Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Wednesday 4 May 2011

ಮಕ್ಕಳಿಗೆ ಗಣಿತದಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆಯೇ?

                  ಆಧುನಿಕ ನಾಗರಿಕತೆಯ ಜೀವನದಲ್ಲಿ ಅನೆಕ ವಿಚಾರಗಳು ಗಣಿತಶಾಸ್ತ್ರದ ಆಧಾರದ ಮೇಲೆ ನಿಂತಿವೆ. ವ್ಯವಸಾಯ, ವ್ಯಾಪಾರ, ಔದ್ಯೋಗಿಕ ಹಾಗೂ ತಾಂತ್ರಿಕ ಕ್ಷೇತ್ರಗಳಿಗೆ ಗಣಿತ ಶಾಸ್ತ್ರವು ತಳಹದಿಯಾಗಿ ನಿಂತಿದೆ. ಗಣಿತ ಅಥವಾ ಲೆಕ್ಕಾಚಾರವಿಲ್ಲದೆ ಜೀವನ ನಡೆಸಲು ಅಸಾಧ್ಯವಾಗಿರುವ ವರ್ತಮಾನದಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಂದು ಕ್ಷೇತ್ರದಲ್ಲಿಯೂ ಗಣಿತವೂ ಮೂಲಾಧಾರವಾಗಿದೆ. ಇಂಥ ಗಣಿತವನ್ನು ಇಂದು ಬಹುತೇಕ ವಿದ್ಯಾರ್ಥಿಗಳು ಕಬ್ಬಿಣದ ಕಡಲೆ ಎಂಬಂತೆ ಭಾವಿಸುತ್ತಿದ್ದಾರೆ.

ಒಮ್ಮೆ ತರಗತಿಯಲ್ಲಿ ವಿದ್ಯಾರ್ಥಿಯೊಬ್ಬ "ಗಣಿತ ಲೆಕ್ಕಾ ಏನೂ ಅರ್ಥ ಆಗಲಾಕತ್ತಿಲ್ರೀ ಸರ್, ಹಾಗಲಕಾಯಿ ಆದಂಗ ಆಗೇದ್ರಿ, ತಿನ್ನುವಂಗೂ ಇಲ್ಲ ಬಿಡುವಂಗೂ ಇಲ್ರೀ ಬಾಳ ಟಫ್ ಆಗೇದ" ಎಂದು ಗಣಿತದ ಬಗೆಗಿನ ತನ್ನ ಅಸಹನೆ ವ್ಯಕ್ತಪಡಿಸಿದ. ಬೇರೆ ಬೇರೆ ಶಾಲೆಯ ವಿದ್ಯಾರ್ಥಿಗಳು ಗಣಿತವನ್ನು ಕಠಿಣ ವಿಷಯವೆಂದು ಭಾವಿಸಿದ್ದಾಗಿ ಕಂಡುಬಂದಿದೆ. ಇದೇ ಕಾರಣಕ್ಕಾಗಿಯೇ ವಿದ್ಯಾರ್ಥಿಗಳು ಟ್ಯೂಷನ್ ಕಡೆಗೆ ಮುಖ ಮಾಡಿದ್ದಾರೆ.

          ಶಿಕ್ಷಕರ, ವಿದ್ಯಾರ್ಥಿಗಳ, ಪಾಲಕರ ಅನಿಸಿಕೆ, ಅಭಿಪ್ರಾಯಗಳನ್ನು ಸಂಗ್ರಹಿಸಿ ಹಾಗೂ ಇನ್ನಿತರ ಅಂಶಗಳನ್ನು ವಿಶ್ಲೇಷಿಸಿದಾಗ ಕಂಡು ಬಂದ ಕಾರಣಗಳು ಹೀಗಿವೆ:-
೧. ಗಣಿತದ ಮೂಲಕ್ರಿಯೆಗಳಾದ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ, ಅಂಕಿ-ಸಂಖ್ಯೆಗಳ ಪರಿಚಯ ಇಲ್ಲದಿರುವದು.
೨. ವಿಷಯ ಶಿಕ್ಷಕರ ಪರಿಣಾಮಕಾರಿ ಬೋಧನೆಯ ಕೊರತೆ  ಮತ್ತು ನಿರಾಸಕ್ತಿ.
೩. ಪ್ರಯತ್ನಿಸಿದರೆ ಗಣಿತ ಕಲಿಯಬಹುದು ಎಂಬ ಸಕಾರಾತ್ಮಕ ಮನೋಭಾವ ವಿದ್ಯಾರ್ಥಿಗಳಲ್ಲಿ ಇಲ್ಲದೇ ಇರುವದು.
೪.ನಿರಾಸಕ್ತಿಯಿಂದಾಗಿ ಗಣಿತದ ಲೆಕ್ಕಾಚಾರಗಳನ್ನು ಬಿಡಿಸುವ ರೀತಿಯನ್ನು ಪದೇ ಪದೇ ಮರೆಯುವಿಕೆ.
೫. ಕೆಲವು ಅಧ್ಯಾಯಗಳು ತಿಳಿಯದೇ ಹೋದಾಗ ಮುಂದಿನ ಅಧ್ಯಾಯಗಳ ಬಗ್ಗೆ ಭಯ, ಆತಂಕ ಬೆಳೆಸಿಕೊಳ್ಳುವದು.
೬. ಶಾಲೆಗೆ ಅನಿಯಮಿತ ಹಾಜರಿ
೭. ಶಿಕ್ಷಕರಿಗೆ ಗಣಿತದ ಬಗೆಗಿನ ನಿಯಮಿತ ತರಬೇತಿಯ ಕೊರತೆ
೮. ಪಾಲಕರ ಗಮನದ ಕೊರತೆ
           ಪರಿಣಾಮವಾಗಿ ವಿದ್ಯಾರ್ಥಿಗಳು ಗಣಿತವನ್ನು ಕಷ್ಟಕರ ವಿಷಯವನ್ನಾಗಿ ಮಾಡಿಕೊಳ್ಳುತ್ತಾರೆ. ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಲೆಕ್ಕಗಳನ್ನು ಪರೀಕ್ಷಾದೃಷ್ಟಿಯಿಂದ ಕಂಠಪಾಠ ಮಾಡಲು ಆರಂಭಿಸುತ್ತಾರೆ. ಗಣಿತ ಶಿಕ್ಷಕರನ್ನು ಕಂಡರೆ ಭಯ ಬೀಳುವದು, ಆಕ್ರಮಣಕಾರಿ ನೀತಿ ಪ್ರದರ್ಶಿಸುವದು, ನಕರಾತ್ಮಕ ಬೆಳೆಸಿಕೊಳ್ಳುತ್ತಾರೆ. ಗಣಿತ ಕ್ಲಾಸುಗಳಿಗೆ ಚಕ್ಕರ್ ಹಾಕಲು ಆರಂಭಿಸುತ್ತಾರೆ. "ಜೀವನದಲ್ಲಿ ಇನ್ನೆಂದೂ ನನಗೆ ಗಣಿತ ತಲೆಗೆ ಹತ್ತುವದಿಲ್ಲ" ಎಂಬ ಭಾವನೆ ಬಲವಾಗಿ ಬೆಳೆಸಿಕೊಂಡು ಗಣಿತವಿಲ್ಲದ ಕೋರ್ಸುಗಳ ಕಡೆಗೆ ಇಷ್ಟವಿಲ್ಲದಿದ್ದರೂ ಮುಖ ಮಾಡುತ್ತಾರೆ. ಹಾಗಾದರೆ ಇಂಥ ಸಮಸ್ಯೆಯನ್ನು ಸರಿಪಡಿಸಲು ಸಾಧ್ಯವೇ ಇಲ್ಲವೇ? ಸಾಧ್ಯವಿದೆ. ಅದಕ್ಕಾಗಿ ಕೆಲವು ಪರಿಹಾರೋಪಾಯಗಳನ್ನು ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಅನುಸರಿಸುವದು ಸೂಕ್ತ.

* ಸರಳತೆಯಿಂದ ಕಠಿಣತೆಯೆಡೆಗೆ ಎನ್ನುವ ತತ್ವವನ್ನು ಅನುಸರಿಸಬೇಕು. ಅಂದರೆ ಮೊದಲು ೫ನೇ ತರಗತಿಯಿಂದ ಅಥವಾ ಅದಕ್ಕೂ ಮೊದಲು ಕಿರಿಯ ಪ್ರಾಥಮಿಕ ತರಗತಿಗಳ ಪಠ್ಯಪುಸ್ತಕಗಳನ್ನು ಅಭ್ಯಸಿಸಬೇಕು. ಇಲ್ಲಿ ಸರಳ ಲೆಕ್ಕಗಳಿರುತ್ತವೆ. ಇವುಗಳನ್ನು ಬಿಡಿಸುವದರಿಂದ ನಾನು ಲೆಕ್ಕಗಳನ್ನು ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಬೆಳೆಯುತ್ತದೆ.

* ಪಾಲಕರು ತಮ್ಮ ಮಕ್ಕಳಿಗೆ ಲೆಕ್ಕಜ್ಞಾನವಿಲ್ಲದವನು, ಶುದ್ಧದಡ್ಡ, ಯಾವುದೇ ಪ್ರಯೋಜನಕ್ಕೂ ಬಾರದವನು/ಳು ಎಂದೆಲ್ಲಾ ಹೀಯಾಳಿಸಬಾರದು. ಇದರಿಂದ ಮಕ್ಕಳಲ್ಲಿ ಗಣಿತದ ಬಗ್ಗೆ ಅಸಹನೆ, ನಿರಾಸಕ್ತಿ ಬೆಳೆಸಿಕೊಳ್ಳುವ ಸಾಧ್ಯತೆಯಿರುತ್ತದೆ. ಬದಲಾಗಿ "ನೀನು ಈ ಲೆಕ್ಕಗಳನ್ನು ಮಾಡಬಲ್ಲೆ, ಪ್ರಯತ್ನಿಸು" ಎಂದು ಹುರಿದುಂಬಿಸಬೇಕು.

* ಪೂರ್ವ ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಕರು ಮಕ್ಕಳಿಗೆ ಗಣಿತದ ಅಂಕಿ-ಸಂಖ್ಯೆ, ಮಗ್ಗಿ, ಮೂಲಕ್ರಿಯೆಗಳ ಬಗ್ಗೆ ಚೆನ್ನಾಗಿ ಅರಿವು ಮೂಡಿಸಬೇಕು. ಗಣಿತದಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಒಂದು ಗುಂಪು ಮಾಡಿ ಅವರಿಗಾಗಿ ವಿಶೇಷ ತರಗತಿಗಳನ್ನು ನಡೆಸಬೇಕು. ಬಳಿಕ ಉಳಿದ ವಿದ್ಯಾರ್ಥಿಗಳೊಂದಿಗೆ ಅವರನ್ನು ಸಮನ್ವಯೀಕರಿಸಿ ಲೆಕ್ಕಗಳಿಗೆ ಸಂಬಂಧಿಸಿದ ಮೋಜಿನ ಆಟಗಳನ್ನು ಆಡಲು ಪ್ರೇರೆಪಿಸಬೇಕು.

* ವರ್ಗಮೂಲ, ವರ್ಗಸಂಖ್ಯೆ, ಘನಮೂಲ ಘನಸಂಖ್ಯೆ, ಸೂತ್ರಗಳು ಮುಂತಾದವುಗಳ ಬಗ್ಗೆ ಮಕ್ಕಳಿಗೆ ಪರಿಚಯ ಮಾಡಿಕೊಡುವಲ್ಲಿ ಪಾಲಕರು, ಶಿಕ್ಷಕರು ಪ್ರಯತ್ನಿಸಬೇಕು.

* ಪ್ರಸ್ತುತ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಇಂಗ್ಲೀಷ್ ಶಿಕ್ಷಕ, ವಿಜ್ಞಾನ ಶಿಕ್ಷಕ ಎಂಬ ಕೋಟಾಗಳಡಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಗಣಿತ ಕೋಟಾದಡಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ವ್ಯವಸ್ಥೆ ಆರಂಭಿಸಬೇಕು. ಇದರಿಂದ ಗಣಿತದಲ್ಲಿ ವಿಶೇಷವಾಗಿ ಪರಿಣಿತರಿರುವ ಅಭ್ಯರ್ಥಿಗಳು ಶಿಕ್ಷಕರಾಗಿ ನೇಮಕಗೊಳ್ಳುವದರಿಂದ ಉತ್ತಮ ಗುಣಮಟ್ಟದ ಬೋಧನೆ ನೀಡುವದು ಸೂಕ್ತ. ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಗಮನಹರಿಸುವದು ಅವಶ್ಯಕ.

*ಒಂದು ಲೆಕ್ಕವನ್ನು ಹಲವಾರು ವಿಧಾನಗಳ ಮೂಲಕ ಬಿಡಿಸಬಹುದು. ಅದರಲ್ಲಿ ಅತ್ಯಂತ ಸರಳ ವಿಧಾನದ ಮೂಲಕ ಬಿಡಿಸುವದು ಹೇಗೆ ಎಂಬುದರ ಬಗ್ಗೆ ವಿದ್ಯಾರ್ಥಿಗಳು ಶಿಕ್ಷಕರ ನೆರವು ಪಡೆಯಬೇಕು.

* ಗಣಿತದ ಸೂತ್ರಗಳನ್ನು ಕಂಠಪಾಠ ಮಾಡಬೇಕು.

* ಗಣಿತಕ್ಕೆ ಸಂಬಂಧಿಸಿದ ಮೋಜಿನ ಲೆಕ್ಕಗಳನ್ನು ಮಾಡುವದರ ಮೂಲಕ ಮೆದುಳನ್ನು ಕೆಣಕಿ ಸದಾ ಎಚ್ಚರಗೊಳಿಸುತ್ತಿರಬೇಕು.
             ಈ ಮೇಲಿನ ಎಲ್ಲಾ ಪರಿಹಾರೋಪಾಯಗಳನ್ನು ಒಮ್ಮೆ ಅಳವಡಿಸಿಕೊಂಡರೆ ಗಣಿತವನ್ನು ಸುಲಭಕರವನ್ನಾಗಿ ಮಾಡಿಕೊಳ್ಳಬಹುದು. ನಾನು ಗಣಿತವನ್ನು ಕಲಿತೇ ತೀರುತ್ತೇನೆ ಎಂಬ ದೃಢ ನಿರ್ಧಾರ, ಶ್ರದ್ಧೆ, ಪ್ರಾಮಾಣಿಕ ಪ್ರಯತ್ನ, ಒಂದಷ್ಟು ಪರಿಶ್ರಮವಿದ್ದರೆ ಗಣಿತವನ್ನು ಸುಲಭವಾಗಿ ಪಳಗಿಸಿಬಿಡಬಹುದು. ವಾಸ್ತವವಾಗಿ ಗಣಿತ ಕಷ್ಟಕರ ವಿಷಯವಲ್ಲ. ಗಣಿತದಲ್ಲಿ ಒಮ್ಮೆ ಆಸಕ್ತಿ ಹುಟ್ಟಿದರೆ ಅದೊಂದು ಕಿನ್ನರ ಲೋಕ. ಅದರ ಸ್ವಾದ ಅನುಭವಿಸಿದ ಮೇಧಾವಿಗಳಿಗೆ ಲೆಕ್ಕವಿಲ್ಲ. ನೀವು ಅದರ ಸ್ವಾದ ಅನುಭವಿಸುವಿರಲ್ಲವೇ?

No comments: