Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Monday 30 April 2012

ಜೀವನ್ಮುಖಿ

ಚಹಾ ಕುಡಿಯುವಾಗ, ಊಟಕ್ಕೆ ಕುಳಿತಾಗ ಯಾವುದಾದರೊಂದು ಮ್ಯಾಗಜೀನ್, ನ್ಯೂಸ್ ಪೇಪರ್ ಅಥವಾ ಕೈಗೆ ಸಿಕ್ಕ ಪುಸ್ತಕವೊಂದನ್ನು ಕೈಗೆತ್ತಿಕೊಂಡು ಕುಳಿತುಬಿಡುವುದು ನನ್ನ ದುರಭ್ಯಾಸ (?).ಅದಿರಲಿ, ನಿನ್ನೆ ಹೀಗೆ ಕುಳಿತಾಗ `ವಿಜಯವಾಣಿ' ಪತ್ರಿಕೆಯಲ್ಲಿ ಪ್ರಕಟವಾದ ಕಥೆಯೊಂದರ ಮೇಲೆ ಅನಾಯಾಸವಾಗಿ ಕಣ್ಣು ಹೊರಳಾಡಿತು. `ಜೀವನ್ಮುಖಿ' ತಲೆಬರಹದ ಕಥೆಯೊಂದು ಇಷ್ಟವಾಯಿತು. ಜೀವನದಲ್ಲಿ ದುಡ್ಡೊಂದೇ ಮುಖ್ಯ ಎನ್ನುವವರಿಗೆ ನೀತಿಪಾಠದಂತಿದೆ ಈ ಕಥೆ. ಜೀವನದಲ್ಲಿ ದುಡ್ಡು ಮುಖ್ಯ ನಿಜ. ಆದರೆ ಅದಕ್ಕಿಂತ ಮುಖ್ಯವಾದದ್ದು ಇನ್ನೊಂದು ಇದೆ. ಅದೇ - ಮಾನವೀಯ ಮೌಲ್ಯಗಳು. ಆದರ್ಶಗಳು, ತತ್ವ-ಸಿದ್ಧಾಂತಗಳು. ಹೌದು, ಬೇಕಾದರೆ ಒಮ್ಮೆ ಹಿಂತಿರುಗಿ ನೋಡಿ. ಇತಿಹಾಸದಲ್ಲಿ ಆಗಿ ಹೋದ ಮಹಾನ್ ಮಹಾನ್ ವ್ಯಕ್ತಿಗಳೆಲ್ಲ ತತ್ವ-ಸಿದ್ಧಾಂತಗಳಿಗೆ, ಮಾನವೀಯ ಮೌಲ್ಯಗಳಿಗೆ ಬೆಲೆಕೊಟ್ಟರು. ಅದಕ್ಕೆ ಅವರೆಲ್ಲ ಅಜರಾಮರಾದರು. ಇತಿಹಾಸದಲ್ಲಿ ಅಸಂಖ್ಯ ಸಂಖ್ಯೆಯಲ್ಲಿ ಶ್ರೀಮಂತರಾಗಿ ಹೋಗಿದ್ದಾರೆ. ಆದರೆ ಅವರ ಯಾರ ಹೆಸರೂ ನಮಗೆ ತಿಳಿದಿಲ್ಲ ಅವರೆಲ್ಲ ಕತ್ತಲ ಮರೆಯಲ್ಲಿ ಮರೆಯಾಗಿ ಹೋಗಿದ್ದಾರೆ. ದುಡ್ಡೆಂಬ ಮಾಯಾಜಿಂಕೆಯ ಹಿಂದೆ ಓಡಿ ಹೋದವರಾರು ನೆಮ್ಮದಿಯಾಗಿ ಬದುಕಿಲ್ಲ. ಬದುಕುವುದೂ ಇಲ್ಲ. ಆದಾಗ್ಯೂ ನಾವೆಲ್ಲ ದುಡ್ಡು ದುಡ್ಡು ಎಂದು ಹಂಬಲಿಸಿವುದೇತಕೋ....? ಹಾಗಾದರೆ ಜೀವನದಲ್ಲಿ ದುಡ್ಡು ಮುಖ್ಯ ಅಲ್ಲವೇ ಅಲ್ಲವಾ...? ದುಡ್ಡು ಗಳಿಸಬಾರದಾ...? ಖಂಡಿತ ಗಳಿಸಬೇಕು ನಮ್ಮ ಜೀವನಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಗಳಿಸಬೇಕು. ನನ್ನ ಮಕ್ಕಳ ಜೀವನಕ್ಕೂ ದುಡ್ಡು ಕೂಡಿಡ್ತೀನಿ, ಮುಂದೆ ನನ್ನ ಏಳೆಂಟು ತಲೆಮಾರುಗಳು ಕುಳಿತು ತಿನ್ನುವಷ್ಟು ದುಡ್ಡು ಸಂಪಾದಿಸ್ತೀನಿ ಅಂತ ಹೊರಟರೆ ಅದಕ್ಕಿಂತ ಮೂರ್ಖತನ ಇನ್ನೊಂದಿಲ್ಲ. ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ನಮಗೆ ನಮ್ಮ ತಂದೆಯ ಮೇಲೆ ಇದ್ದಷ್ಟು ಪ್ರೀತಿ ನಮ್ಮ ತಾತನ ಮೇಲಿರುವುದಿಲ್ಲ. ತಾತನ ಮೇಲೆ ಇದ್ದಷ್ಟು ಪ್ರೀತಿ ಮುತ್ತಾತನ ಮೇಲೆ ಇರುವುದಿಲ್ಲ. ಇನ್ನೂ ಮುತ್ತಾತನ ಮೇಲೆ ಪ್ರೀತಿ ಇರುವುದಿರಲಿ ಆತ ಯಾರು, ಹೇಗಿದ್ದ ಏನು ಹೆಸರು ಎಂಬುದೇ ಸರಿಯಾಗಿ ತಿಳಿದಿರುವುದಿಲ್ಲ. ನಮ್ಮ ಪಾಲಿಗೆ ಆತ ಅಸ್ಪಷ್ಟ ಚಿತ್ರ. ಇದೇ ಮುಂದೆ ನಮಗೂ ಅನ್ವಯಿಸುತ್ತದೆ ಅಲ್ಲವಾ...? ಹಾಗಾದರೆ ಯಾರಿಗಾಗಿ ಈ ಗಳಿಕೆ? ಯಾರ ಮೆಚ್ಚಿಸುವುದಕ್ಕಾಗಿ ಈ ದುಡಿಕೆ? ಬಿಲೀವ್ಹ್ ಮಿ ಫ್ರೆಂಡ್ಸ್ ಈ ಜಗತ್ತಿನಲ್ಲಿ ತತ್ವ-ಸಿದ್ಧಾಂತಗಳನ್ನು ನೆಚ್ಚಿ ಬದುಕಿದವರು ಇದುವರೆಗೂ ಸತ್ತಿಲ್ಲ. ಆದರೆ ಹಣವನ್ನೇ ನೆಚ್ಚಿ ಬದುಕಿದವರ ಹೆಸರೇ ನಮಗೆ ತಿಳಿದಿಲ್ಲ. ದುಡ್ಡಿಗೆ ದ್ವಿತೀಯ ಆದ್ಯತೆ ನೀಡೋಣ. ಮಾನವೀಯ ಮೌಲ್ಯಗಳಿಗೆ, ತತ್ವ-ಸಿದ್ಧಾಂತಗಳಿಗೆ ಪ್ರಥಮಾದ್ಯತೆ ನೀಡೋಣ. ಅಂದಾಗ ಮಾತ್ರ ಸಾರ್ಥಕ ಬದುಕು ಬಾಳಿದಂಥ ನೆಮ್ಮದಿ ನಮ್ಮದಾಗುತ್ತದೆ.

             ಹಣದ ಬೆನ್ನುಹತ್ತಿ ಹೋದ ವೈದ್ಯನೊಬ್ಬನ ಕಥೆ-ವ್ಯಥೆಯನ್ನು ವಿವೇಕಾನಂದ ಕಾಮತ್ ಅವರು ಸುಂದರವಾಗಿ ಇಲ್ಲಿ ಒಡಮೂಡಿಸಿದ್ದಾರೆ. ಒಮ್ಮೆ ಓದಿಕೊಳ್ಳಿ.
                                                                          ನಿಮ್ಮವ
                                                                         ಜ್ಞಾನಮುಖಿ
                                                                 

No comments: