದ

ಉದಾಹರಣೆಗೆ :
ಕೆ ಎ 01 ಬೆಂಗಳೂರು (ಕೇಂದ್ರ)
ಕೆ ಎ 02 ಬೆಂಗಳೂರು (ಪಶ್ಚಿಮ)
ಕೆ ಎ 03 ಬೆಂಗಳೂರು (ಪೂರ್ವ)
ಕೆ ಎ 04 ಬೆಂಗಳೂರು (ಉತ್ತರ)
ಕೆ ಎ 05 ಬೆಂಗಳೂರು (ದಕ್ಷಿಣ)
ಕೆ ಎ 06 ತುಮಕೂರು
ಕೆ ಎ 07 ಕೋಲಾರ
ಕೆ ಎ 08 ಕೆ.ಜಿ.ಎಫ್
ಕೆ ಎ 09 ಮೈಸೂರು
ಕೆ ಎ 10 ಚಾಮರಾಜನಗರ
ಕೆ ಎ 11 ಮಂಡ್ಯ
ಕೆ ಎ 12 ಮಡಿಕೇರಿ
ಕೆ ಎ 13 ಹಾಸನ
ಕೆ ಎ 14 ಶಿವಮೊಗ್ಗ
ಕೆ ಎ 15 ಸಾಗರ
ಕೆ ಎ 16 ಚಿತ್ರದುರ್ಗ
ಕೆ ಎ 17 ದಾವಣಗೆರೆ
ಕೆ ಎ 18 ಚಿಕ್ಕಮಗಳೂರು
ಕೆ ಎ 19 ಮಂಗಳೂರು
ಕೆ ಎ 20 ಉಡುಪಿ
ಕೆ ಎ 21 ಪುತ್ತೂರು
ಕೆ ಎ 22 ಬೆಳಗಾಂ
ಕೆ ಎ 23 ಚಿಕ್ಕೋಡಿ
ಕೆ ಎ 24 ಬೈಲಹೊಂಗಲ
ಕೆ ಎ 25 ಧಾರವಾಡ
ಕೆ ಎ 26 ಗದಗ
ಕೆ ಎ 27 ಹಾವೇರಿ
ಕೆ ಎ 28 ಬಿಜಾಪುರ
ಕೆ ಎ 29 ಬಾಗಲಕೋಟ
ಕೆ ಎ 30 ಕಾರವಾರ
ಕೆ ಎ 31 ಶಿರಸಿ
ಕೆ ಎ 32 ಗುಲ್ಬರ್ಗಾ
ಕೆ ಎ 33 ಯಾದಗಿರಿ
ಕೆ ಎ 34 ಬಳ್ಳಾರಿ
ಕೆ ಎ 35 ಹೊಸಪೇಟೆ
ಕೆ ಎ 36 ರಾಯಚೂರು
ಕೆ ಎ 37 ಗಂಗಾವತಿ
ಕೆ ಎ 38 ಬೀದರ್
ಕೆ ಎ 39 ಭಾಲ್ಕಿ
ಕೆ ಎ 40 ಚಿಕ್ಕಬಳ್ಳಾಪುರ

          ಮೋಟಾರು ಸೈಕಲ್ (ಎಲ್ಲ ದ್ವಿಚಕ್ರಗಳಿಗೆ)ಗಳಿಗಾಗಿ ಸಿರೀಸ್ ಬೇರೆ ಮಾಡಿದ್ದಾರೆ. ಕಾರಣ ಕಛೇರಿಗಳಲ್ಲಿ ಡಿ.ಸಿ.ಬಿ. ಮಾಡಲು ಅನುಕೂಲ ಆಗಲೆಂದು. ಈ ದ್ವಿಚಕ್ರ ವಾಹನಗಳಿಗೆ ಲೈಫ್ ಟೈಂ ತೆರಿಗೆ ಇರುವುದರಿಂದ ಈ ಬಿ ರಿಜಿಸ್ಟರ್‌ಗಳನ್ನು ವಿವರಣೆಗಾಗಿ ಪರಿಶೀಲಿಸಬೇಕಾಗಿಲ್ಲ ಮತ್ತು ಸಾರಿಗೆ ವಾಹನಗಳಿಗೆ ಬೇರೆ ಸಿರೀಸ್ ಮತ್ತು ಸಾರಿಗೇತರ ವಾಹನಗಳಿಗೆ ಬೇರೆ ಸಿರೀಸ್ ಮಾಡಿದ್ದಾರೆ. ಇದು ಕಡತದಲ್ಲಿ ಸರಿಯಾಗಿರಲಿ ಎಂಬ ದೃಷ್ಟಿಯಿಂದ ಸರಳಗೊಳಿಸಿದ್ದಾರೆ.

ಉದಾ:
೧) ಮೋಟಾರು ಸೈಕಲ್ : ಕೆ ಎ 02 : ಇ- 999
೨) ಲಘು ವಾಹನಗಳಿಗೆ : ಕೆ ಎ 02 : ಎಂ-3459
೩) ಸರ್ಕಾರಿ ವಾಹನಗಳಿಗೆ : ಕೆ ಎ 34 : ಜಿ9999
೪) ಕೆ.ಎಸ್.ಆರ್.ಟಿ.ಸಿ.ಗೆ : ಕೆ ಎ ೦1 : ಎಫ್-6666
೫) ಸಾರಿಗೆ ವಾಹನಗಳಿಗೆ : ಕೆ ಎ ೦4 : ಎ-4949

Monday 6 February 2012

S.S.L.C.English 7 (Poem)


                                                    
                                                             Poem 7
                                               ONCE UPON A TIME
                                                                                                                    By- Gabriel Okara
                                                  
Name: Gabriel Okara
Birth Date: 24 April 1921

Gabriel Okara is the first significant English-language black African poet, the first African poet to write in a modern style, and the first Nigerian writer to publish in and join the editorial staff of the influential literary journal Black Orpheus (started in 1957). A Nigerian "Negritudist," he is a link between colonial poetry and the vigorous modernist writing that began to appear in Nigeria around the time of national independence in 1960. One of the founders of modern Nigerian and African literature, he has also published some short stories, a translation from Ijaw, and The Voice (1964), an experimental novel that was one of the more interesting works to be published during the unusually creative period of the 1960s, when Nigerian literature was coming into its own, providing creative leadership for other black African and Third World literatures.
                          The poem once upon a time tells us about the emptiness of modern life. Everything we do is artificial. Now let us study this poem.

Meaning of the new words

Cocktail = ºÀ®ªÀÅ ¥Á¤ÃAiÀÄUÀ¼À «Ä±Àæt
Conform = C£ÀĸÀj¸ÀÄ, ¥Á°¸ÀÄ
Fangs = ¥ÁætÂAiÀÄ ZÀÆ¥ÁzÀ ºÀ®ÄèUÀ¼ÀÄ
Muting = ¸ÀvÀvÀªÁV §zÀ¯Á¬Ä¸ÀÄwÛgÀĪÀ
Portrait = ¨sÁªÀavÀæ

  • Answer the following questions in a word, phrase or sentence. ((These questions may be ask in MCQ)

Q. According to Gabriel Okara people once upon a time were
          True to there heart

Q. Among other things the poet learnt_____
          How to wear many faces.

Q. According to poet man’s laughter in olden days was______
           Whole hearted

Q. What the poet wants to unlearn is______
        MUTING things.

Q. How did m an laugh in the distant past? How did He show his happiness?

         In the distant past man use to laugh whole heartedly. His happiness was showed his eyes.

Q. How did the people shake hands in olden days? What difference now?
          In the past peoples used to shake hand whole hearted but now when the man shakes hand he will be thinking of chanting others.

Q. The poet’s says “I have learnt many things.” What are the many things?
             The poet has learnt to wear many faces like graces to see the situations and faces. Home faces, office faces and street face etc…

Q. Make a list of actions which prove you to be a good guest and a good host.
             Welcoming the guest with affection, offering him some nice drinks, offering comfortable seats, talking to him about his family and household, listening to him more and talking to him less, respecting his ideas, giving him nice food showing concern to his problems, helping him to sort out his problems, visiting him often, lending him any help he wants.

Q. What is the difference in laughing among the people of olden days and of today?
             In olden days people used to laugh heartily. The people of today laugh only with their teeth.

Q. How do the people of today shake hands?
             The people of today shake hands without hearts. They are eager to see what they can get from their friends pockets.

Q. “There will be no thrice.” What does this refer to?
              When our host says come again we may visit him the second time too. But when we visit him the third time, he will shut the doors on us.

Q. Why does the poet ask his son to teach him how to laugh?
             Today we are living in a world where everything is artificial. We laugh or shake hands without feeling. A child is innocent and only he can give unadulterated expressions. So the poet wants to learn from his son how to laugh.

Q. What does the poem ‘Once upon a time’ tells us?
           The poem ‘Once upon time’ tells us about the emptiness of modern life and everything that we do is artificial.

Q. Who does the poet is speaking to in this poem?
             In this poem the speaker is speaking to his son.

Q. Why does the poet want to learn from his son?
           The poet wants to learn from his son because he is sure that his son is innocent and free from artificial way of dealing.

Q. How did the poet decide to wear his faces?
           The poet’s decided to wear his faces like dresses.

Q. How do the people laugh today according the poet?
     According to the poet people today laugh with their teeth means their laughter is expressionless.

Q. In the poem ‘Once upon a time’ the speaker is speaking to his-
             Son

Q. in this poem the poet is criticizing –
          The emptiness of modern life.

Q. The poet has learnt to say ‘Good bye’. He actually meant –
          Good riddance

Q. The poet of ‘Once upon A time’ wants to unlearn –
       All the muting things.

Q. ‘They laugh with their teeth’ means –
          Their laughter is expressionless

Q. “Their eyes search behind my shadow’ it means –
         They try to look at the darker side of me

Q. ‘Ice-cold-block’ eyes means –
         Expressionless eyes.

Q. Why does the poet want to learn from his son? Because his son –
          Is innocent

Q. ‘I have learned to wear my faces like dresses’. The figure of speech used is_____
          Simile

Q. ‘My laugh in the mirror shows only my teeth like a snake’s bare fangs’. The figurej of speech used is_______
          Simile

Q. The mood of the poem “Once upon a time’ is predominantly________
        Nostalgia

Q. ‘They used to shake hands with heart’. Identify the figure of speech:
           Metaphor

Q. ‘_______with all their conforming smiles like a fixed portrait smile.’ Identify the figure of speech.
           Simile

Q. what does the expression ‘laugh with their teeth’ means –
          The expression ‘laugh with their teeth’ means outward laughter, without expressing any sentiments, passions. It’s only for show off and it is without genuine feelings.

Q. when did the people use to shake hands with their hearts?
           Long back, when the poet was like his son, they used to meet one another and shake hands with human warmth.

Q. What does the speaker want to be?
           The speaker wants to be what he used to be when he was like his innocent son.

Q. What does he want to relearn?
        The poet wants to relearn how to laugh, because his laughter showed only his teeth like a snake’s bare fangs.          

Q. What do you think is a ‘conforming smile’? Is it the same as a ‘portrait smile’?
           One smile just to conform to social demands. Smile is no more an expression of one’s inner happiness. One changes smiles depending on the situation, for the society. It is same as that of the fixed portrait smile because conforming smile is for the society, for man’s survival. The fixed portrait smile is the creation of the artist. Both are artificial.

Q. What is the message of the poem?
           “One should be “true to one’s self”. People should not wear artificial faces. They should express their feelings with natural smiles.

Q. What is the poet disgusted with? What help does he want from his son?
           The poet is disgusted with modernity and artificial life. People laugh without heats. People greet, shake hands with some hidden motives. He does not like people wearing different faces like dresses. They change their smiles, artificial ones, just as changing dresses to suit the situation. He wants his son to help him learn how to laugh. He asks his son to show him how he used to laugh when he was like his son. He wants to back his childhood joys and innocent laugh.

  • Read the following statement s and answer the questions below.

Q “And laugh with their eyes”
a) Who is the speaker?
    The poet Gabriel Okara

b) Who does “their” refer to?
       The word ‘their’ refers to those of the poet’s friends.

c) What does the statement convey?
         The smiles had lot of expressions through their eyes.

Q. “I have learned to wear my faces like dresses”.
       a) Who is ‘my’ in the line?
              The word ‘my’ refers to the poet himself.

       b) What is ‘to wear faces’ means?
            Wearing faces means changing the faces depending on the situation in the society.

       c) Point out the figure of speech in the line?
             Simile

Q. “They used to shake hands with their hearts.”
      a) Who are ‘they’ refers to?
            ‘They’ refer to the people.

      b) How do the people shake their hands once?
             Once, the people shake their hands with warmth.

       c) How do the people shake their hands now?
              Now the people shake their hand it mechanically. While their righland shakes the other searches one’s empty pockets. They do this with some motive.

Q. “For then I find doors shut on me.”
        a) How do the people invite the guest?
              The people tell the guest to come again and to feel at home.

        b) How many times will they invite the guests?
               People will invite the guests only twice.

        c) What will happen for the third time?
                The third time the door would be shut against the guests.

        d) What is opposite of the word ‘guest’?
              The opposite of the word guest is ‘host’.