Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Thursday 5 May 2011

ವೈದ್ಯರ ಬಳಿ ಹೋಗುವ ಮುನ್ನ...

                             
                              ನಮಗೆ ಬರುವ ಬಹಳಷ್ಟು ಖಾಯಿಲೆಗಳಿಗೆ ಸೋಂಕು ಕಾರಣವಾಗಿರುತ್ತದೆ. ಕಾರಣ ಸೋಂಕು ರೋಗಗಳಿಗೆ ತಾತ್ಕಾಲಿಕ ಚಿಕಿತ್ಸೆ ಮಾಡಿದರೆ ಕಡಿಮೆಯಾಗುವದಿಲ್ಲ. ವೈದ್ಯರನ್ನು ಸಂಪರ್ಕಿಸುವದಕ್ಕೆ ಹೋಗುವ ಮೊದಲು ಕೆಲವು ವಿಷಯಗಳನ್ನು ನೆನಪಿಟ್ಟು ಪಾಲಿಸಬೇಕು. ಅವು ಈ ಕೆಳಗಿನಂತಿವೆ:

೧. ವೈದ್ಯರ ಬಳಿ ಹೋಗುವಾಗ ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿ ಹೋಗಬೇಕು. ರೋಗಿಗೆ ತೊಂದರೆ ಇದ್ದಲ್ಲಿ ಸ್ಪಾಂಜ್‍ನಿಂದ ಮೈಯನ್ನು ಒರೆಸಬೇಕು.

೨.  ಕ್ಯೂನಲ್ಲಿ ಹೆಚ್ಚು ಮಂದಿ ಇದ್ದರೆ ಸ್ವಲ್ಪ ಹೊತ್ತು ಕಾಯಬೇಕು. ಇಲವೇ ಮುಂದಾಗಿ ವೈದ್ಯರೊಂದಿಗೆ ಅಪಾಯಿಂಟ್‍ಮೆಂಟ್ ತೆಗೆದುಕೊಳ್ಳುವದೋ ಇಲ್ಲವೇ ಟೋಕನ್ ತೆಗೆದುಕೊಳ್ಳುವದೋ ಮಾಡಬೇಕು. ರೋಗಿಗೆ ಸೀರಿಯಸ್ ಆಗಿದ್ದರೆ, ವೈದ್ಯರಿಗೆ ರೋಗಿಯ ಪರಿಸ್ಥಿತಿಯನ್ನು ವಿವರಿಸಿ ಅತ್ಯವಸರ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು.

೩. ಬಾಯಿಯನ್ನು ಶುಭ್ರವಾಗಿ ತೊಳೆದುಕೊಂಡು ಹೋಗಬೇಕು. ಅಷ್ಟೇ ಅಲ್ಲ, ಹೊಗೆ ಸೊಪ್ಪು ಅಡಿಕೆಪುಡಿಯನ್ನು ಹಾಕಿಕೊಳ್ಳುವದು, ಚಾಕಲೇಟ್‍ಗಳು, ಚ್ಯೂಯಿಂಗ್ ಗಮ್ ಅಗಿಯುವದು, ಗುಟ್ಕಾಗಳು, ಮೌತ್‍ವಾಷ್‍ಗಳನ್ನು ಬಳಸಬಾರದು. ಇವುಗಳಿಂದ ನಾಲಿಗೆಯ ಬಣ್ಣ ಬದಲಾಗುತ್ತದೆ.

೪. ಕಾಫೀ, ಟೀಯಂತಹ ಬಿಸಿ ಪಾನೀಯಗಳು, ಸಿಹಿ ತಿಂಡಿಗಳು, ತಂಪು ಪಾನೀಯಗಳನ್ನು ಕುಡಿದು, ವೈದ್ಯರ ಬಳಿ ಹೋಗಬಾರದು. ಇದರಿಂದ ದೇಹದ ತಾಪಮಾನದಲ್ಲಿ ವ್ಯತ್ಯಾಸ ಬರುತ್ತದೆ.

೫. ವೈದ್ಯರು ಪರೀಕ್ಷಿಸುವಾಗ ಮಾತನಾಡುವದು, ಕೂಗಿಕೊಳ್ಳುವದು, ವೈದ್ಯರಿಗೆ ಸಹಕರಿಸದೆ ಕೈಗಳನ್ನು ಅಡ್ಡವಿಟ್ಟುಕೊಳ್ಳುವದು ಇವನ್ನು ಮಾಡಬಾರದು.

೬. ಅಗತ್ಯವಾದ ರಕ್ತ, ಮೂತ್ರಪರೀಕ್ಷೆಗಳು, ಎಕ್ಸ್ ರೇ ಅಂತಹವನ್ನು ಮಾಡಿಸಿಕೊಳ್ಳಬೇಕು. ರೋಗ ನಿರ್ಧಾರಕ್ಕೆ ಇವು ಅಗತ್ಯ.

೭. ವೈದ್ಯರ ಬಳಿ, ನಾಚಿಕೆ ಪಡದೆ ನಿರ್ಭಯವಾಗಿ ಎಲ್ಲ ವಿಷಯಗಳನ್ನು ನಿಸ್ಸಂಕೋಚವಾಗ ಹೇಳಿದರೆ, ರೋಗ ನಿರ್ಧಾರವು ತುಂಬಾ ಸುಲಭವಾಗುತ್ತದೆ.

೮. ನಿಮಗೆ ಮೊದಲು ಹಳೆಯ ರೋಗಗಳು ಅಥವಾ ದೀರ್ಘಕಾಲೀನ ರೋಗಗಳಿದ್ದರೆ ಮುಂಚಿತವಾಗಿ ವೈದ್ಯರಿಗೆ ತಿಳಿಸಿಬಿಡುವದು ಉತ್ತಮ. ಇದರಿಂದ ರೋಗ ನಿರ್ಧಾರ ಮಾಡಲು ಹೆಚ್ಚಿನ ಸಮಯ ಮತ್ತು ಹಣ ವ್ಯಯವಾಗುವದಿಲ್ಲ.

೯. ರೋಗ ಬಲಿಯುವ ಮೊದಲೇ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲದ ಪಕ್ಷದಲ್ಲಿ ವಾಸಿ ಮಾಡುವದು ಕಷ್ಟವಾಗುತ್ತದೆ. ವೈದ್ಯರ ಸಲಹೆಗಳನ್ನು ಪಾಲಿಸಬೇಕು. "ಎಕ್ಸ್ ರೇ ಏಕೆ? ಬಹಳ ಸಲ ತೆಗೆಸಿಕೊಂಡಿದ್ದೇವೆ ಅಲ್ಲವೇ" ಎಂದು ನಿರಾಕರಿಸುವದು, ಅಡ್ಡಿಪಡಿಸುವದು ಮಾಡಬಾರದು. ಎಕ್ಸ್ ರೇ ಅಗತ್ಯ ಇದ್ದಾಗ ಮಾತ್ರ ವೈದ್ಯರು ಸೂಚಿಸಿರುತ್ತಾರೆ ಎಂದು ತಿಳಿಯಬೇಕು.

೧೦. ಔಷಧಗಳನ್ನು ಕೋರ್ಸ್ ಪ್ರಕಾರ ಬಳಸಬೇಕು. ವಾಸಿಯಾದ ಕೂಡಲೇ ಔಷಧಗಳನ್ನು ಮಧ್ಯದಲ್ಲಿ ಬಿಟ್ಟುಬಿಡುವದು ಒಳ್ಳೆಯದಲ್ಲ. ಕೆಲವು ವ್ಯಾಧಿ (ಕ್ಷಯ, ಅಸ್ತಮಾ ಇತ್ಯಾದಿ)ಗಳಲ್ಲಿ ಔಷಧಗಳ ಬಳಕೆಯೊಂದಿಗೆ ಸೂಕ್ತ ಪಥ್ಯವನ್ನು ಮಾಡಬೇಕು.

೧೧. ಟಾನ್ಸಿಲೈಟಿಸ್, ಕೋಲ್ಡ್, ಅಲರ್ಜಿ ಇದ್ದಾಗ, ಐಸಕ್ರೀಂಗಳು, ಐಸ್‍ವಾಟರ್, ಕೂಲ್ ಡ್ರಿಂಕ್ಸ್‌ನಂತಹವುಗಳನ್ನು ಕುಡಿದು, ಔಷಧಗಳನ್ನು ಬಳಸಿದರೂ ಕಡಿಮೆಯಾಗಲಿಲ್ಲವೆಮ್ದು ವೈದ್ಯರನ್ನು ದೂರಿದರೆ ಲಾಭವಿಲ್ಲ. ಆ ಸಂದರ್ಭದಲ್ಲಿ ತಂಪು ಪಾನೀಯಗಳನ್ನು ತ್ಯಜಿಸಬೇಕು.

೧೧. ಹಳೆಯ ಔಷಧಗಳ ಚೀಟಿಗಳನ್ನು ಭದ್ರಪಡಿಸಿಕೊಂಡರೆ ಒಳ್ಳೆಯದು. ಅವು ವೈದ್ಯರಿಗೆ ರೆಫೆರೆನ್ಸ್ ಆಗಿರುತ್ತವೆ.

೧೨. ಒಂದೇ ಸಲ ಒಂದು ರೋಗಕ್ಕೆ ಸಂಪೂರ್ಣ ಕಾಲ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕು. ಒಂದು ಕಡೆ ಇಂಗ್ಲೀಷ್ ಔಷಧಗಳು ಮತ್ತೊಂದು ಕಡೆ ಆಯುರ್ವೇದ, ಇನ್ನೊಂದು ಕಡೆ ಹೋಮಿಯೋಪಥಿ - ಈ ರೀತಿ ಬಗೆಬಗೆಯ ಔಷಧಗಳನ್ನು ಬಳಸಬಾರದು. ಒಂದೇ ಟೈಂನಲ್ಲಿ ಎರಡು ಬಗೆಯ ಚಿಕಿತ್ಸಾ ಪದ್ಧತಿಗಳನ್ನು ಅವಲಂಬಿಸಬಾರದು. ವೈದ್ಯರ ಮೇಲೆ ನಂಬಿಕೆಯನ್ನಿಟ್ಟು ರೋಗವು ಇಳಿಮುಖವಾಗುವವರೆಗೂ ಅವಸರಪಡಬಾರದು. ಪದೇ ಪದೇ ವೈದ್ಯರನ್ನು ಬದಲಾಯಿಸಬಾರದು.

೧೩. ಒಂದು ವೇಳೆ ನಿಮಗಿರುವ ಖಾಯಿಲೆಗಳನ್ನು ವೈದ್ಯರ ಬಳಿ ಎಲ್ಲವನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಾಗದಿದ್ದರೆ ಒಂದು ಕಾಗದದಲ್ಲಿ ಬರೆದುಕೊಂಡು ಹೋಗುವದು ಉತ್ತಮ.

೧೪. ಶರೀರಕ್ಕೆ ಸರಿಪಡದ ಎಲ್ಜಿರಿಟಿಕ್ ಔಷಧ( ಪೆನ್ಸಿಲಿನ್, ಸಲ್ಫಾ ಇತ್ಯಾದಿ) ಕುರಿತು ವೈದ್ಯರಿಗೆ ಮೊದಲೇ ಹೇಳುವದು ಒಳ್ಳೆಯದು. ಸೋಂಕುಗಳು ಆಗಾಗ ಬರುತ್ತಿರುವದು -  ಬರದಿರುವದನ್ನು ಹೇಳಬೇಕು. ಕೆಲವು ವ್ಯಾಧಿಗಳು ವಂಶಪಾರಂಪರ್ಯವಾಗಿ ಬಂದಿರುತ್ತವೆ. ಅವುಗಳನ್ನು ಹೇಳಬೇಕು.

೧೫. ವೈದ್ಯರೊಂದಿಗೆ ಮಾತನಾಡುವಾಗ, ಅವರ ಮುಖದ ಮೇಲೆಯೇ ಕೆಮ್ಮುತ್ತಾ ಮಾತನಾಡಬಾರದು.

                                ಈ ರೀತಿ ಚಿಕ್ಕ ಜಾಗ್ರತೆಗಳನ್ನು ಪಾಲಿಸಿದರೆ ವ್ಯಾಧಿ ನಿರ್ಧಾರಕ್ಕೆ,       ಚಿಕಿತ್ಸೆಗೆ ಸಮಯವು ವೃಥಾ ಆಗದಂತೇ ಇರುವದೇ ಅಲ್ಲದೆ, ಉತ್ತಮ ಚಿಕಿತ್ಸೆಯು ಲಭ್ಯವಾಗುವುದೆನ್ನುವದರಲ್ಲಿ ಸಂದೇಹವೇ ಇಲ್ಲ.

1 comment:

Shivaram said...

It is good article