Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Saturday 30 July 2011

ಸ್ಪರ್ಧಾತ್ಮಕ ಪರೀಕ್ಷೆಗಳ ಸ್ಪರ್ಧಾಳುಗಳಿಗಾಗಿ `ಯುವ ಮನಸ್ಸಿನ ಮೆಟ್ಟಿಲು'

Aravind Chokkadi's Book "Yuva Manassina Mettilu" points
ಸ್ಪರ್ಧಾತ್ಮಕ ಪರೀಕ್ಷೆಗಳ ಸ್ಪರ್ಧಾಳುಗಳಿಗಾಗಿ ಅರವಿಂದ್ ಚೊಕ್ಕಾಡಿಯವರ `ಯುವ ಮನಸ್ಸಿನ ಮೆಟ್ಟಿಲು' ಪುಸ್ತಕದಿಂದ ಆಯ್ದುಕೊಳ್ಳಲಾದ ಅಂಶಗಳು

* ನೇಮಕಾತಿಯ ಪರೀಕ್ಷೆಗಳಿಗೆ ಬಂದಾಗ ನಿಮ್ಮ ಸಿದ್ಧತೆಗಳು ಮೊದಲ ಹತ್ತು ರ್‍ಯಾಂಕ್ ಒಳಗಿನ ಆಯ್ಕೆಗೆ ತಕ್ಕಷ್ಟು ಇರಬೇಕು.

* ಪರಿಣಿತಿ ಇರುವ ಕಾರ್ಯವನ್ನು ನಿರ್ವಹಿಸುವಾಗ ಆತ್ಮವಿಶ್ವಾಸದ ಮಟ್ಟ ಜಾಸ್ತಿ ಇರುತ್ತದೆ.

* `ಅಯ್ಯೋ, ನನಗೆ ಕ್ರಿಕೆಟ್ ಆಡಲು ಬರುವದಿಲ್ಲವಲ್ಲ' ಎಂದು ನಾನು ದುಃಖಿಸುತ್ತಾ ಕುಳಿತರೆ ಹಾಕಿ ಆಡಲು ನನಗಿರುವ ಕೊಂಚ ಆತ್ಮವಿಶ್ವಾಸವೂ ಕಳೆದು ಹೋಗುವದು. ಹಂತಹಂತವಾಗಿ ಎಲ್ಲಾ ಕಾರ್ಯಗಳಲ್ಲೂ ನನಗಿರುವ ಆತ್ಮವಿಶ್ವಾಸ ಹೊರಟು ಹೋಗುತ್ತದೆ.

* ಎಲ್ಲದರಲ್ಲೂ ಪರಿಣಿತಿ ಇಲ್ಲದಿರುವದು ನನ್ನ ಅನರ್ಹತೆಯಲ್ಲ ಎನ್ನುವದನ್ನು ಅರ್ಥ ಮಾಡಿಕೊಳ್ಳಬೇಕು. ನನಗೆ ಯಾವುದರಲ್ಲಿ ಪರಿಣಿತಿ ಇದೆಯೋ, ಯಾವುದರಲ್ಲಿ ನಾನು ಪರಿಣಿತಿಯನ್ನು ಗಳಿಸಿಕೊಳ್ಳಬಲ್ಲೆನೋ ಅಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಕೆಲವು ಯಶಸ್ಸುಗಳು ಸಿಗುತ್ತವೆ. ಆ ಯಶಸ್ಸು ಆತ್ಮವಿಶ್ವಾಸವನ್ನು ಒಂದು ಹಂತದವರೆಗೆ ಎತ್ತರಿಸುತ್ತವೆ.

* ನಮ್ಮಲ್ಲಿ ಕೆಲವರು ಗಣಿತ ಬಹಳ ಕಷ್ಟ ಎನ್ನುತ್ತಾರೆ. ಪದೇ ಪದೇ ಫೇಲಾಗುತ್ತಾರೆ. ಅವರಿಗಾಗಿ ಒಂದು ಸಲಹೆ - ಸ್ವಲ್ಪ ಕೆಳಹಂತದ ಲೆಕ್ಕವನ್ನು ಮಾಡಿ. ಆ ಲೆಕ್ಕವನ್ನು ನಿಮಗೆ ಮಾಡಲು ಆಗುತ್ತದೆ. ಅಷ್ಟರಮಟ್ಟಿಗಿನ ಸಾಮರ್ಥ್ಯ ನಿಮಗಿದೆಯೆಂದು ನಿಮಗೆ ಗೊತ್ತಾಗುತ್ತದೆ. ಇನ್ನು ಸ್ವಲ್ಪ ಮೇಲಿನ ಹಂತದ ಲೆಕ್ಕವನ್ನು ಮಾಡಿ. ಒಂದೆರಡು ಪ್ರಯತ್ನದಲ್ಲಿ ಆ ಲೆಕ್ಕವನ್ನು ಮಾಡುವ ಸಾಮರ್ಥ್ಯವೂ ಬರುತ್ತದೆ. ಆಮೇಲೆ ಮೊದಲು ಯಾವ ಲೆಕ್ಕ ನಿಮಗೆ ಕಷ್ಟ ಎನಿಸಿತ್ತೋ ಆ ಲೆಕ್ಕವನ್ನು ಮಾಡಲು ಸಾಧ್ಯವಾಗುತ್ತದೆ. ಗಣಿತವನ್ನು ನಿರ್ವಹಿಸುವ ಸಾಮರ್ಥ್ಯ, ಅದಕ್ಕೆ ಬೇಕಾದ ಆತ್ಮವಿಶ್ವಾಸ ನಿಮಗೆ ಬಂದಿರುತ್ತದೆ.

ಯಾವಾಗಲೂ ಯಾವ ಹಂತದಲ್ಲಿ ನಮಗೆ ವೈಫಲ್ಯದ ಅನುಭವವಾಗುತ್ತದೆಯೋ ಆಗ ಅದಕ್ಕಿಂತ ಕೆಳಗಿನ ಹಂತದಲ್ಲಿ ಕಾರ್ಯ ಆರಂಭಿಸಬೇಕು. ಅಲ್ಲಿಯೂ ವೈಫಲ್ಯ ಉಂಟಾದರೆ ಅದಕ್ಕೂ ಕೆಳಗಿನ ಹಂತದಿಂದ ಆರಂಭಿಸಬೇಕು. ಯಶಸ್ಸು ಸಿಗುವ ಹಂತದಿಂದ ಆರಂಭಿಸಿ ಹಂತಹಂತವಾಗಿ ಏರುತ್ತಾ ಹೋಗಬೇಕು.

* ಓಂದು ಕಾವ್ಯ ಭಾಗವನ್ನು ನೀವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತರಿಸುವದಕ್ಕಾಗಿ ಓದಿಕೊಳ್ಳುತ್ತಿದ್ದರೆ ಸಹೃದಯನ ಓದಿನ ಹಾಗೆ ಸಂತೋಷದಿಂದ ಅನುಭವಿಸಿಕೊಂಡು ಓದಿದರೆ ಸಾಲುವದಿಲ್ಲ. ಯಾವ ಸಾಲಿನ ವಿವರಗಳು ಏನು ಹೇಳುತ್ತವೆ ಮತ್ತು ಅವು ಯಾವ ಭಾವವನ್ನು ಹೇಗೆ ವಿವರಿಸುತ್ತವೆ ಎಂಬುದನ್ನು ಸ್ಮರಣೆಯಲ್ಲಿ ಇರಿಸಿಕೊಳ್ಳುತ್ತಾ ಓದಬೇಕಾಗುತ್ತದೆ.

* ಕೇವಲ ವಿಷಯಗಳನ್ನು ತಿಳಿದುಕೊಳ್ಳುವದಕ್ಕಾಗಿ ನಡೆಸುವದು ಓದು. ವಿಷಯಗಳನ್ನು ನಿರ್ದಿಷ್ಟ ಚೌಕಟ್ಟಿನ ಒಳಗೆ ಮರುಮಂಡನೆ ಮಾಡುವದಕ್ಕಾಗಿ ನಡೆಸುವದು -ಅಭ್ಯಾಸ.

* ಸುಮ್ಮನೆ ಓದುತ್ತಾ ಹೋಗುವದರಿಂದ ಬರುವ ಮರುಮಂಡನೆಯ ಶಕ್ತಿ ಸ್ವಲ್ಪ ದುರ್ಬಲವಾಗಿಯೇ ಇರುತ್ತದೆ. ಆದ್ದರಿಂದ ಓದು ಮತ್ತು ಮರುಮಂಡನೆಯ ಶಕ್ತಿಯೊಂದಿಗೆ ಪರಸ್ಪರ ಸಂಬಂಧವನ್ನು ಕಲ್ಪಿಸಿಕೊಂಡೇ ಓದಬೇಕಾಗುತ್ತದೆ.

* ಒಂದು ಪಠ್ಯಭಾಗದ ಯಾವ ಭಾಗವನ್ನು ನೀವು ಓದುತ್ತಿರುವಿರೋ ಆ ಘಟಕಕ್ಕೆ ಸಂಬಂಧಿಸಿದಂತೆ ಬರಬಹುದಾದ ಒಂದು ಪ್ರಶ್ನೆಯನ್ನು ರೂಪಿಸಿಕೊಳ್ಳಿ. ಆ ಪ್ರಶ್ನೆಗೆ ಯಾವ ರೀತಿ ಉತ್ತರಿಸಬಹುದು ಎಂಬುದನ್ನು ತಿಳಿದುಕೊಳ್ಳುವ ರೂಪದಲ್ಲಿ ಘಟಕದ ಪಠ್ಯವಿಷಯವನ್ನು ಓದಿಕೊಳ್ಳಿ.

* ಓದು, ಅನುಭವ ಮತ್ತು ಗ್ರಹಿಕೆಯಿಂದ ಪ್ರಾಪ್ತವಾಗಿರುವ ಪೂರ್ವಜ್ಞಾನವನ್ನೇ ಬಳಸಿಕೊಂಡು ಓದುವದರಿಂದ ಹೊಸ ವಿಷಯಗಳು ಪೂರ್ವಜ್ಞಾನದೊಂದಿಗೆ ಕೂಡಿಕೊಂಡು ಕಲಿಕೆ ಸಾಗುತ್ತದೆ.

* ಪರೀಕ್ಷೆಯ ಹಳೆಯ ಪ್ರಶ್ನೆಪತ್ರಿಕೆಗಳನ್ನು ಆರಿಸಿಕೊಂಡು ಪ್ರಶ್ನೆಗಳು ಯಾವ ಸ್ವರೂಪದಲ್ಲಿರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಂತರ ಪ್ರತಿಯೊಂದು ಘಟಕವನ್ನು ಓದಿದ ಹಾಗೆಲ್ಲ ಆ ಘಟಕದಲ್ಲಿ ಯಾವ ರೂಪದಲ್ಲಿ ಪ್ರಶ್ನೆಗಳು ಬರಬಹುದು ಎಂಬುದನ್ನು ಕಲ್ಪಿಸಿಕೊಂಡು ಪ್ರಶ್ನೆಗಳನ್ನು ರಚಿಸಬೇಕು. ಒಂದೆರಡು ದಿನ ಬಿಟ್ಟುಕೊಂಡು ಆ ಪ್ರಶ್ನೆಗಳಿಗೆ ಉತ್ತರಿಸಬೇಕು. ತಪ್ಪಿಲ್ಲದೇ ಉತ್ತರಿಸಲು ಸಮರ್ಥರಾದರೆ ಆ ಪಠ್ಯಭಾಗವನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದೀರೆಂದೇ ಅರ್ಥ.

No comments: