Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Thursday 1 September 2016

ಸ್ತಬ್ಧವಾದ ಸೌಂಡ್ ಮಾಸ್ಟರ್

ಸ್ತಬ್ಧವಾದ ಸೌಂಡ್ ಮಾಸ್ಟರ್ 

(ಸಂಗ್ರಹ) ಗುರುಪ್ರಸಾದ್ ಎಚ್

                               1929ರ ನವೆಂಬರ್ ತಿಂಗಳ ಪ್ರಾರಂಭ. ಅಮೆರಿಕದ ಇತಿಹಾಸದಲ್ಲಿಯೇ ಕರಾಳವಾದ ಷೇರು ಕುಸಿತ ಎಂಬ ಎಂಟು ಕಾಲಮ್ಮಿನ ಸುದ್ದಿ ಬಂದಾಗ, ಗೋಪಾಲ್ ಬೋಸ್ ಭೂಮಿಗಿಳಿದು ಹೋದರು. ಒಂಬತ್ತು ವರ್ಷದ ಹಿಂದೆ, ಜೈಲಿಗೆ ತಳ್ಳಲು ಬಂದ ಬ್ರಿಟಿಷರ ಕೈಯಿಂದ ತಪ್ಪಿಸಿಕೊಂಡು ಕಲಕತ್ತೆಯಿಂದ ಹಡಗಿನಲ್ಲಿ ಅಡಗಿ ಕೂತು ಅಮೆರಿಕದ ಹೊಸ ನೆಲಕ್ಕೆ ಬಂದಿದ್ದ ಬೋಸ್, ಆ ಒಂದು ದಶಕದಲ್ಲಿ ಮಾಡಿದ ಬ್ಯುಸಿನೆಸ್ಸುಗಳೆಷ್ಟೋ ಪಟ್ಟ ಪಡಿಪಾಟಲೆಷ್ಟೋ! ಕೈಯಲ್ಲಿದ್ದ ಪುಡಿಗಾಸನ್ನೆಲ್ಲ ಷೇರು ಮಾರ್ಕೆಟ್ಟಿನಲ್ಲಿ ಅದೃಷ್ಟ ಪರೀಕ್ಷೆಗೆ ಹೂಡಿದ್ದ ಬೋಸ್‍ಗೆ, ದಿನ ಬೆಳಗಾಗುವದರೊಳಗೆ, ಇಡೀ ಷೇರು ಮಾರುಕಟ್ಟೆಯೇ ಕ್ರ್ಯಾಷ್ ಆಗಿ ಕಂಪೆನಿಗಳೆಲ್ಲ ಮಂಗಮಾಯವಾದಾಗ ಹೃದಯವೇ ಬಾಯಿಗೆ ಬಂತು. ಅದಾಗಷ್ಟೇ ಮಗನನ್ನು ಹೆತ್ತ ಹೆಂಡತಿಯನ್ನು ಆಸ್ಪತ್ರೆಯಲ್ಲಿ ಮಲಗಿಸಿ ಬೋಸ್ ಸಾಲ ಎತ್ತಲು ಹೋದರು. ಕೊನೆಗೂ ಎಪ್ಪತ್ತೈದು ಡಾಲರನ್ನು ಹೇಗೋ ಸಂಪಾದಿಸಿ, ಆಸ್ಪತ್ರೆಗೆ ಕಟ್ಟಿದ ಮೇಲಷ್ಟೇ, ಮಗುವನ್ನೂ ಹೆಂಡತಿಯನ್ನೂ ಅಲ್ಲಿಂದ ಬಿಡಿಸಿ ಮನೆಗೆ ಕರೆದುಕೊಂಡು ಹೋಗಲು ಸಾಧ್ಯವಾದದ್ದು! ಹುಟ್ಟಿದ ದಿನವೇ ಹೀಗೆ ಅಪ್ಪನನ್ನು ಇಷ್ಟೊಂದು ಓಡಾಡಿಸಿ ಸತಾಯಿಸಿದ ಕಿಲಾಡಿ ಹುಡುಗನೇ - ಜಗತ್ತಿಗೆಲ್ಲ ಹೊಸ ಬಗೆಯ ಸೌಂಡ್ ಸಿಸ್ಟಮನ್ನು ಪರಿಚಯಿಸಿ ಅಪ್ಪನ ನಾಮಾಂಕಿತವನ್ನು ಅಜರಾಮರವಾಗಿಸಿ ಬಿಲಿಯಾಧೀಶನಾಗಿ ತೀರಿಕೊಂಡ ಅಮರ ಗೋಪಾಲ ಬೋಸ್!

  ಕಲಕತ್ತಾ ಯೂನಿವರ್ಸಿಟಿಯಲ್ಲಿ ಭೌತಶಾಸ್ತ್ರ ಕಲಿಯುತ್ತಿದ್ದರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಗೋಪಾಲ್ ಬೋಸ್‍ಗೆ ಅಂತಿಮ ಪರೀಕ್ಷೆಗೆ ಎರಡು ವಾರ ಇರುವಾಗ ಬ್ರಿಟಿಷರು ತನ್ನನ್ನು ಯಾವ ಕ್ಷಣದಲ್ಲಾದರೂ ಬಂಧಿಸಿ ಹೊತ್ತೊಯ್ಯಲು ತಯಾರಾಗಿದ್ದಾರೆ ಎನ್ನುವ ಗುಪ್ತ ಮಾಹಿತಿ ಸಿಕ್ಕಿತು. ಕೈಯಲ್ಲಿ ಕೇವಲ ಐದು ರೂಪಾಯಿ ಹಿಡಿದುಕೊಂಡು ಬಾಂಗ್ಲಾ ಬಂದರನ್ನು ಬಿಟ್ಟ ಹಡಗಿನಲ್ಲಿ ನುಸುಳಿದಾಗ, ಅವರಿಗೆ ಅದೆಲ್ಲಿ ಹೋಗುತ್ತದೆಂದೂ ಗೊತ್ತಿರಲಿಲ್ಲ! ಹಡಗು ಹಲವಾರು ವಾರಗಳ ತರುವಾಯ ಅಮೆರಿಕ ತಲುಪಿದಾಗ, ಎಂತಹ ಪರಿಸ್ಥಿತಿಗೂ ಎದೆಯೊಡ್ಡಿ ನಿಲ್ಲುವ ಸ್ಥೈರ್ಯ ಬೆಳೆಸಿಕೊಂಡಿದ್ದ ಬೋಸ್, ಅಲ್ಲಿ ತನ್ನ ಜೀವನದ ಹೊಸ ಅಧ್ಯಾಯ ಪ್ರಾರಂಭಿಸಲು ಮುಂದಾದರು. ಅದಾಗಲೇ ಅಮೆರಿಕ ಸೇರಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿದ್ದ ಡಾ|| ತಾರಕನಾಥ ದಾಸರ ಕ್ರಾಂತಿಕಾರಿಗಳ ಗುಂಪು ಸೇರಿಕೊಂಡರು. ಭಗವದ್ಗೀತೆ, ವೇದಾಂತ, ಉಪನಿಷತ್ತುಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದ, ಭಾರತೀಯರಿಗಿಂತ ಹೆಚ್ಚು ಭಾರತೀಯರಾಗಿದ್ದ ಅಮೆರಿಕನ್ ಸ್ಕೂಲ್ ಟೀಚರ್ ಒಬ್ಬಳನ್ನು ಪ್ರೀತಿಸಿ ಮದುವೆಯಾದರು. ಇವರಿಬ್ಬರ ಪ್ರೇಮದ ಫಲವಾಗಿ ಹುಟ್ಟಿದ ಕೂಸೆ ಅಮರ್ ಬೋಸ್.


      ಗೋಪಾಲ ಬೋಸ್ ಅವರ ಮನೆ ಆ ಕಾಲಕ್ಕೆ ಕ್ರಾಂತಿಕಾರಿಗಳ ಕಾಶಿ. ಜಲಿಯನ್ ವಾಲಾಬಾಗ್‍ನ ಹತ್ಯಾಕಾಂಡದಲ್ಲಿ ಅದು ಹೇಗೋ ಪವಾಡಸದೃಶ್ಯರಾಗಿ ಪಾರಾಗಿ ಬಂದವರು, ಬೋಸರೆದುರು ಕೂತು ಅಲ್ಲಿನ ದುರಂತದ ಕಥೆಗಳನ್ನು ವಿವರಿಸುತ್ತಿದ್ದರೆ, ಹುಡುಗ ಅಮರ್, ಅವುಗಳನ್ನು ತನ್ಮಯನಾಗಿ ಕೇಳುತ್ತಿದ್ದ. ವಾರಕ್ಕೊಮ್ಮೆ ತಾಯಿ ಮಾಡುವ ವೇದಾಂತದ ಉಪನ್ಯಾಸಗಳನ್ನು ಧ್ಯಾನಸ್ಥನಾಗಿ ಕೇಳಿಸಿಕೊಳ್ಳುತ್ತಿದ್ದ. ಏಳನೆಯ ವಯಸ್ಸಿಗೆ ಪಿಟೀಲಿನ ಹುಚ್ಚು ಹತ್ತಿಕೊಂಡಿತು. ಹದಿಮೂರು ತುಂಬುವ ಹೊತ್ತಿಗೆ, ಯಾವುದೇ ಇಲೆಕ್ಟ್ರಾನಿಕ್ ಉಪಕರಣ ಸಿಕ್ಕರೂ ಅದನ್ನು ತಕ್ಷಣ ಬಿಚ್ಚಿ ಅಂಗಡಿ ಇಟ್ಟು ಮತ್ತೆ ಯಥಾಸ್ಥಿತಿಗೆ ಜೋಡಿಸುವ ಕೌಶಲ ಕೈಹಿಡಿಯಿತು. ಹದಿನೈದರ ಎಳೆವೆಯಲ್ಲೇ ಈ ಮರಿಬೋಸ್ ಓಣಿಓಣಿಗಳಲ್ಲಿ ಓಡಾಡಿ ಯಾರ್‍ಯಾರ ಮನೆಯಲ್ಲಿ ರೇಡಿಯೋ ಕೆಟ್ಟಿದೆಯೋ ಅವೆಲ್ಲವನ್ನೂ ಸರಿಮಾಡಿಕೊಟ್ಟು ಚಿಲ್ಲರೆ ಡಾಲರ್ ಸಂಪಾದಿಸಲು ಆರಂಭಿಸಿದ! "ಅಪ್ಪ, ನನಗೆ ಗೊಂಬೆ ತಂದುಕೊಡುವಷ್ಟು ಆರ್ಥಿಕ ಶಕ್ತಿ ನಿನಗಿಲ್ಲವೆಂದು ಬಲ್ಲೆ. ನನ್ನ ಆಟಿಕೆ ನಾನೇ ಮಾಡಿಕೊಳ್ಳುತ್ತೇನೆ!" ಎಂದು ತಂದೆಗೆ ಸಮಾಧಾನ ಹೇಳಿ, ಗರಾಜಿನಲ್ಲಿ ಮುರಿದುಬಿದ್ದ ಚಿಕ್ಕಪುಟ್ಟ ಸಾಮಾನುಗಳನ್ನೇ ಜೋಡಿಸಿ ಆಟಿಕೆಗಳನ್ನು ಮಾಡಿಕೊಂಡ! ಅವನ ಕೈಯಲ್ಲಿ ರೂಪುಗೊಂಡ ಆಟಿಕೆರೈಲು ಕೀಲಿಕೊಟ್ಟರೆ ಹತ್ತಡಿ ದೂರಕ್ಕೆ ಚಲಿಸುತ್ತಿತ್ತು!

   ಮಗನ ಪ್ರತಿಭೆ ಹೀಗೆ ಹದಿಹರೆಯದ ಶುರುವಾತಿನಲ್ಲೇ ಜ್ವಾಜಲ್ಯಮಾನವಾಗಿ ಉರಿಯುವುದನ್ನು ಕಂಡ ಅಪ್ಪನಿಗೆ, ಹೇಗಾದರೂ ಮಾಡಿ ಮಗನನ್ನು ದೊಡ್ಡ ಶಿಕ್ಷಣ ಸಂಸ್ಥೆಗೇ ಸೇರಿಸಬೇಕೆಂಬ ಆಸೆ ಹುಟ್ಟಿತು. ಅದಕ್ಕಾಗಿ ಹತ್ತು ಸಾವಿರ ಡಾಲರುಗಳ ಸಾಲಸೋಲ ಮಾಡಿ, ಅಂತು ಮಗನನ್ನು ಆಗಿನ (ಮತ್ತು ಈಗಲೂ) ಪ್ರತಿಷ್ಠಿತ ಮೆಸಾಚುಸೆಟ್ಸ್ ತಂತ್ರಜ್ಞಾನ ಸಂಸ್ಥೆ (ಎಮ್‍ಐಟಿ)ಗೆ ಸೇರಿಸಿದರು. ಎರಡೇ ಎರಡು ವರ್ಷ ಕಲಿತು ಅಲ್ಲಿಂದ ಹೊರಬರುತ್ತೇನೆ ಎಂದುಕೊಂಡು ಹೋದ ಅಮರ್, ಅಲ್ಲಿ ಮುಂದೆ ಡಿಗ್ರಿಯ ಮೇಲೆ ಡಿಗ್ರಿ ಸಂಪಾದಿಸಿ ಬರೋಬ್ಬರಿ ನಲವತ್ತೈದು ವರ್ಷ ಪ್ರಾಧ್ಯಾಪಕರಾಗಿ ದುಡಿದು ತನ್ನ ಜೀವಿತದ ಮೂರನೇ ಎರಡರಷ್ಟನ್ನು ಅಲ್ಲೇ ಸಾರ್ಥಕವಾಗಿ ಕಳೆದದ್ದು ಮಾತ್ರ ಅವರ ಬದುಕಿನ ಬಹುದೊಡ್ಡ ಮಧುರ ಆಕಸ್ಮಿಕ. ಬಾಲ್ಯದಲ್ಲೇ ಬೆಳೆಸಿಕೊಂಡ ಎಲೆಕ್ಟ್ರಿಕಲ್ ಮತ್ತು ಶ್ರವ್ಯ ತಂತ್ರಜ್ಞಾನದ ಮೋಹ ಬೋಸರನ್ನು ಸಾಯುವ ಕೊನೆಗಳಿಗೆಯವರೆಗೂ ಬಿಟ್ಟು ಹೋಗಲಿಲ್ಲ.

         ಎಮ್‍ಐಟಿಯಲ್ಲಿ ಮಾಸ್ಟರ್ ಡಿಗ್ರಿ ಮುಗಿಸಿದ ತಕ್ಷಣ ಬೋಸ್‍ಗೆ ಫುಲ್‍ಬ್ರೈಟ್ ಸ್ಕಾಲರಶಿಪ್ ಸಿಕ್ಕಿತು. ಬಾಲ್ಯದಿಂದಲೂ ಭಾರತದ ಬಗ್ಗೆ ಅಪರಿಮಿತ ಸೆಳೆತ ಹೊಂದಿದ್ದ ಬೋಸ್‍ಗೆ ತನ್ನ ಪೂರ್ವಿಕರ ನೆಲಕ್ಕೆ ಬರಲು ಸ್ಕಾಲರಶಿಪ್ ಒಂದು ಒಳ್ಳೆಯ ನೆಪ ಒದಗಿಸಿತು. ಬೋಸ್ ದೆಹಲಿಗೆ ಬಂದು ರಾಷ್ಟ್ರೀಯ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ಒಂದು ವರ್ಷ ಸಂಶೋಧನ ವಿದ್ಯಾರ್ಥಿಯಾಗಿ ಅಧ್ಯಯನ, ಕೆಲಸ ಮಾಡಿದರು. ದೆಹಲಿಗೆ ಬರುವುದಕ್ಕಿಂತ ಮುಂಚೆ ಒಂದು ತಿಂಗಳ ರಜೆಯ ಮಜಾ ಅನುಭವಿಸುತ್ತಿದ್ದಾಗ, ಬೋಸ್ ಮಾಡದ ಪ್ರಯೋಗವೇ ಇರಲಿಲ್ಲ. ಸ್ವತಃ ಒಳ್ಳೆಯ ವಯೊಲಿನ್ ವಾದಕರಾದ ಅವರು ತನ್ನ ಸಂಗೀತವನ್ನು ರೆಕಾರ್ಡ್ ಮಾಡಲು ಒಂದು ದುಬಾರಿ ರೆಕಾರ್ಡನ್ನು ಖರೀದಿಸಿದರು. ಆದರೆ, ಅದರಲ್ಲಿ ದಾಖಲಾದ ಶಬ್ದದ ಗುಣಮಟ್ಟ ಮಾತ್ರ ಅವರನ್ನು ತೀವ್ರ ನಿರಾಶೆಗೊಳಿಸಿತ್ತು. ತನ್ನ ನಿರೀಕ್ಷೆಗೆ ಹತ್ತನೇ ಒಂದರಷ್ಟೂ ಹತ್ತಿರವಿಲ್ಲದಿದ್ದ ಆ ರೆಕಾರ್ಡರನ್ನು ಕೋಪ ಮತ್ತು ಹತಾಶೆಯ ಭರದಲ್ಲಿ ಬೋಸ್ ಎಸೆದೇಬಿಟ್ಟಿದ್ದರು! ಆದರೆ, ಅಂತಹುದೇ - ಆದರೆ ಜಗತ್ತಿನಲ್ಲಿ ಇದುವರೆಗೆ ಯಾರೂ ಮಾಡಿರದಿದ್ದ ರೆಕಾರ್ಡಿಂಗ್ ವ್ಯವಸ್ಥೆಯನ್ನು ನಾನೇಕೆ ರಚಿಸಬಾರದು ಎಂಬ ಗುಂಗಿಹುಳ ಮಾತ್ರ ಮೆದುಳನ್ನು ಸದಾ ಕೊರೆಯುತ್ತಲೇ ಇತ್ತು. ದೆಹಲಿಯಲ್ಲಿರುವಾಗಲು ಈ ಚಿಂತನೆ ನಡೆದೇ ಇತ್ತು.

  ಕೆಲಸದೊತ್ತಡ ಮಧ್ಯೆ ಒಂದೆರಡು ವಾರ ಬ್ರೇಕ್ ತೆಗೆದುಕೊಂಡ ಬೋಸ್ ಸುತ್ತಾಡಲೆಂದು ಬೆಂಗಳೂರಿಗೆ ಬಂದರು. ಬಂಗಾಳಿಯಾದ್ದರಿಂದ ಸಹಜ ಕುತೂಹಲದಿಂದ ಇಲ್ಲಿನ ರಾಮಕೃಷ್ಣ ಮಠಕ್ಕೆ ಭೇಟಿ ಕೊಟ್ಟರು. ಆಗ, ಅಲ್ಲಿನ ಸ್ವಾಮೀಜಿಯೊಬ್ಬರ ಜೊತೆ ನಡೆದ ಅರ್ಧತಾಸಿನ ಮಾತುಕತೆ ಬೋಸರ ಜೀವನದ ಗತಿಯನ್ನೇ ಬದಲಿಸಿಬಿಟ್ಟಿತು! "ಎರಡು ಬಗೆಯ ಸಾಧಕರಿರುತ್ತಾರೆ. ತಾನು ಅಂದುಕೊಂಡದ್ದನ್ನು ತುಂಬ ಆಳವಾಗಿ ಯೋಚಿಸಿ, ನಿರಂತರ ಶೋಧಗಳನ್ನು ಮಾಡಿ ಕೊನೆಗೊಂದು ದಿನ ತನ್ನ ಸಾಧನೆಯನ್ನು ಜಗತ್ತಿಗೆ ತೋರಿಸುವವರು ಒಂದು ಬಗೆ. ಮಲಗಿದ್ದಾಗ, ನಡೆಯುವಾಗ, ಸ್ನಾನ ಮಾಡುವಾಗ - ಎಲ್ಲೆಂದರಲ್ಲಿ ಥಟ್ಟನೆ ಐಡಿಯಾ ಹೊಳೆದು, ಹಾಗೆ ಅಂತರ್ಬೋಧೆಯಿಂದ ಮಿಂಚಿ ಮಾಯವಾದ ಕನಸುಗಳನ್ನು ನನಸು ಮಾಡಲು ಮುನ್ನುಗ್ಗುವವರು ಇನ್ನೊಂದು ಬಗೆ. ಇವರಿಬ್ಬರೂ ಸಮಾನಶಕ್ತಿಯ ಸಾಧಕರೇ" ಎಂದು ಆ ಸ್ವಾಮೀಜಿ ಹೇಳಿದರಂತೆ. ನಿಂತಲ್ಲಿ ಕೂತಲ್ಲಿ ಹೊಸ ಐಡಿಯಾಗಳನ್ನು ಸೃಜಿಸುತ್ತಿದ್ದ, ಆದರೆ ಅಂತಹ ಐಡಿಯಾಗಳಿಗೆ ಆಯುಷ್ಯವಿಲ್ಲ ಎಂದೇ ಬಗೆದಿದ್ದ ಬೋಸರಿಗೆ ಸ್ವಾಮೀಜಿಯ ಮಾತಿನಿಂದ ಜ್ಞಾನೋದಯವಾಯಿತು. ತನ್ನ ಕನಸುಗಳನ್ನು ಬೆನ್ನಟ್ಟಿ ಸಾಕಾರಗೊಳಿಸಲು ಬೇಕಾದ ಸ್ಥೈರ್ಯ ಮತ್ತು ಚೈತನ್ಯ ಅವರಿಗಿಲ್ಲಿ ಸಿಕ್ಕಿತು. ಬೋಸ್ ಕಾರ್ಪೊರೇಷನ್ ಸ್ಥಾಪನೆಯಾಗಿಯೇಬಿಟ್ಟಿತು!

 ಯಾವುದೋ ಸಂಗತಿಯನ್ನು ವರ್ಷಾನುಗಟ್ಟಲೇ ಕೂತು ಯೋಚಿಸಿ ಫಲಿತಾಂಶ ಪಡೆಯುವುದು ಬೋಸ್ ಶೈಲಿಯಲ್ಲ. ಒಮ್ಮೆ ಫಿಲಡೆಲ್ಫಿಯಾದಿಂದ ಸ್ವಿಜರಲೆಂಡಿಗೆ ವಿಮಾನದಲ್ಲಿ ಹೋಗುತ್ತಿದ್ದಾಗ, ಅದರಲ್ಲಿ ಬಳಸುತ್ತಿದ್ದ ಹೆಡಫೋನ್ ಸಮರ್ಪಕವಾಗಿಲ್ಲ ಎಂದು ಅವರಿಗೆ ಅನ್ನಿಸಿತು. ವಿಮಾನದ ಹಾರಾಟದ  ಶಬ್ದವೆಲ್ಲ ಅಳಿಸಿ ಹೋಗಿ ಕೇವಲ ಸಂಗೀತವೊಂದೇ ತನ್ನ ಕಿವಿತುಂಬುವಂತಿದ್ದರೆ ಎಷ್ಟು ಚೆನ್ನಿತ್ತು! ಎಂದು ಯೋಚಿಸಿದ ಕ್ಷಣದಲ್ಲೇ Noise cancelling Headphone ಚಿಂತನೆ ಹುಟ್ಟಿತು. ಈ ಹೆಡ್‍ಫೋನ್‍ಗಳು ಹೊರಗಿನಿಂದ ಕಿವಿ ತೂರಲು ಯತ್ನಿಸುವ ಎಲ್ಲ ಇತರ ಗದ್ದಲವನ್ನೂ ಅಲ್ಲೇ ಕೊಂದುಹಾಕಿ ನಾವು ಕೇಳಬಯಸುವ ಸಂಗತಿಯನ್ನು ಮಾತ್ರವೇ ಕಿವಿಯೊಳಗೆ ಬಿಟ್ಟುಕೊಡುತ್ತವೆ! ಪ್ರಯಾಣ ಮುಗಿಸುತ್ತ ವಿಮಾನ ಭೂಸ್ಪರ್ಶ ಮಾಡುವ ಹೊತ್ತಿಗೆ, ಬೋಸ್ ಕೈಯಲ್ಲಿ ಆ ಉತ್ಪನ್ನದ ಡಿಸೈನ್ ತಯಾರಾಗಿಬಿಟ್ಟಿತು! 1994ರಲ್ಲಿ ಬೋಸರ ಕಂಪೆನಿ, ಅಡಿಷನರ್ ಎಂಬ ತಂತ್ರಜ್ಞಾನವನ್ನು ಬಿಡುಗಡೆಗೊಳಿಸಿತು. ಇನ್ನೂ ಕಟ್ಟಿಯೇ ಇಲ್ಲದ ಸಭಾಂಗಣದ ಮೂಲೆ ಮೂಲೆಗಳಲ್ಲಿ ಕೂತು, ಅಲ್ಲಿ ಕೇಳಿಸುವ ದನಿಯ ಮಟ್ಟ ಮತ್ತು ಗುಣಮಟ್ಟ ಯಾವ ಬಗೆಯದ್ದಾಗಿರುತ್ತದೆ ಎನ್ನುವದನ್ನು ಅತ್ಯಂತ ನಿಖರವಾಗಿ ಹೇಳುವ ತಂತ್ರಜ್ಞಾನ ಅದು! ಅಲ್ಲಿಂದೀಚೆಗೆ ಜಗತ್ತಿನಲ್ಲಿ ಕಟ್ಟಲ್ಪಟ್ಟ ಎಲ್ಲಾ ಸಭಾಂಗಣಗಳಲ್ಲೂ ‘ಆಡಿಷನರ್’ ಬಳಕೆಯಾಗಿದೆ.

     ಬೋಸರ ಹೆಸರನ್ನು ಶ್ರವ್ಯಪ್ರಪಂಚದಲ್ಲಿ ಚಿರಸ್ಥಾಯಿಗೊಳಿಸಿದ್ದು ಅವರು 1968ರಲ್ಲಿ ರೂಪಿಸಿದ 901 ಸ್ಪೀಕರ್. ಒಂದು ಸಂಗೀತ ಅಥವಾ ಭಾಷಣ ತುಂಬಾ ಚೆನ್ನಾಗಿ ಕೇಳಿಸಬೇಕು ಎಂದರೆ, ಅದನ್ನು ಧ್ವನಿವರ್ಧಕ ಆದಷ್ಟು ದೊಡ್ಡ ದನಿಯಲ್ಲಿ ಪ್ರೇಕ್ಷಕರಿಗೆ ತಲುಪಿಸಬೇಕು. ಹಾಗೆಯೇ, ಸ್ಪೀಕರ್ ಪೆಟ್ಟಿಗೆ ಕೇಳುಗನಿಗೆ ಆದಷ್ಟೂ ಹತ್ತಿರವಿರಬೇಕು ಎಂದೇ ಆಗಿನ ಕಂಪೆನಿಗಳು ತಿಳಿದಿದ್ದವು. ಒಂದು ಶಬ್ದವನ್ನು ಚೆನ್ನಾಗಿ ಕೇಳಲು ಸ್ಪೀಕರನ್ನು ನಿಮ್ಮಿಂದ ಆದಷ್ಟು ದೂರ ಹಿಡಿಯಿರಿ! - ಎಂದು ಹೇಳಿದ ಬೋಸರ ಬಗ್ಗೆ, ಆ ಕ್ಷೇತ್ರದಲ್ಲಿ ಇಡೀ ಪ್ರಪಂಚದಲ್ಲೇ ಪಾರುಪತ್ಯ ಸಾಧಿಸಿದ್ದ ಜಪಾನಿನ ಕಂಪೆನಿ, "ಇದೊಂದು ತಲೆಕೆಟ್ಟವನ ಪ್ರಲಾಪ" ಎಂದು ಪ್ರಚಾರ ಮಾಡಿತು! ಬೋಸ್ ವಿನ್ಯಾಸಗೊಳಿಸಿದ ಸ್ಪೀಕರ್‌ನಲ್ಲಿ ಕೇಳುಗನತ್ತ ಬರುತ್ತಿದ್ದ ಧ್ವನಿ ಕೇವಲ ಹತ್ತು ಶೇಕಡಾ ತೊಂಬತ್ತು! ಹೀಗೆ ಗೋಡೆಗೆ ಬಡಿದ ಧ್ವನಿತರಂಗಗಳು ಇನ್ನಷ್ಟು ಹೆಚ್ಚು ಶಕ್ತಿಯನ್ನು ಗಳಿಸಿಕೊಂಡು ಪ್ರಸಾರವಾಗುತ್ತವೆ ಎನ್ನುವುದನ್ನು ಬೋಸ್ ಶೋಧಿಸಿದ್ದರು! ಹಾಗಾಗಿ, ಬೋಸರ ಸ್ಪೀಕರ್, ಗುಣಮಟ್ಟದ ವಿಷಯದಲ್ಲಿ ಆಗ ಜಗತ್ತಿನ ನಂಬರ್ ಒಂದು ಆಗಿ ಮೆರೆಯುತ್ತಿದ್ದ ಉತ್ಪನ್ನಗಳನ್ನು ಸಾರಾಸಗಟಾಗಿ ಮೂಲೆಗೆ ತಳ್ಳಿತು! ಇಂದಿಗೂ ಧ್ವನಿವರ್ಧಕಗಳ ವಿಷಯದಲ್ಲಿ ಏಕಮೇವಾದ್ವಿತೀಯವಾಗಿ ಮೆರೆಯುತ್ತಿರುವ ಈ "ಪ್ರತಿಧ್ವನಿ ತಂತ್ರಜ್ಞಾನ"ಕ್ಕೆ ಸರಿಸಾಟಿಯಾಗಿ ಪೈಪೋಟಿ ಕೊಡಬಲ್ಲ ಬೇರೆ ಉತ್ಪನ್ನ ಬಂದಿಲ್ಲ!

    ವ್ಯಾಟಿಕನ್ನಿನ ಚರ್ಚಿನಲ್ಲಿ ಪೋಪರ ಸಂದೇಶವನ್ನು ಜಗತ್ತಿಗೆ ಕೇಳಿಸಲು, ಮೆಕ್ಕಾದ ಮಸೀದಿಯಲ್ಲಿ ಮುಲ್ಲಾರ ಪ್ರಾರ್ಥನೆಯನ್ನು ನೆರೆದ ಸಾವಿರಾರು ಜನರ ಕಿವಿಗೆ ತಲುಪಿಸಲು ಬಳಕೆಯಾಗುತ್ತಿರುವುದು ಬೋಸ್ ಕಂಪೆನಿಯ ಸ್ಪೀಕರ್‍ಏ ಜಗತ್ತಿನ ಅಷ್ಟೂ ಮರ್ಸಿಡಿಸ್ ಬೆಂಜ್, ಅಕ್ಯುರಾ, ಜಿಎಮ್‍ಸಿ, ನಿಸ್ಸಾನ್, ಮಾಜ್ದಾ, ಆಡಿ, ಕ್ಯಾಡಿಲಾಕ್, ಪೋರ್ಶ್, ಇನ್ಫಿನಿಟಿ ಕಾರುಗಳಲ್ಲಿ ಬಳಕೆಯಾಗುವ ಆಡಿಯೋ ಸಿಸ್ಟಮ್‍ಅನ್ನು ಅಭಿವೃದ್ಧಿಪಡಿಸಿದ್ದು ಬೋಸ್ ಸಾಹೇಬರೇ. ಆದರೆ, ಒಂದಾನೊಂದು ಕಾಲದಲ್ಲಿ ಜನರಲ್ ಮೋಟರ್ಸ್ ಕಂಪೆನಿಗೆ ಮೊತ್ತಮೊದಲ ಕಾರ್ ಸ್ಟಿರೀಯೋ ಮಾರುವ ಮುನ್ನ ಅಂತಹದೊಂದು ಅತ್ಯಾಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಬೋಸ್ ಹದಿಮೂರು ಮಿಲಿಯ ಡಾಲರುಗಳನ್ನು ಖರ್ಚುಮಾಡಿದ್ದರು ಎನ್ನುವುದು ಯಾರಿಗೂ ತಿಳಿದಿರಲಿಕ್ಕಿಲ್ಲ. ಹಾಗೆಯೇ, ಗಗನಯಾತ್ರಿಗಳಿಗೆಂದು ಬೋಸ್ ವಿಶೇಷ ವಿನ್ಯಾಸದ ಹೆಡ್‍ಫೋನ್ ಅಭಿವೃದ್ಧಿಪಡಿಸದಿದ್ದರೆ, ಗಗನನೌಕೆಗಳಲ್ಲಿ ಪ್ರಯಾಣ ಮಾಡುವ ಅಷ್ಟೂ ಜನ, ಶಾಶ್ವತವಾಗಿ ಕಿವುಡರಾಗುವ ತೊಂದರೆಗೆ ಈಡಾಗಬೇಕಾಗಿತ್ತು! ಒಲಿಂಪಿಕ್ ಕ್ರೀಡೆಗಳಿಂದ ಹಿಡಿದು ಜಗದ್ವಿಖ್ಯಾತ ರಾಕ್ ಸಂಗೀತ ಪ್ರದರ್ಶನಗಳವರೆಗೆ, ಮೆಜೆಸ್ಟಿಕ್ ಥಿಯೇಟರುಗಳಿಂದ ಹಿಡಿದು ಹಾಲಿವುಡ್ಡಿನ ಅತ್ಯಾಧುನಿಕ ತಂತ್ರಜ್ಞಾನಗಳವರೆಗೆ, ನಾವು-ನೀವು ಬಳಸುವ ಪುಟ್ಟ ಸ್ಪೀಕರುಗಳಿಂದ ಹಿಡಿದು ಸಾವಿರಾರು ಜನ ಕೂರುವ ಆಡಿಟೋರಿಯಮ್ಮುಗಳ ಧ್ವನಿವ್ಯವಸ್ಥೆಯವರೆಗೆ - ಜಗತ್ತಿನಲ್ಲಿ "ಸೌಂಡ್" ಎಂದಾಗ ಕಣ್ಣೆದುರು ಬರುವ ಹೆಸರು - "ಬೋಸ್" ಒಂದೇ.

    ಇಷ್ಟೆಲ್ಲ ಆದರೂ ಬೋಸ್ ಧನದಾಹಿಯಾಗಿರಲಿಲ್ಲ. ಇಂದಿಗೂ ಪ್ರೈವೆಟ್ ಕಂಪೆನಿಯಾಗಿಯೇ ಉಳಿದಿರುವ ಬೋಸ್ ಕಂಪೆನಿಯ ಲಾಭವೆಲ್ಲವೂ ಸೌಂಡ್ ಇಂಜಿನಿಯರಿಂಗಿನಲ್ಲಿ ನಡೆಯುತ್ತಿರುವ ಸಾವಿರಾರು ಸಂಶೋಧನೆಗಳಿಗೆ ಹರಿದುಹೋಗುತ್ತದೆ. "ನಾವು ಷೇರು ಮಾರುಕಟ್ಟೆ ಪ್ರವೇಶಿಸಿಲ್ಲ. ಒಂದು ವೇಳೆ ಈ ಕಂಪೆನಿ ಪಬ್ಲಿಕ್ ಸೆಕ್ಟರ್ ಆದರೆ, ನಾವು ಯಾವ ಕ್ಷೇತ್ರದಲ್ಲಿ ಎಷ್ಟು ಹಣ ಖರ್ಚು ಮಾಡಬೇಕು ಎನ್ನುವುದನ್ನು ನಿರ್ದೇಶಿಸುವ ಹತ್ತಾರು ತಲೆಗಳು ಹುಟ್ಟಿಕೊಳ್ಳುತ್ತವೆ. ಸಂಶೋಧನೆಯ ಓನಾಮ ಗೊತ್ತಿಲ್ಲದವರೆಲ್ಲ ಬಂದು ನಮ್ಮ ಕೈಹಿಡಿದು ಸಿಕ್ಕ ಸಿಕ್ಕ ದಿಕ್ಕುಗಳಲ್ಲಿ ಎಳೆದಾಡತೊಡಗುತ್ತಾರೆ" ಎನ್ನುತ್ತಿದ್ದ ಬೋಸ್, ತನ್ನ ಕಂಪೆನಿಯ ಲಾಭದ ಬಹುದೊಡ್ಡ ಪಾಲನ್ನು ತನ್ನ ಮಾತೃಸಂಸ್ಥೆ ಎಮ್‍ಟಿಐಗೆ ದೇಣಿಗೆಯಾಗಿ ನೀಡಿದ್ದಾರೆ. "ನನಗಿರುವುದು ಒಂದೇ ಮನೆ, ಒಂದೇ ಕಾರು. ಅಷ್ಟರಲ್ಲಿ ನಾನು ತೃಪ್ತ. ಹೆಚ್ಚಿಗೆ ಏನನ್ನೂ ಅಪೇಕ್ಷಿಸಲಾರೆ" ಎನ್ನುತ್ತಿದ್ದ ಈ ಬಿಲಿಯಾಧೀಶ, ಹಲವಾರು ಸಲ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು ಎನ್ನುವ ಸಂಗತಿಯನ್ನು ಅವರ ಜೊತೆ ವ್ಯವಹರಿಸಿದವರಿಗೂ ನಂಬುವುದಕ್ಕೆ ಕಷ್ಟವಾಗುತ್ತಿತ್ತು.

               ಬೋಸ್ - ತಾನೇ ಪ್ರಾರಂಭಿಸಿದ ’ಮನೋ-ಶ್ರವಣ ತಂತ್ರಜ್ಞಾನ" (Psycho Acoustics) ಎಂಬ ಹೊಸ ಜ್ಞಾನಶಾಖೆಯನ್ನು ನಲವತ್ತು ವರ್ಷಗಳಿಗೂ ಹೆಚ್ಚು ಕಾಲ ಎಮ್‍ಐಟಿಯಲ್ಲಿ ಬೋಧಿಸಿದರು. ಇಂದು ಆ ಸಂಸ್ಥೆಯ ಅತಿ ಜನಪ್ರಿಯ ಕೋರ್ಸುಗಳಲ್ಲಿ ಇದು ಕೂಡ ಒಂದು. "ಮುನ್ನೂರೈವತ್ತು ಜನ ಕೂತ ಸಭಾಂಗಣಕ್ಕೆ ಬಂದು ಬೋಸ್ ಶಬ್ದದ ಬಗ್ಗೆ ಪಾಥ ಮಾಡಲು ಶುರು ಮಾಡಿದರೆಂದರೆ, ಇಡೀ ಸಭಾಂಗಣ ಸ್ತಬ್ಧವಾಗಿ ಬಿಡುತ್ತಿತ್ತು!" ಎಂದು ಅವರ ಸಹೋದ್ಯೋಗಿಯಾಗಿದ್ದ ವಿಲಿಯಮ್ ಬ್ರಾಡಿ ನೆನಪಿಸಿಕೊಳ್ಳುತ್ತಾರೆ. ಅವರು ತನ್ನ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಮಯದ ಮಿತಿ ಇಡುತ್ತಿರಲಿಲ್ಲ. ಸಾಮಾನ್ಯವಾಗಿ ಸಂಜೆ ಏಳುಗಂಟೆಗೆ ಶುರುವಾದ ಪರೀಕ್ಷೆ ಕೆಲವು ಸಲ ಮುಂಜಾನೆ ಐದು ಗಂಟೆಯವರೆಗೂ ಹೋಗುತ್ತಿತ್ತು! ಅಷ್ಟೂ ಹೊತ್ತು ಎಚ್ಚರವಿದ್ದು ಕೂತು ಬೋಸ್, ಪರೀಕ್ಷೆ ಬರೆಯುವವರಿಗೆ ಐಸಕ್ರೀಮ್ ಸಪ್ಲೈ ಮಾಡುತ್ತಿದ್ದರು!


  ಕೇವಲ ಶ್ರವಣ ಮಾತ್ರದಿಂದಲೇ ಶತ್ರುವನ್ನು ಪತ್ತೆಹಿಡಿದು ಬಾಣ ಹೊಡೆಯುತ್ತಿದ್ದ ಅರ್ಜುನನಂತೆ, ಶಬ್ದದ ಅನಂತ ಸಾಧ್ಯತೆಗಳನ್ನು ತೆಗೆದು ಶೋಧಿಸಿ ಅದರಿಂದಲೇ ಒಂದು ಸಾಮ್ರಾಜ್ಯ ಕಟ್ಟಿದ ಸವ್ಯಸಾಚಿ ಬೋಸ್, ಶುಕ್ರವಾರ, 2013ರ ಜುಲೈ 12ರಂದು ಮೆಸಾಚುಸೆಟ್ಸ್‍ನಲ್ಲಿ ಕೊನೆಯುಸಿರೆಳೆದರು. ಕಂದುಬಣ್ಣದ ಭಾರತೀಯರಿಗೆ ಹೋಟೆಲುಗಳಲ್ಲಿ ಊಟ ಕೊಡದೆ ಸತಾಯಿಸುತ್ತಿದ್ದ ಅಮೆರಿಕದ ದ್ವಿಮುಖನೀತಿಯ ಕಹಿಯುಂಡೂ ಆ ನೆಲದಲ್ಲೇ ಬಿಲಿಯನ್ ಡಾಲರ್ ಕಂಪೆನಿ ಕಟ್ಟಿ ಭಾರತೀಯ ಹೆಸರನ್ನು ಚಿರಸ್ಥಾಯಿಗೊಳಿಸಿದ ಅಮರ್ ಬೋಸ್ ಇನ್ನು ನಿಶ್ಯಬ್ಧ.


- ರೋಹಿತ್ ಚಕ್ರತೀರ್ಥ

No comments: